ಸುಮಾರು ಮೂರು ತಿಂಗಳ ಕಾಲ ಬೆಂಗಳೂರಿನ ನನ್ನಣ್ಣನ ಮನೆಯಲ್ಲಿದ್ದು ಈಗ ಮತ್ತೆ ಪುತ್ತೂರಿಗೆ ವಾಪಸಾಗಿದ್ದಾಳೆ ನನ್ನ ಅಮ್ಮ. ಬರುವಾಗ ಸುಮ್ಮನೆ ಬಂದಿಲ್ಲ, ಒಂದಿಷ್ಟು ಉತ್ಸಾಹವನ್ನೂ ತಂದಿದ್ದಾಳೆ. ಅವಳೀಗ ಮತ್ತೊಂದು ಸಂಭ್ರಮದಲ್ಲಿದ್ದಾಳೆ…ಅವಳ ಮಡಿಲಿಗೆ ಮತ್ತೊಬ್ಬಳು ಮೊಮ್ಮಗಳು ಬಂದಿದ್ದಾಳೆ.
ನನ್ನ ತಮ್ಮ ರಾಘವೇಂದ್ರ-ಮಂಜುಳಾ ದಂಪತಿಗೆ ಹೆಣ್ಣು ಮಗುವಾಗಿದೆ. ನಾಳೆ ಹನ್ನೊಂದನೇ ದಿನದಂದು ನಾಮಕರಣ. ಅದಕ್ಕೆ ಹೋಗುವ ಆತುರ ನನ್ನಮ್ಮನಿಗೆ, ಸಾಥ್ ನೀಡಲು ನನ್ನ ಪತ್ನಿ ಸುಧಾ, ಅಕ್ಕ ಗಾಯತ್ರಿ ಎಲ್ಲರೂ ಜತೆಗೂಡುತ್ತಿದ್ದಾರೆ.
ಅಮ್ಮ ಸೋತಿದ್ದಿಲ್ಲ. ಅತ್ಯಂತ ಕಷ್ಟ ಕಾಲದಲ್ಲೂ ಅಂಗಡಿ ನಡೆಸಿಕೊಂಡು, ಓಡಾಡಿ ಸಾಮಾನು ತರಿಸಿ ಮಾರಿಕೊಂಡು ನಮ್ಮನ್ನು ಸಾಕಿದವಳು. ಹಾಗೆ ನೋಡಿದರೆ, ಅಪ್ಪನದ್ದೇನಿದ್ದರೂ ಉಸ್ತುವಾರಿಯಷ್ಟೇ, ನಿರ್ವಹಣೆಯೆಲ್ಲಾ ಅಮ್ಮನದ್ದೇ. ನನ್ನಪ್ಪನ ತಲೆಮಾರಿನ ಎಲ್ಲರ ಮನೆಯಲ್ಲೂ ಇದೇ ಪರಿಸ್ಥಿತಿ. ಒಂದು ಮಾತಿದೆ…ಅಪ್ಪ ಕಳೆದುಹೋದ ಮೇಲೆ ಅಮ್ಮನ ಬೆಲೆ ಗೊತ್ತಾಗುತ್ತೆ. ಈ ಮಾತು ಅಕ್ಷರಶಃ ನಿಜವೆನಿಸಿದ್ದು ಇತ್ತೀಚಿನ ಮೂರು ತಿಂಗಳಲ್ಲಿ. ನನ್ನ ಮಗಳು ಮಿತ್ರವಿಂದಾಗೆ ಅಜ್ಜಿ ಇರಲೇಬೇಕು, ಆಕೆಗೂ ಬೇಸರ. ಅಮ್ಮನಿಗೂ ಅವಳಿಲ್ಲದ್ದು ಬೇಸರ. ನನಗಂತೂ ಅಮ್ಮನೊಂದಿಗೆ ಜಗಳವಾಡದೇ ಬೇಸರವಾಗಿ ಹೋಗಿದೆ. ಆಕೆ ಕೊಂಚ ಹಠವಾದಿ, ನಾನೂ ಅವಳ ಮಗನೇ. ಹಾಗಾಗಿ ನನ್ನದೂ ಸ್ವಲ್ಪ ಹಗ್ಗ ಹಿಡಿದೆಳೆಯುವ ಅಭ್ಯಾಸ. ಒಮ್ಮೊಮ್ಮೆ ಹಗ್ಗ ಜಗ್ಗಾಟ ನಡೆದೇ ಇರುತ್ತಿತ್ತು. ಬದುಕೆಂದರೆ ಅವೆಲ್ಲಾ ಇರಬೇಕೆಂದು ಎಣಿಸುವವನು ನಾನು. ಹಾಗಾಗಿ ಅದ್ಯಾವತ್ತೂ ಅಪಾಯದ ಮಟ್ಟ ಮೀರಿರಲಿಲ್ಲ. ಅಣೆಕಟ್ಟುಗಳಲ್ಲಿ ಅಪಾಯದ ಮಟ್ಟ ಮುಟ್ಟಿದಕೂಡಲೇ ಕ್ರೆಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡುವುದು ಪದ್ಧತಿ. ನಮ್ಮ ಮನೆಯಲ್ಲೂ ಅದೇ ಸಂಪ್ರದಾಯ…!
ಸಣ್ಣದೊಂದು ಕಾಯಿಲೆಯಿಂದ ಬೆಂಗಳೂರಿಗೆ ಚಿಕಿತ್ಸೆಗೆಂದು ತೆರಳಿದ ಅಮ್ಮ ಗುಣಮುಖರಾಗಲು ಮೂರು ತಿಂಗಳು ಬೇಕಾಯಿತು. ಇಬ್ಬರು ನನ್ನಣ್ಣ-ಅತ್ತಿಗೆಯಂದಿರು ಅವರನ್ನು ಚೆನ್ನಾಗಿ ನೋಡಿ ಆರೈಕೆ ಮಾಡಿ ಕಳುಹಿಸಿದ್ದಾರೆ. ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಕಾರಣ,ನನಗೆ ಅಷ್ಟೊಂದು ದಿನ ರಜೆ ಹಾಕಿಕೊಂಡು ಅಲ್ಲಿ ಹೋಗಿರುವುದು ಕಷ್ಟ. ಅವೆಲ್ಲಾ ನಿರ್ವಹಣೆಯನ್ನು ನನ್ನಣ್ಣ ನರಸಿಂಹ ಮತ್ತು ವಿವೇಕಾನಂದ ಮುಗಿಸಿದ್ದಾರೆ. ಅವರಿಗೆ ಅತ್ತಿಗೆಯಂದಿರಾದ ವೇದಾವತಿ, ಸುಶೀಲ ಸಾಥ್ ನೀಡಿದ್ದಾರೆ. ಅಂದ ಹಾಗೆ ನನ್ನಣ್ಣನ ಮಗಳು ನಿವೇದಿತಾ ಈಗ 2 ನೇ ಪಿಯುಸಿ, ಮಗ ಆದಿತ್ಯ 9 ನೇ ತರಗತಿ. ಹಾಗಾಗಿ ಹೆಚ್ಚೂ ಕಡಿಮೆ ಮನೆಯಲ್ಲಿ ಕರ್ಫ್ಯೂ !
ನಾನೂ ಮಂಗಳೂರಿಗೆ ಬಂದ ಮೇಲೆ ಒಂದಿಷ್ಟು ಕೆಲಸಕ್ಕೆ ಅಡ್ಜಸ್ಟ್ ಆಗುವುದರಲ್ಲಿದ್ದೆ, ಈಗಿನ್ನೂ ಸಂಪೂರ್ಣವಾಗಿ ಆಗಿಲ್ಲ. ಜತೆಗೆ ಮನೆಯಲ್ಲೂ ಇಂಟರ್ ನೆಟ್ ಸಂಪರ್ಕ ಇರಲಿಲ್ಲ. ಮೊನ್ನೆಯಷ್ಟೇ ಬಂದಿತು. ಈ ಮಧ್ಯೆ ಒಂದಿಷ್ಟು ಸಿನಿಮಾ ನೋಡಿದೆ, ಕೆಲವು ಪುಸ್ತಕ ಓದಿದೆ. ಅದರಲ್ಲಿ ಕೆಲವು ಮರು ಓದು ಸಹ ಸೇರಿದೆ. ಇಷ್ಟೆಲ್ಲದರ ಮಧ್ಯೆ ಮತ್ತೊಂದು ಚಿತ್ರೋತ್ಸವಕ್ಕೆ ಮನಸ್ಸು ಸಿದ್ಧವಾಗುತ್ತಿದೆ. ಇನ್ನು ನಾನು ಆದಷ್ಟು ಬ್ಲಾಗ್ ನ್ನು ಅಪ್ ಟು ಡೇಟ್ ಮಾಡುವೆ.ನೀವು ಭೇಟಿ ಕೊಡಿ, ಓದಿ, ತಿದ್ದಿ.
ಓ ಇಂಟರ್ನೆಟ್ ಕೊನೆಗೂ ಬಂತಾ? ಹಾಗಾದ್ರೆ ಬರೀತಾ ಇರಿ ಗುರುವೇ…ನಾವು ಓದ್ತಾ ಇರ್ತೇವೆ…
ನಿಜಕ್ಕೂ ಬರೆಯೋದೇ ಈಗ ಕೆಲಸ. ಮಳೆ ನೋಡೋದು, ಬರೆಯೋದು…ನಿಮ್ಮಂತಹ ಓದುಗರಿದ್ದರೆ ನಮಗೇನು ಕೆಲಸ ಅಲ್ವೇ?