ಅಂತರ್ಜಾಲದಲ್ಲಿ ಇಂದು ಕನ್ನಡ ಬಳಕೆ ಹೆಚ್ಚಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಕನ್ನಡದ ಬ್ಲಾಗ್ಗಳು ನಳನಳಿಸಲಾರಂಭಿಸಿವೆ. ವಿಭಿನ್ನ ಅನುಭವಗಳ ಮೂಸೆಯಿಂದ ಹೊರಬಂದ ಬರಹಗಳು ಕಂಗೊಳಿಸುತ್ತಾ, ಹೊಸದೊಂದು ಸಾಹಿತ್ಯ ಚಳವಳಿಯನ್ನೇ ಹುಟ್ಟು ಹಾಕುವ ಭರವಸೆ ಮೂಡಿಸಿದೆ ಎಂದರೆ ಅಚ್ಚರಿಯಿಲ್ಲ.
ಇಂಥದ್ದರ ನಡುವೆ ಬರೀ ನಮ್ಮ ಅಂಚೆಗಳ ಮೂಲಕವೇ ಪರಿಚಯವಾಗಿದ್ದೇವೆ ; ಮುಖತಃವಲ್ಲ. ಅದಕ್ಕೇ ಎಲ್ಲರೂ ಸೇರಿದರೆ ಹೇಗೆ ಎಂಬ ಚಿಂತನೆ ಹರಿದು ಬಂದಿದೆ. ಇದಕ್ಕಾಗಿ ಮಾ. ೧೬ ರ ಸಂಜೆ ೪ ಕ್ಕೆ ಕುಶಲ ಭೇಟಿ ಏರ್ಪಡಿಸಲಾಗಿದೆ. ವಿವರಗಳು ಸುಶ್ರುತರ ಆಮಂತ್ರಣದಲ್ಲಿದೆ.
ಸುಶ್ರುತರ ಪತ್ರ ಇಂತಿದೆ.
ನಿಮಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ