ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

ಈ ಬುಧವಾರದ ಕ್ರೌರ್ಯ !

ನಿಜಕ್ಕೂ ಘೋರ. ಬುಧವಾರ ರಾತ್ರಿ ೧೧ ರಿಂದ ಕಣ್ಣು ಕೀಳದೇ ಸುಮಾರು ಬೆಳಗಿನ ಜಾವ ೩. ೩೦ ವರೆಗೂ ಟಿ. ವಿ. ಮುಂದೆ ಕುಳಿತಿದ್ದೆ. ಪ್ರತಿ ಕ್ಷಣದ ಆತಂಕ ನಮ್ಮ ವ್ಯವಸ್ಥೆಯ ಬಗ್ಗೆಯೇ ಅಸಹನೆ ಹುಟ್ಟಿಸಿತು. ರೋಸಿ ಹೋಗಿ ಮಲಗಿಕೊಂಡೆ. ಗುರುವಾರ ಬೆಳಗ್ಗೆ ಎಲ್ಲವೂ ಮುಗಿದು, ಸಾವಿನ ಸಂಖ್ಯೆಗೂ ವಿರಾಮ ಸಿಕ್ಕಿ, ಒಳಗಿದ್ದ ಉಗ್ರರೆಲ್ಲಾ ಸತ್ತು ಇಲ್ಲವೋ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾರೆಂದು ಬೆಳಗ್ಗೆ ೯ ಕ್ಕೆ ಟಿ. ವಿ. ಹಾಕಿದರೆ ಮತ್ತಷ್ಟು ವಿಷಾದ ಆವರಿಸಿಕೊಂಡಿತು. ನಂತರ ಮನೆಯ ಟಿ. ವಿ. ಆರಿಸಲಿಲ್ಲ. ಕಚೇರಿಗೆ ಬಂದ ಮೇಲೂ ಟಿ. ವಿ. ಮುಂದೆ ವಿಷಾದದಿಂದಲೇ ಪೊಲೀಸರ ಕಾರ್ಯಾಚರಣೆ ನೋಡುತ್ತಾ ಹತಾಶನಾದೆ.

“ಮುಂಬಯಿ ಮೇರೆ ಜಾನ್’ ನ ಹಲವು ದೃಶ್ಯಗಳು ಹಸಿ ಹಸಿಗೊಂಡಂತೆ ಅನಿಸಿತು. ನಿಜವಾಗಲೂ ಯಾರು ಏನು ಬೇಕಾದರೂ ತಿಳಿಯಲಿ. ಇದುವರೆಗೆ ಬಾಂಬ್ ಸ್ಫೋಟದಲ್ಲಿ ಭಾಗಿಯಾದವರಲ್ಲಿ ಒಂದಷ್ಟು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲೇಬೇಕು. ಇಲ್ಲವಾದರೆ ಈ ಕೃತ್ಯಗಳು ನಿಲ್ಲುವುದಿಲ್ಲ, ಸರಣಿ ಮುಂದುವರಿಯುತ್ತದೆ.
ನಾವು ಜಾತ್ಯತೀತ ಹಣೆಪಟ್ಟಿಯನ್ನು ನಂತರ ಕಟ್ಟಿಕೊಳ್ಳೋಣ. ಸಾರ್ವಜನಿಕರ, ಅಮಾಯಕರ ಬದುಕನ್ನು ದಿನೇ ದಿನೇ ಬಲಿಗೊಡುತ್ತಾ, ಅಸಹನೀಯಗೊಳಿಸುತ್ತಾ ವಿಶ್ವದ ನಕಾಶೆಯಲ್ಲಿ “ಶಾಂತಿಯ ಭಾರತ’ ಎಂಬ ಕೀರ್ತಿ ಕಳೆದುಹೋಗುತ್ತದಲ್ಲಾ ಎಂದು ಆತಂಕ ಪಡುವ ಅಗತ್ಯವಿಲ್ಲ.

ಭಯೋತ್ಪಾದನೆಗೆ ಧರ್ಮವೂ ಇಲ್ಲ, ಜಾತಿಯೂ ಇಲ್ಲ. ಹಾಗಾಗಿಯೇ ಹೇಳಿದ್ದು. ಅಮಾಯಕರ ಬಲಿ ತೆಗೆದುಕೊಳ್ಳುವ ಭಯೋತ್ಪಾದಕರಿಗೆ ಹೀಗೆ ಉಗ್ರ ಶಿಕ್ಷೆ ವಿಧಿಸದಿದ್ದರೆ ಅಮಾಯಕರೂ ಪ್ರಾಣ ಕಳೆದುಕೊಳ್ಳುತ್ತಲೇ ಇರುತ್ತಾರೆ. ನಾವೆಲ್ಲರೂ-ಸರಕಾರ-ನಮ್ಮ ಜಾತ್ಯತೀತವಾದಿಗಳು…ಇತ್ಯಾದಿ… ಇತ್ಯಾದಿ- ರಾತ್ರಿಯೆಲ್ಲಾ ದುಃಖಗೊಂಡು ಬೆಳಗ್ಗೆ ಎದ್ದು ತಿಂಡಿ ತಿಂದು ರೈಲಲ್ಲೋ, ಬಸ್ಸಲ್ಲೋ ಕೆಲಸಕ್ಕೆ ಹೋಗಿ ಮರೆತು ಬಿಡುವುದು ನಮ್ಮ ಜಾಯಮಾನವಾಗಿ ಹೋಗಿದೆ. ನಮ್ಮನ್ನಾಳುವವರೂ ದೊಡ್ಡ ಘೋಷಣೆ ಕೊಟ್ಟು, ನಂತರ ಎಂದಿನ ನಾಟಕದ ಪಾತ್ರಗಳಿಗೆ ತೆರಳಿ ಬಿಡುತ್ತಾರೆ. ಬರೀ ಪ್ರದರ್ಶನ ನೋಡಿ ಚಪ್ಪಾಳೆ ತಟ್ಟಿ ಕುಳಿತುಕೊಳ್ಳುವುದು ನಮ್ಮ ಅಭ್ಯಾಸ.

೧೨೫ ಕ್ಕೂ ಹೆಚ್ಚು ಮಂದಿಯ ಮಾರಣಹೋಮ ನಡೆದದ್ದು ಉಗ್ರರಿಂದ. ಇಂಥ ಎಷ್ಟು ಬಾಂಬ್ ಸ್ಫೋಟಗಳು ನಡೆದಿಲ್ಲ ? ಕಳೆದ ಆರು ತಿಂಗಳಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಬಾಂಬ್ ಸ್ಫೋಟಗಳು ನಡೆದಿವೆ. ಅಷ್ಟಕ್ಕೂ ನಾವು ಕೈಗೊಂಡಿರುವುದೇನು ? ತಕ್ಷಣವೇ ಕಂಪ್ಯೂಟರ್ ಭಾವಚಿತ್ರ ತಯಾರಿಸಿ ಮಾಧ್ಯಮದಲ್ಲಿ ಹಾಕಿ, ಕೆಲವರನ್ನು ಹಿಡಿದು ತನಿಖೆ ಮಾಡಿ ಜೈಲಲ್ಲಿ ಒಳ್ಳೆ ಊಟ ಕೊಟ್ಟು ಕೂರಿಸುವುದು ಬಿಟ್ಟರೆ ಮಾಡಿರುವುದೇನು ? ಅದಕ್ಕೇ, ನಮ್ಮಲ್ಲಿ ಭಯೋತ್ಪಾದಕರು ಮತ್ತಷ್ಟು ಉಗ್ರರಾಗುತ್ತಿದ್ದಾರೆ !

ಅಮೆರಿಕದಲ್ಲಿ ಸೆಪ್ಟೆಂಬರ್ ೧೧ ರ ಘಟನೆ ನಂತರ ಹೇಳಿ, ನನ್ನ ಗಮನಕ್ಕೆ ಬಂದಂತೆ ಒಂದೇ ಒಂದು ಭಯೋತ್ಪಾದಕರ ದಾಳಿ ನಡೆದಿಲ್ಲ. ಲಾಡೆನ್ ಸಂತತಿ ಬೊಬ್ಬೆ ಹೊಡೆಯುತ್ತಿದೆಯೇ ಹೊರತು ಯಾವ ದಾಳಿಯೂ ನಡೆದಿಲ್ಲ. ಅದಕ್ಕೆ ಅಲ್ಲಿನ ಸರಕಾರ ಕೈಗೊಂಡ ದಿಟ್ಟ ಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಜತೆಗೆ ಚೀನಾದ ಒಲಿಂಪಿಕ್ಸ್ ಮುನ್ನಾ ದಿನಗಳಲ್ಲಿ ಸ್ಫೋಟ ನಡೆಯಿತು. ಎಲ್ಲರೂ ಒಲಿಂಪಿಕ್ಸ್‌ನಲ್ಲಿ ಭಾರಿ ದುರಂತವಿದ್ದೀತೆಂದು ಗಾಬರಿಯಾಗಿದ್ದರು. ಆದರೆ ಅಲ್ಲಿಯ ಸರಕಾರವೂ ತಕ್ಷಣವೇ ಕೈಗೊಂಡ ಕ್ರಮ ಹೇಗಿತ್ತೆಂದರೆ ಭಯೋತ್ಪಾದಕರಿರಲಿ, ಶಂಕಿತರಾರೂ ಆ ದುಸ್ಸಾಹಸಕ್ಕೆ ಯೋಚಿಸಲೂ ಹೋಗಲಿಲ್ಲ. ಇಂಥ ದಿಟ್ಟ ಕ್ರಮ ನಮ್ಮಲ್ಲಿ ಏಕೆ ಸಾಧ್ಯವಾಗದು ?

ನಮ್ಮಲ್ಲಿ ಇಂದಿಗೂ ಉಗ್ರರಿಗೂ ಭಯವಿಲ್ಲ. ಅವರಿಗೆ ಸಹಕರಿಸುವವರಿಗೂ ಭಯವಿಲ್ಲ. ತನಿಖೆಗೆ ಒಂದಿಷ್ಟು ವರ್ಷ, ಶಿಕ್ಷೆಗೆ ಮತ್ತಷ್ಟು ವರ್ಷ…ಹೀಗೆ ಕಳೆಯುವಷ್ಟರಲ್ಲಿ ಅಂಥದ್ದೇ ಕೃತ್ಯದಲ್ಲಿ ತೊಡಗಿದ ಮತ್ತಷ್ಟು ಮಂದಿ ಅಮಾಯಕರ ಆಯುಷ್ಯವನ್ನು ಹರಣ ಮಾಡಿರುತ್ತಾರೆ. ಆದರೂ ನಮಗದು ಏನೂ ಅನಿಸದು. ಅಮಾಯಕರು ಬಲಿಯಾಗಬಾರದೆಂಬ ಕಾಳಜಿಯ ಮಧ್ಯೆ ಅವರಲ್ಲಿ ಯಾವ ಜಾತಿಯ ಅಮಾಯಕರು ಎಂದು ಜಾತಿ ಹುಡುಕುವಂಥ ಹೀನ ಕೆಲಸ ನಮ್ಮ ಆಳುವವರಿಂದಲೇ ನಡೆಯುತ್ತಿದೆ. ಇದೇ ನಮ್ಮ ದೊಡ್ಡ ದುರಂತ.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂಬುದು ನಿಜ. ಅದರರ್ಥ ಆ ಪ್ರಯತ್ನದಲ್ಲಿ ಸಾವಿರಾರು ಮಂದಿ ಅನ್ಯಾಯವಾಗಿ ಬಲಿಯಾಗಬೇಕೆಂಬುದು ನಿಜಕ್ಕೂ ವ್ಯವಸ್ಥೆಯನ್ನೇ ಅಪಹಾಸ್ಯಕ್ಕೀಡು ಮಾಡುವ ಸಂಗತಿ. ಮುಂಬಯಿಯ ಬುಧವಾರದ ದಾರುಣ ಘಟನೆಯಂತೂ ನೆನಪಿಸಿಕೊಳ್ಳಲಾಗದು. ಇಡೀ ದಿನಪೂರ್ತಿ ಬದುಕಲು ಪ್ರಾಣವನ್ನು ಮುಷ್ಟಿಯಲ್ಲಿಟ್ಟುಕೊಂಡ ಒತ್ತೆಯಾಳುಗಳ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ. ಕ್ಷಣ ಕಾಲ ಆ ಪಾತ್ರಗಳನ್ನು ನಿಮ್ಮೊಳಗೆ ತುಂಬಿಕೊಳ್ಳಿ. ಅವರ ಅಸಹಾಯಕತೆ ಅರ್ಥವಾಗುತ್ತದೆ. ಅಂಥ ಪರಿಸ್ಥಿತಿ ಯಾರಿಗೂ ಬರಬಾರದು !

ಹೀಗೆಲ್ಲಾ ಆದರೂ, ನಮ್ಮ ಆಳುವವರು ಮತ್ತೆ ವೋಟಿನ ಲೆಕ್ಕಾಚಾರ ಮಾಡುತ್ತಾರೆ. ಅವರ ತೂಗಿ ಅಳೆಯುವ ಲೆಕ್ಕಾಚಾರದಲ್ಲಿ ಲೆಕ್ಕಕ್ಕಿಲ್ಲದೇ ಸಾವಿರಾರು ಮಂದಿ ಅಮಾಯಕರು ಸರಿದು ಹೋಗುತ್ತಾರೆ. ಅದು ಅವರ ಲೆಕ್ಕಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ ; ಯಾರ ಲೆಕ್ಕಕ್ಕೂ ಬಾರದು. ಬದುಕನ್ನು ಕಟ್ಟಿಕೊಳ್ಳಲು ಹೋದ ಮಂದಿ ಹೀಗೆ ಸದ್ದಿಲ್ಲದೇ ಸರಿದು ಹೋದರೆ ಹೇಗೆ…ಉತ್ತರ ಹೊಳೆಯುವುದಿಲ್ಲ. ಉತ್ತರವಿದ್ದರೂ ಪ್ರಶ್ನೆಯನ್ನೇ ಪ್ರೀತಿಸುವ ಮಂದಿಗೆ ಏನನ್ನೂ ಹೇಳಲು ಬಾರದು.

ಬುಧವಾರದ ದಾಳಿಯಲ್ಲಿ ಉಗ್ರರ ವಿರುದ್ಧ ಸೆಣಸುತ್ತಾ ಬಲಿಯಾದ ಪೊಲೀಸರಿಗೆ, ಯೋಧರಿಗೆ ನಾವೆಲ್ಲರೂ ಸದ್ಗತಿ ಕೋರಬೇಕು. ಇನ್ನಷ್ಟು ಮಂದಿಯ ಪ್ರಾಣ ಉಳಿಸಲು ತಮ್ಮ ಪ್ರಾಣ ತೆತ್ತವರಿಗೆ ನಮನ ಸಲ್ಲಿಸಬೇಕು. ಇವರ ಸಂಖ್ಯೆ ಹೆಚ್ಚಾಗಲಿ ಎಂದು ನಮ್ಮನ್ನಾಳುವ ಮಂದಿ ಮೊಸಳೆ ಕಣ್ಣೀರು ಸುರಿಸಿ ಹೇಳುತ್ತಾರೆ. ಅದರರ್ಥ “ಹೀಗೆ ನಮ್ಮ ಲೆಕ್ಕಾಚಾರಕ್ಕೆ ಸಾಯುವವರು ಹೆಚ್ಚಾಗಲಿ’ ಎಂಬುದು ಗೂಢಾರ್ಥ. ಈ ಮನಸ್ಸಿನೊಳಗಿನ ಕ್ರೌರ್ಯವನ್ನು ಎಲ್ಲರೂ ಖಂಡಿಸಬೇಕು. ಒಂದು ದಿನ ರೋಸಿ ಹೋದ ಜನ “ಎ ವೆಡ್ನೆಸ್ ಡೇ’ ಯನ್ನು ನಿಜಗೊಳಿಸಿ ಬಿಡುತ್ತಾರೇನೋ ಎನಿಸುತ್ತದೆ.

ಒಂದು ಸಂಘಟಿತ ವ್ಯವಸ್ಥೆಯ ವಿರುದ್ಧವೇ 24 ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಪ್ರತಿ ದಾಳಿ ನಡೆಸುವ ಮಟ್ಟಿಗೆ ಈ ಉಗ್ರರು ಶಸ್ತ್ರ ಸಜ್ಜಿತರಾಗಿದ್ದರೆಂದರೆ ನಮ್ಮ ವ್ಯವಸ್ಥೆಯ ಮೇಲೆ ನಂಬಿಕೆ ಕುಸಿಯುವುದಿಲ್ಲವೇ? …ಒಟ್ಟಿನಲ್ಲಿ ಯಾರ ವೈಫಲ್ಯಕ್ಕೆ ಈ ಬಲಿ ?

15 Responses to “ಈ ಬುಧವಾರದ ಕ್ರೌರ್ಯ !”

  1. ಪ್ರತಿಷ್ಠಿತ ಮುಂಬೈಯ ದೊಡ್ಡ ಸ್ಟಾರ್ ಹೋಟೆಲುಗಳಲ್ಲಿಯೇ ಹೀಗೆ ದಿಟ್ಟವಾಗಿ ಉಗ್ರರು ಗನ್, ರೈಫಲ್ ಹೊತ್ತುಕೊಂಡು ಒಳಹೋಗಿ ಇಷ್ಟೆಲ್ಲ ಅನಾಹುತ ಮಾಡಿದರೆಂದರೆ, ನಮ್ಮಲ್ಲಿನ ವ್ಯವಸ್ಥಿತ ಬಂದೋಬಸ್ತ್ ಎಷ್ಟು ಅವ್ಯವಸ್ಥಿತ ಅಂತ ಗೊತ್ತಾಗುತ್ತೆ. ಉಗ್ರರಿಗೆ ಬಲಿಯಾದವರು ಅಮಾಯಕರು, ಸಾಮಾಜಿಕರು, ಪ್ರವಾಸಿಗರು; ಓಟಿನ ಲೆಕ್ಕ ಹಾಕುವ ಯಾವುದೇ ರಾಜಕಾರಿಣಿಯಲ್ಲ, ನೋಟಿನ ಲೆಕ್ಕ ಹಾಕುವ ಯಾವುದೇ “ನಾಯಕರಲ್ಲ”, ಜನರ ಪರವೆಂದು ಬೊಗಳುವ ಪುಢಾರಿಯಲ್ಲ…

    ಮುಖವಾಡದ ಹಿಂದೆ ನಿಂತು ಮೊಸಳೆ ಕಣ್ಣೀರು ಸುರಿಸುವ, “ಹಾಗೆ ಮಾಡುತ್ತೇವೆ, ಹೀಗೆ ಮಾಡುತ್ತೇವೆ” ಎಂದೆಲ್ಲ ಒದರುವ “ದೊಡ್ಡ ಮನುಷ್ಯ”ರನ್ನೆಲ್ಲ ಸಾಲಾಗಿ ನಿಲ್ಲಿಸಿ….. ಬೇಡ! ನಮ್ಮಿಂದಾಗದ ಕೆಲಸ. ಸಮಾಜ ಸುಧಾರಿಕೆಗೆ ಸಾಧನವಾಗದ ಕೆಲಸ ಅದು!!

    ನಮ್ಮ ದೇಶದಲ್ಲಿ ಗದ್ದುಗೆಗೆ, ಪಟ್ಟಕ್ಕೆ ಯಾರದೇ ನೆತ್ತರಿನ ಹಂಗಿಲ್ಲ ತಮ್ಮಾ! ನಾವು (ಸಾಮಾನ್ಯ )ಭಾರತೀಯರು.

  2. >> ಇದುವರೆಗೆ ಬಾಂಬ್ ಸ್ಫೋಟದಲ್ಲಿ ಭಾಗಿಯಾದವರಲ್ಲಿ ಒಂದಷ್ಟು ಮಂದಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲೇಬೇಕು. ಇಲ್ಲವಾದರೆ ಈ ಕೃತ್ಯಗಳು ನಿಲ್ಲುವುದಿಲ್ಲ, ಸರಣಿ ಮುಂದುವರಿಯುತ್ತದೆ.

    ನನ್ನ ಮನಸ್ಸಿನಲ್ಲಿರುವುದೂ ಅದೇ!

  3. ನಾವಡರೇ,
    ನಿಜ. ಭಯೋತ್ಪಾದಕರನ್ನು ‘ಮುಸ್ಲಿಮ್’ ಎಂದು ಗುರುತಿಸಬಾರದೆಂದು ಬೊಬ್ಬೆ ಹೊಡೆಯುವ ಮಂದಿ, ಅವರನ್ನು ಗಲ್ಲಿಗೇರಿಸುವಾಗ ಜಾತಿಯನ್ನು ಎತ್ತಿ ಹಿಡಿದು ಹೊಸ ನಾಟಕವಾಡುತ್ತಾರೆ. ಇದಕ್ಕೆ ಕೊನೆಯಿಲ್ಲ.
    ನಮಗೆ ಬುದ್ಧಿ ಬರುವುದು ಯಾವಾಗಲೋ? ನಮ್ಮ ಮನೆಯ ಜನರೇ ಸತ್ತರೂ, ಎರಡು ದಿನ ಅತ್ತು ಸುಮ್ಮನಾಗುವಂಥವರಲ್ಲವೆ ನಾವು? ಶಾಂತಿಪ್ರಿಯರು!

  4. ಬಹುಶ ನಮ್ಮ ದೇಶ ಯಾವತ್ತಿಗೂ ಬದಲಾಗದು ನಾವಡರೆ. ದಿನಕ್ಕೊಂದು ಶೂಟೌಟ್ ಆದರೂ ಕೂಡ. ನಮ್ಮ ರಾಜಕಾರಣಿಗಳು, ನಾವು, ನಮ್ಮ ವ್ಯವಸ್ಥೆ ಎಲ್ಲವು ಜಡಗಟ್ಟಿ ಹೋಗಿವೆ. ಸಾವಿರ ಜನ ಸತ್ತರೂ ಬುದ್ದಿ ಬರುವ ಸರ್ಕಾರ ಇದಲ್ಲ. ಕಂಡಲ್ಲೆಲ್ಲ ಸ್ಪೋಟಗಳು, ಹಿಂಸೆ ಭಯೋತ್ಪಾದಕರಿಂದ ನಡೀತಾ ಇದ್ದರೂ ಶಾಂತಿಮಂತ್ರ ಮುಂದುವರೆದಿದೆ!

    ವಿಪರ್ಯಾಸ ಎಂದರೆ ಪರಿಸ್ತಿತಿ ಇಷ್ಟೆಲ್ಲ ವಿಪರೀತಕ್ಕೆ ಹೋದರೂ ನಾವು ಬಂದೂಕಿಗೆ ಬಂದೂಕು ಉತ್ತರವಲ್ಲ, ಭಯೋತ್ಪಾದನೆಗೆ ಧರ್ಮವಿಲ್ಲ… ಅವರಂತೆ ನಾವಾದರೆ ಅರ್ಥವಿಲ್ಲ ಅಂತೆಲ್ಲ ಮಾತಾಡುತ್ತ ಕುಳಿತುಕೊಳ್ಳುತ್ತೇವೆ! ಇತಿಹಾಸಕ್ಕೆ ಜೋತುಬಿದ್ದು ನೇತಾಡುವುದು ಬಿಟ್ಟು ವಾಸ್ತವ ಯಾವತ್ತು ತಲೆಗೆ ಹೋಗುತ್ತದೋ ದೇವರಿಗೆ ಗೊತ್ತು. ರಾಜಕಾರಣಿಗಳು, ಜನರ ರಕ್ತ ಕುದಿಯುವುದಿರಲಿ, ಬಿಸಿಯೂ ಆಗದ ಹಾಗೆ ಹೆಪ್ಪುಗಟ್ಟಿ ಹೋಗಿದೆಯೇನೋ.

    ಸಿಕ್ಕಿಬಿದ್ದ ಒಬ್ಬ ಉಗ್ರನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ್ದರೂ ಇವತ್ತು ಭಾರತದಲ್ಲಿ ಇಂಥ ಘಟನೆಗೆ ಆಸ್ಪದವಿರುತ್ತಿರಲಿಲ್ಲ. ದೇಶದ ಸುತ್ತ ಮೂರು ಕಡೆಯೂ ಶತ್ರು ರಾಷ್ಟ್ರಗಳಿದ್ದೂ ನಮ್ಮ ಇಷ್ಟೊಳ್ಳೆ ಭದ್ರತಾ ವ್ಯವಸ್ಥೆ, ನಮ್ಮ ಸರ್ವಧರ್ಮ ಸಹಿಷ್ಣು ಮನಸ್ಥಿತಿಗೆ ನೋಡಿ ಭಯೋತ್ಪಾದಕರಲ್ಲದೆ ಇನ್ನಾರು ಬಂದಾರು???????
    ಜೈ ಭಾರತ ಮಾತೆ!!!

    http://kenecoffee.wordpress.com/

  5. ನನಗೂ ನಮ್ಮ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದವು. ಅಲ್ಲ, ಇಂಡಿಯಾ ಗೇಟ್ ಬಳಿ ಸೆಕ್ಯೂರಿಟಿಯೇ ಇಲ್ಲವೆಂದು ರೇಡಿಯೋ ಜಾಕಿಗಳು ಮದ್ಯಾಹ್ನ ಹೇಳುತ್ತಿದ್ದರು…ನಾನು ಚಕಿತಳಾದೆ.
    ಹುತಾತ್ಮ ಪೋಲೀಸರಿಗೆ ನಾವು ಸದ್ಗತಿ ಕೋರೋಣ. ಸೆರೆ ಸಿಕ್ಕ ಉಗ್ರರನ್ನ ಸಾಮೂಹಿಕವಾಗಿ ಗಲ್ಲಿಗೇರಿಸಬೇಕು ಸರ್ಕಾರ.

  6. ಸುಪ್ತದೀಪ್ತಿಯವರೇ,
    ನಿಜ. ಈ ಘಟನೆಯಲ್ಲಿ ಒತ್ತೆಯಾಳುಗಳಾಗಿ ಸಂಸದರೂ ಇದ್ದಾರೆಂದಾಗ ಒಂದು ಕ್ಷಣ ವಿಲಕ್ಷಣವಾದ ಆನಂದವಾಗಿತ್ತು. ಅದರರ್ಥ ನಮ್ಮ ದೇಶದಲ್ಲಿ ಎಲ್ಲವನ್ನೂ ನಿರ್ಧರಿಸುವ ಮಂದಿಗೆ ಕಷ್ಟ ಎದುರಾದರೆ ತೀರ್ಮಾನಗಳು ಬದಲಾಗಬಹುದೆಂದು. ಆದರೆ ನಂತರ ಆ ಸಾಧ್ಯತೆಯೂ ಸುಳ್ಳು ಎನಿಸಿತು. ಕಾರಣ, ನಮ್ಮಲ್ಲಿ ಹೈಕಮಾಂಡ್ ಗಳಿಗೆ ಜೀ ಹುಜೂರು ಹಾಕುವ ನಾಯಕರಿರುವಾಗ ಹಾಗೂ ಎಲ್ಲವೂ ಅಧಿಕಾರ ಮತ್ತು ಹಣಕ್ಕಾಗಿಯೇ ಲೆಕ್ಕಾಚಾರ ನಡೆಯುವಾಗ ಜನ ಸಾಮಾನ್ಯರ ರಕ್ತಕ್ಕೆ ಬೆಲೆಯೇ ಇಲ್ಲ ಎನಿಸಿ ಬೇಸರವಾಯಿತು. ಸುಮ್ಮನೆ ಆಲೋಚನೆ ಮಾಡಿ…ಕಳೆದ ಮೂರು ತಿಂಗಳಲ್ಲಿ ಎಷ್ಟು ಕಡೆ ಇಂಥ ಸ್ಫೋಟ ? ಬೆಂಗಳೂರು, ಗುಜರಾತ್, ದಿಲ್ಲಿ, ಮುಂಬಯಿ, ಅಸ್ಸಾಂ…ಎಷ್ಟೊಂದು ಕಡೆ ? ಪ್ರತಿ ಬಾರಿಯೂ ನಮ್ಮ ಗೃಹ ಸಚಿವ ಶಿವರಾಜ್ ಪಾಟೀಲ್ ಮುಖ ಮುಚ್ಚಿಕೊಂಡು ಅಳುತ್ತಾರೆ…ಎಲ್ಲವೂ ಸರಿಯಿದೆ…ಎಲ್ಲವೂ ಸರಿ ಮಾಡ್ತೇವೆ ಅನ್ತಾರೆ. ನೋಡಿ, ಇವತ್ತು ಬೆಂಗಳೂರಿನ ಹುಡುಗ ಉನ್ನಿಕೃಷ್ಣನ್ ಎಂಬ ವೀರಯೋಧ ಮರಣವನ್ನಪ್ಪಿದ. ಅವರ ತಂದೆಯ ಬಾಯಿಯಿಂದ ಮಾತೇ ಹೊರಡುತ್ತಿರಲಿಲ್ಲ. ಈ ನಪುಂಸಕ ರಾಜಕಾರಣಿಗಳ ಹಿತಕ್ಕೆ ಇಂಥ ಯುವಕರು ಏಕೆ ಬಲಿಗೊಡಬೇಕೋ? ಒಂದೂ ಅರ್ಥವಾಗುತ್ತಿಲ್ಲ. ನಿಜವಾಗಲೂ ಇವರಿಗೆ ಯಾರದೇ ನೆತ್ತರಿನ ಹಂಗಿಲ್ಲ..
    ಎಂ.ಜಿ. ಹರೀಶ್,
    ಇದೊಂದು ಪ್ರಯೋಗ ಮಾಡಬಹುದು. ಇಲ್ಲದಿದ್ದರೆ ನಮ್ಮ ದೇಶದಲ್ಲಿ ಯಾವುದೇ ಅಪರಾಧ ಮಾಡಿದರೂ ಶಿಕ್ಷೆಯೇ ಇಲ್ಲ ಎನ್ನುವಂತಾಗಿದೆ. ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದವರಿಗೆ ನಮ್ಮ ಅಮರಸಿಂಗ್ ನಂಥ ರಾಜಕಾರಣಿಗಳು ಹಣದ ಸಹಾಯ ಮಾಡುತ್ತಾರೆ ಎಂದರೆ ನಮ್ಮ ಕೋರ್ಟ್ ಗಳ ಮೇಲೆ, ಅವುಗಳು ಕೊಡುವ ಶಿಕ್ಷೆಯ ಮೇಲೆ ಎಷ್ಟೊಂದು ನಂಬಿಕೆ , ಭಯ ಇದೆ ಎಂಬುದು ಅರ್ಥವಾಗುತ್ತದಲ್ಲವೇ?
    ಚೇತನಾರೇ,
    ನೀವು ಹೇಳುವುದು ನಿಜ. ಮುಸ್ಲಿಂ ಎಂದು ಗುರುತಿಸಬಾರದು ಎಂದು ಹೇಳುವ ಮಂದಿ ಹಿಂದೂ ಭಯೋತ್ಪಾದಕರು ಎಂದು ಹೇಳುತ್ತಾರೆ. ನಮಗೆ ಬುದ್ಧಿ ಬರುವುದಿಲ್ಲ, ನಮ್ಮನ್ನಾಳುವ ಮಂದಿಗೆ ಬುದ್ಧಿಯೇ ಇಲ್ಲ. ಶಾಂತಿಪ್ರಿಯ ಭಾರತದಲ್ಲಿ ನಾವೆಲ್ಲಾ ಕುರಿಗಳಂತಿರಬೇಕು,ಏನೂ ಹೇಳಬಾರದು. ಹೇಳಿದರೆ ಅದು ಜಾತ್ಯತೀತ ರಾಷ್ಟ್ರವನ್ನು ಛಿದ್ರಗೊಳಿಸುವವರು, ದೇಶದ್ರೋಹಿಗಳೆಂಬ ಹಣೆಪಟ್ಟಿ. ಏನೂ ಮಾಡುವಂತಿಲ್ಲ. ಶಾಂತಿ ಮಂತ್ರ ಜಪಿಸುತ್ತಾ ನಮ್ಮವರ ನೆತ್ತರು ಹರಿಯುವುದನ್ನು ನೋಡುತ್ತಿರಬೇಕು.
    ಪ್ರತಿಕ್ರಿಯಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು
    ನಾವಡ

  7. ಲಕ್ಷ್ಮೀ ಶ್ರೀಧರ್
    ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ. ನಿಜ ಆ ಕೆಲಸ ಸರಕಾರ ಮೊದಲು ಮಾಡಬೇಕು.
    ವೈಶಾಲಿಯವರೇ,
    ನಮ್ಮ ರಾಜಕಾರಣಿಗಳಲ್ಲಿ ಅವರ ಸ್ವಂತ ರಕ್ತವೇ ಹರಿಯುತ್ತಿಲ್ಲ. ಅದನ್ನೂ ಕಡಕ್ಕೆ (ಬಾಡಿಗೆಗೆ) ತಂದಿದ್ದಾರೆ. ಹಾಗಾಗಿ ಅವರ ಮುಂದೆ ಹೇಳಿ ಏನೂ ಪ್ರಯೋಜನವಿಲ್ಲ. ನಮ್ಮ ಸರ್ವ ಧರ್ಮ ಸಹಿಷ್ಣುತೆಗೆ ಭಾರತರತ್ನರೆಂದು ಬೀಗುತ್ತಾ ಕುಳಿತುಕೊಳ್ಳಬೇಕು. ಜತೆಗೆ ಶಾಂತಿ ಮಂತ್ರವಿದೆಯೆಲ್ಲಾ ಜಪಿಸೋಕೆ…ನಿಜಕ್ಕೂ ಛೀ ನಾಚಿಕೆಯಾಗಬೇಕು ನಮಗೆ ಮತ್ತು ನಮ್ಮನ್ನಾಳುವವರಿಗೆ.
    ನಾವಡ

  8. ನಾವಡರೇ,
    ಹೇಳಿದ್ದು ಮಾತ್ರ ನೂರಕ್ಕೆ ನೂರು ನಿಜ, ಯಾವುದೇ ಜಾತಿ ನೋಡದೆ ಭಯೋತ್ಪಾದಕರನ್ನು ಗಲ್ಲಿಗೆ ಏರಿಸಬೇಕು, ಮೊನ್ನೆ ಮೊನ್ನೆ ಇಂಡೋನೇಶಿಯಾ ಮಾಡಿತಲ್ಲ, ಅದೇ ರೀತಿ.
    ನಾಳೆ ನಮ್ಮ ರಾಜ್ಯದಲ್ಲೂ ಹೀಗೆ ಆಗಬಾರದು ಅಂತಿಲ್ಲ, ನಮ್ಮ ರಾಜ್ಯ ಇಂಥದೇನಾದರೂ ಆದರೆ ಎದುರಿಸಲು ಸಿದ್ಧವಾಗಿದೆಯಾ? ನನಗೆ ಪದೇ ಪದೇ ಕಾಡುವ ಒಂದು ಪ್ರಶ್ನೆ… ಧಾರವಾಡದಲ್ಲಿ ಸಿಕ್ಕಿದ ಬಾಂಬ್-ಗಳು ಯಾರಿಟ್ಟಿದ್ದು, ಹಾಗೇ ಬೆಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದು ಯಾರು, ಚೆನ್ನಪಟ್ಟಣದಲ್ಲಿ ಇದಕ್ಕೆ ಸಂಬಂಧಿಸಿದ ಲಿಂಕ್-ಗಳಿತ್ತಲ್ಲ, ಅವೆಲ್ಲ ಏನಾದವು, ನಮ್ಮ ಪತ್ರಕರ್ತರು ಯಾರೂ ಯಾಕೆ ಇವನ್ನೆಲ್ಲ ಸಂಬಂಧಪಟ್ಟವರಿಗೆ ಪ್ರಶ್ನಿಸುತ್ತಿಲ್ಲ, ಮತ್ತೆ ಕೆಲವರು ಕೇಳಿದವರಿಗೆ ಉತ್ತರಗಳು ಯಾಕೆ ಸಿಗುತ್ತಿಲ್ಲ… ಕರ್ನಾಟಕದಲ್ಲಿ ಎಟಿಎಸ್ ಯಾಕೆ ತೆಪ್ಪಗಿದೆ, ಅದರ ಮಹತ್ವ ಯಾಕೆ ಸರಕಾರಕ್ಕೆ ಇನ್ನೂ ಗೊತ್ತಾಗಿಲ್ಲ, ಅದರ ಅಭಿವೃದ್ಧಿಗೆ ಬೇಕಾದದದ್ದು ಯಾಕಿನ್ನೂ ಮಾಡಿಲ್ಲ, ರಾಜ್ಯ ಮತ್ತು ರಾಷ್ಟ್ರ ರಕ್ಷಣೆಗೆ ನೆರವಾಗುವ ಕರಾವಳಿ ಕಾವಲು ಪಡೆಗೆ ಯಾಕೆ ಬೇಕಾದ ಸೌಲಭ್ಯ ಮತ್ತು ಸ್ಟಾಫ್ ಕೊಟ್ಟು ಸರಿಯಾಗಿ ಯಾಕೆ ನೋಡಿಕೊಳ್ಳುತ್ತಿಲ್ಲ, ನಿಮಗೇನಾದರೂ ಉತ್ತರ ಗೊತ್ತಾ? ಇವೆಲ್ಲಾ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುವುದು ಸರಕಾರಕ್ಕೆ ಬೇಕಿಲ್ಲವಾ?

  9. ನಾವುಡರೇ,

    >> ರಾತ್ರಿಯೆಲ್ಲಾ ದುಃಖಗೊಂಡು ಬೆಳಗ್ಗೆ ಎದ್ದು ತಿಂಡಿ ತಿಂದು ರೈಲಲ್ಲೋ, ಬಸ್ಸಲ್ಲೋ ಕೆಲಸಕ್ಕೆ ಹೋಗಿ ಮರೆತು ಬಿಡುವುದು ನಮ್ಮ ಜಾಯಮಾನವಾಗಿ ಹೋಗಿದೆ. ನಮ್ಮನ್ನಾಳುವವರೂ ದೊಡ್ಡ ಘೋಷಣೆ ಕೊಟ್ಟು, ನಂತರ ಎಂದಿನ ನಾಟಕದ ಪಾತ್ರಗಳಿಗೆ ತೆರಳಿ ಬಿಡುತ್ತಾರೆ. ಬರೀ ಪ್ರದರ್ಶನ ನೋಡಿ ಚಪ್ಪಾಳೆ ತಟ್ಟಿ ಕುಳಿತುಕೊಳ್ಳುವುದು ನಮ್ಮ ಅಭ್ಯಾಸ. >>

    ಪ್ರತ್ಯಕ್ಷವಾಗಿಯೋ, ಪರೋಕ್ಷವಾಗೊಯೋ ಇಂಥ ಘಟನೆಗಳಿಗೆ ನಾವೇ ಕಾರಣರೇನೋ ಎಂಬ ಗಿಲ್ಟ್ ಕಾಡುತ್ತಿದೆ..

  10. ಇದೇ ಬುಧುವಾರ ಸಾಯಂಕಾಲ ೬ ಗಂಟೆಗೆ ಇದೇ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವದ ಬೆಲೆ ಎಷ್ಟು?”..

    ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ಮತ್ತೆ ಹೋಸ ಮಾದರಿಯಾಗಬೇಕಾಗಿದೆ ನಮಗೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.

    ಅದಕ್ಕಾಗಿ ಇದೇ ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?

    Right to LIVE fearlessly. Lets devote one evening of our life to it.

    ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

  11. ಶೆಟ್ಟರೆ,
    ಭಾರತದಲ್ಲಿ VIPಗಳಿಗೆ ಹಾಗೂ ಭಯೋತ್ಪಾದಕರಿಗೆ ಮಾತ್ರ Right to live ಇದೆ ಅಂತ ಅನ್ನಸ್ತಾ ಇದೆ.ಸಾಮಾನ್ಯ ಪ್ರಜೆಗೆ ಇರೋದು ಒಂದೇ ‘ರೈಟ್’. ಬಸ್ ಕಂಡಕ್ಟರ್ ಹೇಳ್ತಾನಲ್ಲ ಅದು.

  12. ಸಮಯವಿದ್ದರೆ ನನ್ನ ಬ್ಲಾಗಿನಲ್ಲಿ ಹಾಕಿರುವ ಬೇಡಿಕೆ ಪರಿಶೀಲಿಸುತ್ತೀರಾ?

  13. ರಂಜಿತ್,
    ಸುಮ್ಮನೆ ಇರುವುದೂ ಸಹ ಒಪ್ಪಿಕೊಳ್ಳುತ್ತಿದ್ದೇವೆ ಎನಿಸುತ್ತದೆ. ನಿಜ ನಿಮ್ಮ ಅನುಮಾನ.
    ಶೆಟ್ಟರೇ,
    ನಿಮ್ಮೊಂದಿಗೆ ನಾವಿದ್ದೇವೆ. ಸಂಘಟನೆಯಲ್ಲಿ, ಪ್ರತಿಭಟನೆಯಲ್ಲಿ, ದುಃಖದಲ್ಲಿ. ಇಲ್ಲೇ ಇದ್ದರೂ ನಿಮ್ಮ ದನಿಗೆ ದನಿ ಸೇರಿಸಿದ್ದೇವೆ.
    ನೀಲಾಂಜಲ,
    ನಿಮ್ಮ ಸಲಹೆ ಒಪ್ಪಿಗೆ, ಸದ್ಯದಲ್ಲೇ ಬದಲಿಸುವೆ.
    ನಾವಡ


Leave a Reply