ನನ್ನ ಕಾಡುವ ಹಾಡು ಮತ್ತು ಯುಗಾದಿ

ನನ್ನ ನಲಿವಿನ ಮರದಲ್ಲಿ ಮತ್ತೊಂದು ಚಿಗುರು. ಅದರ ಹೆಸರು ಯುಗಾದಿ…

ಮತ್ತೆ ಯುಗಾದಿ ಬಂದಿದೆ, ತನ್ನ ಬೊಗಸೆಯಲ್ಲಿ ಒಂದಿಷ್ಟು ಹೊಸತನ್ನು ತಂದಿದೆ. ಹೋದ ವರ್ಷದ ಬ್ಯುಸಿ ಈ ವರ್ಷವೂ ಇದ್ದದ್ದೇ. ಆದರೂ ತುಸು ವಿರಾಮ ಮಾಡಿಕೊಂಡು ಆ ಬೊಗಸೆಯಲ್ಲಿನ ಹೊಸತನ್ನು ಹಂಚಿಕೊಳ್ಳೋಣ. 

ನನಗೆ ಸದಾ ಹೊಸ ವರ್ಷ ಎಂದ ಕೂಡಲೇ ನೆನಪಿಗೆ ಬರುವಂಥದ್ದು, ಕಾಡುವಂಥದ್ದು ಒಂದು ಹಾಡು. ಪಿ. ಕಾಳಿಂಗರಾಯರು ‘ರಾಜಹಂಸ’ ಧ್ವನಿಸುರುಳಿಯಲ್ಲಿ ಈ ಹಾಡು ಕೇಳಿರುತ್ತೀರಿ. ಆದರೂ ಕೇಳದಿದ್ದರೆ ಒಮ್ಮೆ ಕೇಳಿ. ದೂರದಲ್ಲೆಲ್ಲೋ ಕೇಳಿಬರುವಂತೆ ಅನುಭವ ನೀಡುವ ಕಾಳಿಂಗರಾಯರ ಅ ದನಿ ನಿಜಕ್ಕೂ ನಮ್ಮನ್ನು ಸೆಳೆದುಕೊಳ್ಳುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಆ ಪದ್ಯ ಆರ್. ಸಿ. ಭೂಸನೂರುಮಠರದ್ದು. ಅವರ ಇನ್ನೂ ಕೆಲವು ಗೀತೆಗಳು ನನ್ನನ್ನು ಸದಾ ಕಾಡಿವೆ. ಆದರೆ ಈ ಪದ್ಯದೊಳಗಿನ ಸಾಲುಗಳು ಸದಾ ನನ್ನನ್ನು ಕಾಡುವಂಥವು. 

ಹೋದ ವರುಷ ಬಂದ ಹಬ್ಬ

ಹೋದ ವರುಷ ಹೊಳೆದ ಬೆಳಕು

ಮತ್ತೆ ಮರಳಿ ಬಂದಿತಿಂದು

ಮತ್ತೆ ಮರಳಿ ಹೊಳೆಯಿತಿಂದು

 

ಅಂದು ಕಂಡ ಇಳೆಯ ಹಸಿರು

ಅಂದು ಕಂಡ ಬೆಳೆಯ ಉಸಿರು

ಕಣ್ಗೆ  ಮತ್ತೆ ಮುಕ್ತಿ ನೀಡಿ

ಜನ್ಮಕ್ಕೆ ಉಸಿರು ತಂದಿತಿಂದು

 

ಬೆಳಕನಿದನು ಕಾಣಲಿಕ್ಕೆ 

ದೀಪವಿದನು ಹಚ್ಚಲಿಕ್ಕೆ

ಒಂದು ವರುಷ ಕಾಯಬೇಕೇ

ಒಂದು ವರುಷ ಕಳೆಯಬೇಕೇ

 

ಒಮ್ಮೆ ಹೊಳೆದ ದೀಪ ನಂದಿ

ಒಮ್ಮೆ ಕಂಡ ಕಿರಣ ಅಡಗಿ

ಒಮ್ಮೆ ಕಲೆದ ನಲಿವು ತೊಲಗಿ

ಮತ್ತೆ ಬಳಲಿ ಬಾಡಲೇಕೆ?

 

ಮನದ ಇಳೆಯ ಹಸುರಿನಲ್ಲಿ

ಗುಣದ ಬೆಳೆಯ ಸುಳಿಯ ತೆಗೆದು

ಒಳಗೆ ದೀಪ ಹಚ್ಚಿ  ನಲಿದು

ಬೆಳಕಿನೊಳಗೆ ಬೆಳಕ ಕಾಣೆ

ಎಂದಿಗೂ ದೀಪೋತ್ಸವ,

ಎಂದಿಗೂ ದಿವ್ಯೋತ್ಸವ…

ಈ ಸಾಲುಗಳನ್ನು ಕೇಳುತ್ತಿದ್ದರೆ ನಮ್ಮೊಳಗೆ ಇಳಿದು ಒಳ್ಳೆ ಗುಣವಾಗಿ ಅರಳಿ ಸುಳಿಯಂತೆ ಕಂಗೊಳಿಸುತ್ತದೇನೋ ಎನಿಸುತ್ತಿದೆ. ಎಷ್ಟು ಬಾರಿ ಕೇಳಿದರೂ ಬೇಸರ ಎನಿಸುವುದಿಲ್ಲ. ಆ ಸಾಹಿತ್ಯ, ಅದರೊಳಗಿನ ಅರ್ಥ, ಕಾಳಿಂಗರಾಯರ ದನಿ ಕಾಡುವ ಬಗೆಯೇ ಬೇರೆ. ಹೇಗೆ ಒಂದು ವರ್ಷ ಹಳತಾಗಿಯೂ ಮತ್ತೊಂದು ವರ್ಷ ಹೊಸತು ಬಂದಂತೆಯೇ ಈ ಹಾಡೂ ಸಹ. 

ಈ ಯುಗಾದಿ ಎಲ್ಲರಿಗೂ ಒಳ್ಳೆಯದನ್ನು ತುಂಬಿಕೊಡಲಿ. ಬೇವಿರಲಿ, ಬೆಲ್ಲದ ಸವಿಯಲ್ಲಿ ಅದರ ಕಹಿಯನು ಮರೆಯೋಣ. ನಮ್ಮೊಳಗಿನ ಕತ್ತಲೆಗೆ ಹಣತೆಯ ಬೆಳಕಿನಿಂದ ಮೋಕ್ಷ ನೀಡಿ, ನಾವೂ ಬೆಳಗೋಣ-ಬೆಳಗಿಸೋಣ. ಆಗ ಈ ಪದ್ಯದ ಸಾಲೇ ಹೇಳುವಂತೆ ಎಂದಿಗೂ ದೀಪೋತ್ಸವ…ದಿವ್ಯೋತ್ಸವ. (ಈ ಹಾಡಿನ ಸಾಹಿತ್ಯ ಧ್ವನಿಸುರುಳಿಯಿಂದಲೇ ಕೇಳಿ ಬರೆದುಕೊಂಡಿದ್ದು, ಒಂದೆರಡು ಪದ ತಪ್ಪಿರಬಹುದೇನೋ, ಕ್ಷಮಿಸಿ ಬಿಡಿ)

ಈ ದಿನಕ್ಕೆ ಒಂದು ಪದ್ಯ, ಒಂದಿಷ್ಟು ಸಾಲುಗಳು…

ತಿಳಿನೀಲಿಯ ನೆನಪು

ಹಾರುವ ಗಾಳಿಪಟ
ಕಂಡಾಗಲೆಲ್ಲಾ
ಅವೆಲ್ಲಾ ನೆನಪಾಗುತ್ತದೆ
ಅವನು, ಆ ಕನಸು
ಕೈ ತುಂಬಾ ಮೆತ್ತಿಕೊಂಡ ಬಣ್ಣ
ಬಲಗೈಯ ಕಿರು ಬೆರಳಲಿ ಹಿಡಿದ ನೂಲು
ಮತ್ತು
ಎಡಗೈಯಲ್ಲಿ ನನ್ನ ಕೈ

ಬಣ್ಣ ತುಂಬಲೆಂದು
ಬಯಲಿಗೆ
ಕರೆದುಕೊಂಡು ಹೋದವ
ಅಲ್ಲೆಲ್ಲೋ
ಗಾಳಿಪಟ ಸಿಕ್ಕಿಬಿದ್ದಿರಬೇಕೆಂದು
ನನ್ನ ಕೈ ಬಿಡಿಸಿಕೊಂಡು
ಹುಡುಕಲು ಹೋದ

ಆಗಸದಲಿ ಗಾಳಿಪಟ
ಕಂಡಾಗಲೆಲ್ಲಾ
ಅವೆಲ್ಲವೂ ನೆನಪಾಗುತ್ತದೆ
ಗಾಳಿಪಟದ ಬಣ್ಣ
ಮತ್ತು ಆಗಸವನ್ನು
ತುಂಬಿಕೊಂಡ ಆ ತಿಳಿನೀಲಿ
*******
ಯಾಕೋ ಅವಳು ನೆನಪಾದಳು.
ಸುಮ್ಮನೆ ಹೀಗೇ…ಹಾದಿಯಲ್ಲಿ ನಡೆದು ಹೋಗುವಾಗ ಧುತ್ತನೆ ಎದುರಾದವಳು. ನಾನೂ ಆ ದಾರಿಗೆ ಹೊಸಬ, ಅವಳೂ ಇದ್ದಿರಬಹುದೇನೋ? ಗೊತ್ತಿಲ್ಲ. ಹೀಗೂ ಇದ್ದಿರಬಹುದು. ಆ ಹಾದಿ ಅವಳಿಗೆ ತೀರಾ ಪರಿಚಿತವಿರಲಿಕ್ಕೂ ಸಾಕು. ನನ್ನ ಪಯಣದ ಶ್ರಮ ಹಗುರಾಗಲಿ ಎಂದು ಮುಖದ ಮೇಲೆ ನಗೆ ತಂದುಕೊಂಡೆ. ಆಕೆಯೂ  ಮನಸಾರೆ ನಕ್ಕಳು. ನನ್ನ ದಾರಿಯಲ್ಲಿದ್ದ್ದ ಕತ್ತಲನ್ನು ಆ ಬೆಳಂದಿಗಳು ಬೆಳಗಿತ್ತು. ಖುಷಿಯಾಯಿತು, ಮಾತನಾಡಲು ಪರಿಚಯವಿರಲಿಲ್ಲ, ಅದಕ್ಕೆ ಆ ಹೊತ್ತೂ ಅಲ್ಲ. ಏನೇನೋ ಕಾರಣಗಳಿಂದ ನಾನು ಪ್ರಕಾಶಿಸುತ್ತಿರಲಿಲ್ಲ.
ಆ ಬೆಳಂದಿಗಳಿನಲ್ಲೇ ಮತ್ತಷ್ಟು ದೂರ ಹೋಗಿ ಬದಿಗೆ ಸರಿದು ನಿಂತೆ, ಕತ್ತಲೆಯ ಬೆನ್ನಿಗೆ. ಆಕೆ ತಿರುಗಿ ನೋಡಬಹುದೆಂಬ ಆಸೆ.  ಹಾಗೆ ನೋಡುವಾಗ ನನ್ನ ನೆರಳು ಮತ್ತಷ್ಟು ದೂರ ಚೆಲ್ಲುವ ಆ ಬೆಳಂದಿಗಳನ್ನು ನುಂಗಿ ಬಿಡಬಹುದೆಂಬ ಭೀತಿ. ಅದಕ್ಕೇ ಸರಿದು ನಿಂತದ್ದು. ಇಲ್ಲ…ಬೆಳಂದಿಗಳು ಅತ್ತ ಹಾಯಲೇ ಇಲ್ಲ…ನಾನು ಆ ಕತ್ತಲೆಯಲ್ಲೇ ನಿಂತಿದ್ದೇನೆ….ಪ್ರತಿ ಹುಣ್ಣಿಮೆ ಬಂದಾಗಲೆಲ್ಲಾ ನಿರೀಕ್ಷೆ ಉಕ್ಕಿ ಹರಿಯುತ್ತದೆ, ಅಲೆ ಉಕ್ಕುವ ಹಾಗೆ. ಪೂರ್ಣಿಮೆ ಮುಗಿದು ಅಮಾವಾಸ್ಯೆ ಶುರುವಾದಾಗ ಬೆರಳೆಣಿಸ ತೊಡಗುತ್ತೇನೆ….ಹೀಗೇ ಅಮಾವಾಸ್ಯೆ, ಹುಣ್ಣಿಮೆ,  ಮಧ್ಯೆ ಆಗಾಗ್ಗೆ ಚಂದ್ರ ಗ್ರಹಣವೂ ಬಂದಿದೆ. ನನ್ನೊಳಗಿನ ಅಲೆ ಉಕ್ಕುವುದು ನಿಲ್ಲಿಸಿಲ್ಲ….ಹಾಗಾಗಿಯೆ ಬದುಕಿದ್ದೇನೆ…!
***
ಅವನು ಹಾಗೆಯೇ ಕಾವ್ಯದಂತೆ ಬಂದು ನನ್ನೊಳಗೆ ಸೇರಿದ. ನಿತ್ಯವೂ ಕಾವ್ಯದ ಆರಾಧನೆ ನಡೆಯುತ್ತಿತ್ತು. ಎಷ್ಟೋ ಬಾರಿ ಅವನು ಛಂದಸ್ಸಿನ ಬಗ್ಗೆಯೇ ಪ್ರೀತಿ ತೋರಿ ನನ್ನನ್ನೇ ಮರೆಯುತ್ತಿದ್ದ. ಕೆಲ ಕ್ಷಣ ಬೇಸರ ಎನಿಸುತ್ತಿದ್ದರೂ, ಅವನ ಆ ಅಪ್ಪಟ ಪ್ರೇಮವನ್ನು ವಿರೋಧಿಸುವ ಮನಸ್ಸು ಬರುತ್ತಿರಲಿಲ್ಲ. ಯಾವುದನ್ನೂ ಪ್ರೀತಿಸಿದರೂ ಅವನಂತೆಯೇ ಪ್ರೀತಿಸಬೇಕು ಎನಿಸುತ್ತಿತ್ತು. ಈಗ ಹಾಗೇ ಪ್ರೀತಿಸುವುದನ್ನು ಕಲಿಯಲು ಆರಂಭಿಸಿದ್ದೇನೆ. ಥಟ್ಟನೆ ಆತ ಮತ್ತೆ ನೆನಪಾಗಿ ಅವನ ಪ್ರೀತಿಯಲ್ಲಿ ಮುಳುಗಿಹೋಗುತ್ತೇನೆ, ಕಲಿಕೆಯನ್ನು ಬಿಟ್ಟು.
****
ಪ್ರೀತಿಯಿಲ್ಲದೆಯೂ ಹೂವು ಅರಳಿತು ; ಅದರಲಿ ಕಂಪಿರಲಿಲ್ಲ.
*******
ಜಗತ್ತಿನ ಮೊದಲ ಪೂರ್ಣಿಮೆಯ ದಿನ. ಅಂಗಳದಲ್ಲಿ ಒಂದಿಷ್ಟು ಜನ ಸೇರಿದ್ದರು, ಎಂದಿನ ಚಂದ್ರನನ್ನು ಎದುರುಗೊಳ್ಳುತ್ತಾ. ಚಂದಿರನಿಗೂ ಅಂಗಳದವರನ್ನು ಕಂಡು ಪ್ರೀತಿ, ಅಕ್ಕರೆ. ಆ ದಿನ, ಆ ಹೊತ್ತು ತಮ್ಮ ಪ್ರೀತಿ-ಬಂಧವನ್ನು ನೆನೆಸಿಕೊಂಡು ಎಲ್ಲರೂ ಮನಸ್‌ಪೂರ್ತಿ ನಕ್ಕರು. ಚಂದಿರನೂ ದನಿಯೂ ಸೇರಿಕೊಂಡಾಗ ನಗುವಿನ ರಾಶಿ ರಾಶಿ ಅಂಗಳದಲ್ಲಿ. ಅದುವರೆಗೂ ಚಂದಿರನ ಮುಗುಳ್ನಗೆಯನ್ನೇ ಕಂಡಿದ್ದ ಇವರೆಲ್ಲಾ ಆ ನಗುವಿಗೆ ಹೆಸರಿಡುವುದನ್ನೇ ಮರೆತರು. ಆ ಹೆಸರಿಡದ ಬೆಳಕನ್ನೇ ಬೆಳಂದಿಂಗಳೆಂದು ಅವನೂ-ಅವಳು ಮೊಗೆ ಮೊಗೆದು ತುಂಬಿಕೊಂಡರು.
****
ನಾನು ಕನಸು ಕಂಡೆ, ಅದರಲ್ಲಿ ಚಿತ್ರಗಳಿರಲಿಲ್ಲ. ಅವಳೂ ಕನಸು ಕಂಡಳು, ಬಣ್ಣವಿರಲಿಲ್ಲ. ಈಗ ಇಬ್ಬರೂ ಕಂಡ ಕನಸಿನಲ್ಲಿ ಚಿತ್ರಗಳೂ ಇವೆ, ಬಣ್ಣವೂ ಇದೆ. ಆ ಕನಸಿಗೆ ಇಟ್ಟ ಹೆಸರು ಒಲವು.
*****
ಮುದ್ದಾದ ಕೈಗಳಿಂದ ನನ್ನನ್ನು ಹಿಡಿದು ಅಷ್ಟು ದೂರ ಕರೆದೊಯ್ದು ‘ನನ್ನಲ್ಲಿ ನಿನ್ನನ್ನು ಕಂಡುಕೊಂಡೆ’ ಎಂದಳು. ಅವಳ ಭಾಷೆ ಅರ್ಥವಾಗದೇ ತಲೆ ಮೇಲೆತ್ತಿ ನೋಡಿದೆ. ಹಸಿರು ರಾಶಿ, ಅದರ ಮಧ್ಯೆ ಅರಳಿದ ಹೂವಿನ ರಾಶಿ, ಅದರೊಳಗಿಂದ ಸುರಿಯುತ್ತಿದ್ದ ಕಂಪಿನ ಮಳೆ, ನಮ್ಮನ್ನು ಆವರಿಸಿ ತೊಯ್ದು ಬಿಡುವ ಹಾಗೆ. ಅವಳ ಭಾಷೆ ಅರ್ಥವಾಯಿತು. ನನ್ನೊಳಗೆ ಅವಳನ್ನು ತುಂಬಿಕೊಂಡೆ.
***
ಇಬ್ಬನಿ ಉದುರುವ ಸಮಯ, ನೆಲದ ಮೇಲಿನ ಹುಲ್ಲು ನಿದ್ರಿಸಿತ್ತು. ಏನೋ ತಣ್ಣನೆಯ ಸ್ಪರ್ಶಎಂದು ಕಣ್ತೆರೆಯಿತು. ಆ ಹನಿ ಕಣ್ಣೊಳಗೇ ತುಂಬಿಕೊಂಡಿತು. ಈಗ ಇಬ್ಬರೂ ಪ್ರೀತಿಸುತ್ತಿದ್ದಾರೆ…ರವಿ ಬರುವುದರೊಳಗೆ ಮುಗಿಯಬೇಕು…ಶ್…

ಬೆಳಕು ಎಲ್ಲರ ಬೆಳಗಲಿ

ಚಿತ್ರ ಕುಲುಮೆಯ ಪ್ರವೀಣ್ ಬಣಗಿ

ಚಿತ್ರ : ಚಿತ್ರ ಕುಲುಮೆಯ ಪ್ರವೀಣ್ ಬಣಗಿ

ಬೆಳಕು…
ಬೆರಗು… !
ಮೆರುಗು… !
ಬೆಳಕೆಂಬ ಬೆರಗಿನ ಬಗ್ಗೆ ಕಾವ್ಯ ಬರೆಯಲು ಹೊರಟರೇ ಹೀಗೆ ಪದಗಳು ಸಾಲು ದೀಪಾವಳಿ ಸಂಭ್ರಮ ತುಂಬಿಕೊಂಡ ಮನೆಯ ಅಂಗಳದಲ್ಲಿ ಜೋಡಿಸಿ ಸಾಲಾಗಿ ಇಟ್ಟ ದೀಪಗಳಂತೆ ಮೆರವಣಿಗೆ ಹೊರಡುತ್ತವೆ. ಬೆಳಕಿಗೆ ಆ ಮೆರವಣಿಗೆಯ ವೈಭವವಿದೆ. ಕಣ್ತುಂಬಿಕೊಳ್ಳುತ್ತಾ ಕುಳಿತರೆ ಮನದೊಳಗಿನ ಕತ್ತಲೆಗೆ ಹಣತೆ ಹಚ್ಚಿಟ್ಟಂತೆಯೇ.
ಬೆಳಕೆಂದರೆ ಸಂಭ್ರಮ. ನಮ್ಮೊಳಗು-ಹೊರಗನ್ನು ಆವರಿಸಿಕೊಳ್ಳುವಂಥದ್ದು. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಮಾತಿದೆ. ಅದರಂತೆಯೇ ದೀಪ ಹಚ್ಚಿ ಬರಿಯ ಮನೆಯ ಒಳ-ಹೊರಗನ್ನು ಬೆಳಗಿಕೊಳ್ಳುವುದಿಲ್ಲ. ನಮ್ಮೊಳಗೂ ಬೆಳಗಿಕೊಳ್ಳುತ್ತೇವೆ.  ಅಧ್ಯಾತ್ಮದಲ್ಲಿ ನಮ್ಮೊಳಗೆ ಬೆಳಗಿಕೊಳ್ಳುವುದೆಂದರೆ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಿಕೊಳ್ಳುವುದು. ಅಲ್ಲಿಗೆ ಅಲ್ಲೂ ಸಹ ಜ್ಯೋತಿ ಬೆಳಗುವುದು. ಅಂದರೆ ಮತ್ತೆ ಬೆಳಕು.
ಅದಕ್ಕೇ ಇರಬೇಕು. ದೀಪಾವಳಿಯೊಂದಿಗೆ ದೀಪಗಳನ್ನು ಗಂಟು ಹಾಕಿರುವುದು. ದೀಪಗಳ ಕಾಂತಿಯಲ್ಲೇ ಬದುಕಿನ ದೀಪದ ಉತ್ಸಾಹದ ಬತ್ತಿಗೆ ಸಂತೋಷದ ಕಾಂತಿ ಹಚ್ಚಿಕೊಂಡು ಕಂಗೊಳಿಸುವುದು. ದೀಪಾವಳಿ ಬರಿದೇ ಉಂಡು ಕಳೆಯುವ ಹಬ್ಬವಲ್ಲ. ಮತ್ತೊಂದು ದೀಪಾವಳಿ ಬರುವವರೆಗೂ ಸಂಭ್ರಮವನ್ನು  ಮನಸ್ಸಿನ ಉಗ್ರಾಣದೊಳಗೆ ತುಂಬಿಕೊಳ್ಳುವ ಕ್ಷಣ.
ಮನೆಯಲ್ಲಿ ಎಲ್ಲರೂ ಇದ್ದರೆ ಭವ್ಯ ಬೆಳಕು ಹೊತ್ತಿಕೊಂಡಂತೆಯೇ. ಹಾಗಾಗಿಯೇ ಈ ಹಬ್ಬಕ್ಕೆಂದರೆ ಮಗ ಇರಲಿ, ಅಳಿಯ ಇರಲಿ, ಸೊಸೆ ಇರಲಿ, ಮಗಳಿರಲಿ- ಎಲ್ಲರೂ ಮನೆಗೆ ಬಂದು ಸೇರುತ್ತಾರೆ. ನಮ್ಮಲ್ಲಿ ಕುಟುಂಬ ಪರಿಕಲ್ಪನೆಯಲ್ಲಿ ಹೀಗೆ ಎಲ್ಲರೂ ಕೂಡಿ-ಆಡಿ ನಲಿದರೆ ಪೂರ್ಣಚಿತ್ರ. ಅಲ್ಲಿ ಮತ್ತೆ ನೋಡಿ ಇರೋದು ಇಷ್ಟೇ…ಬೆಳಕು…ಮೆರುಗು…ಸಂಭ್ರಮ…ಬೆರಗು !
ಕೃಷ್ಣ ಹದಿನಾರು ಸಾವಿರ ನಾರಿಯರನ್ನು ಕೂಡಿಟ್ಟಿದ್ದ ನರಕಾಸುರನ ಕೊಂದು ಎಲ್ಲರ ಕಷ್ಟವನ್ನು ನಾಶ ಮಾಡಿದ ದಿನ ದೀಪಾವಳಿ. ನರಕ ಚತುರ್ದಶಿಯಂದು ಬೆಳಗ್ಗೆ ಅಭ್ಯಂಜನ ಮಾಡುವ ಸಂಪ್ರದಾಯವೂ ಇದರ ಹಿನ್ನೆಲೆಯಲ್ಲೇ ಬಂದದ್ದು. ಎಷ್ಟೊಂದು ವಿಚಿತ್ರ. ಅಲ್ಲೂ ಸಹ ನರಕಾಸುರನ ಕತ್ತಲೆಯ ಕೋಣೆಯಲ್ಲಿ ಕೃಷ್ಣ  ದೀಪ ಬೆಳಗಿದ. ಅದರ ಬೆಳಕಲ್ಲಿ ಎಲ್ಲರೂ ಬೆರಗಾಗಿ ಹೋದರು. ನರಕಾಸುರ ಹತನಾದ. ಹದಿನಾರು ಸಾವಿರ ನಾರಿಯರ ಬಾಳಲ್ಲಿ ಬೆಳಕು ತುಂಬಿಕೊಂಡಿತು.
ಸಾಲ ಮಾಡಿಯಾದರೂ ಒಬ್ಬಟ್ಟು ತಿನ್ನು ಎಂಬ ಗಾದೆಯಿದೆ. ಅದನ್ನು ಬಹಳ ಸ್ಥೂಲವಾಗಿ ನೋಡಿದರೆ ಅಲ್ಲೂ ಕಾಣ ಸಿಗುವುದು ಸಂಭ್ರಮದ ಮಾತೇ. ಜೀವನದಲ್ಲಿ ಗೇಯುವುದು ಇದ್ದದ್ದೇ. ಸಾಲ ಮಾಡಿದರೂ ಪರವಾಗಿಲ್ಲ, ಒಬ್ಬಟ್ಟು ತಿನ್ನುವ ಕ್ಷಣದ ಸಂಭ್ರಮವನ್ನು ಕಳೆದುಕೊಳ್ಳಬೇಡ ಎಂಬ ಗೂಢಾರ್ಥ. ಇಂದು ನಾವೆಲ್ಲಾ ಹಬ್ಬದ ಹೆಸರಿನಲ್ಲಿ ಮಾಡುತ್ತಿರುವುದು ಅದನ್ನೇ.
ಎಷ್ಟೇ ಬೆಲೆ ಏರಿಕೆ ಇರಲಿ, ಯಾವುದೇ ಕಷ್ಟವಿರಲಿ. ಹಬ್ಬದ ದಿನದಂದು ಖುಷಿ ಪಟ್ಟೇ ಪಡುತ್ತೇವೆ. ಅದಕ್ಕೆ ಚೌಕಾಸಿ ಮಾಡುವುದಿಲ್ಲ. ವಾಸ್ತವವಾಗಿ ಇಂಥ ನಮ್ಮ ಅಭ್ಯಾಸವೇ ನಮ್ಮೆಲ್ಲರ ಬದುಕಿನಲ್ಲೂ ಕಾಂತಿ ಉಳಿಸಿರುವುದು, ಬೆಳಕು ತುಂಬಿರುವುದು.
ಮತ್ತೊಂದು ದೀಪಾವಳಿ ಮನೆ ಬಾಗಿಲಿಗೇ ಬಂದಿದೆ. ಇನ್ನೆರಡು ದಿನದಲ್ಲಿ ಒಳಗೆ ಕೂರಿಸಿ ಆದರಿಸಬೇಕು. ದೀಪಾವಳಿ ತಂದಿರುವ ದಿವ್ಯ ದೀಪದಲ್ಲಿ ನಮ್ಮ ಮನೆ-ಮನಗಳ ದೀಪಗಳನ್ನು ಹಚ್ಚಿಕೊಳ್ಳಬೇಕು. ಆ ಬೆಳಕಿನಲ್ಲಿ ನಾವು ನಮ್ಮ ಸಂಬಂಧಗಳನ್ನು ಕಂಡುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು. ಮಧುರ ಬಾಂಧವ್ಯದ ಎಣ್ಣೆ ಸುರಿದು ನಂದಾದೀಪವಾಗುವಂತೆ ಮಾಡಿಕೊಳ್ಳಬೇಕು. ಅಂಥ ಕ್ಷಣ ಎದುರಾಗಿದೆ. ಬನ್ನಿ ಎಲ್ಲರೂ ದೀಪ ಹಚ್ಚೋಣ, ಹಚ್ಚಿಕೊಳ್ಳೋಣ, ಬೆಳಗೋಣ…ನಮ್ಮೊಳಗೂ ಬೆಳಗಿಕೊಳ್ಳೋಣ.

ಜಂಬೂ ಸವಾರಿ ಎಂದ್ರೆ ನಮ್ಮೂರ ತೇರು !

ದಸರೆಯ ಸಂಭ್ರಮ ಮುಗಿಯಿತು.
ಸುಮಾರು ಹದಿನೈದು ದಿನಗಳಿಂದ ಬ್ಲಾಗಿನತ್ತ ತಲೆಯೇ ಹಾಕಿರಲಿಲ್ಲ. ನಮ್ಮೂರಿನಲ್ಲಿ ದಸರೆಯ ಸಂಭ್ರಮ ಎಲ್ಲರನ್ನೂ-ಎಲ್ಲವನ್ನೂ ಆವರಿಸಿತ್ತು. ಅದರಲ್ಲೂ ಸುದ್ದಿಜೀವಿಯಾದ ನನಗೆ ಹಾಗೆ ಆವರಿಸಿಕೊಂಡ ಸಂಭ್ರಮವನ್ನು ಮೊಗೆ ಮೊಗೆದು ಎಲ್ಲರಿಗೂ ನೀಡಬೇಕಾದ ಹೊಣೆಗಾರಿಕೆಯಿತ್ತು. ನನ್ನ ಸಹೋದ್ಯೋಗಿಗಳು ಅಂಥದೊಂದು ಕಾರ್‍ಯವನ್ನು ಅತ್ಯಂತ ಉಲ್ಲಸಿತವಾಗಿ ಮಾಡಿದರು. ಬಹಳ ವಿಭಿನ್ನವಾಗಿ ದಸರೆಯ ಸಂಭ್ರಮವನ್ನು ನಮ್ಮ ಬೊಗಸೆಯಲ್ಲಿ ಹಿಡಿದು ಕೊಟ್ಟೆವು ಎನ್ನಲಡ್ಡಿಯಿಲ್ಲ.
ಇದು ನನಗೆ ಎರಡನೇ ದಸರೆ. ಕಳೆದ ದಸರೆಯಷ್ಟೊತ್ತಿಗೆ  ಇದೇ ಜಂಬೂಸವಾರಿಯ ಊರಿನಲ್ಲಿದ್ದೆ. ದಸರೆಯನ್ನು ಬಹಳ ವಿಶಿಷ್ಟವಾಗಿ ನೋಡುವ ಪ್ರಯತ್ನ  ಮಾಡಿದೆವು. ಅದೆಲ್ಲವೂ ನಮ್ಮ ಕಾರ್‍ಯಶೈಲಿಯಲ್ಲೂ ಪ್ರತಿಫಲಿಸಿತು. ಆದರೆ ನನಗೂ ದಸರೆ ಹೊಸದು. ಊರೆಲ್ಲಾ, ಜಗತ್ತೇ ಹೇಳಿಕೊಳ್ಳುವಂಥ ಜಂಬೂಸವಾರಿ ಅಂದೆಂಥದ್ದು ಎಂಬ ಸಹಜ ಕುತೂಹಲವಿತ್ತು. ನಮ್ಮೂರಿನ ಉತ್ಸವದಲ್ಲೂ ಇಂಥ ಸಂಭ್ರಮ, ಕುತೂಹಲ ಇದ್ದೇ ಇರುತ್ತದೆ. ಸಾಲಿಗ್ರಾಮದ ಹಬ್ಬ ಈ ವರ್ಷ ಯಾವ ರೀತಿಯಲ್ಲಿ ಇರಬಹುದು ಎಂಬ ಸಹಜ ಕುತೂಹಲ ನಮ್ಮನ್ನು ಎಂದಿಗೂ ಬಿಟ್ಟಿರದು.
ಅಂಥ ಕುತೂಹಲ ದಸರೆಯ ಬಗ್ಗೆ ಇದ್ದದ್ದು ಸಹಜ. ಊರಿಗೆ ಬಂದ ಹೊಸತು. ನನ್ನ ಪತ್ನಿಗೂ ಈ ಊರು ಹೊಸದು. ಹತ್ತಿಪ್ಪತ್ತು ವರ್ಷ ನಿರಂತರವಾಗಿ ನೋಡಿದವರೂ ಮತ್ತೆ ದಸರೆ ಬಗ್ಗೆ ಮಾತನಾಡುತ್ತಾರೆ. ಹಾಗಾದರೆ ಅಷ್ಟೊಂದು ಸಂಭ್ರಮ ಅದರಲ್ಲಿದೆಯೇ ಎಂಬ ಪ್ರಶ್ನೆ ಎದ್ದಿತ್ತು.
ಎಂದಿನಂತೆ ಸರಕಾರ ತೋರುವ ನಿರ್ಲಕ್ಷ್ಯ, ತರಾತುರಿಯಲ್ಲಿ ನಡೆಸುವ ಸಿದ್ಧತೆ, ನಾನಾ ಗೊಂದಲ, ಅದರಲ್ಲಿ ಊರ ಹಬ್ಬದಲ್ಲಿ ಲಾಭ ಮಾಡಿಕೊಳ್ಳಲೆಂದೇ ಇರುವ ಕೆಲ ವ್ಯಾಪಾರಿಗಳಂತೆ ನೂರಾರು ಅಧಿಕಾರಿಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು…ಅದರ ಮಧ್ಯೆ ಪತ್ರಿಕೆಯಲ್ಲಿ ಬರುವ ಟೀಕೆ…ಎಲ್ಲದರ ನಡುವೆ ಒಂದಷ್ಟು ಜನ ಸುಮ್ಮನೆ ಬಂದು ಜಂಬೂ ಸವಾರಿ ನೋಡಿ, ದಸರೆಯ ಕಾರ್‍ಯಕ್ರಮಗಳನ್ನು ಕೇಳಿ ಸುಮ್ಮನೆ ತಣ್ಣಗೆ ಕುಳಿತರೆನ್ನಿ.
ಕಳೆದ ದಸರೆಯಲ್ಲಿ ಜಂಬೂ ಸವಾರಿ ನೋಡುವ ಉತ್ಸಾಹವಿತ್ತು. ಆದರೆ ವಿಐಪಿ ಪಾಸ್‌ಗಳನ್ನು ಕೇಳಿ ಅಲೆಯುವ ಅಭ್ಯಾಸವಾಗಲೀ, ಹಲ್ಲು ಗಿಂಜುವ ಉತ್ಸಾಹವಾಗಲೀ ಇದ್ದಿಲ್ಲ. ಸರಿ, ಹಾಗೆಯೇ ಸಿಕ್ಕರೆ ಹೋಗುವುದು ಎಂದೆನಿಸಿತು. ನನಗೇನೋ ಮಾಧ್ಯಮದ ಪಾಸ್ ಸಿಕ್ಕಿತು. ಆದರೆ ನನ್ನ ಕುಟುಂಬಕ್ಕಿರಲಿಲ್ಲ. ಆದರೆ ಜಂಬೂ ಸವಾರಿಯ ಮೆರವಣಿಗೆಗೆ ಇನ್ನು ಅರ್ಧ ಗಂಟೆ ಇದೆ ಎನ್ನುವಾಗ ವಾರ್ತಾ ಇಲಾಖೆಯಿಂದ ಕುಟುಂಬಕ್ಕೆಂದು ಎರಡು ಪಾಸ್ ಬಂತು. ನನ್ನ ಮಗ ಋತುಪರ್ಣ “ಎಲ್ಲಿಗಾದರೂ ಕರೆದು ಕೊಂಡು ಹೋಗು’ ಎಂದು ಹಠ ಹಿಡಿದಿದ್ದ. ಕೂಡಲೇ ಮನೆಗೆ ಫೋನ್ ಮಾಡಿ ಪುರಭವನದ ಬಳಿ ಬರುವಂತೆ ಹೇಳಿ ಒಟ್ಟೂ ಕೂಡಿಕೊಂಡೆವು. ನನ್ನ ಪತ್ನಿ, ಮಗ ಮತ್ತು ಅಮ್ಮ ಜಂಬೂ ಸವಾರಿಯನ್ನು ಒಟ್ಟಿಗೆ ನೋಡಿದೆವು. ಜನ ಜಂಗುಳಿ ಕಂಡು ವಿಚಿತ್ರ ಎನಿಸಿದ್ದು ನಿಜ.
ಸವಾರಿಯ ದಿನದಂದು ಮೈಸೂರಿನ ಬಹುತೇಕ ರಸ್ತೆಗಳೆಲ್ಲಾ ಲಕ್ವಾ ಹೊಡೆದಂತೆ ಬಿದ್ದುಕೊಳ್ಳುತ್ತವೆ. ನರಪಿಳ್ಳೆಯೂ ಇರುವುದಿಲ್ಲ. ಎಲ್ಲರೂ ಮೆರವಣಿಗೆ ಹಾದು ಹೋಗುವ ರಸ್ತೆಯಲ್ಲೇ ಕಟಾಂಜನದೊಳಗೆ ವಿರಾಜಿಸಿರುತ್ತಾರೆ. ಎಲ್ಲಾ ಮುಗಿದ ಮೇಲೆ ನಮಗೆ ಬಹಳ ವಿಶೇಷ ಎನಿಸುವ ನೆನಪು ಉಳಿದಿರಲಿಲ್ಲ.
ಈ ಬಾರಿ ಜಂಬೂ ಸವಾರಿಯನ್ನು ಸಂಪೂರ್ಣವಾಗಿ ನೋಡಲೆಂದು ಬಹಳಷ್ಟು ಬೇಗನೇ ಹೋಗಿ ಪತ್ರಕರ್ತರಿಗೆ ಮೀಸಲಿಟ್ಟ ಆಸನಗಳಲ್ಲಿ ಕುಳಿತೆ. ಜೋರು ಬಿಸಿಲು, ಸೂರ್‍ಯನೂ ಪೈಪೋಟಿಗಿಳಿದಿದ್ದ. ನಂದಿಪೂಜೆ ಇತ್ಯಾದಿ ಮುಗಿಸಿ ಬಂದ ಮುಖ್ಯಮಂತ್ರಿಯವರು ಪುಟ್ಟ ವೇದಿಕೆಯಲ್ಲಿ ನಿಂತು ತನ್ನೆದುರು ಬಂದ ಚಾಮುಂಡಿಯಿದ್ದ ಅಂಬಾರಿ ಹೊತ್ತ ಬಲರಾಮನಿಗೆ ಹೂ ಚೆಲ್ಲಿದರು (ಹೂ ಬಲರಾಮನನ್ನು ಮುಟ್ಟಲಿಲ್ಲ). ಸರಿ, ಮೆರವಣಿಗೆ ಹೊರಟಿತು. ಅದರ ಹಿಂದೆ ಒಂದೊಂದೇ ಸ್ತಬ್ಧಚಿತ್ರ, ಅದರ ಮಧ್ಯೆ ನಮ್ಮ ಜಾನಪದ ಕಂಪನ್ನ ಸಾರುವ ತಂಡಗಳು…ಇಷ್ಟೆಲ್ಲಾ ಸೇರಿದರೆ ಸರಿ ಸುಮಾರು ಒಂದೂವರೆ ಕಿ. ಮೀ ನಷ್ಟು ಉದ್ದದ ಮೆರವಣಿಗೆ. ಇವಿಷ್ಟೇ ಜಂಬೂ ಸವಾರಿ.
ಅಂಬಾರಿ ಹೊತ್ತ ಆನೆ, ಆ ಮೆರವಣಿಗೆಗೊಂದು ಸಂಪ್ರದಾಯ, ಅದನ್ನು ನಂಬಿಕೊಂಡು ಬಂದ ಜನ ಸಮುದಾಯ- ಎಲ್ಲವೂ ದಸರೆಗೆ ವಿಖ್ಯಾತಿ ತಂದುಕೊಟ್ಟಿದೆ. ಅದರಲ್ಲಂತೂ ಸರಕಾರಿ ಇಲಾಖೆಗಳ ಅನಾಸಕ್ತಿಯಿಂದ ಕಂಗೊಳಿಸಬೇಕಿದ್ದ ಸ್ತಬ್ಧಚಿತ್ರಗಳೂ ಅಂದ ಕಳೆದುಕೊಳ್ಳುತ್ತಿವೆ. ಆದರೂ ಜಂಬೂ ಸವಾರಿಯಲ್ಲಿ ಉಳಿದಿರುವುದೇನು ?
ಬಲರಾಮ ಹೊತ್ತ ಅಂಬಾರಿಯಲ್ಲಿ ಇದ್ದ ಚಾಮುಂಡಿ ಕಂಡರೆ ಸಾಕು, ಧನ್ಯರಾಗಿ ಜನ ಸರಿದು ಹೋಗಿ ಬಿಡುತ್ತಾರೆ. ಅಲ್ಲಿಯವರೆಗೂ ಗಂಟೆಗಟ್ಟಲೆ ಕಾಯುವುದೂ ಸಂಪ್ರದಾಯವೆನಿಸಿದೆ. ಅದಷ್ಟೇ ಜಂಬೂ ಸವಾರಿಯ ಅಂದವನ್ನು, ಸೊಗಸನ್ನು ಹಾಗೂ ಜನಪ್ರಿಯತೆಯನ್ನು ಉಳಿಸಿದೆ ಎಂದರೆ ತಪ್ಪಿಲ್ಲ.
ನಮ್ಮೂರಿನಲ್ಲಿ ದೊಡ್ಡದೊಂದು ಜಾತ್ರೆ ನಡೆದಂತೆಯೇ ಜಂಬೂ ಸವಾರಿ. ಆದರೆ ಅಲ್ಲಿ ಆನೆ ಇರುವುದಿಲ್ಲ, ಅಂಬಾರಿಯೂ ಇಲ್ಲ,  ರಥದಲ್ಲಿ ನಮ್ಮೂರ ಮಹಾಲಿಂಗೇಶ್ವರನೋ, ನರಸಿಂಹನೋ ಕುಳಿತಿರುತ್ತಾನೆ…ಜನರು ಮಾತ್ರ ಅಲ್ಲೂ ಹಾಜರು. ನಮ್ಮೂರ ತೇರಿದ್ದ ಹಾಗೆ.

ಕುನ್ನಕುಡಿ ಪಿಟೀಲೆಂಬ ಹರಿವ ನಾದದ ನದಿ

ಉತ್ತರ ಭಾಗದಲ್ಲಿ ‘ಫರಮಾಯಿಶ್’ ಎಂಬ ಪದವಿದೆ. ನಮಗೆ ಇಷ್ಟವಾದದ್ದು ಎಂಬುದು ಅದರರ್ಥ. ಕುನ್ನಕುಡಿ ಪ್ರತಿಯೊಬ್ಬರ ಇಷ್ಟವನ್ನೂ ಪೂರೈಸಲೆಂದೇ ವೇದಿಕೆ ಏರುತ್ತಿದ್ದರು. ಅದಾಗದೇ ಕೆಳಗಿಳಿಯುತ್ತಿರಲಿಲ್ಲ. ಹೀಗೆ ಶಾಸ್ತ್ರೀಯದ ಮಧ್ಯೆ ಸಿನಿಮಾ ನುಸು ಳುವುದು ಸಂಪ್ರದಾಯಸ್ಥರಿಗೆ ರುಚಿಸುವುದಿಲ್ಲ. ಅದರಲ್ಲೂ ಚೆನ್ನೈನಲ್ಲಂತೂ ಇಂಥವರು ತುಸು ಹೆಚ್ಚು. ಟೀಕೆ ಬಂದದ್ದು ಸಹಜವೇ. 

ಕುನ್ನಕುಡಿ ಎಂದರೆ ಸಂಭ್ರಮದ ಮೆರವಣಿಗೆ. ಮೆರವಣಿಗೆ ಎಂದರೆ ಕುಣಿಯುವ ಹುಮ್ಮಸ್ಸು ತರುವಂಥದ್ದು. ಅಂಥ ಮೆರವಣಿಗೆಯೂ ಕುಣಿಯುತ್ತಾ ಹೋದಂತೆ ಕುನ್ನಕುಡಿ ಆರ್. ವೈದ್ಯನಾಥನ್ ಅವರ ಪಿಟೀಲು ವಾದನ. ಅವರ ಸಂಗೀತ ಕೇಳಿದಾಗಲೆಲ್ಲಾ ಅಂಥದೊಂದು ಭಾವ ತುಂಬಿಕೊಳ್ಳುತ್ತದೆ.
ಪಿಟೀಲಿನ ಮೋಹ ಇಲ್ಲದವರಿಗೆ ಅದು ಒಂದು ಬಗೆಯ ಕೀರಲು ದನಿ. ಆದರೆ ಕೀರಲು ದನಿಗೆ ಜೀವ ತುಂಬಿ, ಭಾವ ಸುರಿದು ಜೇನಹೊಳೆಯಂತೆ ಹರಿಸುವ ಬಗೆ ಕೆಲವರಿಗೆ ಮಾತ್ರ ಗೊತ್ತು. ಹಿಂದೂಸ್ತಾನಿ ಶಾಸ್ತ್ರೀಯ ಶೈಲಿಯಲ್ಲೂ ಎನ್. ರಾಜಂ ಅವರ ಸಂಗೀತ ಕೇಳುವಾಗಲೂ ಇದೇ ಭಾವ ಆವರಿಸುತ್ತದೆ. ಅವರ ಪಿಟೀಲಿನ ದನಿ ಒಡಲು ತುಂಬಿ ಬರುವಂತೆ. ಹಾಡು ಸಹ ಹಾಗೆಯೇ ಹಾಡಬೇಕು, ಬರಿಯ ಕಂಠದಿಂದಲ್ಲ. ಒಡಲಿನಿಂದ ಉಕ್ಕಿ ಹರಿಯಬೇಕು; ಸಂತೋಷ, ಸಂಭ್ರಮದ ಧಾರೆಯ ಹಾಗೆ.
ಕುನ್ನಕುಡಿಯವರ ಶಾಸ್ತ್ರೀಯ ಸಂಗತಿ-ಸಂಭ್ರಮದ ಬಗ್ಗೆ ಹೇಳಬೇಕಿಲ್ಲ. ೧೨ನೇ ವಯಸ್ಸಿನಲ್ಲೇ ಅರೈಕುಡಿಯಂಥ ದಿಗ್ಗಜರಿಗೆ ಪಿಟೀಲು ಸಾಥ್ ನೀಡಿ ಸೈ ಎನಿಸಿಕೊಂಡವರು. ಸಿಕ್ಕ ಅವಕಾಶಗಳನ್ನೆಲ್ಲ  ಬಳಸಿಕೊಳ್ಳುತ್ತಾ ಬೆಳೆದವರು ಕುನ್ನಕುಡಿ.
ಪಿಟೀಲು ವಾದ್ಯಕ್ಕೆ ‘ಸ್ವತಂತ್ರ ಅಸ್ತಿತ್ವ’ ತಂದುಕೊಟ್ಟವರು. ಅಷ್ಟೆಯಾ? ಎಂದು ಕೇಳಿದರೆ ಅಲ್ಲ ಎಂಬುದೇ ಸಮರ್ಪಕ ಉತ್ತರ. ಪಿಟೀಲನ್ನು ತನಗೆ ಬೇಕಾದಂತೆ ದುಡಿಸಿಕೊಂಡದ್ದು ಕುನ್ನಕುಡಿ. ಯಾವಾಗಲೂ ಅಷ್ಟೇ. ಸಾಧನಕ್ಕೆ ತಕ್ಕಂತೆ ನಾವು ದುಡಿವುದು ಸಾಮಾನ್ಯ. ಆ ಸಾಧನವನ್ನೇ ತಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಕುನ್ನಕುಡಿಯಂಥ ಪ್ರತಿಭೆಯ ಲಕ್ಷಣ.
ಪಿಟೀಲನ್ನು ಮಂತ್ರದಂಡದ ಹಾಗೆ ಬಳಸಿಕೊಂಡು ಅದರಲ್ಲಿ ನುಡಿಸದ ಸ್ವರವಿಲ್ಲ. ಅವರ ಕಛೇರಿ ಎಂದರೆ ಸೋಲೊ ಎನಿಸುವುದೇ ಇಲ್ಲ. ನಮ್ಮೂರಿನ ಜಾತ್ರೆಯಲ್ಲಿ ತೇರು ಮೆರ ವಣಿಗೆ ಹೊರಟಂತೆ ಅವರ ಕಛೇರಿ. ಎಲ್ಲ ಬಗೆಯ ಜಾನಪದ ಸಂಪತ್ತಿನಿಂದ ಒಟ್ಟಾಗಿ ಕಂಗೊಳಿಸುವ ತೇರಿನ ಒಟ್ಟಂದವೇ ಅದ್ಭುತ ಸೊಗಸು.
ಅಂಥ ಸೊಗಸುಗಾರಿಕೆ ಕುನ್ನಕುಡಿಯವರಲ್ಲಿತ್ತು. ಗುಂಪಿ ನಲ್ಲಿ ಎಲ್ಲ ಬಗೆಯವರೂ ಇರುತ್ತಾರೆ. ಒಬ್ಬನಿಗೆ ಇಂಥದ್ದೇ ರುಚಿ, ಮತ್ತೊಬ್ಬನಿಗೆ ಮತ್ತೊಂದು ರುಚಿ, ಇವರೆಲ್ಲರ ಮಧ್ಯೆ ಇರುವ ಮಗದೊಬ್ಬನಿಗೆ ಬೇರೊಂದು ಖುಷಿ. ಕೇವಲ ಒಬ್ಬನನ್ನು ಮಾತ್ರ ಸಂತಸಗೊಳಿಸಿದರೆ ಸಾಲದು.  ಗುಂಪಿನ ಎಲ್ಲರಲ್ಲೂ ಆ ಒಬ್ಬನ ಖುಷಿಯನ್ನೇ ತುಂಬಬೇಕು. ಆ ಕೆಲಸ ಕುನ್ನಕುಡಿಯವರಿಂದ ಸಾಧ್ಯವಾಗುತ್ತಿತ್ತು.
ಸುಮಾರು ೩ ವರ್ಷಗಳ ಹಿಂದೆ ಚಾಮರಾಜಪೇಟೆ ರಾಮನವಮಿ ಸಂಗೀತೋತ್ಸವದಲ್ಲಿ ಕುನ್ನಕುಡಿ ಬಂದಿದ್ದರು. ಸಂಜೆ ೬.೩೦ರ ಮೇಲೆ ಅವರ ಕಛೇರಿ ಆರಂಭ. ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಶಾಸ್ತ್ರೀಯ ಸಂಗೀತದ ಉದ್ಧಾಮ ರಿಗೆಲ್ಲಾ ಕುನ್ನಕುಡಿಯವರ ಬಗ್ಗೆ ಒಂದು ಬಗೆಯ ಅಸಹನೆ ಯಿದೆ. ‘ಅವರು ಆರ್ಕೆಸ್ಟ್ರಾ ಸಂಗೀತಕ್ಕೆ ಲಾಯಕ್ಕು. ಶಾಸ್ತ್ರೀಯ ಸಂಗೀತದಲ್ಲಿ ಸಂಪ್ರದಾಯ ಮುರಿಯುವುದು ಸಲ್ಲದು. ಆದರೆ ಕುನ್ನಕುಡಿ ಸದಾ ಅದನ್ನು ಮಾಡುತ್ತಾರೆ’ ಎಂಬ ಟೀಕೆಗಳೂ ಇತ್ತು. ಸಾಕಷ್ಟು ವ್ಯಕ್ತವಾಗಿತ್ತೂ ಸಹ.
ಅದಕ್ಕೆ ಅವರ ಚೆಲ್ಲುತನ (ಸಂಗೀತ ನುಡಿಸುವಾಗ ಅವರ ಭಾವಭಂಗಿ, ಮುಖದ ಅಭಿವ್ಯಕ್ತಿ). ಈ ಮಾತು ನೇತ್ಯಾ ತ್ಮಕವಾಗಿ ಬಳಸುತ್ತಿಲ್ಲ. ಅವರ ಭಂಗಿ, ಬಳಸುವ ದಿರಸು. ಇಷ್ಟಕ್ಕೇ ಟೀಕೆ ಮುಗಿಯುವುದಿಲ್ಲ. ಶಾಸ್ತ್ರೀಯ ಸಂಗೀತದಂಥ ಮಧುರಸಕ್ಕೆ ಸಿನಿಮಾ ಸಂಗೀತ, ಲಘು ಸಂಗೀತದಂಥವನ್ನು ಸೇರಿಸಿ ಕಛೇರಿಯ ಸವಿಯನ್ನೇ ಹಾಳು ಮಾಡುತ್ತಾರೆಂಬ ಟೀಕೆಯೂ ಬಂದಿತ್ತು. ಅದಕ್ಕೆ ಕುನ್ನಕುಡಿ ಗಮನಕೊಡಲಿಲ್ಲ. ಮೆಚ್ಚುವ ಜನ ನನ್ನ ಪರವಾಗಿರುತ್ತಾರೆಂಬ ಅಗಾಧ ನಂಬಿಕೆಯೇ ಅವರನ್ನು ಸದಾ ಕಾದದ್ದು. ಸಂಗೀತದಲ್ಲಿ ಗಂಭೀರತೆ ಇದ್ದದ್ದೇ ಅವರನ್ನು ಈ ಟೀಕೆ ಗಳಿಂದೆಲ್ಲಾ ಬಚಾವು ಮಾಡಿತು.
ಅವರ ಸಂಗೀತ ಕಛೇರಿಯಲ್ಲಿ ಅಂಥದೊಂದು ನಿಯಮವನ್ನು ಬೇಕೆಂದೇ ರೂಪಿಸಿಕೊಂಡಿದ್ದರು. ಮೊದಲ ೨ ಗಂಟೆ ಮುಂದಿನ ಸಾಲಿನ ಮಂದಿಗೆ. ಉಳಿದ ಒಂದು ಗಂಟೆ ಹಿಂದಿರುವ, ಸುತ್ತಲೂ ಇರುವ ಉಳಿದೆಲ್ಲರಿಗೆ. ಅಂದರೆ ಈ ಮಂದಿ ಲಘು ಸಂಗೀತ, ಸಿನಿಮಾ ಸಂಗೀತವೆನ್ನುವುದ ಕ್ಕಿಂತಲೂ ಕುನ್ನಕುಡಿಯವರ ಪಿಟೀಲಿನ ನಾದ ಕೇಳಬೇಕೆಂದು ಬಂದವರು. ಉಳಿದವರು ಕುನ್ನಕುಡಿ ಶೈಲಿಯಲ್ಲಿ ಕೃತಿಯನ್ನು ಕೇಳಿ ಸವಿಯಲು ಬಂದವರು. ಹಾಗಾಗಿ ಎರಡರ ನಡು ವೆಯೂ ಸಮತೋಲನ ಕಾದುಕೊಂಡು ಎರಡೂ ವರ್ಗವನ್ನು ಖುಷಿಗೊಳಿಸುತ್ತಿದ್ದರು. ನನಗೆ ಬಹಳ ಬಾರಿ ಅನ್ನಿಸುವುದು ಇದು. ಪ್ರಯೋಗಾತ್ಮಕ ನಿಲುವು, ಸೃಜನಶೀಲತೆ ಒಂದು ಪ್ರತಿಭೆಯೊಂದಿಗೆ ಸಮ್ಮಿಳಿತಗೊಂಡರೆ, ಅದೂ ಹದವಾಗಿದ್ದರೆ ಇಂಥ ಪ್ರಯತ್ನಗಳು ಸಾಧ್ಯವಾಗಬಹುದೇ ಹೊರತು ಯಾವುದೇ ಪ್ರಮಾಣ ಕಡಿಮೆ ಇದ್ದರೂ ಸಾಧ್ಯವಿಲ್ಲ.
ಆ ಚಾಮರಾಜಪೇಟೆ ರಾಮನವಮಿ ಸಂಗೀತೋತ್ಸವದಲ್ಲಿ ‘ರಘುವಂಶ’ದಿಂದ ಹಿಡಿದು ಎಲ್ಲ ಉತ್ತಮ ಕೃತಿಗಳನ್ನು ನುಡಿಸಿದರು. ಜನರಿಂದ ಚಪ್ಪಾಳೆಯನ್ನೂ ಗಿಟ್ಟಿಸಿಕೊಂಡರು. ಸುಮಾರು ರಾತ್ರಿ ೯ ಗಂಟೆ. ನನ್ನ ಅಂದಾಜಿನ ಪ್ರಕಾರ ೨ ದಿನದ ಹಿಂದೆ ಬಿಡುಗಡೆಯಾದ ಹಿಂದಿ ಚಲನಚಿತ್ರದ ಹಾಡು ‘ಜರಾ…ಜರಾ…’ ಎಂಬ ಗೀತೆ ಜನಪ್ರಿಯವಾಗಿತ್ತು. ನಿಮಗೆ ಏನನಿಸುವುದೋ? ಆ ಕಛೇರಿಯಲ್ಲಿ ಒಂಬತ್ತು ಗಂಟೆಯ ನಂತರದ ಕ್ಷಣ ಕುನ್ನಕುಡಿ ‘ಯಾವ ಗೀತೆ ನುಡಿಸಬೇಕು’ ಎಂದು ಕೇಳಿದ್ದು ‘ಜರಾ…ಜರಾ…’ ನುಡಿಸಿಯೇ. ಸುತ್ತಲಿದ್ದವರೆಲ್ಲಾ ಹುಬ್ಬು ಹಾರಿಸಿ ತಲೆ ಅಲ್ಲಾಡಿಸಿದಾಗ ಸ್ವತಃ ಕುನ್ನುಕುಡಿಯವರೂ ಹುಬ್ಬು ಹಾರಿಸಿ ನುಡಿಸಿಯೇಬಿಟ್ಟರು. ‘ಜರಾ…ಜರಾ…’ ಮಧುರವಾಗಿ ತೊರೆಯಂತೆ ಹರಿದು ಬಂದು ವ್ಯಾಪಿಸಿಕೊಂಡು ಬಿಟ್ಟಿತು. ಅದಾದ ಮೇಲೆ ಇಂಥ ಹತ್ತಾರು ಹಾಡುಗಳು ಆ ಪಿಟೀಲಿನ ನಾದದಲ್ಲಿ ಹೊಮ್ಮಿ ಬಂದವು. 
ಸಿನಿಮಾ ಕ್ಷೇತ್ರದಲ್ಲೂ ಒಂದಷ್ಟು ಪ್ರಯೋಗ ನಡೆಸಿ ಬಂದವರು ಅವರು. ‘ತೋಡಿ’ ಚಿತ್ರದ ಪ್ರಯೋಗಶೀಲತೆ ಹುಮ್ಮಸ್ಸು ಮೂಡಿಸಿದ್ದೂ ನಿಜ. ಪಕ್ಕವಾದ್ಯವಾಗಿ ನುಡಿಸಿ ನುಡಿಸೀ ಸಾಕೆಂದು ಅನಿಸಿದಾಗ ‘ನಾನು ಇನ್ನು ಮುಂದೆ ಪಕ್ಕವಾದ್ಯವಾಗಲಾರೆ’ ಎಂದು ಘೋಷಿಸಿದಾಗ ಎಲ್ಲರೂ ನಕ್ಕು ಬಿಟ್ಟಿದ್ದರು. ‘ಇವನೇನು ಮಹಾ?’ ಎಂದವರು ಹಲವರು. ಗಾಯನಕ್ಕೆ ಉಳಿದೆಲ್ಲವೂ ಪೂರಕವೇ ಹೊರತು ಅದೇ ಪ್ರಧಾನವಲ್ಲ ಎಂದ ಸಂಪ್ರದಾಯಸ್ಥರೂ ಇದ್ದರು. ಆದರೆ ಕುನ್ನಕುಡಿಗಿದ್ದ ಆತ್ಮವಿಶ್ವಾಸ ಕೊನೆವರೆಗೂ ಕಾಯಿತು.
ಪಿಟೀಲಿಗೇ ಒಂದು ಘನತೆ ತಂದುಕೊಟ್ಟು ಪ್ರಧಾನ ವೇದಿಕೆಗೆ ಕರೆತಂದ ಕೀರ್ತಿ ಇವರಿಗೂ ಸಲ್ಲುತ್ತದೆ. ಪಿಟೀಲು ಚೌಡಯ್ಯನಂಥವರು ಪಿಟೀಲಿನ ಘನತೆ ಹೆಚ್ಚಿಸುವಲ್ಲಿ ಶ್ರೇಷ್ಠ ಕಾರ್‍ಯ ಕೈಗೊಂಡಿದ್ದಾರೆ. ಹಾಗೆಯೇ ಪಿಟೀಲಿಗೆ ಜನಪ್ರಿಯತೆ ಶಿಖರಕ್ಕೆ ಕೊಂಡೊಯ್ದವರು ಕುನ್ನಕುಡಿ.
ರಸಾನುಭವದಿಂದಲೇ ಸಂಗೀತವನ್ನು ಪ್ರಸ್ತುತಪಡಿಸುತ್ತಾ, ತನ್ನ ಸಹ ವಾದಕರೊಂದಿಗೆ ಸ್ಪರ್ಧೆಗಿಳಿಯುವ ಮಾದರಿಯಲ್ಲಿ ನುಡಿಸುತ್ತಿದ್ದುದು ಹೆಗ್ಗಳಿಕೆ. ಸಾಮಾನ್ಯವಾಗಿ ಪ್ರಮುಖ ಕಲಾ ವಿದ ಮತ್ತು ಪಕ್ಕವಾದ್ಯದವರ ಮಧ್ಯೆ ಒಂದು ನಿರ್ದಿಷ್ಟ ಅಂತರ (ಡಿಸ್ಟೆನ್ಸ್) ಇದ್ದದ್ದೇ. ಎಷ್ಟೋ ಬಾರಿ ಆ ಅಂತರವೂ ಒಂದು ಕಛೇರಿ ಹೆಚ್ಚು ಸೃಜನಶೀಲವಾಗುವುದರಲ್ಲಿ ಅಡ್ಡಿ ಯಾಗುವ ಸಂಭವವೂ ಇದೆ. ನನಗೆ ತೋಚಿದಂತೆ ಕುನ್ನಕುಡಿ ಇಂಥ ಅಂತರವನ್ನು ಬಹಳ ಕಡಿಮೆಗೊಳಿಸಿಕೊಂಡಿದ್ದರು.
ಪಕ್ಕವಾದ್ಯದವರ ನಡುವೆ ಹೆಜ್ಜೆ ಹಾಕುವ ಹಾಗೆಯೇ ಪಿಟೀಲು ನುಡಿಸುತ್ತಿದ್ದರು. ಈ ಮಾತು ಕೊಂಚ ಹೆಚ್ಚು ಅಥವಾ ಕುನ್ನಕುಡಿಯವರ ವಿಜೃಂಭಣೆ ಎನಿಸಿದರೂ ಪರ ವಾಗಿಲ್ಲ. ಆದರೂ ಈ ಮಾತು ಸತ್ಯ. ಜತೆಗೆ ಹೆಚ್ಚು ಪಕ್ಕ ವಾದ್ಯಗಳನ್ನು ಬಳಸಿಕೊಂಡು ತನ್ನ ನಾದಕ್ಕೆ ಗೆಜ್ಜೆ ಕಟ್ಟಲು ಪ್ರಯತ್ನಿಸುತ್ತಿದ್ದುದು ಅವರ ಶೈಲಿಯೂ ಆಗಿತ್ತೆನ್ನಿ.
ಹಣೆಯ ತುಂಬುವಂತೆ ಬಾಗಿದ ಕಾಮನಬಿಲ್ಲಿನ ಆಕಾರದ ವಿಭೂತಿ, ಅದರ ಮಧ್ಯೆ ದೊಡ್ಡದೊಂದು ಕುಂಕುಮ ಅವರ ಇನ್ನೊಂದು ಆಕರ್ಷಣೆ. ಜತೆಗೆ ಬಳಸುತ್ತಿದ್ದುದು ಸದಾ ಕಡು ಬಣ್ಣಗಳು. ಕೆಂಪು, ಹಳದಿ ಇತ್ಯಾದಿ. ಅದು ಅವರನ್ನು ಮತ್ತಷ್ಟು ಹುಚ್ಚೆಬ್ಬಿಸುತ್ತಿತ್ತೇನೋ? ಗೊತ್ತಿಲ್ಲ. ಯಾಕೋ, ಕುನ್ನಕುಡಿ ಯೆಂದರೆ ಹೀಗೇ ಇರುತ್ತಾರೆ, ಹೀಗೇ ಇರಬೇಕು ಎಂದು ನಿರ್ಧರಿಸುವ ಮಟ್ಟಿಗೆ ಈ ಅಂಶಗಳು ಪಾತ್ರ ವಹಿಸಿದ್ದವು.
ಕಳೆದ ಬಾರಿಯ ದಸರಾಕ್ಕೆ ಬಂದು ಪಿಟೀಲು ನುಡಿಸಿದ ಕುನ್ನಕುಡಿ, “ಶಿವಪ್ಪ ಕಾಯೋ ತಂದೆ’ ನುಡಿಸಿ ಸಂಗೀತ ರಸಿಕರನ್ನು ತಣಿಸಿದ್ದರು. ಬಹುಶಃ ಈ ದಸರಾಕ್ಕೆ ಬಂದಿದ್ದರೆ “ಮುಂಗಾರು ಮಳೆ’ ಇತ್ಯಾದಿ ಚಿತ್ರಗಳ ಗೀತೆಗಳನ್ನೂ ನುಡಿಸಿ ತಣಿಸುತ್ತಿದ್ದರೇನೋ? ತಮ್ಮ ಪಿಟೀಲಿನಿಂದಲೇ ಸಭಿಕರನ್ನು ಮಾತನಾಡಿಸುತ್ತಾ, ಕಛೇರಿಗೆ ಅಂದವನ್ನು ತುಂಬಿಕೊಳ್ಳುತ್ತಿದ್ದ ಅವರ ಬಗೆ ಅನನ್ಯ.
ಹಲವು ಸಂದರ್ಭಗಳಲ್ಲಿ ಒಂದು ಸೊಬಗನ್ನು, ಸೊಗಸನ್ನು ಕಟ್ಟಿಕೊಡುವಲ್ಲಿ ಪದಗಳು ಸೋಲುತ್ತವೆ. ಅಂದರೆ  ಅನುಭವಿಸುವ ಮಟ್ಟಿನ ರಸಧಾರೆ ಪದಗಳಲ್ಲಿ ತುಂಬಿ ಕೊಳ್ಳುವುದಿಲ್ಲ. ಅದು ಅವುಗಳ ಮಿತಿಯೂ ಇರಬಹುದು. ಕುನ್ನಕುಡಿಯವರನ್ನು ಅನುಭವಿಸಿಯೇ ಕಾಣಬೇಕೆಂಬ ಸತ್ಯದ ಮಧ್ಯೆ ನಾನು ಕಾಣಲು ಹೋದ ಅಂಥದೊಂದು ಪ್ರತಿಕೃತಿಯ ಸ್ಥೂಲ ರೂಪದ ಕೆಲವೇ ರೇಖೆಗಳು (ಔಟ್‌ಲೈನ್). ನಮ್ಮ ಅನುಭವ ಮಾತ್ರ ಆ ಚಿತ್ರವನ್ನು ಪೂರ್ಣಗೊಳಿಸಬಲ್ಲದು. (ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟ)

ನನ್ನೊಳಗೆ ಕುಣಿಯುವ ಮೆರವಣಿಗೆ …

ಹಿಂದೊಮ್ಮೆ ಹೇಳಿದ ನೆನಪು. ನನಗೆ ಮೆರವಣಿಗೆ ಎಂದರೆ ಎಂಥದೋ ಖುಷಿ. ಮೆರವಣಿಗೆ ಇಂಥದ್ದೇ ಇರಬೇಕೆಂದೇನೂ ಇಲ್ಲ. ಚಿಕ್ಕವನಿದ್ದಾಗಲಂತೂ ಹೊರಗೆ ಬಾಜಾಭಜಂತ್ರಿ ಸದ್ದು ಕೇಳಿದರೆ ಥಟ್ಟನೆ ರಸ್ತೆಗೆ ಹಾಜರು. ಹೊರಗೆ ಪಡಸಾಲೆಯಲ್ಲಿ ಅಪ್ಪ ಕುಳಿತಿದ್ದರೆ ಸ್ವಲ್ಪ ಮೆಲ್ಲಗೆ ಸದ್ದಾಗದಂತೆ ನಡೆಯಲು ಹೋಗಿ, ಸಿಕ್ಕಿಬಿದ್ದು ಬೈಸಿಕೊಂಡ ದಿನಗಳು ಇದ್ದೇ ಇವೆ ; ಎಲ್ಲರಲ್ಲೂ ಇರುವಂತೆ ನನ್ನಲ್ಲೂ. ಹೊರಗೆ ಡೋಲಿನ ಶಬ್ದ ಕೇಳಿದರೆ ಮಗನೊಂದಿಗೆ ಓಡುತ್ತೇನೆ. ಏನೇ ಹೇಳಿ, ಮೆರವಣಿಗೆಯಲ್ಲಿ ಒಂದು ಸಂಭ್ರಮವಿದೆ.
ನಮ್ಮಪ್ಪನಿಗೆ ಕೆಟ್ಟ ಕೋಪ ಇತ್ತು. ಇದೂ ಸಹ ಆಗಿನವರ ಎಲ್ಲರ ಅಪ್ಪನಿಗೂ ಇದ್ದದ್ದೇ. ತಮಾಷೆ ಅಂದ್ರೆ ಹಿಂದೆ ಕೋಪ ಇಲ್ಲದ ಅಪ್ಪಂದಿರೇ ಇರಲಿಲ್ವೇನೋ? ಅಮ್ಮ ಎಂದಿನಂತೆ ಸಮಾಧಾನ ಮಾಡೋಳು. ಈ ಮಧ್ಯೆ ಒಂದು ಗಣೇಶನ ಹಬ್ಬ. ಊರಿನ ದೊಡ್ಡ ಗಣಪತಿಗೆ ಎಲ್ಲರೂ ಜೈ ಅನ್ನೋರೇ. ಬರೀ ಜಯವೇನು ? ಹತ್ತಿರದ ಶಾಲೆಗೆ ರಜೆ ಅವತ್ತು.
ಬೆಳಗ್ಗೆ ೧೧ ಕ್ಕೆ ಗಣಪತಿಯನ್ನ ಎತ್ತೋರು. ಅದಕ್ಕೆ ಅರ್ಧ ಗಂಟೆ ಮೊದ್ಲು ಗಣಪತಿ ಇರೋ ಸ್ಥಳದಿಂದ ಅರ್ಧ ಕಿ. ಮೀ ದೂರದಲ್ಲಿ ಡೊಳ್ಳು ಕುಣಿತದವ್ರು ಕುಣಿಯೋಕೆ ಶುರು ಮಾಡ್ತಾ ಇದ್ರು. ಅದಕ್ಕೆ ಗೆಜ್ಜೆ ಕಟ್ಟುವ ಹಾಗೆ ಕಂಸಾಳೆಯ ಗುಂಪು ಮತ್ತೊಂದು ಬದಿ. ಅವರಿಗೆ ಮುಂಚೂಣಿಯಲ್ಲಿರುವಂತೆ ನಂದಿಕೋಲು ಹಿಡಿದವ. ಅವ್ರ ಮಧ್ಯೆ ತಟ್ಟೀರಾಯಂದಿರು, ನಾಚಾವಾಲಿಗಳು. ಇಲ್ಲಿಗೇ ಮುಗಿಯುವುದಿಲ್ಲ ಮೆರವಣಿಗೆಯ ಕಥೆ.
ಗಣಪತಿಯನ್ನು ಎತ್ತಿ ಟ್ರ್ಯಾಕ್ಟರ್‌ನಲ್ಲಿ ಇಡೋ ಹೊತ್ತಿಗೆ ದೇಶದಲ್ಲಿರೋ ಜನಪದ ಕಲೆಗಳೆಲ್ಲಾ ಅಲ್ಲಿ ಅವತರಿಸುತ್ತಿತ್ತು. ಸ್ವಲ್ಪ ಸ್ವಲ್ಪ ನೆತ್ತಿಗೇರಿಸಿ (ಮದ್ಯಪಾನಿಗಳು)ಕೊಂಡವರ ಪ್ರದರ್ಶನ ಬೇರೆ. ನಾಚಾವಾಲಿಗಳ ಹಿಂದೆಯೇ ಸುತ್ತುತ್ತಾ ಕೈ ಮೀರೀತು ಎನ್ನುವಾಗ ಎಲ್ಲೋ ಇದ್ದ ಪೊಲೀಸ್ನೋರು ಬಂದು ರಟ್ಟೆ ಹಿಡಿದು ಸರಿ ಮಾಡೋರು. ಅಲ್ಲಿಗೆ ಪರಿಸ್ಥಿತಿ ತಹಬದಿಗೆ.
ಅದೇನೋ? ಅಂದು ಗಣಪತಿ ಹಾದು ಹೋಗುವ ರಸ್ತೆಯೆಲ್ಲಾ ನೀರು ತೊಳೆದು ಶುದ್ಧಗೊಳಿಸಲಾಗುತ್ತಿತ್ತು. ರಂಗೋಲಿಯನ್ನೂ ಹಾಕುತ್ತಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆಲ್ಲಾ ಅಲ್ಲಲ್ಲಿ ನೀರು ಮಜ್ಜಿಗೆ-ಪಾನಕದ ಸೇವೆಯೂ ಆಗುತ್ತಿತ್ತು. ಸುಮಾರು ನಾಲ್ಕು ಕಿ. ಮೀ ಕ್ರಮಿಸಿ ನೀರಿಗೆ ಬೀಳಬೇಕು, ಆ ಗಣಪತಿ. ಬೆಳಗ್ಗೆ ೧೧ ಕ್ಕೆ ಮೆರವಣಿಗೆ ಶುರುವಾದರೆ ಮುಗಿಯುವಾಗ ಸಂಜೆ ೬.
ಆ ದಿನ ಅಪ್ಪನಿಗೇ ಹೊಸ ಹುಮ್ಮಸ್ಸು ಬಂದಿತ್ತು. ಪಕ್ಕದ ಮನೆಯವರನ್ನು ಗೊತ್ತು ಮಾಡಿ ಮೆರವಣಿಗೆಗೆ ಕಳುಹಿಸಿದರೆನ್ನಿ. ಪೂರ್ತಿ ಮುಗಿಸಿ ಬರುವ ಉತ್ಸಾಹ ನನ್ನದು. ಅವರಿಗೂ ಕಡಿಮೆ ಏನೂ ಇರಲಿಲ್ಲ. ಇಬ್ಬರೂ ಆ ಸರ್ಕಲ್ಲಿನಲ್ಲಿ ಬಂದಾಗ ಮೆರವಣಿಗೆಗೆ ಸೇರಿಕೊಂಡೆವು. ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ, ನಾನು ಯಾವಾದರೊಂದು ತಂಡದ ಜತೆಗಿದ್ದು ಬಿಡುತ್ತಿದ್ದೆ. “ತಂಡವನ್ನು ನೋಡೋ ಜನ ನನ್ನನ್ನೂ ನೋಡ್ತಾರೆ’ ಎಂಬ ಸಂಭ್ರಮ ನನ್ನೊಳಗೆ. ಯಾರೋ ನೋಡಿ ನಕ್ಕರೆ, ನಾನೂ ನಗುತ್ತಿದ್ದೆ. ನನ್ನದು ಅವರ ನಗುವಿಗೆ ರಿಯಾಕ್ಷನ್ನು.
ದೂರದಲ್ಲಿ ಒಂದು ಗುಂಪು ಪಟಾಕಿ ಇಟ್ಟು ಹೊಡೆಯುತ್ತಿತ್ತು. ಅದು ಹೊತ್ತಿ ಡಬ್ ಎಂದ ಮೇಲೆ ನಾನು ಹೋಗಿ ಉಳಿದದ್ದನ್ನು ಹೆಕ್ಕುತ್ತಿದ್ದೆ. ಪರಿಸರ ಮಾಲಿನ್ಯ, ಘಾಟು ಏನೇ ಇರಬಹುದು (ಅವೆಲ್ಲಾ ಇತ್ತೀಚಿನ ಪ್ರಜ್ಞೆ). ಆಗ ಪಟಾಕಿಯ ಘಾಟೆಂದರೆ ಖುಷಿಯೇ. ಗಂಟಲೊಳಗೆ ಇಳಿದ ಘಾಟು ಹುಟ್ಟಿಸಿದ್ದು ಸಂಕಟವನ್ನು ಸುಮ್ಮನೇ ಆನಂದವೆಂಬಂತೆ ಅನುಭವಿಸುತ್ತಿದ್ದೆ. ಒಂದಷ್ಟು ದೂರ ಸಾಗಿದ ಮೇಲೆ ಮೆರವಣಿಗೆ ಅಂದ ಕಳೆದುಕೊಳ್ಳುತ್ತಿತ್ತು.
ಬ್ಯಾಂಡ್‌ನವರು ಆಗ ತಾನೇ ಜನಪ್ರಿಯಗೊಂಡ ಹಾಡುಗಳನ್ನು ಬಾರಿಸುತ್ತಿದ್ದರು.  ಹಾಗೂ-ಹೀಗೂ ಮುಗಿಸಿ ಊರಿನ ದೊಡ್ಡ ಸರ್ಕಲ್ ದಾಟಿ ಮಸೀದಿಯ ಬಳಿ ಬರುವಾಗ ಒಳಗೊಳಗೇ ಆತಂಕ. ಅಲ್ಲಿ ಏನಾದರೂ ಗಲಾಟೆ ಆದರೆ ? ಏನು ಮಾಡುವುದು ?
ಆ ದಿನ ಹಾಗೆಯೇ ಆಯಿತು. ಮಸೀದಿ ಬಳಿ ಬರುತ್ತಿದ್ದಂತೆ ದೊಡ್ಡ ಗದ್ದಲ ಎಬ್ಬಿತು. ಯಾರೋ ಗಣಪತಿಯತ್ತ ಏನನ್ನೋ ಎಸೆದರೆಂದು ವದಂತಿ ಹಬ್ಬಿತು. ಕೆಲವರು ಚಪ್ಪಲಿ ಎಂದರು, ಮತ್ತೆ ಕೆಲವರು “ಕಲ್ಲು’ ಅಂದರು. ಇವುಗಳ ಮಧ್ಯೆ “ಮೆರವಣಿಗೆಯಲ್ಲಿದ್ದವರೇ ಕಲ್ಲು ಎಸೆದದ್ದು’ ಎಂದರು. ಅಷ್ಟರಲ್ಲಿ ಓಡುತ್ತಿರುವ ಸದ್ದು. ಪೊಲೀಸರೋ, ಸಿಕ್ಕ ಕಡೆಯೆಲ್ಲಾ ಲಾಠಿ ಬೀಸುತ್ತಿದ್ದರು. ಓಣಿಯತ್ತ ಓಡಿ ಎಲ್ಲೆಲ್ಲೋ ದಾರಿ ಹಿಡಿದು ಮನೆ ಸೇರುವಾಗ ಕತ್ತಲೆಯಾಗಿತ್ತು. ಬರೀ ಕತ್ತಲೆಯಾಗಿರಲಿಲ್ಲ ; ಮನೆಯಲ್ಲೂ ಆವರಿಸಿತ್ತು.
ನಾನು ಒಳಗೆ ಬಂದ ಕೂಡಲೇ ಮೂಲೆಯಲ್ಲಿ ದೊಡ್ಡಮ್ಮ ಕೋಲು ಹಿಡಿದು ನಿಂತಿದ್ದಳು. ನಾನು ವಿವರಿಸೋ ಮೊದಲೇ “ನಿನಗೆ ಯಾರು ಅಲ್ಲಿಯವರೆಗೂ ಹೋಗಲಿಕ್ಕೆ ಹೇಳಿದ್ದು ? ಏನಾದ್ರೂ ಆಗಿದ್ರೆ ಏನ್ ಮಾಡ್ತಿದ್ದೆ ? ಸಾಯಿಬರಾ, ಹಿಂದೂಗಳಾ ಅಂತಾ ನೋಡೋದಿಲ್ಲಾ. ಸಿಕ್ಕವರಿಗೆಲ್ಲಾ ಹೊಡೀತಾರೆ, ಆ ಜನ. ನಿನಗೆ ಬುದ್ಧಿ ಇಲ್ವಾ?’ ಎಂದು ಬಡಬಡಿಸಿದಳು. ಅಪ್ಪ ಕಳುಹಿಸಿದ್ದು ಎಂದು ವಿವರಿಸಲೂ ಅವಕಾಶ ಕೊಡಲಿಲ್ಲ. ಪಕ್ಕದ್ಮನೆಯಲ್ಲಿ ಸುರೇಶನಿಗೆ ಹೊಡೆತ ಬೀಳುತ್ತಿತ್ತು. ಅವರಪ್ಪ ಪೊಲೀಸ್. ಹಾಗಾಗಿ ಮನೆಯಲ್ಲಿ ರಿಹರ್ಸಲ್ ನಡೆಯುತ್ತಿತ್ತೇನೋ?
ಬೆಳಗ್ಗೆ ಪತ್ರಿಕೆಯಲ್ಲಿ ಬಂದ ಸುದ್ದಿಯನ್ನು ದೊಡ್ಡಮ್ಮನೇ ಹೇಳಿದಳು. “ರಾತ್ರಿ ಗಣಪತಿ ಅನಾಥವಾಗಿದ್ದನಂತೆ. ಪೊಲೀಸರೇ ವಿಸರ್ಜನೆ ಮಾಡಿದರಂತೆ.  ಹತ್ತು ಮಂದಿಗೆ ಇರಿದಿದ್ದಾರಂತೆ. ಅದರಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರಂತೆ. ಮತ್ತೆ ಗಲಾಟೆ ನಡೆಯಬಹುದೂಂತ ಸೆಕ್ಷನ್ ಹಾಕಿದ್ದಾರಂತೆ. ನಾಲ್ಕು ಮಂದಿಗಿಂತ ಹೆಚ್ಚು ಮಂದಿ ಗುಂಪಾಗಿ ಹೋದರೆ ಪೊಲೀಸರು ಲಾಠಿ ಬೀಸುತ್ತಾರಂತೆ…’ ಎಲ್ಲ ಕೇಳಿ, ವಿಚಿತ್ರ ಎನಿಸಿತು. ಮೆರವಣಿಗೆಯ ರಂಗು ನನ್ನೊಳಗೇ ಕುಣಿಯುತ್ತಿತ್ತು, ಗದ್ದಲದ ನೆನಪು ಅಪಸ್ವರವಾಗಿ ಕಾಡುತ್ತಿತ್ತು. ಮಾತನಾಡಲಿಲ್ಲ, ದೊಡ್ಡಮ್ಮ ಗೋಧಿ ಹೆಕ್ಕುತ್ತಿದ್ದಳು. ನಾನು ಆ ಕಸಕಡ್ಡಿಯನ್ನು ಒಟ್ಟು ಮಾಡುತ್ತಾ ಕುಳಿತೆ ಮಧ್ಯಾಹ್ನ ಹನ್ನೆರಡು ಆಗುವವರೆಗೂ…!

ಸಂಪಿಗೆ ಸಂಸಾರ

ಹೆಸರು ನಂಜಮ್ಮ. ಸುಮಾರು ಎಂಬತ್ತರ ಪ್ರಾಯ. ಸುಕ್ಕು ಗಟ್ಟಿದ ಮುಖ. ಒಳಗೆ ಹೆಪ್ಪುಗಟ್ಟಿದ ದುಃಖ. ಅದರ ಮಧ್ಯೆಯೂ ತೆಳ್ಳಗೆ ಬೆಳ್ಳಿಗೆರೆಯ ಹಾಗೆ ತೇಲಿ ಬರುವ ಪುಟ್ಟದೊಂದು ನಗೆ. ಅದು ಮುಖದ ಅಂದವನ್ನೇ ಬದಲಿಸುವಷ್ಟು ಸಾಮರ್ಥ್ಯವುಳ್ಳದ್ದು.

ಕೆ.ಆರ್. ಮಾರುಕಟ್ಟೆಯ ಒಳಗೆ ಪ್ರವೇಶಿಸುವಾಗಲೇ ಅವಳು ಎಲ್ಲರನ್ನೂ ಎದುರುಗೊಳ್ಳುತ್ತಾಳೆ. ತನ್ನೆದುರಿಗಿದ್ದ ಸಂಪಿಗೆ ರಾಶಿಯನ್ನು ಕಾಣುತ್ತಲೇ ಜೀವನ ಸವೆಸುತ್ತಾಳೆ. ಕೆಂಡಸಂಪಿಗೆಯಂತೆ ಎದುರಿಗೆ ಬಂದ ಗಿರಾಕಿಯ ಕಂಡು ನಗುತ್ತಾಳೆ. ಐದು ರೂ. ಗೆ ಏಳರಿಂದ ಎಂಟು, ಹತ್ತು ರೂ. ಗೆ ಈ ಲೆಕ್ಕಕ್ಕಿಂತ ಇನ್ನೂ ಕೊಂಚ ಹೆಚ್ಚು. ಇದು ಅವಳ ಗಣಿತ.

ಸಂಪಿಗೆಯನ್ನೇ ನಂಬಿಕೊಂಡು ಬದುಕುತ್ತಿರುವುದು ಇಂದು-ನಿನ್ನೆಯಲ್ಲ. ಸುಮಾರು ನಲ್ವತ್ತು ವರ್ಷಗಳಿಂದ. ಹೋದವರ ಬಳಿಯೆಲ್ಲಾ ತನ್ನ “ಕಂಪಿ’ನ ಕಥೆ ಹೇಳಿಕೊಳ್ಳುವುದಿಲ್ಲ. ಅವಳಿಗೆ ಮಗಳಿದ್ದಾಳೆ, ಮಗನೂ ಇದ್ದಾನೆ. ಮೊಮ್ಮಕ್ಕಳೂ ಕಣ್ಣ ತುಂಬಿಕೊಂಡಿವೆ. ಅಜ್ಜಿ ತನ್ನ ಉದುರದ ಕೂದಲಿನ ತುರುಬು ಕಟ್ಟಿಕೊಂಡು ಬೆನ್ನು ಸೆಟೆಸಿಕೊಂಡು ಕುಳಿತಿರುತ್ತಾಳೆ. ಸಂಪಿಗೆಯ ಕೆಂಪೇ-ಕಂಪೇ ನಿಮ್ಮನ್ನು ಅಲ್ಲಿಗೆ ಕರೆದೊಯ್ಯಬೇಕು. ಅಂದ ಹಾಗೆ ಇವಳು ಬಿಟ್ಟರೆ ಸಂಪಿಗೆ ಮಾರುವವರು ಅಲ್ಲಿಲ್ಲ.

ಅವಳ ಎದುರಿರುವ ಕೆಂಪಗಿನ ರಾಶಿಯನ್ನೇ ನೋಡಬೇಕು ; ಖುಷಿಯಾಗುತ್ತದೆ. ಅವಳೊಳಗಿನ ದುಃಖವನ್ನು ಕೇಳಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಇನ್ನೇನು ಕೆಳಗೆ ಹನಿಯಾಗಿ ಉದುರೀತು ಎನ್ನುವಾಗ ಆಕೆಯೇ “ಹೇಳಿ ಸ್ವಾಮಿ, ಎಷ್ಟು ರೂಪಾಯಿಗೆ ಹೂ. ಬೇಕು ?’ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಕಣ್ಣಂಚಿನಲ್ಲಿ ಬಂದ ಹನಿ ಆಚೆ ಹೋಗಿ ನಿಲ್ಲುತ್ತದೆ.
“ನಮ್ಮ ಯಜಮಾನರ ಕಾಲದಿಂದಲೂ ಇದೇ ಹೂ ಮಾರೋದು. ಹಿಂದೆ ಮೈಸೂರಿನಲ್ಲೆಲ್ಲಾ ಸಂಪಿಗೆ ಹೂಗಳ ರಾಶಿಯೇ ಹೆಚ್ಚು. ಈಗ ಕಡಿಮೆಯಾಗ್ತಿದೆ. ಈಗೀಗ ಹೂ ಸಿಗೋದೂ ಕಡಿಮೆಯೇ. ಎಲ್ಲರೂ ಪರಿಮಳದ ಕಾರ್ಖಾನೆಗೆ ಒಯ್ಯುತ್ತಾರೆ. ಹೀಗೆ ಮಾರೋಕ್ಕೆ ಕೊಡೋಲ್ಲ’ ಎಂದಳು ಆ ಅಮ್ಮ.

ಅಲ್ಲಮ್ಮಾ, ಹೀಗೆ ಒಂದೇ ಹೂ ಮಾರಿ ಬೋರ್ ಬರೋದಿಲ್ವೇ? ಎಂದು ಕೇಳಿದೆ. “ಅದೇನೋ ಅಪ್ಪಾ, ನಮಗೆ ಬದುಕೋಕೆ ಗೊತ್ತಿರೋದು ಒಂದೇ ದಾರಿ. ಸಂಪಿಗೆ ಹೂ ಮಾರೋದು. ಬೇರೆ ಹೂವು ಯಾಕೋ ಹಿಡಿಸಾಕಿಲ್ಲ’ ಎಂದಳು ಅಜ್ಜಿ ನಗು ನಗುತ್ತಲೇ. ಮಕ್ಕಳು-ಮೊಮ್ಮಕ್ಕಳು-ಸಂಸಾರದ ಕಥೆ ಕೇಳಿದೆ. “ಮಗಳಿದ್ದಾಳೆ. ಅವಳೂ ಹೂ ಮಾರ್‍ತಾಳೆ. ಅದರಲ್ಲೂ ಸಂಪಿಗೆ ಹೂಗಳನ್ನೇ’ ಎಂದಳು. ನಾನೂ ಈ ಹೂವಿನ ಮೋಹಕ್ಕೆ ಒಳಗಾಗಿದ್ದಕ್ಕೂ ಒಂದು ನೆವವಿದೆ.

ಭದ್ರಾವತಿಯಲ್ಲಿ ಓದುತ್ತಿರುವಾಗ ಗಾಂಧಿ ಪಾರ್ಕ್‌ನಲ್ಲಿ ಬರೀ ಸಂಪಿಗೆ ಮರಗಳೇ. ಶಾಲೆ ಬಿಟ್ಟ ಕೂಡಲೇ ಪಾರ್ಕ್‌ನ್ನು ಹೊಕ್ಕುತ್ತಿದ್ದ ನಾವು ಹತ್ತುತ್ತಿದ್ದುದು ಸಂಪಿಗೆ ಮರಗಳನ್ನು. ಒಂದೊಂದಾಗಿ ಮೊಗ್ಗನ್ನೇ ಕೊಯ್ದು ಜೇಬಿಗಿಳಿಸುತ್ತಿದ್ದೆವು. ಎಷ್ಟೋ ಬಾರಿ ರಸ್ತೇಲಿ ಹೋಗುತ್ತಿದ್ದ ದಾರಿಹೋಕರೆ ಈ ಮರದ ಮಾಲೀಕರಾಗಿ ಬಿಡುತ್ತಿದ್ದರು. “ಇಳೀರಲೇ…’ ಎಂದು ಗದರಿಸುತ್ತಿದ್ದರು. ನಾವು ಓಡಿ ಹೋಗುತ್ತಿದ್ದರೂ, ಮತ್ತೆ ಕೊಂಚ ಸಮಯದ ನಂತರ ಹತ್ತುತ್ತಿದ್ದುದು ಮರವನ್ನೇ.

ಅದರ ಎಸಳನ್ನು ಪುಸ್ತಕದಲ್ಲಿಟ್ಟುಕೊಂಡು ನಾಲ್ಕೈದು ದಿನ ಬಿಟ್ಟು ಕೆಂಪಗಾದದ್ದನ್ನು ಕಾಣುವ ತವಕ ನಮಗೆ. ಅಕ್ಕನಿಗೂ ತಂದು ಕೊಡುತ್ತಿದ್ದೆ ಮೊಗ್ಗುಗಳನ್ನು. ಒಮ್ಮೆಯಂತೂ ನನ್ನ ಮಾಸ್ಟರ್ ನೋಡಿ ಕ್ಲಾಸ್‌ನಲ್ಲಿ “ಕ್ಲಾಸ್’ ತೆಗೆದುಕೊಂಡಿದ್ದರು.
ಹೀಗೆ ನಂಜಮ್ಮ ಆ ಎಲ್ಲ ನೆನಪನ್ನೂ ನನ್ನ ಮುಂದೆ ತಂದು ಸುರಿದಳು. ಅಂದಿನಿಂದ ವಾರಕ್ಕೆ ಮೂರು ಬಾರಿ ಮಾರುಕಟ್ಟೆಗೆ ಹೋದಾಗ ಅವಳ ಮುಂದೆ ನಿಲ್ಲುತ್ತೇನೆ. ಪರಿಮಳ ನನ್ನನ್ನು ಆವರಿಸುತ್ತದೆ. ಆಕೆ ಆಯಾಚಿತವಾಗಿ ಐದು ರೂ. ಗಳಿಗೆ ಹೂವನ್ನು ಕಟ್ಟಿ ಕೊಡುತ್ತಾಳೆ.

ನಾನು ಅದರೊಂದಿಗೆ ಹೊರಡುತ್ತೇನೆ. ಆ ಹೂವಿನ ಪರಿಮಳ ನನ್ನನ್ನೇ ಹಿಂಬಾಲಿಸುತ್ತದೆ. ಜತೆಗೆ ಆ ಸಂಪಿಗೆಯ ಪುಟ್ಟ ಸಂಸಾರದ ದುಃಖ, ಶ್ರಮ, ಬದುಕಲೇಬೇಕೆಂಬ ಜೀವನಪ್ರೀತಿ, ಅದಮ್ಯ ಉತ್ಸಾಹ ಸಹ.

ಬರಿಯ ಮಾತಿಗೆ ಮೌನ ತುಂಬಿದವರು

ಅವನ ಬೊಗಸೆಯಲ್ಲಿ ಅವಳು, ತಂದ ಪ್ರೀತಿಯೆಲ್ಲಾ ಸುರಿದಳು. ಅವನು ಒಂದೂ ಹನಿ ಸೋರದಂತೆ ಜತನದಿಂದ ಕಾಯ್ದ. ಬದುಕು ಸುಂದರವಾಗಿ ಹರವಿಕೊಂಡಿತು. ಸಂತಸದ ಬಳ್ಳಿ ಚಿಗುರಿ ಹೂವಾಗಿ ಅರಳಿದಳು ಅವಳು. ಅವನು ಚಿಟ್ಟೆಯಾಗಿ ಬಂದ ; ಮಧು ಹೀರತೊಡಗಿದ ; ಸಂಭ್ರಮಿಸಿದ. ಜಾಣ ಹೂ, ಚಿಟ್ಟೆ ಹಾರಿ ಹೋಗುವ ಮುನ್ನ ಕಣ್ಣ ಮುಚ್ಚಿಕೊಂಡಿತು. ಈಗ ಒಳಗೆ ಅವರಿಬ್ಬರೇ…
***
ಅವಳಿಗೆ ಬೇಕಾಗಿದ್ದು ಬರಿಯ ಪುರುಷನಲ್ಲ ; ಕನಸ ಕಾಯುವವ. ಅದರಲ್ಲೂ ಅವಳ ಕನಸಿನ ಕಾವಲುಗಾರ. ತನ್ನ ಕಂಗಳೊಳಗೆ ಇರುವ ಪುಟ್ಟ ಪುಟ್ಟ ಕನಸುಗಳನ್ನು ಹಗೂರ ಹೊರ ತೆಗೆದು ನನಸಿನ ಸಾಧ್ಯತೆಯನ್ನು ತುಂಬಬೇಕು. ಮತ್ತೆ ಜೀವ ಕೊಟ್ಥು ತನ್ನದೆಂಬಂತೆ ಕಾಯಬೇಕು. ಕನಸು ಬೆಳೆದು ಬೆಳಕಿನಂಥ ಹೂವು ಬಿಟ್ಟಾಗ ಅದರ ಪರಿಮಳದಲ್ಲಿ ಲೀನವಾಗಬೇಕು. ಸುತ್ತಲ ಕತ್ತಲೆಗೆ ಅ ಹೂವುಗಳು ಬೆಳಕಾಗಬೇಕೆಂಬುದು ಅವಳ ಆಶಯವೂ ಹೌದು. ಅವಳಿನ್ನೂ ಹುಡುಕುತ್ತಿದ್ದಾಳೆ.
***
ಅವನು ಉದ್ದಕ್ಕೂ ಕನಸಿನ ಬೀಜಗಳನ್ನು ಬಿತ್ತುತ್ತಾ ಹೋದ. ಅದಕ್ಕೆ ನೀರೆಯುತ್ತಾ ಆಕೆ ಹಿಂದೆ ನಡೆದಳು. ಅವರ ಹಿಂದೆ ದೊಡ್ಡ ಕನಸಿನ ತಲೆಮಾರೇ ಬಂತು. ಮೊಳಕೆಯೊಡೆದ ಕನಸುಗಳೆಲ್ಲಾ ಪೈರಿನಂತೆ ಹಸಿರು ಬಣ್ಣ ಮೆತ್ತಿಕೊಂಡು ನಿಂತವು. ಅದರ ಮಧ್ಯೆ ಇವರು ನಿಂತು ಸಂಭ್ರಮಿಸಿದರು. ಆ ಬಣ್ಣ ಇವರನ್ನೂ ವ್ಯಾಪಿಸಿತು. ಅವನು ನಕ್ಕ, ಅವಳ ಕೆನ್ನೆ ಕೆಂಪೇರಿತು. ಇವಳ ನಾಚಿಕೆ ಅವನೊಳಗೆ ರಿಂಗಣಿಸಿತು. ಇಬ್ಬರೂ ಮೋಹಿಸಿದರು, ಪ್ರೀತಿಸಿದರು, ಸೊಗಸು ತುಂಬಿಕೊಂಡು ಮೆರೆದರು. ಕೊನೆಗೆ ಬದುಕೆಂದು ಹೆಸರಿಟ್ಟರು !
***
ಬದುಕು ಲೆಕ್ಕಾಚಾರ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಎಲ್ಲವೂ ಇದ್ದದ್ದೇ. ಒಮ್ಮೊಮ್ಮೆ ಪೈಥಾಗಾರಸ್ ನ ಪ್ರಮೇಯವೂ ನುಸುಳುವುದುಂಟು. ಹಾಗೆ ನೋಡಲು ಗಣಿತದ ಕೋನ ಇರಬೇಕು. ಒಟ್ಟು ಪ್ರೀತಿಯೆಂದರೂ ಕೊಡುವುದು, ಪಡೆಯುವುದು ಮತ್ತು ಕಳೆದುಕೊಳ್ಳುವುದು.
(ಪ್ರೇಮಿಗಳ ದಿನ ನಿತ್ಯವೂ. ಆದರೂ ಅದಕ್ಕೊಂದು ದಿನವೆಂದಾಗಿದೆ. ಈ ಹಿನ್ನೆಲೆಯಲ್ಲಿ ಸುಮ್ಮನೆ ಹೊರಟ ಸಾಲುಗಳ ಮೆರವಣಿಗೆ)
 

“ಆತ್ಮ” ದ ಲಹರಿ

ಪುಟ್ಟ ಅಂಗಡಿ ಬಾಗಿಲಿಗೆ ಹೊಡೆದಿರುವ ಆಣಿಯಲ್ಲಿ ಚಪ್ಪಲಿ ಸರ ತೂಗುತ್ತಿದೆ. ಬಗೆ ಬಗೆಯ ಪಾದರಕ್ಷೆಗಳು. ರೂಪ, ಬಣ್ಣ ಎಲ್ಲವೂ ಆಕರ್ಷಕ. ಒಂದರ ಕೆಳಮೈ  ಸಂಪೂರ್ಣ ಪ್ಲಾಸ್ಟಿಕ್, ಮತ್ತೊಂದರದ್ದು ಚರ್ಮ. ಇನ್ನೂ ಒಂದರದ್ದು ಮತ್ತೂ ಏನೋ ? ಬಲಗಾಲಿನ ಉಂಗುಷ್ಟಕ್ಕಿದ್ದ ಅಲಂಕಾರ ಎಡಗಾಲಿನ ಉಂಗುಷ್ಟಕ್ಕೂ ಇದೆ. ಎಲ್ಲವೂ ಒಂದೇ ನಮೂನೆ, ಅವಳಿಗಳು.

ಮೋಚಿ ಈಜೀವಗಳ ಬ್ರಹ್ಮ. ಹಣೆ ಮೇಲೆ ಬರೆದರೂ ಅವನೇ. ಅವತಾರ ಕಲ್ಪಿಸಿದವನೂ ಅವನೇ. ದೇಹಕ್ಕೆ ಆತ್ಮ ಜೋಡಿಸಿ ಹೊಲೆದಿದ್ದಾನೆ ; ಸಂಬಂಧದ ನೂಲಿನಿಂದ. ಒಂದನ್ನೊಂದು ಬಿಡಲಾರದು. ನಂಟಿಗೆ ಅಂಟು ಬೇರೆ ಹಚ್ಚುತ್ತಾನೆ. ಅದಕ್ಕೆ ಚಪ್ಪಲಿಗೆ ದೇಹ ಬೇರೆಯಿದೆ ; ಆತ್ಮವೇ ಬೇರೆ. ಅದೇ ನಮ್ಮ ಬಾಯಲ್ಲಿ “ಸೋಲ್’ ಆದದ್ದು. ಸೋಲ್ ಎಂದರೆ ಆತ್ಮವೂ ತಾನೆ. ಚಪ್ಪಲಿಯ ಸೋಲ್ “ಮೆಟ್ಟಿ’ ನ ಆತ್ಮ. ಆ ಬ್ರಹ್ಮನ ಅಧೀನ ಈ ಮೋಚಿ ಸಹ ಬ್ರಹ್ಮ.

ಆಗಾಗ್ಗೆ ಸಂಬಂಧ ಬೇರಾದೀತು ಎಂದಾಗ ಮತ್ತೊಮ್ಮೆ ಅಂಟು ಹಚ್ಚಿ ಒಣಗಿಸುತ್ತಾನೆ. ಮತ್ತೆ ಸಂಬಂಧ ಹಸಿ ಹಸಿ. ಮತ್ತಷ್ಟು ಕಾಲ ಜೀವನ. ನಮ್ಮ ಹಾಗೆ ನಾವು ತುಳಿಯುವ ಅವೂ. ಥೇಟ್ ನಮ್ಮಂತೆಯೇ.

ಸಂಸಾರದಲ್ಲಿ ಸರಿಗಮ ಹಾಡುವ ಖಯ್ಯಾಲಿ. ಆ ಹಾಡಿನ ದುಡಿತಕ್ಕೆ ಅವು ಶರಣು. “ಆತ್ಮ’ ಇರುವವರೆಗೆ ಬದುಕು. ನಂತರ ಪ್ರಕೃತಿಯಲ್ಲಿ “ಲೀನ’. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ.

ನೂಲು ಕಡಿದು ಹೋದರೂ ಪಡೆದ ಆಯಸ್ಸಿಗೆ ಖೋತಾ ಇಲ್ಲ. ಮೋಚಿ ಮತ್ತೊಮ್ಮೆ ಹೊಸ ದಾರದಲ್ಲಿ ಹೊಲೆದು ಕೊಡುತ್ತಾನೆ. ಅನುರೂಪವೋ, ಪ್ರತಿರೂಪವೋ ನಂತರದ ಮಾತು. ನಮ್ಮ ಸಂಬಂಧ ಹಳಸಿ ಹೋಗಿ ಮತ್ತೊಂದು ಸಂಬಂಧ ಹುಡುಕಿಕೊಂಡಂತೆ. ಮತ್ತಷ್ಟು ದೂರ ಸಾಗಲಿಕ್ಕೆ ಒಂದು ಜೊತೆಯಷ್ಟೇ. ಆಯಸ್ಸಿನ ಲೆಕ್ಕಾಚಾರದಲ್ಲಿ ಇದ್ದದ್ದಷ್ಟೇ. ಸವೆಯುವುದೆಂದರೆ ಆತ್ಮ-ದೇಹ ಒಂದಾದಂತೆ ; ಇದೊಂದು ಬಗೆಯ “ಅದ್ವೈತ’ !

ಎರಡು ಜೀವಕ್ಕೂ ಒಂದೇ ಹೆಸರು-ಚಪ್ಪಲಿ. ನಮ್ಮ “ದಂಪತಿ’ಯ ಹಾಗೆ. ಒಂದು ಬಿಟ್ಟು ಮತ್ತೊಂದಿಲ್ಲ. ಬೆಲೆಯೂ ಅಷ್ಟೇ. ಒಂದಿದ್ದರೆ ಮತ್ತೊಂದಕ್ಕೆ. ಇಬ್ಬರೂ ಇದ್ದರೆ ಬದುಕಿಗೂ ಬೆಲೆ. ಮೋಚಿ ಬಳಿ ಹಳವುಬಾರಿ ರೂಪುಗೊಂಡರೂ ಒಂದು ದಿನ ಪರ್ಯಟನ ವೀರನ ಪ್ರಯಾಣಕ್ಕೆ ಪೂರ್ಣ ವಿರಾಮ. ಮತ್ತೊಂದದ್ದೂ ಆಗ “ಜೀವ’ದಾನ. ಜೋಡಿ ಜೀವಗಳ ಕಥೆಯಲ್ಲಿ ಸಹಬಾಳ್ವೆ-ಸಮಾನತೆ-ಸಹ “ಗಮನ’ ಪದ್ಧತಿ.
(ಮೋಚಿ ನನಗೆ ಕುತೂಹಲಿ. ಚಪ್ಪಲಿಯ ಅಂಗಡಿಯಲ್ಲಿ ಕುಳಿತಾಗ ಅವನು, ಅವನ ಕೆಲಸ, ನಮ್ಮ ಚಪ್ಪಲಿ, ಬದುಕು ಎಲ್ಲದರ ಬಗೆಗಿನ ಸಂಬಂಧ ಕುರಿತು ಮೂಡಿಬಂದ ಲಹರಿಯಿದು)