ಊರಿಲ್ಲದವರಾಗುತ್ತಿದ್ದೇವೆ…!

ಪ್ರವೀಣ್ ಬಣಗಿ

ಚಿತ್ರ : ಪ್ರವೀಣ್ ಬಣಗಿ

ನಾವೆಲ್ಲರೂ ಊರಿಲ್ಲದವರಾಗುತ್ತಿದ್ದೇವೆ…!
ಇತ್ತೀಚೆಗೆ ಹೀಗೇ ಅನಿಸುತ್ತಿದೆ. ನಾವೆಲ್ಲ ಊರಿಲ್ಲದವರಾಗುತ್ತಿರುವ ಘಳಿಗೆಯಿದು. ಇದ್ದದ್ದನ್ನೆಲ್ಲಾ ಮಾರಿ ಎಲ್ಲರೂ ಅಂದುಕೊಂಡ ಊರಿಗೇ ಸ್ಥಳಾಂತರ ಹೊಂದಿ, ನಮ್ಮೂರಿನ ಇರವನ್ನೇ ಮರೆಯುತ್ತಿದ್ದೇವೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಇಂಥದೊಂದು ಘಳಿಗೆ ನನ್ನ ಎದುರಾಗಿತ್ತು. ಆಗ ನನಗೂ ಬುದ್ಧಿ ಇರಲಿಲ್ಲ. ಚಿಕ್ಕ ಮಗು. ನನ್ನಮ್ಮ ಅಪ್ಪ ತೋರಿಸಿದ ಹಾದಿಯಲ್ಲಿ ತಲೆ ತಗ್ಗಿಸಿಕೊಂಡು ಬಗಲಲ್ಲಿ ನನ್ನನ್ನು ಎತ್ತಿಕೊಂಡು ಹೊರಟು ಬಂದಳು. ಅವಳ ಹಿಂದೆ ನನ್ನಣ್ಣಂದಿರು, ಅಕ್ಕಂದಿರು ಹಿಂಬಾಲಿಸಿದರು.
ಎಲ್ಲರೂ ಸೇರಿ ನನ್ನ ಊರಲ್ಲದ ಊರಿನಲ್ಲಿ ತಳವೂರಿ ಬೆಳೆದೆವು. ನನ್ನೂರೂ ಇದೆ ಎಂಬುದು ತಿಳಿಯುವವರೆಗೆ ಅದೇ ಊರಾಗಿತ್ತು. ಆದರೆ ಕಳ್ಳು-ಬಳ್ಳಿ ಸಂಬಂಧಗಳನ್ನೆಲ್ಲಾ ಮತ್ತೆಲ್ಲೋ ಹರಡಿಕೊಂಡಿದೆ ಎಂದು ಗೊತ್ತಾದಾಗ ಅತ್ತ ವಾಲಿದ ಮನಸ್ಸು ಇನ್ನೂ ಇತ್ತ ಬಂದಿಲ್ಲ.
ಒಮ್ಮೊಮ್ಮೆ ನಾವು ಬೆಳೆದ ಊರನ್ನೇ ನಮ್ಮೂರು ಎನ್ನದೇ ಹುಟ್ಟಿದ ಊರು-ಸಂಬಂಧಗಳ ಊರು-ಪೂರ್ವಜರ ತಾಣವೇ ನಮ್ಮದು ಎನ್ನುವುದು ಆತ್ಮವಂಚನೆ ಅಲ್ಲವೇ? ಎಂದೆನಿಸುವುದುಂಟು. ಆದರೆ ಅದಕ್ಕೆ ಹಲವು ಸಮರ್ಥನೆಗಳಿವೆ.
ನಾನು ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದಾಗ ಮೊದಲು ವಿಷಾದ ಹುಟ್ಟಿಕೊಂಡಿದ್ದು ಅಂಥದೊಂದು ನಗರದಲ್ಲೇ ಹುಟ್ಟಿ ಬೆಳೆದವರ ಬಗ್ಗೆ. ನನ್ನ ಗೆಳತಿಯೊಬ್ಬಳಿದ್ದಳು ; ಅಲ್ಲಿಯವಳೇ. ನನು ಪ್ರತಿ ಬಾರಿ ಹಬ್ಬಕ್ಕೆ ಊರಿಗೆ ಹೋದಾಗ ಅಥವಾ ಮನಸ್ಸಿಗೆ ಬೇಸರವಾದರೆ ಊರಿಗೆ ಹೋಗುತ್ತೇನೆ ಎಂದಾಗಲೆಲ್ಲಾ ಬೇಸರ ಪಟ್ಟುಕೊಳ್ಳುತ್ತಿದ್ದಳು.
“ನಿನ್ನದು ಅದೃಷ್ಟ. ಬೇಸರವಾದರೆ ಹೋಗಲಿಕ್ಕೆ ಅಂತ ಒಂದು ಊರಿದೆ. ನನಗೇನೂ ಇಲ್ಲ. ನನ್ನಜ್ಜಿ ಮನೆಯೂ ಇಲ್ಲೇ, ಪಕ್ಕದ ಕೇರಿ. ನನ್ನ ಚಿಕ್ಕಪ್ಪನ ಮನೆಯೂ ಇಲ್ಲೇ, ಮತ್ತೊಂದು ಕೇರಿ,ಬಡಾವಣೆ’ ಎನ್ನುತ್ತಿದ್ದಳು. ಆಗಲೆಲ್ಲಾ ಇನ್ನೂ ನಗರವಾಗದ, ದೂರದ ನನ್ನೂರಿನ ಬಗ್ಗೆ ಹೆಮ್ಮೆ ಮೂಡುತ್ತಿತ್ತು.
ಪ್ರಿಯಾ ಅವರ “ಅಕ್ಷರ ಹೂ’ ಬ್ಲಾಗ್‌ನ ಲೇಖನ “ಅಪ್ಪ ತೋಟ ಮಾರ್‍ತಾರಂತೆ’ ಓದಿದಾಗ ಇಂಥದೇ ಒಂದು ವಿಷಾದ ನನ್ನ ಒಳ ಹೊಕ್ಕಿತು. ಮಕ್ಕಳೆಲ್ಲಾ ಹೈಮಾಸ್ಕ್ ದೀಪದ ಕೆಳಗೆ ಬದುಕು ನಡೆಸುತ್ತಿರುವಾಗ ಸುತ್ತಲೆಲ್ಲಾ ಕತ್ತಲೆ ತುಂಬಿಕೊಂಡು ಮನೆಯೊಳಗಷ್ಟೇ ಬೆಳಕು ತುಂಬಿಕೊಂಡ ಹಳ್ಳಿಗಳನ್ನು, ನಮ್ಮೂರುಗಳನ್ನು ಬಿಟ್ಟು ಬರುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.  ಅದು ಬದುಕಿನ ಅನಿವಾರ್‍ಯತೆ ಆಗುತ್ತಿರುವುದು ವಿಷಾದದ ತೀವ್ರತೆಯನ್ನು ಹೆಚ್ಚಿಸುತ್ತಿದೆ.
ಒಂದೆಡೆ ಅಭಿವೃದ್ಧಿಯ ಪಿಪಾಸುತನ, ವೈವಿಧ್ಯಮಯ ನೆಲೆಗಳನ್ನೆಲ್ಲಾ ಏಕರೂಪಿ ನಗರವನ್ನಾಗಿಸುತ್ತಿದೆ. ಅಲ್ಲಿನ ವಿಭಿನ್ನತೆ, ಅದರೊಳಗಿನ ಬಾಂಧವ್ಯ, ಸಂಸ್ಕೃತಿ ಎಲ್ಲವೂ ನಾಶವಾಗಿ, ನಗರದೊಳಗಿನ ಮಾದರಿಗಳು ನಿರ್ಮಾಣವಾಗುತ್ತಿವೆ. ಹಳ್ಳಿಗಳು ಯಾರಿಗೂ ಬೇಕಿಲ್ಲ ಎನ್ನುವುದಕ್ಕಿಂತ ಉಳಿಸಿಕೊಳ್ಳುವ ಶಕ್ತಿ ಕುಂದುತ್ತಾ ಇದೆ. ಅದಕ್ಕೆ ಕಾರಣವೂ ಇದೆ. ಬೆಳಕೇ ನಮಗೆ ಮಾದರಿಯಾಗುತ್ತಿರುವಾಗ ಕತ್ತಲೆ ಯಾರಿಗೂ ಬೇಡ. ಆಧುನಿಕತೆಯ ಸಂಭ್ರಮದೊಳಗೆ ಕರಗಿ ಹೋಗುತ್ತಿರುವುದೂ ಅರಿವಾಗುತ್ತಿಲ್ಲ. ಸಣ್ಣ ಮಕ್ಕಳಿದ್ದಾಗ ಸಮುದ್ರ ತೀರಕ್ಕೆ ಹೋಗಿ ಆಟವಾಡುತ್ತಿದ್ದುದು ನೆನಪಿಗೆ ಬಂತು. ಮುಷ್ಟಿಯಲ್ಲಿ ತುಂಬಿಕೊಂಡ ಮರಳು (ಹೊಯ್ಗೆ) ಜಾರಿ ಹೋಗುವುದೇ ವಿಚಿತ್ರ ಎನಿಸುತ್ತಿತ್ತು. ಅರೆಕ್ಷಣದಲ್ಲಿ ಮರಳಿನ ಕಣವೇ ಇರುತ್ತಿರಲಿಲ್ಲ. ಆಗ ಅಚ್ಚರಿ ಎನಿಸಿದ್ದು ಈಗ ನಿಜ ಎನಿಸತೊಡಗಿದೆ. ನಾವೂ ಸಹ ಹಾಗೆಯೇ ಕರಗುತ್ತಿದ್ದೇವೆ !
ವಿಶ್ವವೇ ಒಂದು ಕುಟುಂಬವಾಗುತ್ತಿದೆ ಎಂಬುದು ಆದರ್ಶ ಎನಿಸುವ ಭ್ರಮೆ ಹುಟ್ಟಿಸಿದೆ. ಅದರೊಳಗೆ ನಾವೀಗ ಇದ್ದೇವೆ. ವಿಶ್ವವೇ ಒಂದು ಕುಟುಂಬವಾಗಬಹುದೇನೋ? ಆದರೆ ಕುಟುಂಬದೊಳಗಿನ ಬಂಧ-ಸಂಬಂಧಗಳ ತೀವ್ರತೆಯನ್ನು ಇದು ಕಟ್ಟಿಕೊಡಲಾರದು.
ಏನೇ ಹೇಳಿ, ನಮ್ಮೂರು ಎಂಬುದೊಂದು ಇರಬೇಕು. ಬೇಸರವಾದಾಗ ನಾವಿರುವ ಊರಿನ ಬಸ್ಸು ನಿಲ್ದಾಣಕ್ಕೋ, ರೈಲು ನಿಲ್ದಾಣಕ್ಕೋ ಹೋಗಿ ನಿಂತು ಕೊಂಚ ಹೊತ್ತು ಕಾದು ಬಸ್ಸಲ್ಲಿ ನಿದ್ರೆ ಮಾಡಿಕೊಂಡು ಬೆಳಗ್ಗೆ ಇಳಿದು ನಮ್ಮೂರಿನ ದಾರಿ ಹಿಡಿಯುವ ಸಂಭ್ರಮ ಕೊಡುವ ಖುಷಿಯೇ ಬೇರೆ. ನನ್ನ ಮಗ ಅಂಥ ಸೊಗಸನ್ನು ಕಣ್ತುಂಬಿಕೊಳ್ಳುತ್ತಿದ್ದಾನೆಂಬುದೇ ನನಗೊಂದು ಸದ್ಯದ ಸಮಾಧಾನ. 
ಅದಕ್ಕೇ ಹೇಳಿದ್ದು, ವಿಷಾದದ ದ್ವೀಪದಲ್ಲಿದ್ದೇವೆ. ನೀರು ಯಾವಾಗಲಾದರೂ ಆಪೋಶನ ತೆಗೆದುಕೊಳ್ಳಬಹುದು. ಅಲ್ಲಿಯವರೆಗೆ ಕುರುಡು ಕಣ್ಣಿನ ದೃಷ್ಟಿಯಲ್ಲಿ ಕಂಡಷ್ಟು ದೂರ ಹೆಜ್ಜೆ ಇಡಬೇಕು, ಮತ್ತೆ ಕತ್ತಲೆ ಆವರಿಸಿಕೊಂಡರೆ ಕರಗಿ ಹೋಗುವುದು ಇದ್ದೇ ಇದೆ.
ಕತ್ತಲೆ ದೀಪದ ಕುಡಿಯನ್ನು ಕಂಡು ಹೇಳಿತಂತೆ. “ನೋಡು, ನನ್ನ ಆಕಾರದ ಎದುರು ನಿನ್ನದೇನೂ ಇಲ್ಲ. ನಾನು ಮನಸ್ಸು ಮಾಡಿದರೆ ನಿನ್ನನ್ನು ನುಂಗಿ ಬಿಡುವೆ’. ಅದಕ್ಕೆ ದೀಪ ತಾಳ್ಮೆ ಕಳೆದುಕೊಳ್ಳಲಿಲ್ಲ. “ಇರಬಹುದು. ಆದರೆ ನೀನು ನುಂಗುವವರೆಗೂ ನಾನು ಬೆಳಗುತ್ತೇನೆ, ಸಾಕಲ್ಲ’ ಎಂದಿತಂತೆ. ಆ ಆತ್ಮವಿಶ್ವಾಸದ ಬೆಳಕು ನಮ್ಮೊಳಗೆ ಹೊತ್ತಿಕೊಂಡರೆ ಮತ್ತಷ್ಟು ದಿನ ನಮ್ಮೂರುಗಳನ್ನು ಉಳಿಸಿಕೊಳ್ಳಬಹುದೇನೋ…? ಬನ್ನಿ, ಹೋಗುವಾ ನಮ್ಮೂರಿಗೆ…ಮರಳಿ ನಮ್ಮಯ ಗೂಡಿಗೆ..

ಸಂವಾದ 2-ಪತ್ರಕರ್ತನಿಗೆ ಸಾಮಾನ್ಯಜ್ಞಾನ ಅವಶ್ಯ

ಸಂವಾದ-೨
ಗಣೇಶ್ . ಕೆ. , ವಿನಾಯಕ ಮತ್ತು ಸಿರಿ ಪ್ರಶ್ನೆಗಳನ್ನು ಕೇಳಿ ಹಲವು ದಿನಗಳಾಗಿತ್ತು. ಆದರೆ ಚುನಾವಣೆಯಲ್ಲಿ ಮುಳುಗಿದ್ದರಿಂದ ಮೇಲಕ್ಕೆ ಬರಲು ಇಷ್ಟು ದಿನಗಳಾದವು. ತಡವಾಗಿದ್ದಕ್ಕೆ ವಿಷಾದವಿದೆ.
ಗಣೇಶ್ ಅವರು ಸಂಪಾದಕ, ಸುದ್ದಿ ಸಂಪಾದಕ, ಉಪ ಸಂಪಾದಕರ ಕೆಲಸದ ಬಗ್ಗೆ ಕೇಳಿದ್ದಾರೆ.
ಉ : ಪತ್ರಿಕೆ ಒಬ್ಬನೇ ಸಂಪಾದಕ ಮತ್ತು ಸುದ್ದಿ ಸಂಪಾದಕ, ಉಪ ಸಂಪಾದಕರು ಹಲವರು. ಹೀಗೊಂದು ಮಾತಿದೆ. ಯಾವಾಗಲೂ ಪತ್ರಿಕೆಗೆ ಒಬ್ಬ ಸಂಪಾದಕರಿರುತ್ತಾರೆ. ಅವರು ಪತ್ರಿಕೆಯ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತವರು. ನಂತರದ ಸ್ಥಾನದಲ್ಲಿರುವವರೆಲ್ಲಾ ಈ ಸಂಪಾದಕರ ಹಲವು ಜವಾಬ್ದಾರಿಗಳನ್ನು ವಿಭಾಗಿಸಿಕೊಂಡವರು.
ಸುದ್ದಿ ಸಂಪಾದಕರೆಂದರೆ ಸುದ್ದಿಯನ್ನು ಸಂಪಾದಿಸುವವರು ಎಂದೂ ಕರೆಯಬಹುದು. ಆದರೆ ವಾಸ್ತವವಾಗಿ ಅವರು ಪತ್ರಿಕೆಗೆ ಹೋಗುವ ಎಲ್ಲಾ ಸುದ್ದಿಗಳ ಹೊಣೆಗಾರರು. ಯಾವುದೇ ಸುದ್ದಿ ಅವರ ಗಮನಕ್ಕೆ ಬಾರದೇ ಅಚ್ಚಿಗೆ ಹೋಗುವಂತಿಲ್ಲ. ಅಂಥ ಪ್ರಸಂಗ ನಡೆದರೆ ಸಂಪಾದಕರು ಸುದ್ದಿ ಸಂಪಾದಕರನ್ನು ಪ್ರಶ್ನಿಸುತ್ತಾರೆ. ಹಾಗೆಯೇ ತಮ್ಮ ಅಧೀನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಎಲ್ಲ ಅವಕಾಶ, ಹಕ್ಕು ಸುದ್ದಿ ಸಂಪಾದಕರದ್ದಾಗಿರುತ್ತದೆ. ಸುದ್ದಿ ಮನೆಯಲ್ಲಿ ಸದಾ ತಮಾಷೆ ಮಾಡುವುದುಂಟು.
ತಪ್ಪು ಮಾಡುವುದಿದ್ದರೂ ಅವರನ್ನು (ಸುದ್ದಿ ಸಂಪಾದಕರು) ಕೇಳಿ ಮಾಡಿ, ಅದಕ್ಕೆ ಕ್ಷಮೆ ಇರುತ್ತದೆ ಎಂದು. ಆದರೆ ಸ್ಥಿತಿ ಹಾಗಿಲ್ಲ. ಸುದ್ದಿ ಮನೆಯಲ್ಲಿ ಪ್ರತಿಯೊಬ್ಬರನ್ನೂ “ನೀವು ಈ ಕೆಲಸ ಮಾಡಿದಿರಾ, ಇಲ್ಲವಾ?’ ಎಂದು ಕೇಳುವವರು ಯಾರೂ ಇರುವುದಿಲ್ಲ. ನಿಮ್ಮ ಮೇಲಿನವರೂ ಸಹ ಕೇಳುವುದೂ ಇಲ್ಲ. ಆದರೆ ದೃಷ್ಟಿಸುತ್ತಿರುತ್ತಾರೆ. ಒಬ್ಬ ಎಡವಿದರೂ ಅದರ ಪರಿಣಾಮ ಪತ್ರಿಕೆಯ ಮೇಲಾಗುವುದು ಖಚಿತ.
ಇನ್ನು ಉಪ ಸಂಪಾದಕರೆಂದರೆ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಕೂಡಲೇ ಸಿಗುವ ಹುದ್ದೆ. ನಾನಾ ಪಾಳಿಗಳಲ್ಲಿ, ವಿಭಾಗಗಳಲ್ಲಿ ಕಾರ್‍ಯ ನಿರ್ವಹಿಸುವ ಇವರು, ವಿವಿಧ ನೆಲೆಯ ನಿರ್ವಹಣೆಗಳನ್ನು ಹೊಂದಿರುತ್ತಾರೆ. ಒಂದೊಂದು ಕಚೇರಿಯಲ್ಲೂ ಒಂದೊಂದು ಪಾಳಿಯಲ್ಲಿ ಹತ್ತಾರು ಮಂದಿ ಉಪ ಸಂಪಾದಕರು ಕೆಲಸ ಮಾಡುತ್ತಾರೆ. ಈ ಪೈಕಿ ಜನರಲ್, ಬ್ಯೂರೋ, ಮೊಫಿಸಿಯಲ್ (ಗ್ರಾಮೀಣ) ಹೀಗೆ ಹಲವು ವಿಭಾಗಗಳಿರುತ್ತವೆ.
ಇನ್ನು ಸಿರಿಯವರ ಪ್ರಶ್ನೆ ವರದಿ ಮಾಡುವ ಕುರಿತಾದದ್ದು (ರಿಪೋರ್ಟಿಂಗ್)
ವರದಿಗಾರಿಕೆ ಅತ್ಯಂತ ಕುತೂಹಲವಾದದ್ದು. ಜತೆಗೆ ಜನರೊಂದಿಗೆ ನಿತ್ಯವೂ ನಮ್ಮನ್ನು ಸಂಪರ್ಕವಿಡುವಂಥದ್ದು. ನನಗೂ ಮೊದಲು ವರದಿಗಾರಿಕೆಗೆ ಹೋದಾಗ ಸಹಜವಾಗಿ ಭಯವಾಗಿತ್ತು. ಅದನ್ನು ನಾನು ನನ್ನ “ಬ್ರಹ್ಮಚಾರಿಗಳ ಪುಟಗಳು’ ಬ್ಲಾಗಿನಲ್ಲಿನ ಧಾರಾವಾಹಿಯಲ್ಲಿ ಹೇಳಿಕೊಂಡಿದ್ದೆ.
ವರದಿಗಾರಿಕೆ ಮಾಡುವುದು ಎಲ್ಲರೂ ತಿಳಿದಂತೆ ಕಷ್ಟವಲ್ಲ. ಮೊನ್ನೆ ಒಬ್ಬರು ಇಂಟರ್ನ್‌ಶಿಪ್‌ಗೆ ಬಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಯ ಬಳಿ ಈ ಬಗ್ಗೆ ಸುಮಾರು ಹೊತ್ತು ಮಾತನಾಡಿದೆ. ಬಹಳಷ್ಟು ಬಾರಿ ಅನಿಸುವ ಸಂಗತಿಯೆಂದರೆ ( ಇದು ಎಲ್ಲರಿಗೂ ಇಷ್ಟವಾಗದಿರಬಹುದು) ವರದಿಗಾರಿಕೆಗಾಗಲೀ, ಸುದ್ದಿ ಸಂಪಾದನೆ (ಎಡಿಟಿಂಗ್) ಗಾಗಲೀ “ಸಾಮಾನ್ಯ ಜ್ಞಾನ’ (ಕಾಮನ್ ಸೆನ್ಸ್) ಅತ್ಯವಶ್ಯ. ಇದರರ್ಥ ವಿಶೇಷ ಜ್ಞಾನ, ಪರಿಣತಿ ಇರಬಾರದೆಂದಲ್ಲ. ಇದ್ದರೆ ಅದು ಪೂರಕ (ಸಪ್ಲಿಮೆಂಟ್). ಆದರೆ ಮೂಲವಾದುದು ಸಾಮಾನ್ಯಜ್ಞಾನ. ಇಂಟೆಲ್‌ಕ್ಚುಯಲಿಟಿಯಿಂದ ಇಲ್ಲಿ ಪ್ರಯೋಜನ ಕಡಿಮೆ.
ವರದಿಗಾರಿಕೆ ಮಾಡುವವರಿಗೆ ಮೊದಲು ನಿತ್ಯದ ಬೆಳವಣಿಗೆಗಳ ಅರಿವಿರಬೇಕು. ಹಾಗೆಯೇ ಪ್ರತಿ ಬೆಳವಣಿಗೆಗಳ ಭವಿಷ್ಯವನ್ನು ಅಂದಾಜು ಮಾಡುವ ಸಾಮರ್ಥ್ಯ ಇರಬೇಕು. ಉದಾಹರಣೆಗೆ ರಾಜ್ಯಾದ್ಯಂತ ನಾಳೆಯಿಂದ ಬೆಳಗ್ಗೆ 9 ಕ್ಕೆ ಶಾಲೆ ಆರಂಭ. ಇದುವರೆಗೆ 9.30 ಕ್ಕೆ ಆರಂಭವಾಗುತ್ತಿತ್ತು ಎಂಬ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಇಟ್ಟುಕೊಂಡು ಅದರಿಂದುಂಟಾಗುವ ಸರಣಿ ಬೆಳವಣಿಗೆಗಳನ್ನು ಗ್ರಹಿಸಬೇಕು. ಇಂದಿನ ಪೋಷಕರು ತಮ್ಮ ಎಲ್ಲ ಚಟುವಟಿಕೆಗಳನ್ನು ಅರ್ಧ ಗಂಟೆ ಮುಂಚಿತವಾಗಿಯೇ ರೂಪಿಸಿಕೊಳ್ಳಬೇಕು. ಇದನ್ನು ಅರ್ಥವತ್ತಾಗಿ ಬರೆದರೆ ಒಂದು ಮಾನವೀಯ ವರದಿ.
ಹಾಗಾಗಿ ನಿತ್ಯ ಬೆಳವಣಿಗೆಗಳ ಪರಿಣಾಮ ಗ್ರಹಿಸುವ ಸಾಮರ್ಥ್ಯ ಅಗತ್ಯ. ಇದೇನೂ ಕಷ್ಟವಲ್ಲ. ನಿತ್ಯವೂ ರೂಢಿಸಿಕೊಂಡುಹೋಗುವಂಥದ್ದು.
* ವರದಿಗಾರಿಕೆಗೆ ಹೋಗುವ ಮೊದಲು ಸಂಬಂಧಪಟ್ಟ ಕಾರ್‍ಯಕ್ರಮದ ವಿಷಯದ ಬಗ್ಗೆ ಮೊದಲೇ ತಿಳಿದಿದ್ದರೆ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ತಿಳಿದು ಹೋಗಿ. ಇದರಿಂದ ಅಲ್ಲಿ ಚರ್ಚೆಯಾಗುವ ವಿಷಯ ಹೆಚ್ಚು ಸ್ಪಷ್ಟವಾಗುತ್ತದೆ.
* ನೀವು ಕಾರ್ಯಕ್ರಮದಲ್ಲಿ ಮಾತನಾಡುವುದನ್ನೆಲ್ಲಾ (ಮುಖ್ಯ ಸಂಗತಿ) ಬರೆದುಕೊಂಡು ಬನ್ನಿ. ಅನುಮಾನಗಳಿದ್ದರೆ ಸಂಬಂಧಪಟ್ಟ ಭಾಷಣಕಾರರನ್ನೇ ನಂತರ ಕೇಳಿ. ಇದರಿಂದ ಮರ್ಯಾದೆಯೇನೂ ಹೋಗುವುದಿಲ್ಲ. ಅಸ್ಪಷ್ಟ ಮತ್ತು ತಪ್ಪಾದ ಸಂಗತಿ ಬರೆದು ಎಲ್ಲರನ್ನೂ ದಾರಿ ತಪ್ಪಿಸುವುದಕ್ಕಿಂತ ನಮ್ಮ ಅನುಮಾನ ಬಗೆಹರಿಸಿಕೊಂಡು ಸರಿಯಾದುದನ್ನೇ ಬರೆಯುವುದು ಸರಿ.
* ನಂತರವೂ ಅನುಮಾನಗಳಿದ್ದರೆ ನಿಮ್ಮ ಹಿರಿಯರೊಂದಿಗೆ (ಕಚೇರಿಯಲ್ಲಿರುವ) ಚರ್ಚಿಸಿ. ಇಲ್ಲವಾದರೆ ಆ ಸಂಬಂಧಪಟ್ಟ ವಿಷಯತಜ್ಞರನ್ನು ಕೇಳಿ. ಒಟ್ಟೂ ವಿಷಯವನ್ನು ನಿಮ್ಮೊಳಗೆ ಮೊದಲು ಸ್ಪಷ್ಟಗೊಳಿಸಿಕೊಳ್ಳಿ. ಆಮೇಲೆ ಯಾವುದು ಹೆಚ್ಚು ಚರ್ಚಿತವಾಗಬಲ್ಲದೋ, ಸುದ್ದಿ ಎನಿಸಬಲ್ಲದೋ ಅದನ್ನು ಬರೆಯಿರಿ. ಯಾವಾಗಲೂ ಸರಣಿ ಘಟನೆಗಳು ಮುಖ್ಯ. ಉದಾಹರಣೆಗೆ ಲೋಕಾಯುಕ್ತರು ಗಣಿ ವರದಿಯನ್ನು ಶೀಘ್ರವೇ ಕೊಡುವುದಾಗಿ ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಸರಕಾರವಾಗಲೀ, ಗಣಿ ಉದ್ದಿಮೆದಾರರಾಗಲೀ, ಅಧಿಕಾರಿಗಳಿಗಾಗಲೀ ಪ್ರತಿಕ್ರಿಯಿಸಿದರೆ ಅದು ಸುದ್ದಿ. ಇದನ್ನು ಸರಣಿ ಘಟನೆಗಳೆಂದು ಹೇಳಬಹುದು. ಇದೊಂದು ಉದಾಹರಣೆಯಷ್ಟೇ.
ಇನ್ನು ಸಂದರ್ಶನಕ್ಕೆ ಹೋಗುವಾಗ ಸಿದ್ಧವಾಗುವ ಬಗೆ ಹಾಗೂ ವರದಿಗಾರಿಕೆಯಲ್ಲಿ ಬರುವ ಮುಖ್ಯಾಂಶಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಸುದ್ದಿ ಯಾವುದು ಎನ್ನುವ ಬಗ್ಗೆಯೇ ಕಲ್ಪನೆ ಬದಲಾಗಿರುವುದರಿಂದ ಪ್ರತ್ಯೇಕವಾಗಿ ಹೇಳುತ್ತೇನೆ.
ಇನ್ನು ವಿನಾಯಕ ಕೇಳಿದ ಪ್ರಶ್ನೆ- ರಾಜಕಾರಣಿಯ ಸ್ವಭಾವದ ಕುರಿತು.
ಒಂದೇ ದಿನದಲ್ಲಿ ರಾಜಕಾರಣಿ ಒಳ್ಳೆಯನಾಗುವುದಿಲ್ಲ. ಅಂಥದೊಂದು ಆಶಯ ಹುಟ್ಟಿಕೊಳ್ಳಬಹುದು. ಆದರೆ ಸನ್ನಿವೇಶ ಮತ್ತು ಸಂದರ್ಭ ಆಧರಿಸಿ ನಿಮ್ಮ ಪ್ರಶ್ನೆಗೆ ಉತ್ತರಿಸಬೇಕಾದೀತು.

ಪತ್ರಿಕೆಯ ಸುದ್ದಿ ಮೂಲಗಳು- ಸಂವಾದ 1

ಭಾಗ ೧
ಸಂವಾದ ಆರಂಭವಾಗಿದೆ. ನಮ್ಮ ಭಾಗದಲ್ಲಿ ಮೊದಲ ಹಂತದ ಚುನಾವಣೆ ಇದ್ದದ್ದರಿಂದ ಹಲವರ ಪ್ರಶ್ನೆಗಳಿಗೆ ಉತ್ತರಿಸಲು ತಡವಾಯಿತು. ಇನ್ನು ತಡವಾಗುವುದಿಲ್ಲ.

ಶೆಟ್ಟರ ಮೊದಲ ಪ್ರಶ್ನೆ
ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಉತ್ತರ : ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.
ಬಹಳ ಪ್ರಮುಖ ವಿಷಯಗಳನ್ನು ಆಧರಿಸಿ ಬೀಟ್ ಎಂದು ಹಂಚಲಾಗುತ್ತದೆ. ಉದಾಹರಣೆಗೆ ಅಪರಾಧ ವಿಭಾಗವನ್ನು ಒಬ್ಬ ನೋಡಿಕೊಂಡರೆ, ಮತ್ತೊಬ್ಬನಿಗೆ ರಾಜಕೀಯ ಬೆಳವಣಿಗೆಗಳ ನಿರ್ವಹಣೆ, ಶಿಕ್ಷಣ, ಆರೋಗ್ಯ- ಹೀಗೆ ಹಂಚಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು ವರದಿ ಮಾಡಬೇಕು. ಬೇರೆ ಪೇಪರ್‍ನಲ್ಲಿ ಸುದ್ದಿ ಬಂದರೆ ಅದು ನಮಗೆ ಮಿಸ್ ಆದಂತೆ. ಅದಕ್ಕೆ ನಾವು ಉತ್ತರಿಸಬೇಕು.
ಹೀಗೆ ಆಯಾ ವರದಿಗಾರರು ತಮಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸುದ್ದಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರದಿಗಾರರು ಹಲವು ವಲಯಗಳಲ್ಲಿ ಸುದ್ದಿ ಮೂಲಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಇಲ್ಲಿ ಯಾರನ್ನೂ ಉಪೇಕ್ಷಿಸುವಂತಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ವಿವಿಧ ಹಂತಗಳ ಸುದ್ದಿಮೂಲಗಳು.
ಸುದ್ದಿಯ ವಾಸನೆ ಸಿಗುವುದು ಕೆಳ ಹಂತದ ಅಧಿಕಾರಿಗಳಿಂದ. ಅದು ಕನ್‌ಫರ್ಮ್ ಆಗುವುದು ಉನ್ನತ ಅಧಿಕಾರಿಗಳಿಂದ. ಆದ್ದರಿಂದ ನಮ್ಮ ಸುದ್ದಿ ಮೂಲಗಳನ್ನು ಚೆನ್ನಾಗಿ (ಅಂದರೆ ತಿಂಡಿ ಕೊಡಿಸಿ, ಹಣ ಕೊಡಿಸಿಯಲ್ಲ) ವಿಶ್ವಾಸದಿಂದ ಇಟ್ಟುಕೊಳ್ಳಬೇಕು. ಇದು ಬರಿಯ ಅಧಿಕಾರಿಗಳೆಂದೇ ಅಲ್ಲ. ಸುದ್ದಿ ಮೂಲಗಳು ಪ್ರತಿ ವಿಷಯಕ್ಕೂ ಸಂಬಂಧಿಸಿ ಬದಲಾಗುತ್ತಾ ಹೋಗುತ್ತದೆ.
ಎರಡನೆಯದಾಗಿ ನಮ್ಮ ಸುದ್ದಿ ಮೂಲಗಳ ಸತ್ಯಾಸತ್ಯತೆಗಳನ್ನು ಶೋಧಿಸುವ ಬಗೆ. ಇದು ಸಂಪೂರ್ಣ ವಿಶ್ವಾಸದ ನೆಲೆಯಲ್ಲಿ ನಡೆಯುವಂಥದ್ದು. ನಾವೂ ಸಹ ಕೊಟ್ಟದ್ದನ್ನೆಲ್ಲಾ ಸುದ್ದಿಗಳೆಂದು ಬರೆಯುವುದಿಲ್ಲ. ಅದನ್ನು ಬೆನ್ನು ಹತ್ತಿ ಅದರ ವಿವಿಧ ನೆಲೆಗಳನ್ನು ಶೋಧಿಸುತ್ತೇವೆ. ನಂತರ ನಮಗೆ ವಿಶ್ವಾಸ ಮೂಡಿದ್ದಲ್ಲಿ ಮಾತ್ರ ನಮ್ಮ ಮುಖ್ಯ ವರದಿಗಾರರಿಗೆ, ಸಂಪಾದಕರಿಗೆ ಇಂಥದೊಂದು ಸುದ್ದಿಯಿದೆ ಎಂಬ ಗುಟ್ಟು ಬಿಟ್ಟುಕೊಡುತ್ತೇವೆ. ಅಲ್ಲಿಯವರೆಗೆ ಆ ಕುರಿತು ಏನನ್ನೂ ಹೇಳುವುದಿಲ್ಲ. “ಕ್ರಾಸ್ ಚೆಕ್’ ಎಂಬುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದರೆ ತಪ್ಪೇನೂ ಇಲ್ಲ. ಅದಿಲ್ಲದೇ ನಾವು ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಷ್ಟೆಲ್ಲಾ ಆದ ಮೇಲೂ ಎಡವಿದ್ದು ಇದೆ ; ಅದು ಸಾಮಾನ್ಯ.

ಗಣೇಶ್ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅದನ್ನು ಒಂದೊಂದಾಗಿಯೇ ಉತ್ತರಿಸುತ್ತೇನೆ
ಮೊದಲನೆಯದಾಗಿ ಪತ್ರಿಕೆಗೆ ಸುದ್ದಿ ಹೇಗೆ ಬರುತ್ತದೆ ?
ಪತ್ರಿಕೆಗೆ ಸುದ್ದಿ ಬರುವ ಮೂಲಗಳು ಹಲವಾರು. ಹಿಂದೆ ದಿಕ್ಕುಗಳೆಂದು ನಂಬಿಕೆಯಿತ್ತು. ಈಗ ಹಾಗಲ್ಲ. ಜತೆಗೆ ಸುದ್ದಿ ಏಜೆನ್ಸಿಗಳು, ಪತ್ರಿಕೆಗಳೇ ರೂಪಿಸಿಕೊಂಡ ಸಂಪರ್ಕ ಜಾಲಗಳೆಲ್ಲಾ ಸುದ್ದಿ ತಂದು ಸುದ್ದಿಮನೆಗೆ ಸುರಿಯುತ್ತವೆ. ಅದನ್ನು ಹೆಕ್ಕಿ ಒಪ್ಪ ಓರಣ ಮಾಡಿ ಬೆಳಗ್ಗೆ ಓದುವಂತೆ ಮಾಡುವ ಹೊಣೆ ಸಂಪಾದಕರು, ಉಪ ಸಂಪಾದಕರು, ಸುದ್ದಿ ಸಂಪಾದಕರು-ಹೀಗೆ ಹಲವು ಹಂತಗಳಲ್ಲಿ ನಡೆಯುತ್ತದೆ. ಒಮ್ಮೊಮ್ಮೆ ಅನ್ನಿಸುವುದಿದೆ. ಕಸದಂತೆಯೇ ಸುದ್ದಿ ಬಂದು ಸುರಿಯುತ್ತದಲ್ಲಾ ಎಂದು. ಆದರೆ ಕೆಲವೊಮ್ಮೆ ಹೆಕ್ಕುವ ಸಂದರ್ಭದಲ್ಲಿ ಅದಲು ಬದಲಾಗುವುದುಂಟು.

ಸುಪ್ರೀತ್ ಕೇಳಿದ ಪ್ರಶ್ನೆಯೂ ಇದೇ ತೆರನಾದದ್ದು
ಪತ್ರಿಕೆಗೆ ಸುದ್ದಿ ಮೂಲಗಳು ಹಲವಾರು. ಪ್ರಸ್ತುತ ಬಹುತೇಕ ಪತ್ರಿಕೆಗಳು ದೇಶ-ವಿದೇಶ ಸುದ್ದಿಗಳಿಗಾಗಿ ಯುಎನ್‌ಐ, ಪಿಟಿಐ ನ್ಯೂಸ್ ಏಜೆನ್ಸಿಯನ್ನು ಆಶ್ರಯಿಸಿದ್ದೇವೆ. ಇದಲ್ಲದೇ ರಾಯಿಟರ್ ಮುಂತಾದವೂ ಇವೆ. ಕನ್ನಡದಲ್ಲಿ ಕರ್ನಾಟಕ ನ್ಯೂಸ್ ನೆಟ್ ಸುದ್ದಿ ಜಾಲವಿದೆ. ಇದಲ್ಲದೇ ಪ್ರತಿ ಪತ್ರಿಕೆಯೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ತಮ್ಮ ವರದಿಗಾರರನ್ನು ನೇಮಿಸಿಕೊಂಡಿರುತ್ತದೆ. ತಾಲೂಕು ಮಟ್ಟದಲ್ಲಿ ಇರುವವರನ್ನು ಬಿಡಿ ಸುದ್ದಿ ಸಂಗ್ರಾಹಕರು (ಸ್ಟ್ರಿಂಜರ್) ಎಂದು ಕರೆಯಲಾಗುವುದು. ಪ್ರತಿ ಊರಿನಲ್ಲೂ ಆಯಾ ಪತ್ರಿಕೆ ಇರುವ ಪ್ರಸಾರ ಸಂಖ್ಯೆ ಹಾಗೂ ಹುಟ್ಟುವ ಸುದ್ದಿಗಳ ಸಂಖ್ಯೆ ಆಧರಿಸಿ ಸುದ್ದಿ ಸಂಗ್ರಾಹಕರನ್ನು ನೇಮಿಸಿಕೊಳ್ಳಲಾಗುವುದು. ಉಳಿದಂತೆ ಜಿಲ್ಲಾ ವರದಿಗಾರರನ್ನು ಪತ್ರಿಕೆಯೇ ನೇಮಿಸಿಕೊಂಡಿರುತ್ತದೆ. ಇಷ್ಟೆಲ್ಲಾ ಆದ ಮೇಲೆ ಅನಧಿಕೃತ ಸುದ್ದಿ ಮೂಲಗಳೆಂದು ಇಲ್ಲ. ಸುದ್ದಿ ಮೂಲ ಹೆಚ್ಚು ಬಾರಿ ತೆರೆಯ ಹಿಂದೆಯೇ ಇರುತ್ತದೆ.
ಟ್ಯಾಬ್ಲಾಯ್ ಪತ್ರಿಕೆಗೂ ದಿನಪತ್ರಿಕೆಗೂ ಬಹಳ ವ್ಯತ್ಯಾಸವಿದೆ. ಕಾರ್‍ಯಶೈಲಿಯೇ ಸಂಪೂರ್ಣ ಭಿನ್ನ. ನಮ್ಮ ಸುದ್ದಿಯ ಆದ್ಯತೆಗೂ, ಅವರ ಸುದ್ದಿಯ ಆದ್ಯತೆಗೂ ವ್ಯತ್ಯಾಸವಿದೆ. ಟ್ಯಾಬ್ಲಾಯ್ಡ್ ಅವರಿಗೆ ಪ್ರತಿ ವಾರವೂ ತಮ್ಮ ಪತ್ರಿಕೆ ಖಾಲಿಯಾಗಲು “ಸುದ್ದಿ ಸ್ಫೋಟ’ (ಬ್ರೇಕಿಂಗ್ ನ್ಯೂಸ್) ಅನಿವಾರ್ಯವಾಗಿರುತ್ತದೆ. ಆದರೆ ಅಂಥದೊಂದು ಅನಿವಾರ್ಯ ದಿನಪತ್ರಿಕೆಗಳಿಗಿಲ್ಲ !

ಸಂ-ವಾದ ಆರಂಭ

ಗೆಳೆಯರೇ,
ಪತ್ರಿಕೋದ್ಯಮ ನಮ್ಮ (ಮನುಷ್ಯನ) ಆವಿಷ್ಕಾರಗಳಲ್ಲಿ ಮಹತ್ವದ್ದು. ತನ್ನ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯೇ ನಮ್ಮ ಚಲನಶೀಲತೆಯನ್ನು ಪ್ರತಿನಿಧಿಸಬಲ್ಲದು. ಅಂಥದೊಂದು ಅಗತ್ಯತೆಯನ್ನು ಕಂಡುಕೊಂಡು ಆ ನೆಲೆಯಲ್ಲಿ ನಾವು ಹತ್ತು ಹಲವಾರು ಸುಧಾರಣೆಗಳನ್ನು ಮಾಡಿಕೊಳ್ಳುತ್ತಾ ಸಾಗಿದ್ದೇವೆ.

ಇಂದು ಮಾಧ್ಯಮ ಹತ್ತಾರು ದೃಷ್ಟಿಕೋನಗಳಲ್ಲಿ ರೂಪುಗೊಳ್ಳುತ್ತಾ ಬೆಳೆಯುತ್ತಿದೆ. ಪರಿಸರದಲ್ಲಾಗುವ ಬದಲಾವಣೆಗಳೆಲ್ಲಾ ಇದರ ಮೇಲೂ ಪರಿಣಾಮ ಬೀರಿದೆ. ಅದನ್ನೆಲ್ಲಾ ನೀಗಿಸಿಕೊಂಡು ಬಹಳ ವಿಸ್ತೃತವಾಗಿ ಮಾಧ್ಯಮ ಬೆಳೆಯುತ್ತಿದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ತಂತ್ರಜ್ಞಾನ ಮಾಧ್ಯಮ ಕ್ಷೇತ್ರದಲ್ಲಿ ತಂದಿರುವ ಬದಲಾವಣೆ-ಸುಧಾರಣೆ ಅತೀವವಾದದ್ದು. ಹತ್ತು ವರ್ಷಗಳ ಹಿಂದಿನ ಸುದ್ದಿಮನೆಯ ಚಿತ್ರಣವೇ ಇಂದು ಬದಲಾಗಿ ಹೋಗಿದೆ.

ತಂತ್ರಜ್ಞರಂತೆಯೇ “ಸ್ಟಿಫ್’ ಆಗಿ ಕಾಣುವ ಸುದ್ದಿಯ ಮನೆಯೊಳಗಿನವರು ಬಹಳ ನಾಜೂಕುತನ ರೂಢಿಸಿಕೊಂಡಿದ್ದಾರೆ. ಕಾರ್‍ಯ ಶೈಲಿಯಲ್ಲೂ ಹೊಸತನ ಬಂದಿದೆ. ಪತ್ರಿಕೋದ್ಯಮ ನಿಂತ ನೀರಾಗದೇ ಹರಿಯುವ ನದಿಯಾಗುವತ್ತ ಸಾಗಿದೆ. ತಂತ್ರಜ್ಞಾನ ನಮ್ಮ ಜೀವನದ ಪ್ರತಿ ಹಂತದಲ್ಲಿಯೂ ತಂದಿರುವ ಬದಲಾವಣೆಗಳು ಅಪಾರ. ಆದರೆ ಅದು ಮಾಧ್ಯಮ ಕ್ಷೇತ್ರದಲ್ಲಿ ಲೆಕ್ಕವಿಲ್ಲದಷ್ಟು ಆಗಿದೆ. ಮಾಧ್ಯಮ ಬೆಳೆದಿರುವ ರೀತಿಯೂ ಅಗಾಧ. ಭಾರತೀಯ ಪತ್ರಿಕೋದ್ಯಮದಂತೆಯೇ ನಮ್ಮ ಕನ್ನಡ ಪತ್ರಿಕೋದ್ಯಮದಲ್ಲೂ ಒಂದಿಷ್ಟು ಬದಲಾವಣೆಗಳಾಗಿವೆ.

ಉದಾರೀಕರಣ, ಜಾಗತೀಕರಣದ ಗಾಳಿಯಿಂದ ಪಲ್ಲಟದ ಅಲೆಗಳು ಎದ್ದಿರುವುದು ನಿಜ. ಸಹಜವಾಗಿ ನಡೆದುಹೋಗುತ್ತಿದ್ದವ ಇದ್ದಕ್ಕಿದ್ದಂತೆ ಎದುರಾಗುವ ವೃತ್ತದಲ್ಲಿನ ಗೊಂದಲವನ್ನು ನಮ್ಮ ಮಾಧ್ಯಮ ಕ್ಷೇತ್ರವೂ ಎದುರಿಸುತ್ತಿದೆ ; ಪತ್ರಕರ್ತರೂ ಸಹ. ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮದ ನಡುವಿನ ಪೈಪೋಟಿ ಸಹ ಹೆಚ್ಚಿದೆ. ಹಿಂದಿಗಿಂತಲೂ ಈಗ ಪತ್ರಕರ್ತರು ಹೆಚ್ಚು “ಬ್ಯುಸಿ’ಯಾಗಿದ್ದಾರೆ. ಬ್ರೇಕಿಂಗ್ ನ್ಯೂಸ್‌ನತ್ತ ಗಮನ ನೆಟ್ಟಿದ್ದಾರೆ.

ಸೆನ್ಸೇಷನ್ ಜರ್ನಲಿಸಂನಂಥ ಅಪವಾದ ಬರುತ್ತಿರುವುದೂ ನಿಜ. ಸುದ್ದಿಯ ನೆಲೆಯಲ್ಲಿ ಇದ್ದ ವ್ಯತ್ಯಾಸ ದೂರವಾಗುತ್ತಿದೆಯೇನೋ? ಮಾಧ್ಯಮಗಳು ನಮ್ಮ ಬದುಕಿಗೆ ಸಂವಾದವಾಗಿ ಪರಿಣಮಿಸುತ್ತಿಲ್ಲವೇನೋ? ಸುದ್ದಿಯ ವೈಭವೀಕರಣದತ್ತ ಮಾಧ್ಯಮಗಳು ಹೊರಟಿವೆಯೇ? ಇಂಥ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ.  ಇದೆಲ್ಲದರ ಮಧ್ಯೆ ಈ “ಸಂವಾದ’ ಆರಂಭಿಸಿದ್ದೇನೆ.

ನನ್ನ ಉದ್ದೇಶ ಯಾವುದೇ ವಿವಾದವನ್ನು ಹುಟ್ಟು ಹಾಕುವುದಲ್ಲ. ನಮ್ಮ ಕ್ಷೇತ್ರದ ಬಹಳಷ್ಟು ಬದಲಾವಣೆಗಳು, ಕ್ಷೇತ್ರದ ಒಳ-ಹೊರಗುಗಳು ಬಹಳಷ್ಟು ಮಂದಿಗೆ ತಿಳಿದೇ ಇರುವುದಿಲ್ಲ. ನಮ್ಮ ಕಾರ್‍ಯ ಕ್ಷೇತ್ರದಲ್ಲಿನ ಒತ್ತಡ, ಡೆಡ್‌ಲೈನ್ ಮುಟ್ಟಲು ಪಡುವ ಶ್ರಮ-ಎಲ್ಲವೂ ಅಪೂರ್ವ. ನಾನು ಈ ಕ್ಷೇತ್ರವನ್ನು ಬಯಸಿಯೇ ಬಂದಿದ್ದು. ನನ್ನ ಅನಿಸಿಕೆಯಲ್ಲಿ ಯಾವುದೇ ಕ್ಷೇತ್ರದಲ್ಲಿ ದುಡಿಯುವುದು ನಮಗೆ ಅನಿವಾರ್ಯವೆನಿಸಿದರೆ ಅದು ಜೀತವೆನಿಸದು. ಒಂದು ನಿರ್ದಿಷ್ಟ ನಿಯಮಗಳಡಿ ಸೀಮಿತತೆಯ ವ್ಯಾಪ್ತಿ ಅರಿತು ಕಾರ್‍ಯ ಮಾಡುವುದು ನನ್ನ ದೃಷ್ಟಿ. ಅದರೊಳಗೆ ನನಗೆ ಇಷ್ಟವಾಗುವ ಸೃಷ್ಟಿ ಸಾಧ್ಯವೇ ಎಂದು ಪ್ರಯತ್ನಿಸುತ್ತೇನೆ, ಅಷ್ಟೇ. ನಾನು ಸದಾ ಪ್ರಯತ್ನದಲ್ಲಿ ಮಾತ್ರ ವಿಶ್ವಾಸವಿಡುತ್ತೇನೆಯೇ ಹೊರತು ಪರಿಣಾಮದಲ್ಲಲ್ಲ. ಜಗತ್ತಿನಲ್ಲಿಯೂ ಸಹ. ಇದುವರೆಗೆ ಎಲ್ಲರ ಪ್ರಯತ್ನಗಳಿಗೆ ಬೆಲೆ ಕಟ್ಟಿದ್ದಾರೆಯೇ ಹೊರತು ಪರಿಣಾಮಕ್ಕಲ್ಲ.

ಮೊನ್ನೆ ಹತ್ತು ಉಪಗ್ರಹಗಳನ್ನು ಒಮ್ಮೆಲೆ ಗಗನಕ್ಕೆ ಚಿಮ್ಮಿಸಿದ ಇಸ್ರೋ ಸಾಧನೆ ಆ ಪ್ರಯತ್ನದಲ್ಲಿಯೇ ಹೊರತು ಹತ್ತು ಉಪಗ್ರಹದಲ್ಲಲ್ಲ.  ಈ “ಸಂ-ವಾದ’ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಕುತೂಹಲವನ್ನು ಕೇಳಬಹುದು. ಸಾಧ್ಯವಾದಷ್ಟು ಉತ್ತರಿಸಲು ಪ್ರಯತ್ನಿಸುತ್ತೇನೆ. ಅನಗತ್ಯ ವಿವಾದ ಹುಟ್ಟುಹಾಕಬೇಕೆಂದೇ ಸಂಶಯ ಬಂದರೆ ಉತ್ತರಿಸುವುದು ಕಷ್ಟ. ನಿರ್ದಿಷ್ಟ ಸಂಸ್ಥೆ, ವ್ಯಕ್ತಿ ಬಗೆಗಿನ ಕುತೂಹಲಕ್ಕಿಂತಲೂ ಕ್ಷೇತ್ರದ ಬಗೆಗಿನ ವಿಸ್ತೃತ ನೆಲೆಯಲ್ಲಿದ್ದರೆ ಚೆನ್ನ. ಸಂವಾದದ ಆಶಯದಲ್ಲೇ ಇದು ಸಾಗಬೇಕೆಂಬುದು ನನ್ನ ಬಯಕೆ.

ಕೆಲವು ಪತ್ರಿಕೋದ್ಯಮ ವಿದ್ಯಾರ್ಥಿಗಳೂ ಇಂಥದೊಂದು ಸಂವಾದ ಸೂಕ್ತ ಎಂದೂ ಹೇಳಿದರು. ಅದೂ ನನ್ನ ಪ್ರಯತ್ನಕ್ಕೆ ಆಶ್ರಯವಾಯಿತು. ಪ್ರಚಲಿತ ವಿದ್ಯಮಾನದಿಂದ ಹಿಡಿದು, ಸುದ್ದಿ ಮನೆಯೊಳಗಿನ ವಿನ್ಯಾಸ, ಕೌತುಕ ಬಗ್ಗೆ ನಾನು ಅಭಿಪ್ರಾಯವನ್ನು ಹಂಚಿಕೊಳ್ಳಬಲ್ಲೆ.

ಪ್ರೀತಿಯಿಂದ
ಚೆಂಡೆಮದ್ದಳೆ

ಸಂ-ವಾದ : ಪ್ರತಿಕ್ರಿಯಿಸಿ

ಗೆಳೆಯರೇ,
‘ಸುಪ್ತದೀಪ್ತಿ’ ಯವರಿಂದ ಪ್ರೇರಿತಗೊಂಡು ನಾನೂ ಹೊಸ ಪ್ರಯತ್ನ ಆರಂಭಿಸೋಣ ಎಂದಿದ್ದೇನೆ. ಒಂದು ಬಗೆಯ ಸಂವಾದವೂ ಹೌದು. ಅದಕ್ಕೇ ‘ಸಂವಾದ’ ವೆಂದೇ ಕರೆಯೋಣ. ಈ ಮೊದಲೇ ತಿಳಿಸಿದಂತೆ ನಾನು ಕಾರ್‍ಯ ನಿರ್ವಹಿಸುತ್ತಿರುವುದು ಪತ್ರಿಕೋದ್ಯಮ ಕ್ಷೇತ್ರದಲ್ಲಿ. ಇಲ್ಲಿನ ಅನುಭವವನ್ನು ಹಂಚಿಕೊಳ್ಳಬೇಕೆಂಬ ಮನಸ್ಸೂ ನನ್ನದು. ಆದ ಕಾರಣ ಈ ಕಾಲಮ್ಮಿನ ಜನನ.

ಮಾಧ್ಯಮ ಕ್ಷೇತ್ರದ ಬೆಳವಣಿಗೆ, ವ್ಯಾಪ್ತಿ, ವಿಸ್ತಾರ, ಕಾರ್‍ಯ ನಿರ್ವಹಣೆಯ ಬಗೆ ಇತ್ಯಾದಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿದರೆ ಉತ್ತರಿ ಸಲು ಪ್ರಯತ್ನಿಸುವೆ. ಆದರೆ ಇಂಥದೊಂದು ಕಾಲಮ್ಮು ಅಗತ್ಯವಿದೆಯೇ ? ಅರಂಭಿಸಬಹುದೇ? ದಯವಿಟ್ಟು ಹೇಳಿ. ನಂತರ ನನ್ನ ಮುಂದಡಿ.  ನಿಮ್ಮ ಪ್ರತಿಕ್ರಿಯೆ ನಿರೀಕ್ಷಿಸಿದ್ದೇನೆ.