ಲೋಕಾಯುಕ್ತರಿಗೆ ಧನ್ಯವಾದಗಳು

ಪ್ರಜಾತಂತ್ರ ಪ್ರೀತಿಸುವ ಪ್ರತಿಯೊಬ್ಬರೂ ಲೋಕಾಯುಕ್ತರಾಗಿ ಮೊನ್ನೆಯಷ್ಟೇ ನಿವೃತ್ತರಾದ ಎನ್. ಸಂತೋಷ್ ಹೆಗ್ಡೆಯವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಕಾನೂನಿಗೆ ಇರಬಹುದಾದ ಸಾಧ್ಯತೆಯನ್ನು ತೋರಿಸುತ್ತಲೇ, ಕಾನೂನನ್ನು ನಮ್ಮನ್ನಾಳುವ ಮಂದಿ ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲರು ಹಾಗೂ ಊನಗೊಳಿಸಬಲ್ಲರೆಂಬುದನ್ನು ತೋರಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಪರ್ವ ಮುಗಿದಿದೆ. ಐದು ವರ್ಷಗಳ ಹಿಂದೆ ಹುದ್ದೆಗೇರಿದಾಗ ಸದ್ದು ಮಾಡಿರಲಿಲ್ಲ. ತಣ್ಣಗೆ ಬಂದು ಕುಳಿತಿದ್ದರು. ಆದರೆ, ಅವಧಿ ಪೂರೈಸಿ ಹೊರಡುವಾಗ ಬಹಳಷ್ಟು ಮಂದಿಯ ಬುಡಕ್ಕೆ ಬಿಸಿನೀರು ಸುರಿದು ಹೊರಟಿದ್ದಾರೆ. ಅದರಲ್ಲೂ ನಮ್ಮನ್ನಾಳುವ ಮಂದಿಗೆ ಪಾಠ ಕಲಿಸಿದ್ದಕ್ಕೆ ನಾವೆಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.
ಇಂದು ಹೆಗ್ಡೆ ರಾಜಕಾರಣಿಗಳ ಕಣ್ಣಿನಲ್ಲಿ ತೀರಾ ಟೀಕೆಗೊಳಗಾದವರು. ಆದರೆ, ಪ್ರಜಾತಂತ್ರವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅವರಿಗೆ ‘ಹ್ಯಾಟ್ಸಾಫ್’ ಹೇಳಬೇಕು. ಅಣ್ಣಾ ಹಜಾರೆಯಂತಹವರು ನಮ್ಮೊಳಗೆ ಹೊಸ ಕನಸನ್ನು ಸೃಷ್ಟಿಸಿದವರು. ಹೊಸ ತಲೆಮಾರು ಭ್ರಷ್ಟಾಚಾರದಿಂದ ಬೇಸತ್ತು ದೇಶವೇ ಸಾಯುತ್ತದೆಂದುಕೊಂಡಾಗ ಅಣ್ಣಾ ಹಜಾರೆ ‘ಹಾಗೆ ಭಯಪಡಬೇಕಿಲ್ಲ. ಕೈ ಜೋಡಿಸಬೇಕಷ್ಟೇ’ ಎಂದರು. ಹಾಗಾಗಿ ಜನ್ ಲೋಕಪಾಲ್ ಮಸೂದೆ ಸಂಬಂಧ ದೇಶಾದ್ಯಂತ ಅಣ್ಣಾರ ಹೋರಾಟಕ್ಕೆ ಸಾಥ್ ದೊರೆತದ್ದು ಹೆಚ್ಚಾಗಿ ಯುವ ತಲೆಮಾರುಗಳಿಂದ.

ಈ ದಿಸೆಯಲ್ಲೇ ನಮ್ಮ ರಾಜಕಾರಣಿ, ಅಧಿಕಾರಿಗಳಿಗೂ ಒಂದಿಷ್ಟು ಭಯ ಮೂಡಬೇಕಿತ್ತು. ‘ನಾವು ಏನು ಮಾಡಿದರೂ ಸೈ’ ಎಂದುಕೊಂಡವರಿಗೆ ಸಣ್ಣದೊಂದು ಬರೆ ಕೊಟ್ಟು ‘ಬಿಸಿ’ ಅನುಭವ ಕೊಡಬೇಕಿತ್ತು. ಅದನ್ನು ಸಂತೋಷ್ ಹೆಗ್ಡೆಯವರು ಚೆನ್ನಾಗಿಯೇ ಮಾಡಿದ್ದಾರೆ. ಕೊಟ್ಟ ಬರೆ ಹೇಗಿದೆಯೆಂದರೆ, ಬೇರೆಯವರೂ ತಮ್ಮ ತಮ್ಮ ತೊಡೆಗಳನ್ನು ಮುಟ್ಟಿನೋಡಿಕೊಳ್ಳುತ್ತಿರಬೇಕು.

ಎನ್. ವೆಂಕಟಾಚಲ ಇದೇ ಹುದ್ದೆಯಲ್ಲಿದ್ದಾಗ ಬರೀ ಪ್ರಚಾರಕ್ಕೆ ದಾಳಿ ಮಾಡುತ್ತಿದ್ದರೆಂದು ಒಂದಿಷ್ಟು ಮಂದಿ ಆರೋಪಿಸಿದ್ದರು. ಇದ್ದರೂ ಇರಬಹುದು. ಆದರೆ ವೆಂಕಟಾಚಲ ಅವರು ಬರುವ ಮೊದಲು ‘ಲೋಕಾಯುಕ್ತ’ ವೆಂಬುದೊಂದಿದೆ ಎಂದೇ ಗೊತ್ತಿರಲಿಲ್ಲ. ಕೊನೇಪಕ್ಷ ‘ಲೋಕಾಯುಕ್ತಕ್ಕೆ ನೀವು ದೂರು ಕೊಡಬಹುದು’ ಎಂದು ಹೇಳಿದವರೇ ವೆಂಕಟಾಚಲರು. ಆ ದಾಳಿ ಸಂದರ್ಭದಲ್ಲೆಲ್ಲಾ ಮಾಧ್ಯಮಗಳೆದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಜನ ನಿಜಕ್ಕೂ ಸಮಾಧಾನ ಪಟ್ಟುಕೊಂಡಿದ್ದರು. ಅದಕ್ಕಿಂತ ಮೊದಲು ಏನೇ ಮಾಡಿದರೂ ಈ ಅಧಿಕಾರಿಗಳಿಗೆ ಲಂಚ ಕೊಟ್ಟೇ ಬದುಕಬೇಕೆಂದಿದ್ದ ಜನ, ನಿಧಾನವಾಗಿ ಬುದ್ಧಿವಂತರಾದರು. ‘ನನ್ನ ಕೈಲಾದುದ್ದನ್ನು ಕೊಡಬಲ್ಲೆ. ಅದಕ್ಕಿಂತ ಹೆಚ್ಚಿನದಾದರೆ ಲೋಕಾಯುಕ್ತಕ್ಕೆ ದೂರು ಕೊಡುವುದೊಂದೇ ಬಾಕಿ’ ಎಂಬ ಲೆಕ್ಕಾಚಾರಕ್ಕೆ ಇಳಿದರು. ಅದರ ಪರಿಣಾಮ ಬೇಕಾದಷ್ಟಿದೆ. Continue reading