ಝೆನ್ ಕಥೆಗಳು

ನಿಜವಾದ ಸ್ನೇಹಿತರು
ಬಹಳ ವರ್ಷಗಳ ಹಿಂದೆ ಚೀನಾದಲ್ಲಿ ಇಬ್ಬರು ಪರಮಾಪ್ತ ಗೆಳೆಯರಿದ್ದರು. ನಮ್ಮ ಜಿಗ್ರಿ ದೋಸ್ತ್‌ಗಳಿದ್ದ ಹಾಗೆ. ಒಮ್ಮ ಅತ್ಯಂತ ಸುಂದರವಾಗಿ, ಮಧುರವಾಗಿ ತಂತಿವಾದ್ಯವನ್ನು ನುಡಿಸುತ್ತಿದ್ದ. ಮತ್ತೊಬ್ಬ ಅಷ್ಟೇ ಸಹೃದಯತೆಯಿಂದ ಕೇಳುತ್ತಿದ್ದ. ಒಬ್ಬ ಪರ್ವತದ ಬಗ್ಗೆ ನುಡಿಸಿ ಹಾಡಿದಾಗ, ಮತ್ತ್ತೊಬ್ಬ “ನಿಜವಾಗಲೂ ಪರ್ವತದ ಸೌಂದರ್ಯವನ್ನೇ ಅನುಭವಿಸುವಂತಿದೆ’ ಎಂದ.
ಹಾಗೆಯೇ ಮತ್ತೊಬ್ಬ ಜಲಧಾರೆ ಬಗ್ಗೆ ನುಡಿಸಿದ. ಅದನ್ನು ಕೇಳಿದ ಮೊದಲಿಗ “ಇಲ್ಲೇ ಜಲಪಾತ ಹರಿದಂತಾಗಿದೆ’ ಎಂದು ನುಡಿದ.
ಸಹೃದಯಿ ಕೇಳುಗ (ಗೆಳೆಯ) ಕಾಯಿಲೆ ಬಂದು ಸತ್ತು ಹೋದ. ಇದು ಮತ್ತೊಬ್ಬ ಗೆಳೆಯನಿಗೆ ಬಹಳ ಬೇಸರ ತಂತು. ತಕ್ಷಣವೇ ತನ್ನ ವಾದ್ಯದ ತಂತಿ ಹರಿದು ಹಾಕಿದ. ಎಂದೂ ನುಡಿಸದಿರಲು ನಿರ್ಧರಿಸಿದ. ಅಂದಿನಿಂದ ಇದು ಪರಮಾಪ್ತ ಸ್ನೇಹಕ್ಕೆ ಸಾಕ್ಷಿಯಾಯಿತು.

ನಾನ್ಹೇಗೆ ತುಂಬಲಿ ?
ನಾನ್‌ಇನ್ ಜಪಾನಿನ ಮಾಸ್ಟರ್‌ನನ್ನು ನೋಡಲು ಒಬ್ಬ ವಿಶ್ವವಿದ್ಯಾಲಯ ಪ್ರೊಫೆಸರ್ ಬಂದ. ಅವನಿಗೆ ಝೆನ್ ಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ನಾನ್‌ಇನ್ ಅತಿಥಿಯ ಮುಂದೆ ಲೋಟವಿಟ್ಟು ಟೀ ಸುರಿಯತೊಡಗಿದ. ಲೋಟ ತುಂಬಿ ಟೀ ಹೊರಚೆಲ್ಲಿತು. ಇನ್ನೂ ಸುರಿಯುತ್ತಲೇ ಇದ್ದ. ಸುಮ್ಮನೆ ನೋಡುತ್ತಿದ್ದ ಪ್ರೊಫೆಸರ್ “ಲೋಟ ತುಂಬಿದೆ. ಇನ್ನು ಹಿಡಿಸಲಾರದು’ ಎಂದ. ಇದರಂತೆಯೇ ನೀನೂ ನಿನ್ನದೇ ಸ್ವಂತ ಅಭಿಪ್ರಾಯ-ಅನಿಸಿಕೆಗಳಿಂದ ತುಂಬಿಕೊಂಡಿದ್ದೀ. ನೀನು ಖಾಲಿಯಾಗದೇ ನಾನ್ಹೇಗೆ ಝೆನ್ ತೋರಿಸಲಿ ? ಎಂದು ನಾನ್‌ಇನ್ ಕೇಳಿದ. 

ಅವರವರ ಜೀವನ, ಅವರವರ ಸಂತೋಷ !

ರೈತನೊಬ್ಬ ಹಾಲು ಕರೆಯುತ್ತಿದ್ದ. ಅದೇ ಹೊತ್ತಿಗೆ ಹಲ್ಲಿಯೊಂದು ಬಂದು ಅದನ್ನೇ ನೋಡತೊಡಗಿತು. ಹಾಲು ಕುಡಿಯಬೇಕೆಂದೆನಿಸಿ,”ಕೊಂಚ ಹಾಲು ಕೊಡುತ್ತೀಯಾ ಕುಡಿಯಲಿಕ್ಕೆ?’ ಎಂದು ರೈತನನ್ನು ಕೇಳಿತು. ಸರಿ, ಎಂದ ರೈತ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಅದಕ್ಕೆ ಹಾಲು ಹರಿಸಿದ. “ಹಾಲು ಬಹಳ ರುಚಿಯಾಗಿದೆ’ ಎಂದು ಹೇಳಿದ ಹಲ್ಲಿ, ಪಕ್ಕದಲ್ಲಿದ್ದ ಕರುವನ್ನು ನೋಡಿತು.

“ಎಂಥಾ ಅದೃಷ್ಟ ಅದಕ್ಕೆ ? ದಿನವೂ ಇಂಥ ಹಾಲು ಕುಡಿಯೋ ಅದೇ ಪರಮ ಸುಖಿ. ಮುಂದಿನ ಜನ್ಮದಲ್ಲಿ ಕರುವಾದರೆ ಚೆನ್ನ’ ಎಂದುಕೊಂಡಿತು. ಅದರಂತೆ ಕರುವಾಗಿ ಹುಟ್ಟಿತು. ಇನ್ನು ನಾನು ಧನ್ಯ ಎಂದುಕೊಂಡಿತು ಮನದಲ್ಲಿ. ಕೆಲ ದಿನಗಳ ತರುವಾಯ ಕರುವಿಗೆ ಹಾಲು ಕುಡಿಯಲು ಬಿಡುವುದನ್ನ್ನು  ರೈತ ನಿಲ್ಲಿಸಿದ. ಜತೆಗೆ ಸಾಕಷ್ಟು ಹುಲ್ಲೂ ನೀಡುತ್ತಿರಲಿಲ್ಲ. ಹಸಿವು ಕಿತ್ತು ತಿನ್ನುತ್ತಿತ್ತು. ಅದರ ಕಣ್ಣಲ್ಲಿ ನೀರು ಬರತೊಡಗಿತು. “ಸದಾ ಹಾಲನ್ನು ಬಳಸುವ ರೈತನೇ ಸುಖಿ’ ಎಂದುಕೊಂಡ ಅದು, ರೈತನಾಗುವುದೇ ಲೇಸೆಂದಿತು.

ಆ ಆಸೆಯೂ ಈಡೇರಿತು. ರೈತನಾಗಿ ಹುಟ್ಟಿತು ಹಲ್ಲಿ. ದಿನವೂ ಹಾಲನ್ನು ಸಂಗ್ರಹಿಸಿ ಖುಷಿ ಪಡುತ್ತಿತ್ತು. ಎಲ್ಲ ಹಾಲನ್ನು ತನ್ನ ಮಾಲೀಕನಿಗೆ ಕೊಡಬೇಕಿತ್ತು. ಬೆವರು ಸುರಿಸಿ ದುಡಿಯಬೇಕಿತ್ತು. ಬಹಳ ದೂರದ ಕಾಡಿನಿಂದ ಕಟ್ಟಿಗೆ ಮತ್ತು ಹುಲ್ಲನ್ನು ತರಬೇಕಿತ್ತು. ದನದ ಕೊಟ್ಟಿಗೆ ಸ್ವಚ್ಛ ಮಾಡಬೇಕಿತ್ತು. ವರ್ಷಪೂರ್ತಿ ಕಷ್ಟಪಡಬೇಕಿತ್ತು. ಬಹಳ ಬೇಸರವೆನಿಸಿತು ಬದುಕು.

“ನಾನು ಹಾಲು ಕರೆದು, ಮೊಸರು ಮಾಡಿದರೆ ತಿನ್ನುವವನು ಮಾಲೀಕ. ಇದೆಂಥಾ ಬದುಕು’ ಎನಿಸಿತು ರೈತನಿಗೆ. ಮುಂದಿನ ಜನ್ಮದಲ್ಲಿ ಮಾಲೀಕನಾಗುವುದೇ ಸೂಕ್ತ ಎಂದು ಮಾಲೀಕನಾಗಿ ಹುಟ್ಟಿತು.

ಆದರೂ ಅದು ಸುಖದಿಂದ ಇರಲಾಗಲಿಲ್ಲ. ಹಲವು ಸಮಸ್ಯೆಗಳನ್ನು ಎದುರಿಸಬೇಕಿತ್ತು. ಹಲವು ಜನರೊಂದಿಗೆ ವ್ಯವಹರಿಸಬೇಕಿತ್ತು. ಕೆಲವರೊಂದಿಗೆ ಜಗಳಕ್ಕಿಳಿಯಬೇಕಿತ್ತು. ಇನ್ನೂ ಕೆಲವರು ಸಾಲ ಬೇಡಿ ಬರುತ್ತಿದ್ದರು. ಮತ್ತಷ್ಟು ಮಂದಿ ಸಮಸ್ಯೆಗೆ ಪರಿಹಾರ ಕೋರುತ್ತಿದ್ದರು. ಇಪ್ಪತ್ತನಾಲ್ಕೂ ಗಂಟೆಯೂ ಯೋಚನೆ, ನಿದ್ರೆ ಎಂಬುದು ಇರಲಿಲ್ಲ. ಆ ಒತ್ತಡದ ಜೀವನವೂ ಬೇಸರ ತಂದಿತು.

ಒಬ್ಬರ ಬದುಕಿನಿಂದ ಮತ್ತೊಬ್ಬರ ಬದುಕು ಹೋಲಿಸಿದರೆ ಉತ್ತಮವೇ. ಆದರೆ ಅವರವರ ಕಷ್ಟ ಅವರವರಿಗೆ ಎಂದುಕೊಂಡ ಹಲ್ಲಿ, ಮತ್ತೆ ಹಲ್ಲಿಯಾಗಿಯೇ ಹುಟ್ಟಲು ನಿರ್ಧರಿಸಿತು. ತಮ್ಮ ತಮ್ಮ ಜೀವನ ತಮಗೇ ಸುಖ.
( ಇದು ನೇಪಾಳದ ಜಾನಪದ ಕಥೆ. ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸಿಕ್ಕದ್ದು. ಶಾಶ್ವತ್ ಪರಜುಲಿ ಎಂಬವರು ಬರೆದದ್ದಂತೆ.)

ಬೇಷರತ್ ಪ್ರೀತಿ

ವಿಯೆಟ್ನಾಂ ಯುದ್ಧದಲ್ಲಿ ಶತ್ರುಗಳೊಂದಿಗೆ ಧೀರತೆಯಿಂದ ಹೋರಾಡಿದ ಸೈನಿಕನೊಬ್ಬ ಸ್ಯಾನ್ ಫ್ರಾನಿಸ್ಕೋದಿಂದ ತನ್ನ ತಂದೆ ತಾಯಿಗೆ ಫೋನ್ ಮಾಡಿದ.
“ಅಮ್ಮ ಮತ್ತು ಅಪ್ಪ, ನಾನು ಮನೆಗೆ ವಾಪಸ್ಸಾಗುತ್ತಿದ್ದೇನೆ. ಆದರೆ ನನಗೆ ನಿಮ್ಮಿಂದ ಒಂದು ನೆರವು ಆಗಬೇಕಿದೆ. ನನ್ನೊಂದಿಗೆ ಒಬ್ಬ ಗೆಳೆಯನಿದ್ದಾನೆ. ಅವನನ್ನೂ ಜತೆಗೆ ಕರೆ ತರಬೇಕೆಂದಿದ್ದೇನೆ’.
“ಕರೆದು ತಾ, ಅದಕ್ಕೇಕೆ ಮೀನಮೇಷ. ನಮಗೂ ಅವನನ್ನು ಕಾಣಬೇಕೆಂದಿದೆ’ ಎಂದನು ಅಪ್ಪ.
“ಆದರೆ ಅವನ ಬಗ್ಗೆ ನಿಮಗೆ ಏನನ್ನೋ ತಿಳಿಸಬೇಕಿದೆ’ ಎಂದ ಮಗ.
“ಹ್ಞಾಂ…ಹೇಳು’.
“ಯುದ್ಧದಲ್ಲಿ ಅವನು ಬಹಳ ಪೆಟ್ಟು ತಿಂದಿದ್ದಾನೆ. ಒಂದು ಕೈ ಮತ್ತು ಒಂದು ಕಾಲನ್ನು ಕಳೆದುಕೊಂಡು ಅನಾಥನಾಗಿದ್ದಾನೆ. ಅವನಿಗೆ ಎಲ್ಲಿಗೂ ಹೋಗಲಿಕ್ಕೆ ಸಾಧ್ಯವಾಗದು. ಹಾಗಾಗಿ ನಾವಿಬ್ಬರೂ ಒಟ್ಟಿಗೇ ಇರುವುದೆಂದು ನಿರ್ಧರಿಸಿದ್ದೇವೆ’.
“ಹೀಗಾಗಬಾರದಿತ್ತು. ನಿಜವಾಗಲೂ ನನಗೆ ದುಃಖವಾಗಿದೆ. ಅವನಿಗೆ ಅಗತ್ಯವಾದ ನೆರವು ನೀಡಬಹುದು. ಜತೆಗೆ ಬೇರೆಲ್ಲಾದರೂ ಇರಲಿಕ್ಕೆ ವ್ಯವಸ್ಥೆ ಕಲ್ಪಿಸಬಹುದು’.
“ಇಲ್ಲ ಅಪ್ಪ, ನಾನು ಅವನೊಂದಿಗೇ ಇರಬೇಕೆಂದಿದ್ದೇನೆ’ ಎಂದು ಹಠ ಹಿಡಿದ ಮಗನ ಮಾತಿಗೆ ಸ್ವಲ್ಪ ಸಿಟ್ಟು ಬಂತು.
“ನೋಡು, ನೀನು ಏನನ್ನು ಕೇಳುತ್ತಿರುವೆ ಎಂಬುದೇ ನಿನಗೇ ಗೊತ್ತಿಲ್ಲ.   ಕಾಲು, ಕೈ ಇಲ್ಲದವನನ್ನು ಸುಧಾರಿಸುವುದು ಎಷ್ಟು ಕಷ್ಟ ಗೊತ್ತಿದೆಯೇ? ನಮಗೆ ನಮ್ಮದೇ ಸಾಕಷ್ಟು ಗಡಿಬಿಡಿಗಳಿವೆ.  ಅಂಥದ್ದರಲ್ಲಿ ನಮ್ಮ ಕುಟುಂಬದ ನಡುವೆ ಮತ್ತೊಬ್ಬನ ಪ್ರವೇಶ ಸರಿ ಎನಿಸುವುದಿಲ್ಲ. ಒಂದು ಕೆಲಸ ಮಾಡು, ನೀನು ಸುಮ್ಮನೆ ಬಂದುಬಿಡು. ಅವನು ತನ್ನ ವ್ಯವಸ್ಥೆಯನ್ನು ಹೇಗಾದರೂ ಮಾಡಿಕೊಳ್ಳಬಲ್ಲ’ ಎಂದರು. “ಆಯಿತು’ ಎಂದವನೇ ಮಗ ಫೋನ್ ಇಟ್ಟುಬಿಟ್ಟ.
ಸ್ವಲ್ಪ ದಿನ ಕಳೆಯಿತು. ಒಂದು ದಿನ ಸ್ಯಾನ್ ಫ್ರಾನಿಸ್ಕೋ ಪೊಲೀಸ್ ಠಾಣೆಯಿಂದ ದೂರವಾಣಿ ಕರೆ ಬಂತು. “ನಿಮ್ಮ ಮಗ ಕಟ್ಟಡದ ಮೇಲಿಂದ ಬಿದ್ದು ಸತ್ತಿದ್ದಾನೆ’ ಎಂದು ಪೊಲೀಸರು ಸುದ್ದಿ ತಿಳಿಸಿದರು.
ದಿಗ್ಭ್ರಮೆಗೊಳಗಾದ ತಂದೆ ತಾಯಿ ಸೀದ ಸ್ಯಾನ್‌ಫ್ರಾನಿಸ್ಕೋಗೆ ನಡೆದರು. ನಗರದ ಶವಾಗಾರದಲ್ಲಿ ಮಗನ ಶವ ಕಾಯುತ್ತಿತ್ತು. ದುಃಖಿತ ಸ್ಥಿತಿಯಲ್ಲೇ ಮಗನ ಶವವನ್ನು ಪತ್ತೆ ಹಚ್ಚಿದರು. “ಮಗನ ಒಂದು ಕೈ ಮತ್ತು ಒಂದು ಕಾಲು ಇರಲಿಲ್ಲ’ !

ಪರ್ವತದ ಕಥೆ

ತಂದೆ ಮತ್ತು ಮಗ ಪರ್ವತದ ತಪ್ಪಲಲ್ಲಿ ನಡೆದು ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ಮಗ ಎಡವಿ ಬಿದ್ದ. ನೋವಾಗಿ ಜೋರಾಗಿ ಅರಚಿದ “ಆ…ಆ…ಆ’.
ಆಶ್ಚರ್ಯವೆಂದರೆ ಪರ್ವತದ ಯಾವುದೋ ಭಾಗದಿಂದ “ಆ….ಆ….ಆ’ ಧ್ವನಿ ಕೇಳಿ ಬಂತು. ಕುತೂಹಲದಿಂದ ಮಗ “ಯಾರು ನೀನು’ ಎಂದು ಪ್ರಶ್ನಿಸಿದ. ವಿಚಿತ್ರವೆಂಬಂತೆ ಅದೂ “ನೀನು ಯಾರು” ಎಂದು ಕೇಳಿತು. ಪುನಃ ಈತ ಪರ್ವತದ ಕಡೆಗೆ ದಿಟ್ಟಿಸುತ್ತಾ “ನಿನ್ನನ್ನು ಪ್ರೀತಿಸುತ್ತೇನೆ ಎಂದ’. “ನಾನೂ ಅಷ್ಟೇ’ ಎಂದಿತು ಪರ್ವತ. ಸಿಟ್ಟು ಬಂತು ಮಗನಿಗೆ.
“ನೀನೊಬ್ಬ ಹೆದರುಪುಕ್ಕಲ’ ಎಂದು ಬೈದ.
ಪ್ರತಿಯಾಗಿ “ನೀನೊಬ್ಬ ಹೆದರು ಪುಕ್ಕಲ’ ಎಂದು ಹೇಳಿತು.
ಅಪ್ಪನ ಕಡೆಗೆ ಮುಖ ಮಾಡಿ “ಇಲ್ಲಿ ಏನಾಗುತ್ತಿದೆ, ಅಪ್ಪ’ ಎಂದು ಕೇಳಿದ. ಅಪ್ಪನಿಗೆ ನಗು ಬಂತು. ಮುಗುಳ್ನಗುತ್ತಲೇ “ಮಗನೇ, ಗಮನವಿಟ್ಟು ಕೇಳು’ ಎಂದವನೇ “ನೀನೊಬ್ಬ ಚಾಂಪಿಯನ್’ ಎಂದು ಅರಚಿದ.
“ನೀನೊಬ್ಬ ಚಾಂಪಿಯನ್’ ಎಂದು ಪ್ರತಿಯಾಗಿ ಧ್ವನಿ ಕೇಳಿತು. ಮತ್ತಷ್ಟು ಆಶ್ವರ್ಯಕ್ಕೊಳಗಾದ ಹುಡುಗನಿಗೆ ಏನೂ ತಿಳಿಯದಾಯಿತು. ನಂತರ ಅಪ್ಪ ವಿವರಿಸಿದ.
“ಇದಕ್ಕೆ ಜನ ಪ್ರತಿಧ್ವನಿ ಎನ್ನುತ್ತಾರೆ. ಆದರೆ ನಿಜವಾಗಲೂ ಜೀವನವೆಂದರೆ ಇದೇ. ನೀನು ಕೊಟ್ಟಿದ್ದನ್ನು ಪ್ರತಿಯಾಗಿ ನಿನಗೇ ಇದು ವಾಪಸು ನೀಡುತ್ತದೆ. ನಮ್ಮ ಕ್ರಿಯೆಗಳ ಪ್ರತಿಬಿಂಬವೇ ಜೀವನ. ಜಗತ್ತಿನಿಂದ ಹೆಚ್ಚು ಪ್ರೀತಿ ಬಯಸುವುದಾದರೆ ನಮ್ಮ ಹೃದಯದಲ್ಲಿ ನಾವು ಹೆಚ್ಚು ಪ್ರೀತಿಯನ್ನು ಮೂಡಿಸಿಕೊಳ್ಳಬೇಕು. ಈ ಸಂಬಂಧ ಎಲ್ಲದಕ್ಕೂ, ಪ್ರತಿ ಸಂದರ್ಭಕ್ಕೂ ಅನ್ವಯವಾಗುತ್ತದೆ. ಜೀವನ ಆಕಸ್ಮಿಕವಲ್ಲ ; ಅದು ನಿನ್ನ ಪ್ರತಿಬಿಂಬ’.
(ಲೇಖಕನ ಹೆಸರು ತಿಳಿದಿಲ್ಲ)

ಮರಳು ಮತ್ತು ಕಲ್ಲು

ಬಿಸಿ ಬಿಸಿ ಮರಳಿನ ಮರಳುಗಾಡಿನಲ್ಲಿ ಇಬ್ಬರು ಗೆಳೆಯರು ನಡೆದು ಹೋಗುತ್ತಿದ್ದರು. ಬಹಳ ಆತ್ಮೀಯ ಗೆಳೆಯರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುತ್ತಿರಲಿಲ್ಲ. ಹೀಗೆ ಸಾಗುತ್ತಿದ್ದಾಗ ಯಾವುದೋ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಒಬ್ಬ ಮತ್ತೊಬ್ಬನ ಕೆನ್ನೆಗೆ ಫಟಾರನೆ ಬಾರಿಸಿದ.
ಇದರಿಂದ ಬಹಳ ದುಃಖಕ್ಕೊಳಗಾದವ ಏನೂ ಹೇಳಲಿಲ್ಲ. ಬಹಳ ಬೇಸರದಿಂದ ಸ್ವಲ್ಪ ದೂರ ನಡೆದು ಮರಳಿನಲ್ಲಿ ಹೀಗೆ ಬರೆದ “ಇಂದು ನನ್ನ ಆತ್ಮೀಯ ಸ್ನೇಹಿತ ಕೆನ್ನೆಗೆ ಹೊಡೆದ’.
ಪ್ರಯಾಣ ಮುಂದುವರಿಯಿತು. ಎಲ್ಲಿಯವರೆಗೆ ಎಂದರೆ ಓಯಸಿಸ್ ಸಿಗುವವರೆಗೆ. ಅಲ್ಲಿ ಅವರು ಸ್ನಾನ ಮಾಡಲು ನಿರ್ಧರಿಸಿದ್ದರು. ಇಬ್ಬರೂ ಸ್ನಾನಕ್ಕೆ ಸಿದ್ಧರಾದರು. ಪೆಟ್ಟು ತಿಂದವ ಗುಂಡಿಗೆ ಇಳಿಯುತ್ತಿದ್ದಂತೆ ಕೆಸರಿನೊಳಗೆ ಹೂತುಹೋದ. ಅಷ್ಟೇ ಅಲ್ಲ ; ಕ್ಷಣ ಕ್ಷಣಕ್ಕೂ ಕುಸಿಯಲಾರಂಭಿಸಿದ.
ಇದನ್ನು ಕಂಡವನೇ ಹೊಡೆದವ ಕುಸಿಯುತ್ತಿದ್ದವನನ್ನು ಮೇಲಕ್ಕೆತ್ತ ರಕ್ಷಿಸಿದ. ತಕ್ಷಣವೇ ಹತ್ತಿರದ ಕಲ್ಲೊಂದರ ಮೇಲೆ “ಇಂದು ನನ್ನ ಗೆಳೆಯ ರಕ್ಷಿಸಿದ’ ಎಂದು ಬರೆದ.
ಇದರಿಂದ ಹೊಡೆದ ಗೆಳೆಯನಿಗೆ ನಿಜಕ್ಕೂ ಅಚ್ಚರಿಯೆನಿಸಿತು. “ನಿನಗೆ ನಾನು ಹೊಡೆದೆ. ನಿನಗೆ ನೋವಾಯಿತು. ಮರಳಿನ ಮೇಲೆ ನಿನ್ನ ದುಃಖವನ್ನು ತೋಡಿಕೊಂಡೆ. ಈಗ ನಿನ್ನನ್ನು ರಕ್ಷಿಸಿದೆ ನಿಜ. ಅದಕ್ಕೆ ಕಲ್ಲಿನ ಮೇಲೆ ಬರೆದದ್ದಕ್ಕೆ ಏನರ್ಥ’ ಎಂದು ಪ್ರಶ್ನಿಸಿದ.
ಅದಕ್ಕೆ ಸಾವಧಾನದಿಂದ ಪೆಟ್ಟು ತಿಂದವ ಉತ್ತರಿಸಿದ -”ಯಾರಾದರೂ ನಮಗೆ ನೋಯಿಸಿದಾಗ ಅದನ್ನು ಮರಳಿನಲ್ಲೇ ಬರೆಯಬೇಕು. ಕ್ಷಮೆ ಎನ್ನುವ ಗಾಳಿ ಬೀಸಿ ಬಂದು ಅದನ್ನು ಅಳಿಸಿ ಹಾಕುತ್ತದೆ. ಅದೇ ಯಾರಾದರೂ ನಮಗೆ ಒಳ್ಳೆಯದನ್ನು ಮಾಡಿದರೆ ಅದನ್ನು ಕಲ್ಲಿನ ಮೇಲೆ ಕೆತ್ತಬೇಕು. ಎಂದೂ ಯಾವ ಗಾಳಿಗೂ ಅದು ಅಳಿಸಿ ಹೋಗಬಾರದು’.
(ಮೇಲಿನ ಮೂರು ನನ್ನ ಹಳೆಯ ಅನುವಾದಗಳು)

ಸುತ್ತಿಗೆ ಪೆಟ್ಟು

ಮನೆ ಮುಂದೆ ಹೊಸ ಟ್ರಕ್ ನಿಂತಿತ್ತು. ತನ್ನ ಹೊಸ ಟ್ರಕ್‌ನ ಸೊಬಗು ನೋಡಲು ಹೊರಗೆ ಬಂದ ಆತ ತಬ್ಬಿಬ್ಬಾದ.
ಮೂರು ವರ್ಷದ ಅವನ ಮಗ ಖುಷಿಯಿಂದ ಸುತ್ತಿಗೆ ಹಿಡಿದು ಟ್ರಕ್‌ನ ಮೇಲೆ ಸವಾರಿ ನಡೆಸಿದ್ದ. ಅವನ ಕೈಯಲ್ಲಿದ್ದ ಮೊಳೆಗಳೆಲ್ಲಾ ಟ್ರಕ್‌ಗೆ ಅಲಂಕಾರಗೊಳ್ಳುತ್ತಿದ್ದವು. ಕ್ರೋಧಕ್ಕೊಳಗಾದ ಆತ ಮಗನನ್ನು ದೂರಕ್ಕೆಳೆದ. ಸಿಟ್ಟು ತಡೆಯಲಾಗಲಿಲ್ಲ. ಅದೇ ಸುತ್ತಿಗೆಯಿಂದ ಎರಡೂ ಕೈಗಳನ್ನು ಕುಟ್ಟಿ ಬಿಟ್ಟ.
ಅಪ್ಪ ಸಹಜ ಸ್ಥಿತಿಗೆ ಮರಳಿದಾಗ ತಪ್ಪಿನ ಅರಿವಾಯಿತು. ರಕ್ತ ಸೋರುತ್ತಿದ್ದ ಮಗನ ಕೈ ಕಂಡು ಕಂಗಾಲಾದ. ಕೂಡಲೇ ಆಸ್ಪತ್ರೆಯತ್ತ ಮಗನೊಂದಿಗೆ ಧಾವಿಸಿದ. ಡಾಕ್ಟರ್ ಮೂಳೆಯನ್ನು ಸರಿಪಡಿಸಲು ಯತ್ನಿಸಿದರು. ಆದರೆ ಕಷ್ಟ. ಎರಡೂ ಕೈಗಳನ್ನು ಬ್ಯಾಂಡೇಜಿನಿಂದ ಕಟ್ಟಿದರು.
ಸ್ವಲ್ಪ ಹೊತ್ತಿನ ಮೇಲೆ ಮಗುವಿಗೆ ಎಚ್ಚರವಾಯಿತು. ಬ್ಯಾಂಡೇಜಿನಿಂದ ಬಿಗಿದ ತನ್ನ ಕೈಯನ್ನು ಕಂಡು ವ್ಯಥೆ ಪಟ್ಟ. ಬಗ್ಗಿಸಲಾರದ ಬೆರಳುಗಳು. ತೀರದ ನೋವು. ಎದುರಿದ್ದ ಅಪ್ಪನಿಗೆ ಕೈ ಮುಗಿದು “ಅಪ್ಪ, ನಿನ್ನ ಟ್ರಕ್‌ನ್ನು ಹಾಳು ಮಾಡಿದ್ದಕ್ಕೆ ಕ್ಷಮಿಸು’ ಎಂದ. ಅಪ್ಪನ ಕ್ಷಮಿಸಿದ್ದೇನೆ ಎಂಬಂತೆ ಮುಗುಳ್ನಕ್ಕ.
“ನನ್ನ ಬೆರಳುಗಳು ಮೊದಲಿನಿಂತೆಯೇ ಆಗುವವೇ ಅಪ್ಪಾ?’ ಎಂದು ಮಗು ಮುಗ್ಧತೆಯಿಂದಲೇ ಪ್ರಶ್ನಿಸಿದ. ಅಪ್ಪ ಮನೆಗೆ ಹೋದವನೇ ನೇಣು ಹಾಕಿಕೊಂಡ.
ಇಂಗ್ಲಿಷ್ ಕಥೆಯೊಂದರ ಅನುವಾದ