ತ್ರಿವರ್ಣ ಧ್ವಜ ಹಾರಿಸುವಾಗ ನನ್ನನ್ನು ನಾನೇ ನಂಬಲಿಲ್ಲ

ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705

ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ ಹವಾಮಾನ ನಿರೀಕ್ಷೆಯಲ್ಲೇ ಮೇ 18 ಕ್ಕೆ ಮೇಲಕ್ಕೆ ಹೊರಟೆ. ಅರ್ಧ ದಾರಿಗೆ ಹೋದೆ. ಗ್ಲೌಸ್ ಹಾಕಿಕೊಂಡಿದ್ದರೂ ತಣ್ಣಗೆ ಹೆಚ್ಚಾಗುತ್ತಿತ್ತು. ಮನಸ್ಸಲ್ಲೇಕೋ ಅಂಜಿಕೆ ಶುರುವಾಯಿತು. ಹೇಗೂ ಇರಲಿ ಎಂದು ವಾಪಸು ಬಂದವನು ಮತ್ತೆ ಹೊರಟದ್ದು 20 ರಂದೇ. ಕೆಲವರು ಸಮಿಟ್‌ಗೆ ಪ್ರಯತ್ನಿಸಿ ವಿಫಲರಾದರು. ನಾನು ಹೋಗದಿದ್ದುದೇ ಸೂಕ್ತ ಎನಿಸಿ ಸುಮ್ಮನೆ ಕುಳಿತುಕೊಂಡೆ.

ರಾತ್ರಿ ಮಲಗುವೆಂದದರೂ ಯಮಹಿಂಸೆಯೇ. ಸಾಮಾನ್ಯವಾಗಿ ಸಮಿಟ್ ಮಾಡಬೇಕೆಂದರೆ -10 ಉಷ್ಣಾಂಶ ಇದ್ದರೆ ಪರ ವಾಗಿಲ್ಲ. ಒಂದುವೇಳೆ -15 ಇದ್ದರೂ ಸುಧಾರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿದ್ದರೆ ಸಾಧ್ಯವಿಲ್ಲ. ಆರೋಗ್ಯ ಕುಸಿಯುತ್ತದೆ. ಗಾಳಿಯೂ 100 ಕ್ಕಿಂತ ಹೆಚ್ಚು ವೇಗದಲ್ಲಿದ್ದರೆ ಅತ್ಯಂತ ಕಷ್ಟ. ಆ ಅನುಕೂಲಕರ ಹವಾಮಾನಕ್ಕೆ ಕಾಯುವುದೇ ದೊಡ್ಡ ಪ್ರಯಾಸ.

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್


ಮೇ 20 ಕ್ಕೆ ಹೊರಟು 70 ಡಿಗ್ರಿ ಕೋನದಲ್ಲಿ ನಾರ್ತ್‌ಕೋಲ್‌ಗೆ ಹೋದೆ. ಅಲ್ಲಿಂದ ಕ್ಯಾಂಪ್ 2 ಕ್ಕೆ ಹೋಗುವಾಗ ನನಗೆ ದಾರಿ ತಪ್ಪಿತು. ಕಡಿದಾದ ದಾರಿಯಲ್ಲಿ ಹಿಮ ಸುರಿಯುತ್ತಿತ್ತು. ಆಮ್ಲಜನಕ ಕೊರತೆ ಬಾಧಿಸತೊಡಗಿತು. ವಾಸ್ತವವಾಗಿ ನಾವು ಪರ್ವತ ಹತ್ತುವಾಗ ದಾರಿ ತೋರಿಸುವುದು ಹೆಜ್ಜೆಗಳೇ. ಹೆಜ್ಜೆ ಇರುವಲ್ಲಿಯೇ ದಾರಿ. ಮಂಜು ಸುರಿಯುತ್ತಲೇ ಇದ್ದರೆ ಯಾವ ಹೆಜ್ಜೆ ಗುರುತುಗಳೂ ಇರುವುದಿಲ್ಲ. ನಡೆದುಹೋದ ಮರುಕ್ಷಣವೇ ಮಂಜಿನಿಂದ ಅಳಿಸಿಹೋಗುತ್ತದೆ. ನಾನು ಊಹಿಸಿಕೊಂಡು ಮುನ್ನಡೆದೆ. ಅದು ಬೇರೆಲ್ಲೋ ಹೋಗುತ್ತಿದ್ದೆ.

ಶೆರ್ಪಾನಿಗೂ ಗೊತ್ತಾಗಲಿಲ್ಲ. ಒಂದಷ್ಟು ದೂರ ಹೋದಮೇಲೆ ಅನುಮಾನವಾಯಿತು. ಕೇಳುವುದಾದರೂ ಯಾರಿಗೇ ? ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ನ್ಯೂಜಿಲೆಂಡ್‌ನ ಇಬ್ಬರು ಆರೋಹಿಗಳು ಹಿಂಬಾಲಿಸಿಕೊಂಡು ಬಂದು “ರಸ್ತೆ ಇದಲ್ಲ, ಈ ಬದಿಗೆ ಬನ್ನಿ’ ಎಂದು ಕರೆದೊಯ್ದರು. ಅವರು ಬೈನಾಕ್ಯುಲರ್ ಸಹಾಯದಿಂದ ನಾನು ದಾರಿ ತಪ್ಪಿರುವುದನ್ನು ಖಚಿತಪಡಿಸಿ ಕೊಂಡರು.

ಆಕಸ್ಮಾತ್ ಅವರ ಸಹಾಯ ಸಿಗದಿದ್ದರೆ ನಾನು ಮೌಂಟ್ ಎವರೆಸ್ಟ್‌ನ ಯಾವ ತುದಿಗೆ ಹೋಗುತ್ತಿದ್ದೇನೋ ? ಸರಿದಾರಿಗೆ ಬಂದವನು ಮತ್ತೆ ಮೇಲೆ ಹೋಗಲಿಲ್ಲ. ನೇರವಾಗಿ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದೆ. ಮೇ 30 ರವರೆಗೆ ಅಲ್ಲೇ ಠಿಕಾಣಿ. ಜೂನ್ ಮೂರು ನನ್ನ ಗುರಿಯಿರಿಸಿಕೊಂಡ ದಿನ. ಆದರೆ ಜಂಘಾಬಲವನ್ನೇ ಕೊಲ್ಲುವ ಸುದ್ದಿ ಬರಸಿಡಿಲಿನಂತೆ ಬಡಿಯಿತು.

ಮೇ 30 ರಂದು ಸಮಿಟ್ ಹೋದ ಚೈತನ್ಯ ಕಣ್ಮರೆಯಾಗಿದ್ದರು. ತುದಿಯವರೆಗೆ ಹೋದಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಸಮಿಟ್ ಹೊರಟ ಸಂದರ್ಭದಲ್ಲಿ ಸ್ವಲ್ಪ ಕೆಮ್ಮವೂ ಇತ್ತು. ಅದೇನಾದರೂ ಆಕ್ಸಿಜನ್ ಸ್ವೀಕರಿಸುವಾಗ ತೊಂದರೆ ಕೊಟ್ಟು ಬಿದ್ದರೆ ? ಗಾಳಿ ಹೊಡೆದುಕೊಂಡು ಹೋಯಿತೇ ? ಗೊತ್ತಿಲ್ಲ. ಅವರು ಶೆರ್ಪಾನನ್ನೂ ಕರೆದೊಯ್ದಿರಲಿಲ್ಲ. ಒಂದುವೇಳೆ ಶೆರ್ಪಾನನ್ನು ಕರೆದೊಯ್ದಿದ್ದರೆ ಅವನು ಸಹಾಯ ಮಾಡುತ್ತಿದ್ದ ಎಂಬ ನಂಬಿಕೆ ಕ್ಯಾಂಪ್‌ನಲ್ಲಿದ್ದ ಎಲ್ಲರದ್ದಾಗಿತ್ತು.

ನನಗೆ ಇದ್ದ ಎಲ್ಲ ಧೈರ್ಯ ಕುಸಿಯಿತು. ನನಗಾಗಿ ಕಾಯುತ್ತಿರುವ ಸಂಸಾರ ಎಲ್ಲವೂ ಕಣ್ಮುಂದೆ ಬಂತು. ನೇಪಾಳಕ್ಕೆ ಹೊರಡಲು ಅನುವಾದೆ. ಶೆರ್ಪಾನಿಗೆ ಗಂಟು ಕಟ್ಟಲು ಸಹಕರಿಸುವಂತೆ ಕೋರಿದೆ. ಆಗ ವೆಚ್ಚ ಸರಿದೂಗಿಸಲು ಗೆಳೆಯರು ಪಟ್ಟ ಕಷ್ಟವೂ ನೆನಪಾಯಿತು. ಅದರೊಂದಿಗೆ ನಾನೂ ವಾಪಸ್ಸಾದರೆ ಇನ್ನು ಮುಂದೆ ಎಲ್ಲ ಕನ್ನಡಿಗರೂ “ಪರ್ವತಾರೋಹಣ ಜೀವಕ್ಕೆ ಅಪಾಯ’ ಎಂದು ವ್ಯಾಖ್ಯಾನಿಸಿ ದೂರ ಉಳಿದಾರೆಂದೆನಿಸಿತು. ಸರಿ ಮತ್ತೆ ಧೈರ್ಯ ತಂದುಕೊಂಡೆ. ರಾತ್ರಿಯೆಲ್ಲಾ ಅದೇ ಕನಸು, ಧ್ಯಾನಿಸಿದ್ದಾಳೆ.

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ


ಮಗ ಸುಘೋಷ್ “ಅಮ್ಮಾ, ಅಪ್ಪಾ ಬರುವುದು ಯಾವಾಗ ? ’ ಎಂದು ಕೇಳುತ್ತಿದ್ದನಂತೆ. ಮಗಳು ಸಾಗರಿಕಾ (ಸಾಗರ್‌ಮಾತಾ ನೆನಪಿಗೆ ಇಟ್ಟದ್ದು) ನನ್ನನ್ನು ಬಿಟ್ಟು ಇರುವವಳಲ್ಲ. ಅವಳನ್ನೂ ಬಿಟ್ಟು ಎರಡೂವರೆ ತಿಂಗಳು ಇರಬೇಕಾಯಿತು.

ಅದೂ ವಾಪಸು ಹೋದೆನೆಂಬ ಗ್ಯಾರಂಟಿಯಿಲ್ಲದೇ. ನನಗಿಂತಲೂ ನನ್ನನ್ನು ಅವಲಂಬಿಸಿದವರಿಗೆ ಹಾಗೆ ಎಣಿಸಿಕೊಂಡು ಬದುಕುವುದು ಕಷ್ಟ. ಬೇಸ್‌ಕ್ಯಾಂಪ್‌ನವರೆಗೆ ಹೋಗುವವರೆಗೆ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ನಂತರ ಇಲ್ಲ. ಚೈತನ್ಯ ಕಣ್ಮರೆಯಾಗಿ ದೊಡ್ಡ ಸುದ್ದಿಯಾದಾಗ ಎಲ್ಲರೂ ಗಲಿಬಿಲಿಯಾಗಿದ್ದಾರೆ.

ಕೆಲವರು “ನಿಮ್ಮ ಪತಿಯೂ ಅವರೊಂದಿಗಿದ್ದರಂತೆ’ ಎಂದು ಸುದ್ದಿ ಹಬ್ಬಿಸಿದಾಗ ನನ್ನ ಸಂಸಾರಕ್ಕೆ ದಿಗಿಲಾಗಿದೆ. ಸುಮಂಗಲಾ ದೇವರ ಕೋಣೆ ಬಿಟ್ಟು ಬರುವ ಪರಿಸ್ಥಿತಿಯಿರಲಿಲ್ಲ. ನಂತರ ಸತ್ಯ ತಿಳಿದಾಗ ಕೊಂಚ ಹಗುರವಾಯಿತು. ವಾಸ್ತವವಾಗಿ ತಿಳಿಯಾದದ್ದು ಜೂ. ೩ ರಂದು ಗುರಿ ಮುಟ್ಟಿ, ಜೂ. 8 ರಂದು ನೇಪಾಳಕ್ಕೆ ವಾಪಸು ಬಂದು ದೂರವಾಣಿ ಮಾಡಿದಾಗಲೇ ನಿರಾಳ (ಇದೆಲ್ಲಾ ಬೆಂಗಳೂರಿಗೆ ಬಂದಾಗ ಹೆಂಡತಿ ವಿವರಿಸಿದಳು).
pn ganes-3
8,300 ಮೀಟರ್‌ನವರೆಗೂ ನಾವು ಸಾಮಾನ್ಯವಾಗಿ ಬೆಳಗ್ಗೆಯೇ ಪ್ರಯಾಣಿಸುತ್ತೇವೆ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಪ್ರಯಾಣಿಸ ಬಹುದು. ಆದರೆ ತುದಿ ಮುಟ್ಟುವ (ಸಮಿಟ್) ಕೆಲಸಕ್ಕೆ ಮಾತ್ರ ಸಿದ್ಧವಾಗುವುದು ರಾತ್ರಿಯೇ. ಕಾರಣವಿಷ್ಟೇ ರಾತ್ರಿ 11 ರ ಸುಮಾರಿ ಗೆ ಹೊರಟರೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ 148 ಮೀಟರ್ ಕ್ರಮಿಸಿ ತುದಿ ಮುಟ್ಟಬಹುದು. ಬೆಳಗ್ಗೆ 10 ರ ನಂತರ ಕ್ಷಣ ಕ್ಷಣ ಕ್ಕೂ ಹವಾಮಾನ ಬದಲಾಗಬಹುದು. ಆದರೆ ಒಂಬತ್ತರಷ್ಟೊತ್ತಿಗೆ ಸಾಮಾನ್ಯವಾಗಿ ಮೋಡಗಳ ರಾಶಿ ಇರುವುದಿಲ್ಲ. ಒಳ್ಳೆ ಬೆಳಕು ಇರುತ್ತದೆ. ಹಾಗಾಗಿ ರಾತ್ರಿ ಪ್ರಯಾಣವನ್ನು ನಾವು ಯೋಜಿಸಿಕೊಳ್ಳುತ್ತೇವೆ.

ಜೂ. 1 ಕ್ಕೆ ಹೊರಟವ ಎಲ್ಲೂ ವಾಪಸು ಬರಲಿಲ್ಲ. ನಾರ್ತ್‌ಕೋಲ್‌ಗೆ ಹೋದವನೇ ಆರಾಮ ತೆಗೆದುಕೊಂಡು ಕ್ಯಾಂಪ್ 2 ಕ್ಕೆ ಹೋದೆ. ಅಲ್ಲಿಂದ ಜೂ. 2 ರ ಸಂಜೆ 4.30 ರಷ್ಟೊತ್ತಿಗೆ 8,300 ಅಡಿಯಲ್ಲಿರುವ ಸಮಿಟ್ ಕ್ಯಾಂಪ್‌ಗೆ ಬಂದೆ. ರಾತ್ರಿ 11 ವರೆಗೆ ಮಲಗಿಕೊಂಡೆ. ನಂತರ ಹೆಡ್‌ಟಾರ್ಚ್ ಸಹಾಯದಿಂದ 548 ಮೀಟರ್ ಕ್ರಮಿಸಲು ನಿರ್ಧರಿಸಿದೆ. ನನ್ನಲ್ಲಿ ಮತ್ತೊಂದು ಸಮಿಟ್ ಆಕ್ಸಿಜನ್ ಟ್ಯಾಂಕ್ ಇರಲಿಲ್ಲ. ಸಮಿಟ್ ಟ್ಯಾಂಕ್‌ಗೆ ದುಬಾರಿ. ಆದ್ದರಿಂದ ಶೆರ್ಫಾನನ್ನು ಅಲ್ಲಿಯೇ ಇರಲು ಹೇಳಿದೆ. ಅಷ್ಟರಲ್ಲಾಗಲೇ ಪುನರೂ ಕೆಲ ವಸ್ತುಗಳನ್ನು ವಾಪಸು ತೆಗೆದುಕೊಂಡು ಕೆಳಗಿಳಿದ್ದಿದ್ದ. ಆದರೆ ಅಂಗ್ರಿತಾ ಸ್ವಲ್ಪ ದೂರ ಬಂದು ನಿಂತುಕೊಂಡ. ರಸೆಲ್‌ಪ್ರೈಸ್ ಮೇಲೆ ಹೋಗುತ್ತಿದ್ದರು. ಇದನ್ನೇ ಬಳಸಿಕೊಂಡು ರಾತ್ರಿ 11 ಕ್ಕೆ ಮೇಲೆ ಹತ್ತಲು ಶುರುಮಾಡಿದವನಿಗೆ ಬೆಳಗ್ಗೆ ಹತ್ತರವರೆಗೆ ನಡೆಯಬೇಕಾಯಿತು.

ಭಾರತೀಯ ಕಾಲಮಾನ ಜೂ. 3 ರ ಬೆಳಗ್ಗೆ ಸುಮಾರು 10 ರಷ್ಟೊತ್ತಿಗೆ ನನ್ನ ಮೊದಲ ಹೆಜ್ಜೆಯಿದ್ದದ್ದು ಪ್ರಪಂಚದ ಅತ್ಯಂತ ಎತ್ತರದ ಪ್ರದೇಶದ ಮೇಲೆ (ಚೀನಾ ಕಾಲಮಾನ ಮಧ್ಯಾಹ್ನ 12)ಮನಸ್ಸಿನಲ್ಲಿ ಖುಷಿ ಉಕ್ಕಿ ಹರಿದಿತ್ತು. ಕೃತಕ ಆಕ್ಸಿಜನ್‌ನಿಂದ ಉಸಿರಾಡುತ್ತಿದ್ದೆ. ಕಣ್ಣನ್ನು ಗಾಗಲ್ಸ್ ಸುತ್ತುವರಿದ್ದಿದ್ದವು. ಒಮ್ಮೆ ಕೂಗೋಣ ಎಂದರೆ ಕೂಗಲಾಗದ ಸ್ಥಿತಿ. “ಅಭಿನಂದನೆ’ ಹೇಳಲಿಕ್ಕೆ ಯಾರೂ ಇರಲಿಲ್ಲ. ರಾಷ್ಟ್ರ ಧ್ವಜ, ಕನ್ನಡ ಧ್ವಜವನ್ನೆಲ್ಲಾ ಹಿಡಿದು ನಿಂತೆ.

ರಸೆಲ್ ಪ್ರೈಸ್ ಸ್ನೇಹಿತರು ಫೋಟೋ ಕ್ಲಿಕ್ಕಿಸಿದರು. ಆಗ ಉಕ್ಕಿ ಬಂದ ಸಂತೋಷವನ್ನೂ ಹೇಗೂ ವರ್ಣಿಸಲಾಗದು ; ಅನುಭವಿಸಿಯೇ ತೀರಬೇಕು. ಸುತ್ತಲೂ ಕಂಡ ಪರ್ವತಗಳ ಸಮುದ್ರದ ಮಧ್ಯೆ ದೊಡ್ಡ ಅಲೆಯ ಮೇಲೆ ನಾನು ನಿಂತಂತೆ ಭಾಸವಾಯಿತು. ಒಂದೆರಡು ಕ್ಷಣ ಕಣ್ಣುಮುಚ್ಚಿಕೊಂಡು ಆನಂದಿಸಿದೆ. ಸುಮಾರು ಹನ್ನೆರಡು ನಿಮಿಷ ಇದ್ದದ್ದೇ ಕಷ್ಟ. ಕೆಳಗಿಳಿಯುತ್ತಾ ಬಂದೆ. ಒಂದಷ್ಟು ಕೆಳಗೆ ಬಂದ ಮೇಲೆ ಅಂಗ್ರಿತಾ ಸಿಕ್ಕ. ಗುರಿ ಮುಟ್ಟಿದ ತೃಪ್ತಿಯಲ್ಲಿ ಇಳಿದು ಬಂದೆ.

ಎಲ್ಲೋ ಓದಿದ ಸಾಲುಗಳು ನೆನಪಾಗುತ್ತಿದ್ದವು. “ಮನುಷ್ಯ ನಿಸರ್ಗವನ್ನು ಗೆಲ್ಲುತ್ತಾನೆ. ಆದರೆ ಗೆದ್ದು ನಿಲ್ಲುವುದಿಲ್ಲ, ಇಳಿದು ಬರುತ್ತಾನೆ, ಮತ್ತೆ ನಿಸರ್ಗಕ್ಕೆ ಶರಣಾಗಿ ಬದುಕುತ್ತಾನೆ’. ಆ ಸಾಲುಗಳು ಆಪ್ತವೆನಿಸಿದವು. ಸತ್ಯದರ್ಶನ !

ನಿಯಮದ ಪ್ರಕಾರ ಬೇಸ್‌ಕ್ಯಾಂಪ್‌ನಲ್ಲಿರುವ ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘಕ್ಕೆ ಯಶಸ್ವಿಯಾಗಿ ಗುರಿ ಮುಟ್ಟಿ ವಾಪಸು ಬಂದು ಪ್ರಮಾಣ ಪತ್ರ ಪಡೆಯಬೇಕು ಎನ್ನುತ್ತಾರೆ. ಅದಿರಲಿ. ಎವರೆಸ್ಟ್ ಏರಿದ ಮೊದಲ ಕನ್ನಡಿಗ ಯಾರೆಂಬ ಚರ್ಚೆ ಆರಂಭವಾಗಿದೆ. ಆದರೆ ನನಗೆ ಹಾಗೆನ್ನಿಸುವುದಿಲ್ಲ. ಚರ್ಚೆಯಾಗುವ ಸಂಗತಿಯೂ ಅಲ್ಲ. ಕೀರ್ತಿಯೆಲ್ಲಾ ಚೈತನ್ಯರಿಗೇ ಇರಲಿ ; ನಮಗೆ ಮತ್ತೆ ಪರ್ವತ ಏರುವ “ಚೈತನ್ಯ’ವಿರಲಿ, ಪ್ರತಿ ಕನ್ನಡಿಗನಲ್ಲೂ ಆ “ಚೈತನ್ಯ’ ತುಂಬಲಿ, ಅಷ್ಟೇ ಸಾಕು, ಅಲ್ಲಿಗೆ ನಾನು ಧನ್ಯ !

ಗುರಿ ಮುಟ್ಟಲು ಎರಡು ದಿನ ಕಾಯಬೇಕು !

ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.

ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಷೇಶನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಉಷಾರಾಗಿ ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.
ರಾಂಬುಕ್ ಗ್ಲೇಷಿಯರ್
ನಾವು ತಿನ್ನುವ ಆಹಾರವೆಂದರೆ ಪ್ರೋಟೀನ್ ಪುಡಿ ಹಾಗೂ ಕೆಲವು ಸಿದ್ಧ ತಿನಿಸುಗಳು. ಪರ್ವತ ಏರುವವರಿಗೆ ಕೆಲವು ಕಂಪನಿಗಳು ಹೈ ಆಲ್ಟಿಟ್ಯೂಡ್ ಆಹಾರವನ್ನು ಒದಗಿಸುತ್ತಾರೆ. ಅದು ಪ್ರೋಟೀನ್‌ಯುಕ್ತ ಪುಡಿ. ಬಿಸಿನೀರಿಗೆ ಮಿಶ್ರಣ ಮಾಡಿಕೊಂಡು ಬದುಕಬೇಕು. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ ಕೊಳವಿದೆ. ಅದು ಸ್ಪಟಿಕದಂಥ ಶುಭ್ರ ನೀರು.

ಬಹಳ ತಮಾಷೆಯ ಸಂಗತಿಯೆಂದರೆ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ನ ಬಲಕ್ಕೆ ಈ ಕೊಳ ಸಿಗುತ್ತದೆ. ಇದರ ಕೆಳಗೆ, ಸುತ್ತಮುತ್ತ ಮಂಜುಗೆಡ್ಡೆ. ಆದರೆ ಒಂದಷ್ಟು ಪ್ರದೇಶ ಮಾತ್ರ ನೀರು. ಇದು ಏಕೆ ಮತ್ತು ಹೇಗೆ ? ಎನ್ನುವುದು ಕುತೂಹಲದಾಯಕವೇ. ಕಾರಣ ವಿವರಿಸಲು ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ನಮ್ಮ ಹಾಗೆ ಬಂದು ಹೋಗುವವರೇ.

ಮೇ 5 ರವರೆಗೆ ಕ್ಯಾಂಪ್ ಒಂದರಲ್ಲಿದ್ದೆ. ಪರವಾಗಿಲ್ಲ ಎನ್ನುವಂತಿತ್ತು ಹವಾಮಾನ. ಐದರ ಸಂಜೆ ಮತ್ತೆ ಚಳಿ ಹೆಚ್ಚತೊಡಗಿತು. ಸೀದಾ ವಾಪಸ್ ಅಡ್ವಾನ್ಸಡ್ ಕ್ಯಾಂಪ್‌ಗೆ ಬಂದೆ. ಮೇ 8 ರವರೆಗೆ ಉಳಿದು ಮತ್ತೆ ನಾರ್ತ್‌ಕೋಲ್‌ಗೆ ಹೊರಟೆ. ಮೇ 13 ರಂದು ತುದಿ ಮುಟ್ಟಬೇಕೆಂಬ ಗುರಿ ಇತ್ತು. ಆದರೆ ನಾರ್ತ್‌ಕೋಲ್‌ನಿಂದ 400 ಮೀಟರ್ ಎತ್ತರದಲ್ಲಿ ಕ್ಯಾಂಪ್ 2 ನಲ್ಲಿ ಶಿಬಿರ ನಿರ್ಮಿಸಲಷ್ಟೇ ಸಾಧ್ಯವಾಯಿತು. ಗುರಿ ಮುಟ್ಟಲು ಆಗಲಿಲ್ಲ, ಜೂ. 3 ರವರೆಗೆ ಕಾಯಬೇಕಾಯಿತು !

ಕ್ಯಾಂಪ್ 2 ರಲ್ಲಿ ಇರುವುದು ಅಪಾಯವೆನಿಸಿದರೂ ಹವಾಮಾನಕ್ಕೆ ಹೊಂದಿಕೊಳ್ಳಲು ಧೈರ್ಯ ಮಾಡಿ ಉಳಿದುಕೊಂಡೆ. ಹಿಮಪಾತ ಸುರಿಯುತ್ತಿತ್ತು. ಮೇ 9 ರ ಬೆಳಗ್ಗೆ ಕ್ಯಾಂಪ್ 2 ನಿಂದ ಸ್ವಲ್ಪ ದೂರ ನಡೆದೆ. ಆದರೆ ಬೆಳಗ್ಗೆ ಬಿಸಿಲಧಗೆಯೂ ಜೋರಿತ್ತು. ಹೇಗೋ ಸಾವರಿಸಿಕೊಂಡು ಮೇ 10 ಕ್ಕೆ ನಾರ್ತ್‌ಕೋಲ್‌ಗೆ ವಾಪಸ್ಸಾಗುವುದು ಕ್ಷೇಮವೆನಿಸಿ ಹಾಗೇ ಮಾಡಿದೆ. ನನ್ನ ದುರಾದೃಷ್ಟ. ಅಲ್ಲಿ ಇನ್ನೂ ಜೋರಾಗಿತ್ತು ಗಾಳಿ. ಗೆಳೆಯನೊಬ್ಬನ ಟೆಂಟ್ ಕಿತ್ತು ರಂಪವಾಗಿತ್ತು.

ವಾಪಸು ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದಾಗ ಸಮಾಧಾನವಾಯಿತು. ಮೇ 11 ಕ್ಕೆ ಪ್ರಯತ್ನಿಸೋಣ ಎಂದುಕೊಂಡೆ. ಆಗಲಿಲ್ಲ. ಶೆರ್ಪಾನೂ ಬೇಡ ಎಂದ. ಗಾಳಿ ನಮಗೆ ಸಹಕರಿಸುತ್ತಿರಲಿಲ್ಲ. ಹಾಗಾಗಿ ಮೇ 13 ರ ಗುರಿ ವಿಫಲವಾಯಿತು. ಅಲ್ಲೇ ಇದ್ದ ಭಾರತೀಯ ವಾಯುಸೇನೆಯ ಗೆಳೆಯರು 21, 22 ರಂದು ಹವಾಮಾನ ಚೆನ್ನಾಗಿರಬಹುದು ಎಂದರು. ಸದಾ ಅಲ್ಲೇ ಸುತ್ತುವ ರಸೆಲ್‌ಪ್ರೈಸ್ ಸಹ ಹೌದು ಎಂದು ಸಲಹೆ ನೀಡಿದರು.

ಇಲ್ಲಿ ನೆನಪಿಸಿಕೊಳ್ಳಬೇಕು. ವಾಯುಸೇನೆ ತಂಡದೊಂದಿಗೆ ಕಳೆದದ್ದು ಅತ್ಯಂತ ಖುಷಿಯ ಹೊತ್ತು. ಚೈತನ್ಯ, ಸ್ಕ್ರಾಡ್ರರ್ ಲೀಡರ್ ಬಸವರಾಜ್, ಕಾರ್ತಿಕ್, ಡಾ. ಹೇಮಂತ್ ಮತ್ತಿತರ ಜತೆಗೆ ಹರ್ಷದಿಂದ ಇದ್ದೆವು. ಅಡ್ವಾನ್ಸಡ್ ಕ್ಯಾಂಪ್‌ನಲ್ಲಿ ಮೊದಲು ತಂಗಿದ್ದಾಗ ಇಂಟರ್‌ಮೀಡಿಯೆಟ್ ಕ್ಯಾಂಪ್‌ನಿಂದ ಬರುವವರೆಗೆ “ನೀರಿನ’ ಸೇವೆ ಮಾಡಿದ್ದೆ. ಸುಮಾರು ಹನ್ನೆರಡು ಕಿ. ಮೀ ನಡೆದು ಬರುವಾಗ ತಂದ ನೀರೆಲ್ಲಾ ಖಾಲಿಯಾಗಿರುತ್ತೆ. ತ್ರಾಣ ಕಡಿಮೆಯಾಗಿರುತ್ತೆ. ಆಗ ನೀರು ನಿರೀಕ್ಷಿಸುವುದು ಸಾಮಾನ್ಯ. ನಾನು ಬಿಸಿನೀರು ಕಾಯಿಸಿ ಕೊಡುತ್ತಿದ್ದೆ. ಅದನ್ನು ಈಗ ಎಲ್ಲರೂ ನೆನೆಸಿಕೊಂಡರು.

ನಾರ್ತ್‌ಕೋಲ್‌ಗೆ ಹೋಗುವಾಗ ಬಲಕ್ಕೆ ಸಿಗುವ ರಾಂಬುಕ್ ಗ್ಲೇಷಿಯರ್ ನೋಡಿದರೆ ಕಣ್ಣು ತುಂಬಿ ಹೋಗುತ್ತದೆ. ಸಪಾಟಾದ ಮೈದಾನದಂಥ ನೀರ್ಗಲ್ಲು. ಹತ್ತು ಕ್ರಿಕೆಟ್ ಸ್ಟೇಡಿಯನಷ್ಟು ದೊಡ್ಡದು. ಅಲ್ಲಿ ಕುಳಿತರೆ ಆ ನೀರವತೆಯಲ್ಲಿ ಕೆಳಗೆಲ್ಲೋ ಭೂಮಿಯ ಶಾಖಕ್ಕೆ ಮಂಜು ಕರಗಿ ನೀರಾಗಿ ಹರಿಯುವುದನ್ನು ಕೇಳಬಹುದು. ಎಷ್ಟು ಸ್ಪಷ್ಟವಾಗಿ ಜುಳು ಜುಳು ಶಬ್ದ ಕೇಳುತ್ತದೆಯೆಂದರೆ ನದಿಯ ತೀರದಲ್ಲಿದ್ದ ಹಾಗೆ.

ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ

ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ


ಒಂದು ಸಂಗತಿ ಮರೆತಿದ್ದೆ. ಬೇಸ್‌ಕ್ಯಾಂಪ್ (5, 200 ಮೀಟರ್)ನಿಂದ 8 ಕಿ. ಮೀ ದೂರದಲ್ಲಿ ಟಿಬೆಟ್‌ನ ಅತ್ಯಂತ ಹಳೆಯ ಬೌದ್ಧ ಸ್ತೂಪವಿದೆ. ರಾಂಬುಕ್ ಮೊನೆಸ್ಟ್ರಿ ಎನ್ನುತ್ತಾರೆ. ಇಲ್ಲಿ ಬೌದ್ಧಗುರು ದಲಾಯಿಲಾಮಾ ಬರುತ್ತಾರೆ. ಪೀಠ ಬದಲಿಸುವುದೂ ಇಲ್ಲಿಯೇ ಎನ್ನಲಾಗುತ್ತದೆ. ಪರ್ವತಾರೋಹಿಗಳು ಇಲ್ಲಿ ಬಂದು ಆಶೀರ್ವಾದ ಪಡೆಯಬೇಕು. ಗುಹೆಗಳಲ್ಲಿ ಬೌದ್ದ ಸನ್ಯಾಸಿಗಳಿದ್ದಾರೆ. ಈ ಗುಹೆಗಳೊಳಗೆ ಒಂಚೂರು ತಣ್ಣಗಿಲ್ಲ. ಇದೊಂದು ವಿಶೇಷ ಸಂಗತಿಯೆಂದು ಮಧ್ಯದಲ್ಲಿ ಹೇಳಿದೆ.

ಹಿಮ ಪ್ರವಾಹದ ಎದುರು ಆತ್ಮವಿಶ್ವಾಸದ ಸವಾಲು

ಹಗ್ಗ ನಮ್ಮ ಹಿಡಿತಕ್ಕೆ. ಜತೆಗೆ ಹಿಮ ಪ್ರವಾಹ (ಅವಲಾಂಚ್)ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವಂಥ ಸಾಧನ. ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು. ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ.

ಹಿಮಪಾತ

ಹಿಮಪಾತ


ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮ ಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.

ನಮಗೆ ಸಿಕ್ಕ ಮಹಿತಿಯಂತೆ ಉತ್ತರ ಅಮೆರಿಕಾದ ಪರ್ವತ ಪ್ರದೇಶದಲ್ಲಿ ಒಮ್ಮೆ ಉರುಳಿದ ಅವಲಾಂಚ್ ಎಷ್ಟು ಗಾತ್ರದೆಂದರೆ 3 ಲಕ್ಷ ಕ್ಯೂಬಿಕ್ ಯಾರ್ಡ್‌ನಷ್ಟು ಮಂಜು ಕುಸಿಯಿತು. ಅಂದರೆ ೨೦ ಪುಟ್‌ಬಾಲ್ ಮೈದಾನದಷ್ಟು ಅಗಲದ ಮತ್ತು 10 ಅಡಿ ಆಳದ ಗುಂಡಿಗೆ ಬಿದ್ದ ಮಂಜು ತುಂಬಬಹುದು. ಅಂಥದ್ದೊಂದು ಅವಲಾಂಚ್‌ಗೆ ನಾವು ಸಿಕ್ಕರೆ ದೇವರೇ ಗತಿ.

ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು ?
ಕ್ಯಾಂಪ್ ಒಂದಕ್ಕೆ ಅಥವಾ ನಾರ್ತ್‌ಕೋಲ್‌ಗೆ ತಲುಪಿದ್ದು ಮೇ 3 ರಂದು. ಪರ್ವತ ಹತ್ತುವುದೆಂದರೆ ನೇರವಾಗಿ ಹತ್ತುತ್ತ ಲೇ ಇರುವುದಲ್ಲ. ಒಂದೊಂದು ಶಿಬಿರದಲ್ಲಿ ಒಂದಷ್ಟು ದಿನ ಕಳೆದುಕೊಂಡು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಪರ್ವತ ಏರಬೇಕು. ಅದಕ್ಕೇ ನಮಗೆ ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ.

ಎವರೆಸ್ಟ್ ನ ಉತ್ತರ ಬದಿ

ಎವರೆಸ್ಟ್ ನ ಉತ್ತರ ಬದಿ


ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು. ಅದಕ್ಕೇ ಮೊದಲೇ ಹೇಳಿದ್ದೇನೆ, ತಾಳ್ಮೆ ಬೇಕು. ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು.

ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.

ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.

7,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದೆ. (ಸಶೇಷ)

ಅವರ ಹೆಸರು ಪುನರೂ…ಅಂಗ್ರಿತಾ

ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ.

ಕೊರೆಯುವಿಕೆ ಎಂದರೆ ಗ್ಲೌಸ್ ಬಿಚ್ಚಿದರೆ ಆ ಕ್ಷಣದಲ್ಲೇ ನಮ್ಮ ರಕ್ತ ಹೆಪ್ಪುಗಟ್ಟಬಹುದು. ಕಾಲುಗಳೆಲ್ಲಾ ಮರಗಟ್ಟಿ ಹೋಗುತ್ತವೆ. ಮೂಗು, ಕೆನ್ನೆ ಎಲ್ಲವೂ ಸ್ಪರ್ಶ ಅನುಭವವನ್ನೇ ಕಳೆದುಕೊಳ್ಳುತ್ತವೆ. ಇದು ರೋಚಕವಲ್ಲವೇ ? ಹುಲಿ, ಸಿಂಹ, ಆನೆಗಳಿಂದ ತಪ್ಪಿಸಿಕೊಂಡರೆ ಮಾತ್ರ ರೋಚಕವೇ ಎನಿಸುವುದೂ ಉಂಟು. ನಾನು ಸುಮಾರು ೫೭ ದಿನ ಹೀಗೆ ಕಳೆದಿದ್ದೇನೆ.

ಹೈ ಅಲ್ಟಿಟ್ಯೂಡ್ ಪ್ರದೇಶಕ್ಕೆ ಹೋದಾಗ ಒಮ್ಮೊಮ್ಮೆ ಹೆಪೊ (ಹೈ ಆಲ್ಟಿಟ್ಯೂಡ್ ಪಲ್ಮನರಿ ಅಡಿಮಾ) ಎಂಬ ತೊಂದರೆಯಿಂದ ಬಳಲುತ್ತೇವೆ. ಇದರಿಂದ ಹುಚ್ಚರಂತಾಗುತ್ತೇವೆ. ಸಾಮಾನ್ಯವಾಗಿ ಇಂಥ ಸ್ಥಿತಿಗೆ ಗುರಿಯಾಗುವವರು ತಮ್ಮ ಬಟ್ಟೆಯನ್ನೆಲ್ಲಾ ಬಿಚ್ಚಿ ಎಸೆಯುತ್ತಾರೆ. ಸಂಪೂರ್ಣ ಸಂವೇದನೆಯನ್ನೇ ಕಳೆದುಕೊಳ್ಳುತ್ತಾರೆ. ಆಗ ಅವರನ್ನು ಬಚಾವು ಮಾಡುವುದಕ್ಕೆ ಇರುವುದೊಂದೆ ದಾರಿಯೆಂದರೆ ಅದು ಬೇಸ್‌ಕ್ಯಾಂಪ್‌ಗೆ ಕರೆದೊಯ್ಯುವುದು. ಏಕಾಗ್ರತೆಯನ್ನು ಕಳೆದುಕೊಂಡು ವಿಚಿತ್ರ ಸ್ಥಿತಿಗೆ ದೂಡಿದಂತಾಗುವವರನ್ನು ಸರಿಮಾಡುವುದೆಂದರೂ ಒಂದು ಹರಸಾಹಸವೇ.

ಅಲ್ಲಿ ಬಿಸಿಲೇ ಇಲ್ಲವೇ ಎಂದು ಅನಿಸಬಹುದು. ಅದೂ ಸುಳ್ಳು. ಮೋಡವಿಲ್ಲದಿದ್ದರೆ ಅಲ್ಲಿ ಸಾಮಾನ್ಯವಾಗಿ ಇರುವ (ಮೊದಲ ಋತುಮಾನದಲ್ಲಿ )ಉಷ್ಣಾಂಶ + ೪೦ ಯಿಂದ ೫೦. ಬೆವರೆನ್ನುವುದು ಹಿಮ ಕರಗಿ ನೀರಾಗುವಂತೆ ಇಳಿಯುತ್ತಲೇ ಇರುತ್ತದೆ. ನಾವು ಹಾಕಿಕೊಂಡ ಹಲವು ಬೆಚ್ಚಗಿನ ವಸ್ತ್ರಗಳು ಸೆಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಹಾಗೆಂದು ಅವನ್ನು ತೆಗೆದು ವಿರಮಿಸುವಂತಿಲ್ಲ. ಯಾವುದೇ ಕ್ಷಣದಲ್ಲಿ ಬಿಸಿಲು ಮಾಯವಾಗಿ ಉಷ್ಣಾಂಶ ಕುಸೀಬಹುದು.ಆಗ ಮತ್ತೆ ತಣ್ಣಗಿನ ಅನುಭವ !

ಹಿಮ ಕುರುಡು (ಸ್ನೋ ಬರ್ನ್) ಎಲ್ಲರೂ ಬಳಲುವಂಥದ್ದು. ಪ್ರಖರವಾದ ಬಿಸಿಲು ಇರುವಾಗ ಸಂಭವಿಸುವ ದುರಂತ. ಮೇಲಕ್ಕೆ ದಿಟ್ಟಿಸುತ್ತಾ ಹತ್ತುವಾಗ ಪರ್ವತದ ಮೇಲೆ ಬಿದ್ದ ಸೂರ್ಯನ ಕಿರಣ ಕಣ್ಣನ್ನು ಕುಕ್ಕುತ್ತಿರುತ್ತದೆ. ಅದನ್ನು ನಾವು ಬರಿಗಣ್ಣಿಂದ ದಿಟ್ಟಿಸಿದರೆ ಕಣ್ಣೇ ಕಳೆದುಕೊಂಡ ಅನುಭವವಾಗುತ್ತದೆ. ಏನೂ ಕಾಣುವುದಿಲ್ಲ. ಅಲ್ಲದೇ ನೂರಾರು ಸೂಜಿಗಳನ್ನು ಕಣ್ಣಿಗೆ ಚುಚ್ಚಿದಂತಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ಸ್ನೋ ಗಾಗಲ್ಸ್ ಹಾಕಿಕೊಂಡಿರುತ್ತೇವೆ. ಆದರೆ ಯಾವುದಾದರೂ ಬದಿಯಿಂದ ಸಣ್ಣ ಕಿರಣವೊಂದು ಸೀಳಿಕೊಂಡು ಬಂದರೂ ಅನಾಹುತ ತಪ್ಪಿದ್ದಲ್ಲ.

ಹಿಂದಿನ ಬಾರಿ ನಾನು ಕೆಲವರು ಇಂಥ ತೊಂದರೆಯಿಂದ ಬಳಲಿದ್ದನ್ನು ಕಂಡಿದ್ದೇನೆ. “ಅಯ್ಯೋ ಅಮ್ಮಾ, ಅಪ್ಪಾ” ಎಂದು ನರಳುತ್ತಿರುತ್ತಾರೆ. ಅಲ್ಲಿ ಸಂತೈಸಲು, ಸಮಾಧಾನಿಸಲು ಯಾರೂ ಇರುವುದಿಲ್ಲ. ಅವನೊಬ್ಬನೇ. ಇವುಗಳನ್ನೆಲ್ಲಾ ಎಣಿಸಿಕೊಂಡಾಗ ಪರ್ವತಾರೋಹಣ ಯಾಕಪ್ಪಾ ಎನಿಸುವುದುಂಟು. ಕಾಯಿಲೆ ಪೀಡಿತರಾದವರನ್ನು ಭುಜದ ಮೇಲೆ ಹೊತ್ತುಕೊಂಡು ವಾಪಸು ಬೇಸ್ ಕ್ಯಾಂಪ್‌ಗೆತರುವ ಶೆರ್ಪಾಗಳಿಗೆ ಪ್ರತ್ಯೇಕ ಹಣ ನೀಡಬೇಕು. ಸತ್ತವರ ಹೆಣ ಕೆಳ ತರುವುದೂ ಇವರೇ !

ನನ್ನೊಂದಿಗೆ ಬಂದಿದ್ದ ಶೆರ್ಪಾ ಪುನರೂ ಹೊರಡಲು ಸಿದ್ಧತೆ ನಡೆಸಿದ. ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನವರೆಗೆ ಯಾಕ್ ಪ್ರಾಣಿ (ಕೋಣದಂತಿರುತ್ತದೆ) ನಮ್ಮ ಸರಕನ್ನು ಹೊತ್ತು ತರುತ್ತದೆ. ಅಂದಾಜು ೪೦ ಕೆ. ಜಿ. ಭಾರ ಹೊರಬಲ್ಲದು. ತದನಂತರ ೮, ೮೪೮ ಮೀಟರ್‌ವರೆಗೆ ನಮ್ಮ ಭಾರವನ್ನೇ ನಾವು ಹೊರಬೇಕು. ಶೆರ್ಪಾ ನಮಗೆ ದಾರಿ ತೋರಿಸಲು, ಮಾರ್ಗದರ್ಶನ ಮಾಡಲು ಹಾಗೂ ದುರಂತದ ಸಂದರ್ಭದಲ್ಲಿ ರಕ್ಷಿಸಲು ಬರುತ್ತಾನೆ. ನೇಪಾಳದಿಂದಲೇ ನಮ್ಮೊಂದಿಗೆ ಬರುತ್ತಾನೆ.

ಇಲ್ಲಿ ಮಲಗುವುದೂ ಒಂದು ಕಿರಿಕಿರಿ. ಯಾಕ್ ರಾತ್ರಿಯೆಲ್ಲಾ ತಲೆ ಅಲ್ಲಾಡಿಸುತ್ತಲೇ ಇರುತ್ತದೆ. ಅದರ ಕೊರಳಿಗೆ ಕಟ್ಟಿದ ಗಂಟೆಯ ಶಬ್ದ ಅಷ್ಟೊಂದು ನೀರವತೆಯಲ್ಲಿ ಪ್ರತಿಧ್ವನಿಸುತ್ತಿರುತ್ತದೆ. ಯಾಕ್‌ಗೆ ಒಂದು ದಿನಕ್ಕೆ ತೆರಬೇಕಾದ ಮಜೂರಿ ೮೦ ಡಾಲರ್. ಸಾಮಾನ್ಯವಾದ ಮತ್ತೊಂದು ಪ್ರಶ್ನೆಯೆಂದರೆ ಶೆರ್ಪಾಗಳು ಎವರೆಸ್ಟ್ ಹತ್ತುತ್ತಾರಲ್ಲ ? ಅವರದ್ದು ಸಾಧನೆಯಲ್ಲವೇ?

ಅವರದ್ದೂ ಸಾಧನೆಯೇ. ಅದು ನಿತ್ಯದ ಕಾಯಕ. ನಾವು ಶೆರ್ಪಾನಿಗೆ ನೀಡಬೇಕಾದ ಬಾಡಿಗೆ ೨ ರಿಂದ ೨.೫೦ ಲಕ್ಷರೂ. ಅದರಲ್ಲೂ ಅವನೇನಾದರೂ ಎರಡು ಮೂರು ಬಾರಿ ತುದಿ ಮುಟ್ಟಿದ್ದರೆ (ಪರ್ವತಾರೋಹಿ ಜತೆ) ಅವನಿಗೆ ನೀಡಬೇಕಾದ ಸಂಭಾವನೆ ಹೆಚ್ಚು. ಅವನ ಅನುಭವದಂತೆ ಸಂಭಾವನೆ. ಒಂದುವೇಳೆ ನಾವು ಗುರಿ ಮುಟ್ಟಿದರೆ ಅವನಿಗೆ ಸುಮಾರು ೫೦೦ ಡಾಲರ್ ಬೋನಸ್ ನೀಡಲೇಬೇಕು. ಅದು ಭಕ್ಷೀಸು.

ಬೇಸ್‌ಕ್ಯಾಂಪ್‌ನಲ್ಲಿ ಪ್ರತಿಯೊಬ್ಬರ ಸಾಧನೆಯನ್ನೂ ದಾಖಲಿಸಿಕೊಳ್ಳಲಾಗುತ್ತದೆ. ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘದ ಪ್ರತಿನಿಧಿಗಳು ದಾಖಲಿಸಿ ಪ್ರಮಾಣ ಪತ್ರ ನೀಡುತ್ತಾರೆ. ಇಲ್ಲಿ ಶೆರ್ಪಾ ಮತ್ತು ಚಾರಣಿಗರ ಸಾಧನೆಯನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಲಾಗುತ್ತದೆ. ಈ ಬಾರಿ ನನ್ನ ಯಶಸ್ಸಿಗೆ ಇಬ್ಬರು ಶೆರ್ಪಾ ಸಹಕರಿಸಿದರು. ಒಬ್ಬ ಪುನರೂ, ಮತ್ತೊಬ್ಬ ಅಂಗ್ರಿತಾ.

ಹಿಮಯಾತನೆ ಎಂಬ ಅನಿವಾರ್ಯ ಕಷ್ಟ

ಬೇಸ್‌ಕ್ಯಾಂಪ್‌ನಲ್ಲಿ ಲಯಾಸನ್ ಆಫೀಸರ್ (ಸಮನ್ವಯ ಅಧಿಕಾರಿ) ಇರುತ್ತಾರೆ. ಅವರಿಂದ ಮಾಹಿತಿ ಪಡೆದು ಸಿದ್ಧನಾಗತೊಡಗಿದೆ. ಮೊದಲು ಆ ವಾತಾವರಣ ಹೊಂದಿಕೊಳ್ಳಬೇಕಿತ್ತು. ಅಂದಾಜು -1 ಡಿಗ್ರಿ ಇರುವುದು ಇಲ್ಲಿ ಸಾಮಾನ್ಯ. ಅದಕ್ಕೆ ಮೊದಲು ಹೊಂದಿಕೊಳ್ಳಬೇಕು. ಆರಂಭದ ದಿನ ಸ್ವಲ್ಪ ಕಷ್ಟವಾಗುತ್ತದೆ. ಆದರೆ ಬಹಳ ತೊಂದರೆಯಾಗುವುದಿಲ್ಲ. ಹೈ ಆಟಿಟ್ಯೂಡ್‌ಗೆ ಹೋದಷ್ಟು ನಮಗೆ ಕಷ್ಟವಾಗುತ್ತಾ ಹೋಗುತ್ತದೆ. ಒಮ್ಮೊಮ್ಮೆ ಹವಾಮಾನದಲ್ಲಿ ಏರುಪೇರಾಗಿ – 20 ಡಿಗ್ರಿಗೆ ಇಳಿಯವುದೂ ಇದೆ. ಅಷ್ಟೇ ಅಲ್ಲ ಅದಕ್ಕಿಂತಲೂ ಕಡಿಮೆಯಾಗುವ ಸಾಧ್ಯತೆಯೂ ತಳ್ಳಿ ಹಾಕುವಂತಿಲ್ಲ.
ಬೇಸ್ ಕ್ಯಾಂಪ್ ನ ಟೆಂಟ್
ಬಹಳ ಹಿಮ ಸುರಿಯುವಿಕೆ ಇದ್ದರೂ ಪರ್ವಾತಾರೋಹಣ ಸಾಧ್ಯವಿಲ್ಲ. ನಾವು ಅನುಕೂಲವಾದ ಹವಾಮಾನ ಬರುವವ ರೆಗೂ ಕಾಯಲೇಬೇಕು. ಎಷ್ಟೋ ಬಾರಿ ಬೇಸ್‌ಕ್ಯಾಂಪ್‌ನಲ್ಲೇ ಹತ್ತಿಪ್ಪತ್ತು ದಿನ ಕಳೆಯಬೇಕಾದ ಸಂದರ್ಭಗಳಿರುತ್ತವೆ. ಇನ್ನೂ ಹಲವು ಬಾರಿ ಅಡ್ವಾನ್ಸಡ್ ಕ್ಯಾಂಪ್‌ಗೆ ಹೋಗಿ ವಾಪಸು ಬರುವ ಸನ್ನಿವೇಶಗಳೂ ಇರುತ್ತವೆ. ಎಲ್ಲದಕ್ಕೂ ಮಾನಸಿಕವಾಗಿ ಸಿದ್ಧರಾಗಿರಲೇಬೇಕು. ಬಹಳ ಮುಖ್ಯವಾದ ಸಂಗತಿಯೆಂದರೆ ಪರ್ವಾತಾರೋಹಿಗೆ ತಾಳ್ಮೆ, ಸಂಯಮ ಬೇಕೇ ಬೇಕು.

ಒಂದು ಅರ್ಥದಲ್ಲಿ ಬೇಸ್‌ಕ್ಯಾಂಪ್ “ಕೂಡಲ ಸಂಗಮ’ . ಅಂದರೆ ಎಲ್ಲರೂ ಬಂದು ಇಲ್ಲಿ ಸೇರಲೇಬೇಕು. ವಿವಿಧ ದೇಶಗಳಿಂದ ಬಂದವರೆಲ್ಲಾ ಇಲ್ಲಿ ಸೇರಿ ಪರಸ್ಪರ ಪರಿಚಯ ಮಾಡಿಕೊಳ್ಳುತ್ತಾರೆ. ಮುಂದಿನ ಎಲ್ಲ ಸಿದ್ಧತೆಗಳೂ ಇಲ್ಲಿಂದಲೇ ಆರಂಭವಾಗುತ್ತವೆ. ಪರ್ವತಗಳಿಗೆ ಹಗ್ಗ ಕಟ್ಟುವ ರಸೆಲ್ ಪ್ರೈಸ್ ಅಗತ್ಯ ವಿವರ ಒದಗಿಸುತ್ತಾರೆ. ರಸೆಲ್ ಪ್ರೈಸ್ ಎಂಬ ಕಂಪನಿ ಪರ್ವತಕ್ಕೆ ಹಗ್ಗ ಕಟ್ಟುವ ಗುತ್ತಿಗೆ ಪಡೆದಿದೆ. ಅವರು ಕಟ್ಟಿದ ಹಗ್ಗದಲ್ಲೇ ನಾವು ಪರ್ವತ ಹತ್ತಬೇಕು.

ಮಂಜುಗೆಡ್ಡೆ ಅಲ್ಲಿ ರಾಶಿ ರಾಶಿ, ಆಗಾಗ್ಗೆ ಬೀಳುವುದೂ ಹೀಗೆಯೇ..

ಮಂಜುಗೆಡ್ಡೆ ಅಲ್ಲಿ ರಾಶಿ ರಾಶಿ, ಆಗಾಗ್ಗೆ ಬೀಳುವುದೂ ಹೀಗೆಯೇ..


ಏ. 27 ರಂದು ಇಂಟರ್ ಮೀಡಿಯಟ್ ಕ್ಯಾಂಪ್‌ಗೆ ಹೊರಟೆ. ದಾರಿ ಮಧ್ಯೆ ಪರಿಚಯವಾದವರು ಚೈತನ್ಯ. ನಾನು ಮೇಲಕ್ಕೇರುತ್ತಿದ್ದೆ. ಅವರು ಅಡ್ವಾನ್ಸಡ್ ಕ್ಯಾಂಪ್‌ನಿಂದ ಕೆಳಗಿಳಿಯುತ್ತಿದ್ದರು. ಕೆಳಗೆ ಸಿಗೋಣ ಎಂದು ಚೈತನ್ಯ ಸಂಕೇತ ಮಾಡಿದರು. ಸಮ್ಮಿಟ್ (ತುದಿ ಮುಟ್ಟಲು) ಹೋಗುವಾಗಲೂ ಮತ್ತೆ ಸಿಗೋಣ, ಒಟ್ಟಿಗೆ ಫೋಟೋ ತೆಗೆಸಿಕೊಳ್ಳೋಣ ಎಂದರು. ಹ್ಞೂಂ ಅಂದೆ, ಈಗಲೂ ಅದಕ್ಕೆ ಕಾಯುತ್ತಿದ್ದೇನೆ !

ಏ. 28-ಬೇಸ್‌ಕ್ಯಾಂಪ್‌ನಿಂದ ಹದಿನೆಂಟು ಕಿ.ಮೀ ದೂರದಲ್ಲಿ, 6, 500 ಮೀಟರ್ ಎತ್ತರದಲ್ಲಿರುವ ಅಡ್ವಾನ್ಸಡ್ ಬೇಸ್ ಕ್ಯಾಂಪ್ ತಲುಪಿದಾಗ ಅಲ್ಲಿ ಸಿಕ್ಕಾಪಟ್ಟೆ ಹಿಮಪಾತವಾಗುತ್ತಿತ್ತು. ಕೊರೆಯುವಿಕೆ ಎಣಿಸಿಕೊಳ್ಳಲು ಸಾಧ್ಯವಿರಲಿಲ್ಲ. ದೇವರೇ ಕಾಪಾಡು ಎಂದು ಬೇಡಿಕೊಂಡಿದ್ದಿದೆ.ಎಂಥಾ ಚಳಿಯೆಂದರೆ ಅನುಭವಿಸಿಯೇ ತೀರಬೇಕು. ಮಲಗಲು ಹಾಸಿಗೆ ಹಾಕಿಕೊಂಡರೂ ತಣ್ಣಗೆ. ನಂತರ ನಮ್ಮ ಶರೀರದ ಬಿಸಿಯನ್ನೇ ಸ್ವೀಕರಿಸಿ ಮೆಲ್ಲಗೆ ಮಲಗಿದ್ದಷ್ಟು ಜಾಗ ಬೆಚ್ಚಗಿನ ಅನುಭವ ನೀಡುತ್ತದೆ.

ಇಲ್ಲೊಂದು ವಿಶೇಷವಿದೆ. ಅಲ್ಲಿನ ರೋಚಕ ಅನುಭವ ಹೇಳಿ ಎಂದು ಎಲ್ಲರೂ ಒತ್ತಾಯಿಸುತ್ತಾರೆ. ಅದೂ ನಿಜವೇ. ಆದರೆ ಒಂದು ಸತ್ಯ ಸಂಗತಿ ಹೇಳುತ್ತೇನೆ. ಬೆಂಗಳೂರಿನಂಥ ನಗರದಲ್ಲಿ + 20 ಕ್ಕೆ ಉಷ್ಣಾಂಶ ಇಳಿದರೂ “ಚಳಿ’ ಎಂದು ನಡುಗುತ್ತೇವೆ. ಬೆಚ್ಚಗಿನ ಒಲೆಯೊಳಗೆ ಕುಳಿತು ಬಿಡಬೇಕು ಎಂದುಕೊಳ್ಳುತ್ತೇವೆ. ಎಲ್ಲ ಕಿಟಕಿ ಮುಚ್ಚಿ, ಸ್ವೆಟರ್ ಹಾಕಿ, ರಗ್ಗನ್ನು ಹೊದ್ದುಕೊಂಡು “ಅಯ್ಯೋ ಎಂಥಾ ಗ್ರಹಚಾರ’ ಎನ್ನುತ್ತಾ ಗೊಣಗುತ್ತೇವೆ. ಅಂಥದ್ದರಲ್ಲಿ – 20 ಕ್ಕೆ ಉಷ್ಣಾಂಶ ಇಳಿದಿದೆಯೆಂದರೆ ಹೇಗಿದ್ದೀತು? ಊಹಿಸಿಕೊಳ್ಳಿ. ಕೆಲವೊಮ್ಮೆ – 40 ಕ್ಕೂ ಇಳಿದಾಗ ನಿಮ್ಮ ಉಗುಳೂ ನೆಲಕ್ಕೆ ಮುಟ್ಟುವಾಗ ಮಂಜುಗಡ್ಡೆಯ ತುಂಡು !

ಎವರೆಸ್ಟ್ ಏರಲು ಹದಿನೈದು ಮಾರ್ಗ ?

ಎವರೆಸ್ಟ್ ಏರಲು 15 ಮಾರ್ಗಗಳಿವೆ. ಆದರೆ ಜನಪ್ರಿಯವಾಗಿರುವುದು ಮುಖ್ಯವಾಗಿ ಎರಡು. ಒಂದು ಸುಲಭದಷ್ಟೇ ಅಲ್ಲ ; ದುಬಾರಿಯದ್ದು. ಮತ್ತೊಂದು ಅಗ್ಗದ್ದು ; ಕಷ್ಟದ್ದು. ಉಳಿದ ಮಾರ್ಗಗಳಲ್ಲಿ ಸಾಮಾನ್ಯವಾಗಿ ಹೋಗುವವರು ಕಡಿಮೆ. ಕೆಲವು ಘಟನೆಗಳಲ್ಲಿ ಹೊಸ ಮಾರ್ಗದಲ್ಲಿ ಹೋಗಲು ಹೋಗಿ ಕಣ್ಮರೆಯಾದ ಪ್ರಸಂಗಗಳೂ ಇವೆ.

ಬೇಸ್ ಕ್ಯಾಂಪ್, ಇಲ್ಲಿಂದಲೇ ಆರಂಭ.... ಚಿತ್ರ : ಇಂಟರ್ ನೆಟ್

ಬೇಸ್ ಕ್ಯಾಂಪ್, ಇಲ್ಲಿಂದಲೇ ಆರಂಭ.... ಚಿತ್ರ : ಇಂಟರ್ ನೆಟ್


ನೇಪಾಳದ ದಾರಿ ಚೀನಾ, ಟಿಬೆಟ್ ದಾರಿಗಿಂತ ಸುಗಮ. ಕಾರಣವಿಷ್ಟೇ. ಈ ದಾರಿಯಲ್ಲಿ 12 ರಿಂದ 14 ಸಾವಿರ ಅಡಿವರೆಗೂ ಗಿಡಮರಗಳಿವೆ. ಹಸಿರಿರುವಲ್ಲಿ ಆಮ್ಲಜನಕದ ಸಮಸ್ಯೆ ಕಾಡುವುದಿಲ್ಲ. ಆದರೆ ನಾನು ಆರಿಸಿಕೊಂಡ ದಾರಿ ಕಷ್ಟದ್ದು. ಚೀನಾದ ಜಾಂಗ್‌ಮೂ ಗಡಿ ದಾಟಿ ಹೋಗಬೇಕು. ಇಲ್ಲಿ 3, 500 ಅಡಿಗಳಿಂದಲೇ ಹಸಿರಿಲ್ಲ. ಮೊರೇನ್ ಡೆಸರ್ಟ್. ಅಂದರೆ ಒಂದು ಬಗೆಯ ಧೂಳು ಆವೃತ ಶಿಖರಗಳು. ಅಂಥದ್ದೇ ವಾತಾವರಣ. ಅದೇ ನಮ್ಮನ್ನು ಕೆಡವಿ ಹಾಕಬಹುದು.

ಇಂಥ ಯಾವುದೇ ಕಷ್ಟ ನೇಪಾಳದ ಮಾರ್ಗದಲ್ಲಿಲ್ಲ. ಆದರೆ ಈ ಮಾರ್ಗದಲ್ಲಿ ಸಾಗಿದರೆ ಸುಮಾರು 15 ಲಕ್ಷ ರೂ. ವೆಚ್ಚ ಕಡಿಮೆ. ನೇಪಾಳದ ಮಾರ್ಗಕ್ಕೇ ತೆರುವ ಸುಂಕವೇ ಹೆಚ್ಚು. ಬೇಸ್ ಕ್ಯಾಂಪ್‌ಗೆ ಹೋಗುವ ಮುನ್ನ ನೇಪಾಳದಲ್ಲಿ ಒಂದಷ್ಟು ತರಬೇತಿ ನೀಡುತ್ತಾರೆ. ಭಕ್ತಪುರ ಸುತ್ತಮುತ್ತ ಚಾರಣ ಕಡ್ಡಾಯ. ಅದೆಲ್ಲ ಪೂರೈಸಿದ ಮೇಲೇಯೇ ಬೇಸ್‌ಕ್ಯಾಂಪ್‌ಗೆ ರವಾನೆ.

ಅಷ್ಟರಲ್ಲಿ ನಾನು ಪಾವತಿಸಬೇಕಾದ ಹಣ ಪೂರ್ತಿಯಾಗಿ ಸಂಸ್ಥೆಗೆ ಸೇರಿರಲಿಲ್ಲ. “ನಿನ್ನ ಹಣ ಪಾವತಿಯಾಗದಿದ್ದರೆ ವಾಪಸು ಹೋಗಬೇಕಾದೀತು’ ಎಂಬ “ನೋಟೀಸ್’ ಬಂತು. ಗೆಳೆಯರನ್ನು ಸಂಪರ್ಕಿಸಿದಾಗ ಚಿಂತೆ ಬೇಡ ಎಂದರು. ಗೆಳೆಯರು ಕೈ ಬಿಡಲಿಲ್ಲ . ಚಿಕ್ಕಾಸೂ ಕಡಿಮೆಯಾಗಿದ್ದರೂ ವಾಪಸು ಬರಬೇಕಿತ್ತು. ಯಾವುದೂ ನನ್ನ ಏಕಾಗ್ರತೆಯನ್ನು ಕೊಲ್ಲಲಿಲ್ಲ; ಧೃತಿಗೆಡಲಿಲ್ಲ.

ಎವರೆಸ್ಟ್ ನ ದಕ್ಷಿಣ ತುದಿಯ ಮಾರ್ಗದಲ್ಲಿ ಸಿಗುವ ಅಡ್ವಾನ್ಸ್ ಡ್ ಬೇಸ್ ಕ್ಯಾಂಪ್.

ಎವರೆಸ್ಟ್ ನ ದಕ್ಷಿಣ ತುದಿಯ ಮಾರ್ಗದಲ್ಲಿ ಸಿಗುವ ಅಡ್ವಾನ್ಸ್ ಡ್ ಬೇಸ್ ಕ್ಯಾಂಪ್.


ನನ್ನೊಂದಿಗೆ ಬಂದ ಸಂಗಾತಿಗಳೆಂದರೆ ಎರಡು ಚಾಪೆ, ಸ್ಲೀಪಿಂಗ್ ಬ್ಯಾಗ್ (0 ಡಿಗ್ರಿ ಉಷ್ಣಾಂಶ ಹಾಗೂ ಅದಕ್ಕಿಂತ ಕಡಿಮೆ ಉಷ್ಣಾಂಶಕ್ಕೆ ಹೊಂದಿಕೊಳ್ಳುವ), ಸ್ನೋ ಗಾಗಲ್ಸ್, ಮಂಜುಗೆಡ್ಡೆ ಕತ್ತರಿಸುವ ಕೊಡಲಿ, ಹಗ್ಗ, ಆಕ್ಷಿಜನ್ ಸಿಲಿಂಡರ್, ಸ್ನೋ ಬೂಟ್, ಟೆಂಟ್, ಟಿನ್ ಗ್ಯಾಸ್, ಸಣ್ಣ ಸ್ಟೌ, ಹೆಡ್‌ಲೈಟ್, ಫೆದರ್ ಜಾಕೆಟ್, ಗ್ಲೌಸ್, ಕ್ರಾಂಪ್‌ಬೋನ್ಸ್, ವಿಂಡ್ ಶೀಟರ್ ಇತ್ಯಾದಿ. ಇವುಗಳೆಲ್ಲವೂ ಪರ್ವಾತಾರೋಹಣಕ್ಕೆಂದೇ ವಿಶೇಷವಾಗಿ ತಯಾರಿಸಿದವು. ಸಣ್ಣ ಉದಾಹರಣೆಯೆಂದರೆ ಸ್ಲೀಪಿಂಗ್ ಬ್ಯಾಗ್ ತೆಗೆದುಕೊಳ್ಳಿ. ಅದು ಇಲ್ಲಿ ಬಳಸುವಂತ ತರನದ್ದಲ್ಲ.

ಅದರಲ್ಲೂ ಲೋ ಆಟಿಟ್ಯೂಡ್, ಹೈ ಆಟಿಟ್ಯೂಡ್ ಎಂಬ ಎರಡು ವಿಧಗಳಿವೆ. ಅವೆರಡನ್ನೂ ಕೊಂಡೊಯ್ಯಬೇಕು. ಇದಕ್ಕೆ ತಗಲುವ ವೆಚ್ಚ 20 ಸಾವಿರ. ಸ್ನೋ ಬೂಟ್‌ಗೆ 30 ರಿಂದ 25 ಸಾವಿರ ರೂ. ಒಟ್ಟು ಪರಿಕರಗಳಿಗೆ 2.50 ಲಕ್ಷ ರೂ. ಆಗಬಹುದು. ಇದರೊಂದಿಗೆ ನನಗೆ ಪಿನಾಕಲ್ ಪ್ರತಿಷ್ಠಾನ “ರಿಸ್ಕ್ ವಿಮೆ’ ಮಾಡಿಸಿತ್ತು. ವಿದೇಶದಿಂದ ಬರುವ ಚಾರಣಿಗರು ವಿಮೆ ಮಾಡಿಸಿಕೊಳ್ಳುವುದು ಸರ್ವೇ ಸಾಮಾನ್ಯ.

ಏ. 15 ರಂದು ಬೇಸ್‌ಕ್ಯಾಂಪ್‌ಗೆ ಹೊರಟದ್ದು. ಜಾಂಗ್‌ಮೂ, ನೇಲಂ, ಟಿಂಗ್ರಿ ಮೂರು ಪ್ರದೇಶಗಳಲ್ಲಿ ಒಂದೊಂದು ದಿನ ತಂಗಿ ಬೇಸ್‌ಕ್ಯಾಂಪ್‌ನ್ನು ಮುಟ್ಟಿದ್ದು ಏ. 18 ರಂದು. ಎವರೆಸ್ಟ್ ಪರ್ವತ ಇರುವುದು ಟಿಂಗ್ರಿ ಜಿಲ್ಲಾ ಪ್ರದೇಶದಲ್ಲಿ. ಬೇಸ್‌ಕ್ಯಾಂಪ್, ಮಧ್ಯಂತರ ಶಿಬಿರ (ಐಎಂಸಿ), ಅಡ್ವಾನ್ಸಡ್ ಕ್ಯಾಂಪ್, ನಾರ್ತ್‌ಕೋಲ್ ಅಥವಾ ಕ್ಯಾಂಪ್ 1, ಕ್ಯಾಂಪ್ 2, ಸಮ್ಮಿಟ್ ಕ್ಯಾಂಪ್ ಇವುಗಳನ್ನು ದಾಟಿ ತುತ್ತ ತುದಿಗೆ ಮುಟ್ಟಬೇಕು. ಬೇಸ್‌ಕ್ಯಾಂಪ್ ಇರುವುದು 5, 200 ಮೀಟರ್‌ಗಳಲ್ಲಿ. ಇಲ್ಲಿವರೆಗೆ ವಾಹನಗಳಲ್ಲಿ ಬರಬಹುದು. ಅದಕ್ಕಾಗಿ ದಾರಿ ಮಾಡಲಾಗಿದೆ. ಇಲ್ಲಿಂದ ಉಳಿದ ದೂರವನ್ನು ಕ್ರಮಿಸುವುದೇ ಬದುಕನ್ನು ಪಣವಿಟ್ಟ ಹಾಗೆ.

ನಾನು ಬೆಸೆಯಲು ಹೊರಟಿದ್ದು “ಸ್ನೇಹ ಸೇತುವೆ”

ದುಡ್ಡು ಹೊಂದಿಸುವುದು ಹೇಗೆ ?

ನಾಲ್ಕೈದು ಗೆಳೆಯರಲ್ಲಿ ತೋಡಿಕೊಂಡೆ. ಅದಕ್ಕೆ ತಗಲುವ 16 ಲಕ್ಷ ರೂ. ಹೊಂದಿಸುವಾಗ ಪಿನಕಲ್ ಪ್ರತಿಷ್ಠಾನ ನೆರವು ನೀಡಿತು. ಲ್ಯಾಂಡ್‌ಮಾರ್ಕ್ ಎಜುಕೇಷನ್ ಮತ್ತಿತರ ಸಂಸ್ಥೆಗಳು ನೆರವು ನೀಡಿದವು. ನನ್ನ ಚಿಂತೆಯನ್ನು ದೂರ ಮಾಡುವ ಭರವಸೆ ನೀಡಿದ ಮೇಲೆ ಮಾರ್ಚ್ 27 ಕ್ಕೆ ಸಜ್ಜಾಗತೊಡಗಿದೆ. ಜನವರಿಯಲ್ಲಿ ಬಂದ ಆಯ್ಕೆ ಪತ್ರದಲ್ಲಿ ನನ್ನ ತಾಲೀಮಿಗೆ ಸೂಚನೆ ನೀಡಿದ್ದರು. ಅದರಂತೆ ತಯಾರಾಗತೊಡಗಿದೆ.

ಎಲ್ಲರನ್ನೂ ಕೈ ಬೀಸಿ ಕರೆಯುವ ಸಾಗರಮಾತಾ

ಎಲ್ಲರನ್ನೂ ಕೈ ಬೀಸಿ ಕರೆಯುವ ಸಾಗರಮಾತಾ

ಪ್ರತಿ ದಿನ ಕನಿಷ್ಠ 6 ಕಿ. ಮೀ ಓಡಬೇಕು (ಜಾಗಿಂಗ್). ನಿತ್ಯ ಮೊಳಕೆ ಬರಿಸಿದ ಹುರುಳಿಯನ್ನು ಸೇವಿಸಬೇಕು. ಕಾಲಿನ ಶಕ್ತಿ ಹೆಚ್ಚಿಸಲು ಅತ್ಯಂತ ಸಹಕಾರಿ. ಅದರೊಂದಿಗೆ ದಿನಾ 2 ಲೀಟರ್ ಬಿಸಿನೀರು ಕುಡಿಯಬೇಕು. ಭೂಮಿಯಿಂದ ಬಹಳ ಎತ್ತರದ ಪ್ರದೇಶಕ್ಕೆ (ಹೈ ಆಟಿಟ್ಯೂಡ್‌ಗೆ) ಹೋದಾಗ ಬಿಸಿನೀರು ಕುಡಿಯುವುದು ಅನಿವಾರ್ಯ. ಹಾಗೆ ನಮ್ಮ ದೇಹವನ್ನು ಒಗ್ಗಿಸಿಕೊಳ್ಳಲು ಎರಡು ಮೂರು ತಿಂಗಳು ಬಿಸಿನೀರು ಕುಡಿದು ಅಭ್ಯಾಸ ಮಾಡಿಕೊಳ್ಳಬೇಕು.

“ಆರೋಹಣ’ ವನ್ನು ಅಭ್ಯಾಸವಾಗಲಿಕ್ಕೆ, ಎತ್ತರದ ಪ್ರದೇಶಕ್ಕೆ ಹೊಂದಿಕೊಳ್ಳಲು ಒಂದೆರಡು ಚಾರಣ ಕೈಗೊಳ್ಳಲು ಸೂಚಿಸುತ್ತಾರೆ. ನಾನು ನಂದಿಬೆಟ್ಟ, ಸಾವನದುರ್ಗ ಬೆಟ್ಟ ಹತ್ತಿ ಬಂದೆ. ೮, ೮೪೮ ಮೀಟರ್ ಏರಲು ಇಲ್ಲಿ ತಾಲೀಮು. ನನ್ನ ಎತ್ತರಕ್ಕೆ ತಕ್ಕಷ್ಟು ತೂಕವಿರಲಿಲ್ಲ. 173 ಸೆಂ. ಮೀ ಉದ್ದವಿದ್ದೆ. ಅದಕ್ಕೆ ೭೨ ಕೆ. ಜಿ. ಇರಬೇಕಂತೆ. ಆದರೆ ನಾನಿದ್ದದ್ದು ಸುಮಾರು 69 ಕೆ. ಜಿ. ಅದಕ್ಕೆ ಅಗತ್ಯ ಪ್ರೋಟೀನ್, ಹೆಚ್ಚು ಕ್ಯಾಲೋರಿ ಆಹಾರಗಳನ್ನು ತೆಗೆದುಕೊಳ್ಳಲು ಹೇಳಿದರು. ಅದರಂತೆ ತಯಾರಾಗುತ್ತಾ ಹೋದೆ. ಏಕಾಗ್ರತೆ ಬೆಳೆಸಿಕೊಳ್ಳಲು ತೊಡಗಿದೆ.

ಇಷ್ಟರಲ್ಲಿ ಮನಸ್ಸಿನಲ್ಲಿ ತಲೆ ಎತ್ತಿದ ಮತ್ತೊಂದು ವಿಚಾರವೆಂದರೆ ಹೇಗಿದ್ದರೂ ಹೋಗುವುದು ಒಂದೇ ಬಾರಿ. ಆ ಸಂದರ್ಭದಲ್ಲೂ ಸುಮ್ಮನೆ ಹೋದರೆ ಹೇಗೆ ? ಒಂದು ಸಂದೇಶ ಹೊತ್ತು ಹೋಗೋಣ. ಆ ಸಂದೇಶ ಗಿರಿಶಿಖರದ ಮೇಲೆ ರಾರಾಜಿಸಲಿ ಎನಿಸಿತು. ಆಗ ಹೊಳೆದದ್ದು ವಿಶ್ವ ಸಾಮರಸ್ಯ ಮತ್ತು ಭ್ರಾತೃತ್ವ.
ಮೂಲತಃ ಪೋಲಿಸ್ ಅಧಿಕಾರಿಯಾದ ನನಗೆ ಕೋಮು ಗಲಭೆಯಿಂದ ಆಗುವ ನಷ್ಟ ಚೆನ್ನಾಗಿ ಅರಿವಿದೆ.

ಲಕ್ಷಾಂತರ ರೂ. ನಷ್ಟ, ಜೀವನಷ್ಟ. ಒಂದೇ ಎರಡೇ ? ಪ್ರತಿ ದಿನ ಸಂಶಯದಿಂದ ಬದುಕುವ ಸಂಸಾರಗಳು. ಇದನ್ನೆಲ್ಲಾ ಕಂಡು ಕೋಮು ಸಾಮರಸ್ಯಕ್ಕಾಗಿ ಪ್ರಾರ್ಥಿಸಿದೆ. ಹಾಗೆಯೇ ವಿಶ್ವ ಸಾಮರಸ್ಯ ಸಹ. ಅದರಂತೆ ಭಗವದ್ಗೀತೆ, ಕುರಾನ್, ಬೈಬಲ್, ಸಿಖ್ಖರ ಪವಿತ್ರ ಗ್ರಂಥ ಹೀಗೆ ಎಲ್ಲ ಧರ್ಮದ ಗ್ರಂಥಗಳನ್ನು ಹೊತ್ತುಹೋದೆ. ವಿಶ್ವಸಾಮರಸ್ಯಕ್ಕೆ 162 ದೇಶಗಳ ಬಾವುಟವನ್ನು ಸಂಗ್ರಹಿಸಿದೆ.
ಅದರೊಂದಿಗೆ ನಮ್ಮ ಕನ್ನಡದ ಬಾವುಟವನ್ನೂ ಹೊತ್ತು ಹೋದೆ. ಹಾರಿಸಿ ಬಂದೆ.

ಪರಸ್ಪರ ವಿವಾದ ಬಗೆಹರಿಯಲಿ ಎಂಬ ಆಶಯದಿಂದ ದಕ್ಷಿಣ ರಾಜ್ಯಗಳ ಸಂಕೇತವನ್ನೂ ತುದಿಯವರೆಗೂ ಕೊಂಡೊಯ್ದೆ. ಒಟ್ಟಿನಲ್ಲಿ ಸಾಮರಸ್ಯವನ್ನು ಪ್ರತಿಪಾದಿಸಿದೆ. ಇಂದಿಗೂ ನನಗನ್ನಿಸುವುದು ನನ್ನ ಪ್ರಯತ್ನದಿಂದ ಒಂದು ಕೋಮುಗಲಭೆ ನಿಂತರೆ ನನ್ನ ಪರ್ವಾತಾರೋಹಣಕ್ಕೆ ಮಾಡಿದ ವೆಚ್ಚ ಬಂದಂತೆ. ಅದಾಗಬೇಕೆಂಬುದು ನನ್ನ ಬಯಕೆ.

ಇಷ್ಟೆಲ್ಲಾ ಆಸೆಗಳನ್ನು ಗಂಟು ಕಟ್ಟಿಕೊಂಡು, ಹೆಗಲಿಗೇರಿಸಿಕೊಂಡು ಮೊದಲ ಹೆಜ್ಜೆ ಇಟ್ಟದ್ದು ಮಾ.27 ರಂದು ನೇಪಾಳಕ್ಕೆ. ಸೀದಾ ಹೋದವನೇ ಕಂಡದ್ದು ಅಲ್ಲಿನ ಸೌಂದರ್ಯವನ್ನು. ಖುಷಿಯಾಯಿತು. ಅಲ್ಲಿ ಪರ್ವಾತಾರೋಹಿಗಳ ಸಂಸ್ಥೆಗೆ ಹೋಗಿ ದಾಖಲಿಸಿಕೊಂಡೆ. ನನ್ನೊಂದಿಗೆ ಇನ್ನೂ ಐದು ಮಂದಿ ಇದ್ದರು. ಅವರಿಗೆ ನಾನೇ ನಾಯಕ. ಅಮೆರಿಕಾದ ಸಿ. ಸ್ಯಾಕ್ಸನ್, ಆಸ್ಟ್ರೇಲಿಯಾದ ಕೆನ್‌ಹಿಲ್, ಅರ್ಜೆಂಟೈನಾದ ಜೋಸ್ ಜಿಲನ್, ಇಂಗ್ಲೆಂಡಿನ ಜಿ. ಪಾರ್ಕರ್ ನನ್ನ ತಂಡದಲ್ಲಿದ್ದರು. ನಂತರ ಪೊಲೀಷ್ ದೇಶದ ಮಾರ್ಟಿನ್ ಎಂಬವರು ಬಂದು ಸೇರಿಕೊಂಡರು. ಇಷ್ಟರಲ್ಲಿ ನಾನು ಮತ್ತು ಮಾರ್ಟಿನ್ ’ಸಮ್ಮಿಟ್’ (ತುದಿ ಮುಟ್ಟಿ ಬರುವುದು) ಪೂರೈಸಿದೆವು.

ನೇಪಾಳದ ಕಡೆಯಿಂದ ಎವರೆಸ್ಟ್ ಹತ್ತುವುದು ಚೀನಾ, ಟಿಬೆಟ್ ದಾರಿಗಿಂತ ಸುಗಮ. ಕಾರಣವಿಷ್ಟೇ. ಈ ದಾರಿಯಲ್ಲಿ 12 ರಿಂದ 14 ಸಾವಿರ ಅಡಿವರೆಗೂ ಗಿಡಮರಗಳಿವೆ. ಎಲ್ಲಿವರೆಗೆ ಗಿಡಮರಗಳು ಇರುವುದು ಅಲ್ಲಿ ಆಮ್ಲಜನಕದ ಸಮಸ್ಯೆ ಕಾಡುವುದಿಲ್ಲ. ಆದರೆ ನಾವು ಆರಿಸಿಕೊಂಡ ದಾರಿ ಕಷ್ಟದ್ದೇ. ಚೀನಾದ ಜಾಂಗ್‌ಮೂ ಗಡಿ ದಾಟಿ ಹೋಗಬೇಕು. ಇಲ್ಲಿ 5900 ಅಡಿಗಳಿಂದಲೇ ಹಸಿರು ತೋರುವುದಿಲ್ಲ. ಮೊರೇನ್ ಡೆಸರ್ಟ್. ಅಂದರೆ ಒಂದು ಬಗೆಯ ಧೂಳಿನ ವಾತಾವರಣ. ಅದೇ ನಮ್ಮನ್ನು ಕೆಡವಿ ಹಾಕಬಹುದು. ಇಂಥ ಯಾವುದೇ ಕಷ್ಟ ನೇಪಾಳದ ಮಾರ್ಗದಲ್ಲಿಲ್ಲ.

ಇದೆಲ್ಲಾ ಗೊತ್ತಿದ್ದರೂ ಕಷ್ಟ ಮಾರ್ಗವನ್ನು ಆಯ್ದುಕೊಂಡಿದ್ದು ಎರಡು ಕಾರಣಕ್ಕೆ. ಕಷ್ಟದ ಹಾದಿಯಲ್ಲಿ ಹೋಗೋಣ ಎಂಬ ಅತ್ಯುತ್ಸಾಹ. ಇನ್ನೊಂದು ಸುಮಾರು 15 ಲಕ್ಷ ರೂ. ವೆಚ್ಚ ಕಡಿಮೆ. ನೇಪಾಳದ ಮಾರ್ಗಕ್ಕೆ ತೆರುವ ಸುಂಕವೇ ಅತಿ ಹೆಚ್ಚು.

ನೇಪಾಳದಲ್ಲಿ ಒಂದಷ್ಟು ತರಬೇತಿಯನ್ನು ಪಡೆಯಬೇಕು. ಭಕ್ತಪುರ ಸುತ್ತಮುತ್ತ ಚಾರಣ ಕೈಗೊಳ್ಳಬೇಕು. ಇದಲ್ಲದೇ ಪರ್ವಾತಾರೋಹಣಕ್ಕೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ನೀಡಲಾಗುತ್ತದೆ. ಅದೆಲ್ಲವನ್ನೂ ಕೈಗೊಂಡೆ. ಮನಸ್ಸು ಎವರೆಸ್ಟ್‌ಗೆ ಹತ್ತಿರವಾಗುತ್ತಿತ್ತು. ಪ್ರತಿ ದಿನ ವಿಶ್ವಾಸ ಬೆಳೆಯುತ್ತಾ ಹೋಯಿತು. ಏನೇ ಆಗಲೀ, ತುದಿ ಮುಟ್ಟಿಯೇ ಬರಬೇಕು ಎಂದು ನಿಶ್ಚಯಿಸಿಕೊಂಡೆ.

ಅಷ್ಟರಲ್ಲಿ ನಾನು ಪಾವತಿಸಬೇಕಾದ ಹಣ ಪೂರ್ತಿಯಾಗಿ ಸಂಸ್ಥೆಗೆ ಸೇರಿರಲಿಲ್ಲ. “ನಿನ್ನ ಹಣ ಪಾವತಿಯಾಗದಿದ್ದರೆ ವಾಪಸು ಹೋಗಬೇಕಾದೀತು’ ಎಂದು ಎಚ್ಚರಿಸಿದ ಪ್ರಸಂಗಗಳೂ ಇದ್ದವು. ಗೆಳೆಯರನ್ನು ಸಂಪರ್ಕಿಸಿದಾಗ ಚಿಂತೆ ಮಾಡಬೇಡ ಎಂದರು. ಧೃತಿಗೆಡಲಿಲ್ಲ. ನನ್ನ ಗೆಳೆಯರು ಕೈ ಬಿಡಲಿಲ್ಲ ,ಮೇಲಕ್ಕೇರಿದೆ, ಇಲ್ಲದಿದ್ದರೆ ನಾನು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ವಾಪಸು ಬರಬೇಕಿತ್ತು. ಸಾಗರ್‌ಮಾತಾ ನನ್ನನ್ನು ಕೈ ಹಿಡಿದೆಳೆಯುತ್ತಿದ್ದಳು, ನಾನು ಅತ್ತಲೇ ಚಲಿಸುತ್ತಿದ್ದೆ. ಯಾವ ಚಿಂತೆಯೂ ನನ್ನ ಏಕಾಗ್ರತೆಯನ್ನು ಕೊಲ್ಲಲಿಲ್ಲ. ಎಲ್ಲ ಮುಗಿದು ಏಪ್ರಿಲ್ 15 ರಂದು ಕಾಠ್ಮಂಡುವಿನಿಂದ ಕೊಡಾರಿ ಗಡಿ ದಾಟಿ ಜಾಂಗ್‌ಮೂ ಮಾರ್ಗವಾಗಿ ಬೇಸ್‌ಕ್ಯಾಂಪ್‌ಗೆ ಹೊರಟೆ. ನಾನು ದಾಟುತ್ತಿದ್ದ ನದಿಗೆ ಕಟ್ಟಿದ ಸೇತುವೆ ಹೆಸರು “ಸ್ನೇಹ ಸೇತುವೆ’(ಫ್ರೆಂಡ್‌ಶಿಫ್ ಬ್ರಿಡ್ಜ್). ನಾನು ಬೆಸೆಯಲು ಹೊರಟದ್ದೂ ಅದನ್ನೇ-ಸಾಮರಸ್ಯ.

ಎವರೆಸ್ಟ್ ಏರಲು ಹೊರಟೇನೋ ನಿಂತೆ…ಆದರೆ ?

everest
ಆಗ ಬದುಕು ಇದ್ದರೆ ಮತ್ತೊಮ್ಮೆ ಬರಬಹುದು ಎನಿಸಿತು. ಸಾಗರ್‌ಮಾತಾ ಬೇಕೆಂದರೆ ಹೇಗೂ ಕರೆಸಿಕೊಳ್ಳುತ್ತಾಳೆ ಎಂಬ ಶೆರ್ಫಾನ ಮಾತು ಸುಳ್ಳಾಗಲಿಲ್ಲ. ಆಗ ಹೆಜ್ಜೆ ಹಿಂದಕ್ಕಿಡಲು ಮತ್ತೊಂದು ಕಾರಣವೆಂದರೆ ನನ್ನೊಂದಿಗೇ ಮೇಲೆ ಹತ್ತಲು ಹೋದ ಮೂರು ಮಂದಿ ಕೊರಿಯನ್ ಚಾರಣಿಗರು ಏನಾದರೋ ತಿಳಿಯಲೇ ಇಲ್ಲ ? ಅವರೊಂದಿಗಿನ ಆ ಹಿಂದಿನ ಘಳಿಗೆಗಳು ಮಾತ್ರ ಕಣ್ಣ ಮುಂದಿದ್ದವು, ಅವರು ಕಣ್ಮರೆಯಾಗಿದ್ದರು. ಸರಿ ನಾನು ಸೀದಾ ಬೇಸ್ (ತಳ)ಕ್ಯಾಂಪ್‌ಗೆ ಬಂದು ಬಿಟ್ಟೆ. ನಂತರ ಊರಿನ ದಾರಿ ಹಿಡಿದು ಬಿಟ್ಟೆ. 1998 ರಲ್ಲಿ ಹೀಗೇ ನನ್ನಂಥವನೊಬ್ಬನನ್ನು ಏರಲು ಕರೆದೊಯ್ದ ಇದೇ ಶೆರ್ಫಾ ವಾಪಸು ಬರಲಿಲ್ಲ. ಪರ್ವತ ಏರುವ ಬದುಕನ್ನು ಮುಗಿಸಿ ಹಿಮದೊಳಗೆ ಹಿಮವಾದ.

ದಕ್ಷಿಣ ಭಾರತೀಯರೆಂದರೆ ಕಷ್ಟ ಸಹಿಷ್ಣುಗಳಲ್ಲ ಎಂಬ ಉತ್ತರ ಭಾರತೀಯರ ಆರೋಪ ನಿರಾಕರಿಸಲು ನನ್ನ ಮನಸ್ಸು ರಚ್ಚೆ ಹಿಡಿದಿತ್ತು. ಹಾಗಾಗಿ ಎವರೆಸ್ಟ್ ಏರುವ ಸಾಹಸವನ್ನು ತಲೆ ಮೇಲೆ ಹೊತ್ತುಕೊಂಡೆ. ನನ್ನ 24 ನೇ ವಯಸ್ಸಿನಲ್ಲಿ ಪರ್ವಾತಾರೋಹಣಕ್ಕೆ ಸಂಬಂಧಿಸಿದ ಎಲ್ಲ ಕೋರ್ಸ್ ಪೂರೈಸಿದ್ದೆ. ಎಲ್ಲದರಲ್ಲೂ ಒಳ್ಳೆ ಪ್ರದರ್ಶನ ನೀಡಿದ್ದೆ. ಆಗಲೂ ಕೆಲವರು ಹಿಮಾಲಯ ಪರ್ವತ ಶ್ರೇಣಿಗಳ ಆರೋಹಣ ನಿನ್ನಿಂದ ಸಾಧ್ಯ ಎಂದು ಹುರಿದುಂಬಿಸಿದ್ದರು.

ಅದೇ ಖುಷಿಯಲ್ಲಿ ರಾಜ್ಯದ ತಿಮ್ಮಯ್ಯ ಸಾಹಸ ಅಕಾಡೆಮಿಗೆ ಬಂದು ಅಧಿಕಾರಿಗಳನ್ನು ಕೇಳಿದೆ “ನನಗೆ ಎವರೆಸ್ಟ್ ಹತ್ತಬೇಕು’. ಅವರು ನಕ್ಕರು. “ನಿನ್ನನ್ನು ಹೆಲಿಕಾಫ್ಟರ್‌ನಲ್ಲಿ ಕರ್‍ಕೊಂಡು ಹೋಗಿ ಅಲ್ಲಿ ಬಿಡಬೇಕು ಅಷ್ಟೇ ಎಂದು ವ್ಯಂಗ್ಯವಾಡಿದರು. ಅದಕ್ಕೆ ತಗಲುವ ಖರ್ಚು ವೆಚ್ಚ ಲೆಕ್ಕ ಹಾಕಿದ್ದೀಯಾ ? ಅದು ಕನ್ನಡಿಗರಿಗೆ ಬರಿ ಹಗಲುಗನಸು ಎಂದರು. ಅವರ ಒಂದು ಮಾತು ನಿಜ. ಖರ್ಚು,ವೆಚ್ಚ ಒಂದೂ ಲೆಕ್ಕ ಹಾಕಿರಲಿಲ್ಲಾ, ಆದರೆ ತಲೆಯೊಳಗೆ ಎವರೆಸ್ಟ್‌ನ ಕಿಡಿ ಹೊತ್ತಿಕೊಂಡಿತ್ತು.

ಇಷ್ಟೆಲ್ಲಾ ವ್ಯಂಗ್ಯವಾಡಿದ ಅಧಿಕಾರಿಯ ಒಂದು ಮಾತು “ಒಂದು ವೇಳೆ ಅದಕ್ಕೆ ಆಯ್ಕೆಯಾಗಿದ್ದರೆ ಎಲ್ಲಾದರೂ ಪ್ರಯತ್ನಿಸಬಹುದಿತ್ತೇನೋ?’ ಎಂದದ್ದು ತಲೆಯೊಳಗೆ ಹೊಕ್ಕು ಕಿಡಿ ಕಿಚ್ಚಾಗಿ ಮಾರ್ಪಟ್ಟಿತು. ನಿಜವಾಗಲೂ ಹೇಳುತ್ತಿದ್ದೇನೆ, 1995 ರ ಹಿಂದೆ ಬರಿ ಆಯ್ಕೆಯಾಗುವುದೇ ನನ್ನ ದೊಡ್ಡ ಕನಸಾಗಿತ್ತು. ಅದಕ್ಕಾಗಿ ಪಟ್ಟ ಶ್ರಮವೆಲ್ಲಾ ಇಂದು ಅಮೃತಫಲ.
everest-map

ಭಾರತೀಯ ಪರ್ವಾತಾರೋಹಿಗಳ ಸಂಘ (ಐಎಂಎ)ಕ್ಕೆ ದೂರವಾಣಿ ಮಾಡಿ ಮಾಹಿತಿ ಪಡೆದೆ. ಸಾಮಾನ್ಯವಾಗಿ ಎರಡು ಋತುಮಾನಗಳಲ್ಲಿ ಎವರೆಸ್ಟ್ ಏರಲು ಸಜ್ಜಾಗುತ್ತಾರೆ. ಅದೆಂದರೆ ಒಂದು ಏಪ್ರಿಲ್ ಒಂದರಿಂದ ಜೂನ್ 10. ಎರಡನೆಯದ್ದು ಜುಲೈ 1 ರಿಂದ ಅಕ್ಟೋಬರ್ 10. ನಂತರ ಏರಲು ಸಾಧ್ಯವೇ ಇಲ್ಲ.

ಎರಡನೇ ಋತುಮಾನದಲ್ಲಿ ಅವಲಾಂಚ್ (ಹಿಮ ಬಿರುಗಾಳಿ) ಜೋರು. ಅದಕ್ಕಾಗಿಯೇ ಎಲ್ಲರೂ ಮೊದಲನೇ ಋತುಮಾನವನ್ನೇ ಆಯ್ದುಕೊಳ್ಳುತ್ತಾರೆ. ಎಲ್ಲರೂ ಅಂದರೆ ಅಲ್ಲೇನೂ ಟ್ರಾಫಿಕ್ ಜಾಮ್ ಆಗುವುದಿಲ್ಲ. ಕನಸು ಕಂಡವರೆಲ್ಲಾ ಅಲ್ಲಿ ಎವರೆಸ್ಟ್‌ನ ತಪ್ಪಲಿಗೆ ಬರುತ್ತಾರೆ, ಕಣ್ತುಂಬ ತುಂಬಿಕೊಳ್ಳುತ್ತಾರೆ, ಸಿದ್ಧರಾಗುತ್ತಾರೆ. ಅದರೆ ಅದೃಷ್ಟ ಕೈ ಹಿಡಿದರೆ ತುದಿ ಮುಟ್ಟಿ ಬರುತ್ತಾರೆ, ಇಲ್ಲದಿದ್ದರೆ ಇಲ್ಲ !

ಕನಸು ಕಂಡವರೆಲ್ಲಾ ಎವರೆಸ್ಟ್‌ನ ತಪ್ಪಲಿಗೆ ಬರುತ್ತಾರೆ, ಕಣ್ತುಂಬ ತುಂಬಿಕೊಳ್ಳುತ್ತಾರೆ, ಸಿದ್ಧರಾಗುತ್ತಾರೆ. ಅದೃಷ್ಟ ಕೈ ಹಿಡಿದರೆ ತುದಿ ಮುಟ್ಟಿ ಬರುತ್ತಾರೆ, ಇಲ್ಲದಿದ್ದರೆ ಇಲ್ಲ !
ಈ ಮಾತು ಉಪೇಕ್ಷೆಗೆ ಹೇಳುತ್ತಿಲ್ಲ. ಉದಾಹರಣೆಗೆ ನಾನೇ ಮೊದಲ ಪ್ರಯತ್ನದಲ್ಲಿ ಒಂದುವೇಳೆ ಶೆರ್ಪಾನ ಮಾತು ಮೀರಿದ್ದರೆ ಕೊರಿಯನ್ನರಂತೆ ನತದೃಷ್ಟರ ಸಾಲಿಗೆ ಸೇರಬೇಕಿತ್ತು. ಅದಾಗಲಿಲ್ಲ ಎಂಬುದು ಸತ್ಯ.

ಎವರೆಸ್ಟ್ ಏರುವ ಮತ್ತೊಂದು ಪ್ರಯತ್ನ ರೂಪಕ್ಕೆ ಬಂದದ್ದು ಡಿಸೆಂಬರ್‌ನಲ್ಲಿ. ನೇಪಾಳದ ಪರಿಕ್ರಮ ಪರ್ವಾತಾರೋಹಿಗಳ ಸಂಸ್ಥೆಗೆ ಅರ್ಜಿ ಸಲ್ಲಿಸಿದೆ. ನನ್ನ ಹಿಂದಿನ ಪ್ರಯತ್ನವನ್ನೂ ಅದಕ್ಕೆ ಹಾಕಿದ ಶ್ರಮವನ್ನೂ ಅರುಹಿದೆ. ನಂತರ ಸಂಸ್ಥೆಯಿಂದ ಬರಿ ಪತ್ರ ಬರಲಿಲ್ಲ. ಅದರ ಹಿಂದೆ ಇಬ್ಬರು ಅಂತಾರಾಷ್ಟ್ರೀಯ ಪರ್ವಾತಾರೋಹಣ ತಜ್ಞರು ಬಂದರು. ನಾನು ಎವರೆಸ್ಟ್ ಏರಲು ಎಷ್ಟು ಸಮರ್ಥ? ಎನ್ನುವುದನ್ನು ಪರಿಶೀಲಿಸಬೇಕಿತ್ತು. ಇದರ ವೆಚ್ಚ 50 ಸಾವಿರ ರೂ. ಗಳನ್ನು ನಾನೇ ಭರಿಸಬೇಕು.

ಒಂದುವೇಳೆ ನೇಪಾಳಕ್ಕೇ ಪರೀಕ್ಷೆಗೆ ಹೋದರೆ ಈ ಹಣ ತೆರಬೇಕಿಲ್ಲ. ಇಲ್ಲದಿದ್ದರೆ ಅನಿವಾರ್ಯ.
ಜನವರಿಯಲ್ಲಿ ಪರೀಕ್ಷೆ ನಡೆದದ್ದು ಸಾತನೂರು ಬೆಟ್ಟದ ಮೇಲೆ. ಎಲ್ಲ ಖಚಿತಪಡಿಸಿಕೊಂಡು ಹೋದ ತಜ್ಞರು “ನಿಮಗೆ ಅವಕಾಶ ನೀಡಿದ್ದೇವೆ’ ಎಂದು ಪತ್ರ ಕಳುಹಿಸಿದಾಗ ಆದ ಸಂತೋಷ ಅಷ್ಟಿಷ್ಟಲ್ಲ. ಒಂದು ತಮಾಷೆಯ ಸಂಗತಿಯೆಂದರೆ ಅದಕ್ಕೆ ಹೊಂದಿಸಬೇಕಾದ ವೆಚ್ಚವೂ ಆ ಕ್ಷಣದಲ್ಲಿ ನೆನಪಾಗಲಿಲ್ಲ. ಅದೂ ಸರಿಯೇ, ಸಂತೋಷದ ಸಂದರ್ಭದಲ್ಲಿ ದುಃಖದ ಸಂಗತಿ ಏಕೆ ನೆನಪಿಗೆ ಬರಬೇಕು ? ಸಂತೋಷದ ಘಳಿಗೆಯ ನಂತರ ವಾಸ್ತವ ಅರಿವಾದಾಗ ಚಿಂತೆ ಆವರಿಸಿಕೊಂಡಿತು. ದುಡ್ಡು ಹೊಂದಿಸುವುದು ಹೇಗೆ ?

ಕಂಡ ಕನಸು ಕಪ್ಪು ಬಿಳುಪು ; ನನಸಾದಾಗ ವರ್ಣ ರಂಜಿತ !

2005 ರ ಜೂನ್ 3 ರಂದು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾಗದ ದಿನ. ಪೊಲೀಸ್ ಅಧಿಕಾರಿ ಪಿ.ಎನ್. ಗಣೇಶ್ ಎಂಬವರು ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಎವರೆಸ್ಟ್ ನ್ಯೂಸ್ ನೀಡುವ ಮಾಹಿತಿ ಪ್ರಕಾರ  ಅತ್ಯುನ್ನತ ಶಿಖರವೇರಿದ ಎರಡನೇ ದಕ್ಷಿಣ ಭಾರತೀಯ ಗಣೇಶ್. 

ಪಾಠದಲ್ಲಿ ಓದಿದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎಂಬ ಅಂಶ ಓದಿದ್ದಾಗಲೇ ಪುಳಕವುಂಟಾಗಿತ್ತು. ಜತೆಗೆ ತೇನ್ ಸಿಂಗ್, ಎಡ್ಮಂಡ್ ಹಿಲರಿ…ಸಾಹಸಿಗರ ಕಥೆ ಕೇಳಿದ್ದೆ. ಅದೇ ಎವರೆಸ್ಟ್ ಹತ್ತಿ ಬಂದ ಕನ್ನಡಿಗನ ಸಂದರ್ಶಿಸಿ ವಿಜಯ ಕರ್ನಾಟಕಕ್ಕೆ ಒಂದಿಷ್ಟು ದಿನಗಳ ಕಾಲ ಬರೆಯುವ   ಅವಕಾಶ ಸಿಕ್ಕಿತ್ತು.  ಈಗ ಮತ್ತೆ ಗಣೇಶ್ ಮತ್ತೊಮ್ಮೆ ಎವರೆಸ್ಟ್ ಹಾಗೂ ಅದರ ಕೆಳಗಿನ ಮತ್ತೊಂದು ಪರ್ವತವನ್ನು ಒಂದೇ ಸರಿ ಹತ್ತಲು ಸಿದ್ಧತೆ ನಡೆಸಿದ್ದಾರೆ. ಹೀಗೆ ಹತ್ತುವುದೂ ದಾಖಲೆಯಂತೆ. 

ಅಂದ ಹಾಗೆ ಆಗ ಬರೆದ ಅವರ ಅನುಭವಗಳನ್ನು ನನ್ನ ಬ್ಲಾಗ್ ನಲ್ಲಿ ಹಾಕುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ. 

*

ಕಂಡ ಕನಸು ಕಪ್ಪು ಬಿಳುಪು ; ನನಸಾದಾಗ ವರ್ಣ ರಂಜಿತ !

“ನಾನು ಎವರೆಸ್ಟ್ ಏರುವ ಕನಸು ಕಂಡಿರಲಿಲ್ಲ ನಿಜ. ಆದರೆ ಎವರೆಸ್ಟ್ ತಪ್ಪಲಲ್ಲಿ ಒಂದಷ್ಟು ಹೊತ್ತು ಕಳೆಯಬೇಕೆಂದು ಕೊಂಡಿದ್ದೆ. ಅದು ಸಾಧ್ಯವೇ ಎಂಬ ಶಂಕೆಯ ತಳದಲ್ಲೇ ಪ್ರಯತ್ನ ಪಟ್ಟರೆ ಸಾಧ್ಯವೆಂಬ ವಿಶ್ವಾಸ ಮೂಡಿತ್ತು. ಕೊನೆಗೂ ತುದಿಯನ್ನು ಮುಟ್ಟಿ ಬಂದೆ. ಜೀವನದ ಸಾರ್ಥಕ್ಯದ ಘಳಿಗೆ ಆ ಎಂಟರಿಂದ ಹನ್ನೆರಡು ನಿಮಿಷ’.

pnganesh

  ಅಷ್ಟೂ ನಿಮಿಷ ಚಾಚಿಕೊಂಡ ಮೋಡಗಳನ್ನು ನೋಡುತ್ತಾ ನಿಂತುಬಿಟ್ಟೆ. ಸ್ವರ್ಗ      ಎನಿಸಿತು. ಭೂಮಿಯ ಅತ್ಯಂತ ಎತ್ತರದ ಜಾಗದಲ್ಲಿ ನಿಂತುಕೊಂಡಿದ್ದೆ. ಹೃದಯ    ತುಂಬಿ ಬಂದಿತ್ತು. ಸುತ್ತಲಿನ ಗಾಳಿಯ ದನಿ ಶ್ರುತಿಯಂತೆ ಕೇಳುತ್ತಿತ್ತು.    ಸಂತೋಷದಿಂದ ಉಬ್ಬಿ ಹೋಗಿದ್ದೆ. ಎವರೆಸ್ಟ್ ಏರಿದ ಸಂಭ್ರಮ  ಹಂಚಿಕೊಳ್ಳೋಣವೆಂದರೆ ಸುತ್ತಲೂ ಯಾರೂ ಇಲ್ಲ, ಒಬ್ಬಂಟಿ’.

 ಬೆಂಗಳೂರಿನ ಕಾಟನ್‌ಪೇಟೆಯ ಬಳಿಯ ರಾಮಕೃಷ್ಣ ಸ್ವತಂತ್ರಾನಂದ ವಿದ್ಯಾ ಸಂಸ್ಥೆಯಲ್ಲಿ ಓದಿದವ. ಎಂಟನೇ ತರಗತಿಯಲ್ಲೆ ಬೆಟ್ಟ ಹತ್ತುವ ಹುಚ್ಚು ಹಿಡಿದಿತ್ತು. ಎಷ್ಟೆಂದರೆ ಕ್ಲಾಸಿಗೂ ಚಕ್ಕರ್ ಹೊಡೆದು ಬೆಟ್ಟ ಹತ್ತಲು ಹೋಗುತ್ತಿದ್ದೆ. ಒಬ್ಬ ಒಳ್ಳೆ ಗೆಳೆಯನಿದ್ದ. ಅವನ ಊರು ರಾಮನಗರ. ನಾನು ಮೊದಲು ಹತ್ತಿದ ಊರಿನ ಎವರೆಸ್ಟ್ ಎಂದರೆ ರಾಮನಗರ ಬೆಟ್ಟ.

ಬಹುಶಃ ಆ ಹುಚ್ಚು ನನ್ನನ್ನು ಆವರಿಸಿಕೊಳ್ಳದಿದ್ದರೆ ಇಂದು ಎವರೆಸ್ಟ್ ಏರುತ್ತಿರಲಿಲ್ಲ. ಮೊದಲಿಂದಲೂ ಬಿಲ್ಟಿಂಗ್ ಹತ್ತುವುದು, ಯಾರಾದರೂ ಜೋರು ಮಾಡಿದರೆ ಅಲ್ಲಿಂದಲೇ ಕೆಳಗೆ ಹಾರುವುದು, ಉಳುಕಿದ ಜಾಗಕ್ಕೆ ಕಾಯಂಗಡಿ ಪಾಪಣ್ಣನ ಬಳಿ ಒಂದು ರೂ. ನೀಡಿ ಔಷಧಿ ತಿಕ್ಕಿಸಿಕೊಳ್ಳುವುದು, ಅಪ್ಪನಿಂದ ಬೈಯಿಸಿಕೊಳ್ಳುವುದೂ ಎಲ್ಲವೂ ಸಾಮಾನ್ಯವಾಗಿತ್ತು. ಹತ್ತುವುದೆಂದರೆ ಅಂದಿನಿಂದಲೂ ಸಂಭ್ರಮವೇ. ಈಗ ದೊಡ್ಡದ್ದನ್ನು ಹತ್ತಿ ಬಂದಿದ್ದೇನೆ ಎಂಬುದು ಸಂಭ್ರಮವನ್ನು ಇಮ್ಮಡಿಸಿದೆ. ಈಗ ಒಂದು ಸಾರ್ಥಕ ಭಾವ ನನ್ನನ್ನು ತುಂಬಿದೆ. 

ನನ್ನ ಹೆಂಡತಿ, ಕುಟುಂಬ ಎಲ್ಲವೂ “ಇದೊಂದು ಬಾರಿ ಹೋಗಿ ಬಾ’ ಎಂದು ಹರಸಿ ಕಳಿಸಿತ್ತು. ಆರ್ಥಿಕ ಸಂಕಷ್ಟವನ್ನು ಹಲವು ಗೆಳೆಯರು ನೀಗಿಸಲು ಹೊಣೆ ಹೊತ್ತಿದ್ದರು. ಇದ್ದದ್ದು ನನಗೊಂದೇ- ಬೆಟ್ಟ ಏರುವ ಕಷ್ಟ. ಎಂದೋ ಅದನ್ನು ಹೊತ್ತುಕೊಂಡದ್ದರಿಂದ ಅಷ್ಟೊಂದು ಭಾರವೆನಿಸಲಿಲ್ಲ. ಒಂದುವೇಳೆ ಈ ಬಾರಿ ನಾನು ಯಶಸ್ವಿಯಾಗದಿದ್ದರೆ ಮತ್ತೆ ನನ್ನವರು ಕಳುಹಿಸುವುದು ಕಷ್ಟವಿತ್ತು. ಅದಕ್ಕೇ ಇರಬೇಕು-ಸಾಗರ್‌ಮಾತಾ (ಎವರೆಸ್ಟ್) ನನ್ನನ್ನು ಬಿಗಿದಪ್ಪಿಕೊಂಡಳು, ಹರಸಿದಳು, ಆಶೀರ್ವದಿಸಿದಳು’. 

1995 ರಲ್ಲಿ ನನ್ನ ಶೆರ್ಫಾ ಹೇಳಿದ ಮಾತು ಸತ್ಯವೆನಿಸುತ್ತಿದೆ. ಆಗಲೂ ಹೀಗೆಯೇ ಕಷ್ಟಪಟ್ಟು ಪರ್ವತ ಹತ್ತಿದ್ದೆ. ಎಲ್ಲ ಸರಿಯಾಗಿತ್ತು. ಅದಕ್ಕೆ ತಗುಲುವ ೧೫ ಲಕ್ಷ ರೂ. ಭರಿಸಲು ಎರಡು ನಿವೇಶನಗಳನ್ನು ಮಾರಿ ದುಡ್ಡು ಹೊಂದಿಸಿದ್ದೆ. ನನ್ನ ಪತ್ನಿ ಸುಮಂಗಲಾ ಮೌನದಿಂದಲೇ ಎಲ್ಲವನ್ನೂ ಸಹಿಸಿಕೊಂಡಿದ್ದಳು. ಅವಳೊಂದಿಗೆ ಮದುವೆಯಾಗುವ ಮುನ್ನ ಕೇಳಿಕೊಂಡಿದ್ದು ಇದೊಂದನ್ನೇ “ಎವರೆಸ್ಟ್ ಏರಲು ಅವಕಾಶ ಕೊಡಬೇಕು’. “ಒಂದೇ ಬಾರಿ’ ಎಂದಿದ್ದಳು. ಎರಡು ಬಾರಿ ಅವಕಾಶ ಕೊಟ್ಟಳು. ಒಮ್ಮೆ ತುದಿಯನ್ನು ಮುಟ್ಟಿ ಬಂದೆ.

ಆ ಬಾರಿ ಅದೃಷ್ಟ ನನ್ನಲ್ಲಿರಲಿಲ್ಲ, ಬರಿ ಶ್ರಮವಿತ್ತು. ಇದ್ದದ್ದನ್ನೆಲ್ಲಾ ಪಣವಿಟ್ಟಂತೆ ತೊಡಗಿಸಿದೆ. ಆದರೂ ೮, ೪೦೦ ಮೀಟರ್ ಹತ್ತಿದೆ. ಇನ್ನೂ ಬರಿ ೪೮ ಮೀಟರ್ ಉಳಿದಿತ್ತು. ಅಷ್ಟೊಂದು ಅಲ್ಪ ದೂರ (೮, ೪೦೦ ಕ್ಕೆ ಹೋಲಿಸಿದರೆ)ಹತ್ತಿ ಬಿಡುವ ಉತ್ಸಾಹವೂ ಇತ್ತು. ಶೆರ್ಫಾನೂ ಮೊದಲು ಸಹಕರಿಸಿದ್ದ. ಆದರೆ ಹವಾಮಾನ ಪ್ರತಿಕೂಲವಾಗಿತ್ತು. ಮೇಲೆ ಹತ್ತಲು ಸಹಕರಿಸುತ್ತಿರಲಿಲ್ಲ. ಅಲ್ಲದೇ ಲ್ಯಾಡರ್ (ಏಣಿ) ಯೂ ಕಣ್ಮರೆಯಾಗಿತ್ತು. ಏನು ಮಾಡುವುದೋ ತೋಚುತ್ತಿರಲಿಲ್ಲ. ವಾಪಸು ಹೋಗಿ ಮತ್ತೊಮ್ಮೆ ಬರೋಣವೆಂದರೆ ಹಣ ಹೊಂದಿಸುವುದು ದುಸ್ತರವೆನಿಸುತ್ತಿತ್ತು. 

ಅಷ್ಟೇ ಅಲ್ಲ. ದೇವರ ಗುಡಿಗೆ ಬಂದು ದೇವರನ್ನು ದರ್ಶನ ಮಾಡಲಿಲ್ಲವಲ್ಲಾ ಎಂಬ ಕೊರಗು ಕೊರೆಯಲಾರಂಭಿಸಿತು. ಆದರೂ ಹುಚ್ಚು ಧೈರ್ಯದಿಂದ ಮತ್ತೊಂದು ಹೆಜ್ಜೆ ಮುಂದಿಟ್ಟೆ. ಆದರೆ ಶೆರ್ಫಾ ಒಂದೇ ಮಾತು ಹೇಳಿದ “ಭಾಯೀ, ಊಪರ್ ಮತ್ ಜಾನಾ. ಜಬ್ ಸಾಗರ್‌ಮಾತಾ ಬುಲಾತಾ ಹೈ, ತಬೀ ಜಾನೇ ಕಾ, ತುಮ್ಹಾರಾ ಜಿಂದಗಿ ಮೇ ಸಾಗರ್‌ಮಾತಾಕಾ ದರ್ಶನ್ ಭಾಗ್ಯ ರಹತೇತೋ ಹೋಗಾ’ ಎಂದ. (ಸಶೇಷ)