ಚೆಂಡೆಮದ್ದಳೆ
ಕಡಲಿಗೆ ಹೆಬ್ಬಾಗಿಲುಗಳಿಲ್ಲ…

Jul
02

ಸಂಸತ್ತಿನ ಮಾಲಿಕೆಯ ಎರಡನೇ ಲೇಖನವಿದು. ಓದಿ ಅಭಿಪ್ರಾಯ ತಿಳಿಸಿ.

ಹೌದು, ಎಷ್ಟೋ ಬಾರಿ ಒಂದು ವ್ಯವಸ್ಥೆಯ ಹಿಂದಿನ ಹಿನ್ನೆಲೆಯ ಗೊತ್ತಾಗದ ಹೊರತು ಅದು ಅಚ್ಚರಿ ಎನಿಸುವುದಿಲ್ಲ.

ವೇದಗಳ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ನಮಗೆ ಕಣ್ಣಿಗೆ ಕಾಣುತ್ತಿದ್ದ ಮಾದರಿ ಬ್ರಿಟನ್ ನದ್ದು. ಅಲ್ಲಿ ರಾಜ ಆಡಳಿತ. ಈ ಮಧ್ಯೆ ಪ್ರಜಾಪ್ರಭುತ್ವ ಅಂದರೆ ಪ್ರಧಾನಮಂತ್ರಿ ವ್ಯವಸ್ಥೆ ಯಾಕೆ ಬಂದಿತೆಂದರೆ ಬ್ರಿಟನ್‌ನ ರಾಜ ಮೊದಲ ಜಾರ್ಜ್‌ಗೆ (1721-1772)ಇಂಗ್ಲಿಷ್ ಬರುತ್ತಿರಲಿಲ್ಲ. ಆಡಳಿತ ಮಾಡುವುದು ಹೇಗೆ ?

ಹಾಗಾಗಿ ರಾಜ, ತನ್ನ ಆಡಳಿತದಲ್ಲಿ ನೇಮಿಸಿಕೊಂಡಿದ್ದ ಮಂತ್ರಿಗಳಲ್ಲಿ ಹೆಚ್ಚು ಬುದ್ಧಿವಂತ, ಹೆಚ್ಚು ನಂಬಿಕಸ್ಥನಿಗೆ ‘ಪ್ರಧಾನ’ ಎಂಬ ಪಟ್ಟ ಕಟ್ಟಿದ. ಇದರರ್ಥ ಆ ಮಂತ್ರಿ ಪ್ರಧಾನ ಮಂತ್ರಿ. ಉಳಿದವರೆಲ್ಲರೂ ಅವನೊಂದಿಗಿದ್ದರು. ಅದುವೇ ಮಂತ್ರಿಮಂಡಲ. ಆ ಮೂಲಕ ಆಡಳಿತ ನಡೆಸಲು ಶುರು ಮಾಡಿದ ರಾಜ. ಅದೇ ಪ್ರಧಾನಮಂತ್ರಿ ಮೂಲಕ ರಾಜ್ಯ ನಡೆಸುವ ಕಲ್ಪನೆಗೆ ಮೂಲ ಎಂಬುದು ಲಭ್ಯ ಮಾಹಿತಿ. ಆದರೆ ಹೀಗೆ ಸಂಸತ್ತಿನ ಮಾದರಿಗೆ ಇನ್ನೂ ಹಿಂದಿನ ಇತಿಹಾಸವಿದೆ. ಬುದ್ಧನ ಕಾಲದಿಂದಲೂ ನಡೆಯುತ್ತಿದ್ದ ಸಂಘ ಅಂಥದೊಂದು ಉದಾಹರಣೆ. ನಂತರ ಬುದ್ಧನ ಅನುಯಾಯಿಗಳಾದ ಅಶೋಕ ಸೇರಿದಂತೆ ಹಲವು ರಾಜರು ಇಂಥದೊಂದು ಪದ್ಧತಿಯನ್ನು ಜಾರಿಯಲ್ಲಿಟ್ಟಿದ್ದರು.

ಹೀಗೆ ತಲೆ ಎತ್ತಿದ ವ್ಯವಸ್ಥೆ ಆರಂಭದಲ್ಲಿ ರಾಜ ನಿರ್ದೇಶಿತವಾಗಿತ್ತಾದರೂ, ಕ್ರಮೇಣ ಸರಕಾರದ ಮೇಲೆ (ರಾಜರ ಆಡಳಿತ) ಸಂಸತ್ತಿನ ಅಂದರೆ ಮಂತ್ರಿ ಮಂಡಲದ ಹಿಡಿತ ಹೆಚ್ಚುತ್ತಾ ಹೋಯಿತು. ಅದರ ಪರಿಣಾಮ, ಪ್ರಜಾಪ್ರಭುತ್ವೀಕರಣ. ಒಂದು ಹಂತದಲ್ಲಿ ರಾಜಾ, ಪ್ರಧಾನಮಂತ್ರಿಯನ್ನು ಕರೆದು ಸರಕಾರ ರಚಿಸುವ ಅವಕಾಶ ನೀಡುವ ಮಟ್ಟಿಗೆ ತಲುಪಿತು. ಈಗಿನ ರಾಷ್ಟ್ರಪತಿಗಳು ಪಕ್ಷಗಳಿಗೆ ಸರಕಾರ ರಚಿಸಲು ಅವಕಾಶ ನೀಡಿದಂತೆಯೇ.

1832 ರಲ್ಲಿ ಜಾರಿಗೆ ಬಂದ ರಾಜಕೀಯ ವ್ಯವಸ್ಥೆಯ ಸುಧಾರಣಾ ಕಾಯ್ದೆ, ಸಂಸತ್ತಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಿತು. ಆಗ ಪ್ರಧಾನಮಂತ್ರಿ ಮತ್ತು ಮಂತ್ರಿಮಂಡಲವನ್ನು ಸಂಸತ್ತೇ ನಿರ್ಧರಿಸುವಂತಾಯಿತು. ಹೀಗಿದ್ದರೂ ಸಂಸತ್ತು-ಚರ್ಚೆಯ ವೇದಿಕೆ ಎನ್ನುವ ರೀತಿಯಲ್ಲಿ ಮೂರ್ತ ರೂಪಕ್ಕೆ ಬಂದದ್ದು 1707 ರಲ್ಲಿ. ಬ್ರಿಟನ್‌ನ ಮೊದಲ ಸಭೆ ನಡೆದದ್ದು ಆಗಲೇ.

ಬ್ರಿಟನ್ ರೂಪಿತ ವೆಸ್ಟ್‌ಮಿನಿಸ್ಟರ್ ಪದ್ಧತಿಯನ್ನೇ ಬಹಳಷ್ಟು ರಾಷ್ಟ್ರಗಳು ಅಳವಡಿಸಿಕೊಂಡಿದ್ದು, ಭಾಗಶಃ ನಾವೂ ಅದನ್ನೇ ಆಧರಿಸಿ ನಮ್ಮ ಸಂಸದೀಯ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಇದರಡಿ ನಡೆಯುವ ಆಡಳಿತವೆಲ್ಲವೂ ರಾಷ್ಟ್ರದ, ರಾಜ್ಯದ ಮುಖ್ಯಸ್ಥನ ಹೆಸರಿನಲ್ಲಿ. ಆ ಕಾರ್ಯಗಳನ್ನು ಅನುಷ್ಠಾನಿಸುವವರು ಮಾತ್ರ ಶಾಸಕಾಂಗದವರು. ನಡೆಯುವುದೆಲ್ಲವೂ ಕಾರ‍್ಯಾಂಗದ ಹೆಸರಿನಲ್ಲಿ. ಶಾಸಕಾಂಗದ ಮುಖ್ಯಸ್ಥನಾಗಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಕಾರ‍್ಯ ನಿರ್ವಹಿಸಿದರೆ, ಕಾರ‍್ಯಾಂಗದ ಮುಖ್ಯಸ್ಥನಾಗಿ ರಾಷ್ಟ್ರಪತಿ, ರಾಜ್ಯಪಾಲರ ನೇತೃತ್ವ. ಹಾಗಾಗಿಯೇ ನಮ್ಮಲ್ಲಿ ಹೊರಬೀಳುವ ಪ್ರತಿ ಆದೇಶಗಳಿಗೂ ರಾಷ್ಟ್ರಪತಿಗಳ, ರಾಜ್ಯಪಾಲರ ಸಹಿ ಇರಬೇಕು.

ಹೀಗೆ ಜಾರಿಗೆ ಬಂದ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಬಹುದೊಡ್ಡ ದೇಶ ನಮ್ಮದು. ಆದ ಕಾರಣ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಭಾರತದ್ದು ಎಂಬ ಅಭಿದಾನವಿದೆ. ಹೀಗೆ ಪಾಶ್ಚಾತ್ಯ ಮತ್ತು ವೇದಗಳ ಕಲ್ಪನೆಯಿಂದ ಒಡಮೂಡಿದ ನಮ್ಮ ವ್ಯವಸ್ಥೆ ಇಂದು ಸಂಸತ್ತಾಗಿದೆ.
ಅದಕ್ಕೆ ಎರಡು ಮನೆಗಳು. ಒಂದು ಕೆಳಮನೆ ಮತ್ತೊಂದು ಮೇಲ್ಮನೆ. ಲೋಕಸಭೆಗೆ ಜನರಿಂದ ನೇರವಾಗಿ ಆಯ್ಕೆಯಾದವರೇ ಸದಸ್ಯರು. ರಾಜ್ಯಸಭೆಗೆ ಜನಪ್ರತಿನಿಧಿಗಳಿಂದ ಹಾಗೂ ಸರಕಾರದ ನಾಮನಿರ್ದೇಶನದಿಂದ ನೇಮಿತಗೊಂಡವರು ಸದಸ್ಯರು. ಕೆಳಮನೆಯ ಸದಸ್ಯರಿಗೆ ಆರ್ಥಿಕ ಅಧಿಕಾರಿಗಳುಂಟು, ಮೇಲ್ಮನೆಯವರಿಗೆ ಆ ಅಧಿಕಾರವಿಲ್ಲ. ಹಾಗಾಗಿ ಮೇಲ್ಮನೆಯನ್ನು ಹಿರಿಯರ ಸಭೆ, ತಜ್ಞರ ಸಭೆ ಎನ್ನುವುದೂ ಉಂಟು.

ಇದೆಲ್ಲವನ್ನೂ ಒಳಗೊಂಡ ಸಂಸತ್ತಿನ ಕಟ್ಟಡಕ್ಕೂ ದೊಡ್ಡ ಇತಿಹಾಸವಿದೆ. ಈ ಕಟ್ಟಡ ನಾವು ಕಟ್ಟಿಸಿದ್ದಲ್ಲ ; ಬ್ರಿಟಿಷರದ್ದು. ಅದು ಕಾರ್ಯಾರಂಭ ಮಾಡಿದ್ದೂ ಅವರ ಕಾಲದಲ್ಲೇ.

Jun
26

ಸಂಸತ್ತಿನ ಬಗ್ಗೆ ಬರೆದ ಲೇಖನ ಮಾಲಿಕೆಯನ್ನು ಇಲ್ಲಿ ಹಾಕುತ್ತಿದ್ದೇನೆ. ಸುಮಾರು ಎಂಟು ಕಂತುಗಳ ಬರಹ ನಿರಂತರವಾಗಿ ಪ್ರಕಟವಾಗಲಿದೆ.

ಹದಿನೈದನೇ ಲೋಕಸಭೆಗೆ ನಮ್ಮ ಪ್ರತಿನಿಧಿಯಾಗಿ ಯಾರನ್ನು ಆರಿಸಿ ಕಳುಹಿಸಬೇಕು ? ಯಾರನ್ನು ಆರಿಸಿ ಕಳುಹಿಸಬಾರದು ? ಯಾರು ಆ ಸ್ಥಾನಕ್ಕ ಯೋಗ್ಯ ? ಯಾರೂ ಯೋಗ್ಯರಲ್ಲ? ಮಾಧ್ಯಮಗಳಿಂ ದ ಹಿಡಿದು ಹಲವು ಸೇವಾ ಸಂಸ್ಥೆಗಳವರೆಗೂ ಎಲ್ಲವೂ ಜನರಿಗೆ ಒಂದೇ ಹೇಳಿದ್ದು – ‘ನೀವು ಮತ ಹಾಕಿ ನಿಮ್ಮ ಜನಪ್ರತಿನಿಧಿಯನ್ನು ಆರಿಸಿ’- ಈ ಚರ್ಚೆ ಮುಗಿದು ಯುಪಿಎ ಮತ್ತೆ ಆಡಳಿತ ವಹಿಸಿಕೊಂಡಿದೆ.ಈ ಸಂದರ್ಭದಲ್ಲಿ ನಮ್ಮ ಸಂಸತ್ತಿನ ಬಗ್ಗೆ ಗಮನಿಸಿದರೆ ಹೇಗೆ ಅನಿಸಿತು ? ವಿಜಯ ಕರ್ನಾಟಕಕಕ್ಕೆ ಎಂಟು ದಿನ ನಿರಂತರವಾಗಿ ಬರೆದೆ. ಆ ಬರಹಗಳನ್ನು ಇಲ್ಲಿ ಹಾಕಿದ್ದೇನೆ.

ವಾಸ್ತವವಾಗಿ ತಮ್ಮ ಜನಪ್ರತಿನಿಧಿಗಳ ಬಗೆಗಿನ ಕಾಳಜಿ ಜನರಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. ‘ಇಂಥವರೇ ನಮ್ಮ ಪ್ರತಿನಿಧಿಗಳಾಗಬೇಕು, ನಮ್ಮನ್ನು ಪ್ರತಿನಿಧಿಸುವವರು ಹೀಗೇ ಇರಬೇಕು’ ಎಂದು ಗುಣ ವ್ಯಾಖ್ಯಾನಗಳನ್ನು ಮಾಡ ತೊಡಗಿದ್ದಾರೆ. ಅದಕ್ಕೇ ಬಹುಶಃ ರಾಜ್ಯದಲ್ಲೇ ಈ ಬಾರಿ ಮೊದಲ ಬಾರಿಗೆ ಮೂರಕ್ಕೂ ಹೆಚ್ಚು ಮಂದಿ ‘ಇವರ್ಯಾರೂ ನಮ್ಮನ್ನು ಪ್ರತಿನಿಧಿಸಲು ಅರ್ಹರಲ್ಲ’ ಎಂದು ನಕಾರಾತ್ಮಕ ಮತದಾನ ಮಾಡಿದ್ದು.

ಹೀಗೆ ನಮ್ಮನ್ನು ಆಳಿಕೊಳ್ಳಲು ನಾವೇ ಮನಸ್ಸಿನಲ್ಲಿ ನೆನೆಸಿಕೊಂಡು ರೂಪಿಸಿಕೊಂಡ ವ್ಯವಸ್ಥೆ ಪ್ರಜಾತಂತ್ರ. ಅದು ನಮಗೆ ಕಾಣುವುದಿಲ್ಲ. ಒಂದು ರೀತಿಯಲ್ಲಿ ದೇವರಿದ್ದ ಹಾಗೆ, ಅವನು ಕಾಣುವುದಿಲ್ಲ, ಕೇವಲ ಅನುಭವವಕ್ಕೆ ಮಾತ್ರ ನಿಲುಕುವವನು. ನಮ್ಮ ಪ್ರಜಾತಂತ್ರವೂ ತೋರುವುದಿಲ್ಲ ; ಅನುಭವಕ್ಕೆ ನಿಲುಕುತ್ತದೆ. ಆದರೆ ನಾವು ಅದಕ್ಕೆ ಒಂದು ಮೂರ್ತ ರೂಪ ಕೊಟ್ಟದ್ದು ಸಂಸತ್ತು ಅಥವಾ ಪಾರ್ಲಿಮೆಂಟ್ ಮೂಲಕ. ಅದಕ್ಕೆ ಜೀವ ತುಂಬುವವರು ನಾವು ಆರಿಸಿ ಕಳಿಸಿದ ಜನಪ್ರತಿನಿಧಿಗಳು. ಇಂಥ ಸಂಸತ್ತಿಗೊಂದು ಇತಿಹಾಸವಿದೆ. ಅದಕ್ಕೊಂದು ಹಿನ್ನೆಲೆಯಿದೆ. ಅದರಲ್ಲಿ ಎಂಥೆಂಥವರೆಲ್ಲಾ ಅಗಿ ಹೋಗಿದ್ದಾರೆ.

ನಮ್ಮದು ಸಂಸದೀಯ ಪ್ರಜಾಪ್ರಭುತ್ವ. ಅಂದರೆ ಸಂಸತ್ತಿಗೆ ಪರಮೋಚ್ಚ ಅಧಿಕಾರ. ರಾಷ್ಟ್ರಪತಿಗಳು ರಾಷ್ಟ್ರದ ಪ್ರಥಮ ಪ್ರಜೆಯಾದರೂ, ಆಡಳಿತ ನಡೆಸುವುದು ಸರಕಾರವೇ. ಆ ಸರಕಾರದಲ್ಲಿ ನಾವು ಅರಿಸಿ ಕಳಿಸಿದ ಸಂಸದರು (ಲೋಕಸಭೆ ಸದಸ್ಯರು) ಇರುತ್ತಾರೆ. ಅವರು ಆಯ್ಕೆ ಮಾಡಿದವ ಪ್ರಧಾನ ಮಂತ್ರಿಯಾಗಿ ಕಾರ‍್ಯ ನಿರ್ವಹಿಸುತ್ತಾನೆ. ಆ ಪ್ರಧಾನ ಮಂತ್ರಿ ತನ್ನ ಆಡಳಿತಕ್ಕೆ ಅನುಕೂಲವಾಗು ವವರನ್ನು ಸಚಿವರನ್ನಾಗಿ ನೇಮಿಸಿಕೊಳ್ಳುತ್ತಾನೆ. ಅದರಲ್ಲಿ ಕ್ಯಾಬಿನೆಟ್, ರಾಜ್ಯ ದರ್ಜೆಯ ಮಂತ್ರಿ ಸ್ಥಾನವಿದೆ. ಎಲ್ಲವೂ ನಿಜ. ಅದೂ ನಮ್ಮಲ್ಲಿ ಪಕ್ಷೀಯ ರಾಜಕಾರಣ ಇರುವುದರಿಂದ ಬಹುಮತ ಪಡೆದ ಪಕ್ಷ ತನ್ನ ನಾಯಕನನ್ನು ಆಯ್ಕೆ ಮಾಡಿ ಈ ಪ್ರಧಾನ ಮಂತ್ರಿ ಸ್ಥಾನ ನೀಡುತ್ತದೆ. ಅದೆಲ್ಲವೂ ನಾವು ನೋಡುತ್ತಿರುವಂಥದ್ದು.

ನಮ್ಮ ಸಂಸದೀಯ ವ್ಯವಸ್ಥೆ ಅಥವಾ ಸಂಸತ್ತು ವ್ಯವಸ್ಥೆಗೆ ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಪ್ರೇರಣೆ ಎನ್ನಲಾಗುತ್ತದೆ. ಬ್ರಿಟನ್‌ನಲ್ಲೂ ಹೌಸ್ ಆಫ್ ಕಾಮನ್ಸ್ ಎಂದರೆ ನಮ್ಮಲ್ಲಿನ ಲೋಕಸಭೆ (ಕೆಳಮನೆ) ಇದ್ದ ಹಾಗೆ. ಹೌಸ್ ಆಫ್ ಲಾರ್ಡ್ಸ್ ಎಂದರೆ ನಮ್ಮ ರಾಜ್ಯಸಭೆ (ಮೇಲ್ಮನೆ) ಇದ್ದ ಹಾಗೆ. ಎರಡನ್ನೂ ಸಮಾನವಾಗಿ ಕಂಡರೂ ಹೌಸ್ ಆಫ್ ಕಾಮನ್ಸ್ ಗೆ ಹೆಚ್ಚು ಅಧಿಕಾರ. ಅದೇ ಪರಿಸ್ಥಿತಿ ನಮ್ಮಲ್ಲೂ. ಲೋಕಸಭೆಗೆ ಹೆಚ್ಚು ಅಧಿಕಾರ.

ಆದರೆ ಇಂಥದೊಂದು ಕಲ್ಪನೆ ನಮ್ಮ ವೇದದ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ವಿವರಣೆ. ಆರ‍್ಯನ್ನರ ರಾಜ್ಯಾಡಳಿತದಲ್ಲಿ ‘ಸಭೆ’ ಮತ್ತು ’ಸಮಿತಿ’ ಎಂಬವುಗಳಿದ್ದವು. ಇಲ್ಲೂ ‘ಸಭಾ’ ಎಂದರೆ ಜನರ ಪ್ರತಿನಿಧಿ. ಅಂದರೆ ರಾಜ್ಯದ ಆಡಳಿತದಲ್ಲಿ ನಿತ್ಯ ಭಾಗಿಯಾಗಿರುವವರ ಪ್ರತಿನಿಧಿಗಳಿವರು. ‘ಸಮಿತಿ’ ಎಂದರೆ ರಾಜ್ಯದ ಎಲ್ಲ ಪುರುಷ ಸದಸ್ಯರು ಪಾಲ್ಗೊಳ್ಳುವ ವ್ಯವಸ್ಥೆ. ಇದು ಸಭೆ ಸೇರುವುದೇ ಹೊಸ ರಾಜನನ್ನು ಆರಿಸಲು ಅಥವಾ ಈಗಿರುವ ರಾಜನ ಕಾರ‍್ಯನೀತಿಯನ್ನು ವಿಮರ್ಶಿಸಲು. ಈ ಎರಡೂ ವ್ಯವಸ್ಥೆ ಪ್ರಜಾಪತಿಯ ಮಕ್ಕಳು ಎಂಬ ಕಲ್ಪನೆ ಆಗಿತ್ತು.
SansadBhavan
ಪಾಶ್ಚಾತ್ಯ ಅದರಲ್ಲೂ ಬ್ರಿಟನ್‌ನ ಪ್ರಜಾಪ್ರಭುತ್ವ ಮಾದರಿಯನ್ನು ಒಪ್ಪಿಕೊಂಡ ರಾಷ್ಟ್ರಗಳು ಹಲವು. ಆ ಅರ್ಥದಲ್ಲಿ ನಮ್ಮಲ್ಲೂ ಇರುವ ‘ಪಾರ್ಲಿಮೆಂಟ್’ ಎಂಬ ಪದ ಫ್ರೆಂಚ್ ಮೂಲದ್ದು. ಆ ಭಾಷೆಯಲ್ಲಿ ಹಾಗೆಂದರೆ ‘ಮಾತನಾಡಲು ಅಥವಾ ಮಾತನಾಡುವುದು’ ಎಂದರ್ಥ. ಈಗ ಅದೊಂದು ವ್ಯವಸ್ಥೆಯಾಗಿ ಪರಿವರ್ತಿತವಾಗಿರುವುದರಿಂದ ‘ ಮಾತನಾಡುವವರ ಸಭೆ’ ಎಂದು ಅರ್ಥಾಂತರವಾಗಿದೆ. ಹಾಗಾಗಿ ಜನರ ಕಷ್ಟ ಸುಖಗಳ ಬಗ್ಗೆ ಕೈಗೊಳ್ಳಬೇಕಾದ ತೀರ್ಮಾನಗಳು, ಸಲಹೆಗಳನ್ನು ಕುರಿತು ಚರ್ಚಿಸುವ ಸಭೆಯಿದು ಎಂದು ಅರ್ಥ ತುಂಬಲಾಗಿದೆ. ನಮ್ಮನ್ನು ಪ್ರತಿನಿಧಿಸುವವರೆಲ್ಲಾ ಒಂದೆಡೆ ಸೇರಿ ಮಾತನಾಡುವ, ತಮ್ಮನ್ನು ಆರಿಸಿ ಕಳುಹಿಸಿದವರ ಧ್ವನಿಯಾಗುವ ಕ್ಷೇತ್ರ ಈ ‘ಪಾರ್ಲಿಮೆಂಟ್’. ನಮ್ಮ ಸಂಸತ್ತು.

ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ‘ಸಂಸತ್ತು’ ಆಗಿತ್ತು ಎಂದು ಹೇಳಲಾಗುತ್ತಿದೆ. ಎಲ್ಲ ಸಜ್ಜನರು, ಜ್ಞಾನಿಗಳು ಇದರ ಸದಸ್ಯರಾಗಿ ಲೋಕ ಹಿತ ಚಿಂತನೆಯನ್ನು ಮಾಡುತ್ತಿದ್ದರಂತೆ. ಅದು ಅಧ್ಯಾತ್ಮದ ನೆಲೆ ಎನ್ನಬಹುದು. ಅದೇ ಅರ್ಥದಲ್ಲಿ ಈಗ ನಮ್ಮ ಸಂಸತ್ತಿನಲ್ಲಿ ಲೋಕ ಚಿಂತನೆಯನ್ನೇ ಮಾಡುತ್ತಿದ್ದಾರೆ, ಅದೂ ಈ ಲೋಕದ್ದು.

ಪ್ರತಿ ಕಲ್ಪನೆಯ ಹಿಂದೆಯೂ ಒಂದೊಂದು ಕಥೆ ಇರುತ್ತದೆ. ಇಷ್ಟಕ್ಕೂ ಬ್ರಿಟನ್‌ನಲ್ಲಿ ಇಂಥದೊಂದು ವ್ಯವಸ್ಥೆ ಯಾಕೆ ಬಂತು ಗೊತ್ತೇ ? ಆ ರಾಜನ ಭಾಷಾ ಸಮಸ್ಯೆಯಿಂದ !

Jun
18

ಯಾಕೋ ಕೃಷ್ಣ ಇದ್ದಕ್ಕಿದ್ದಂತೆ ನೆನಪಾದ. ಹಂಗಾಮದಲ್ಲಿ ಹೀಗೇ ಬರೆದ ಒಂದು “ಲಲಿತ” ಸಿಕ್ಕಿತು. ಅದನ್ನು ಇಲ್ಲಿ ಹಾಕಿದ್ದೇನೆ. ಓದಿ ಹೇಳಿ.

ನನ್ನನ್ನು ಯಾವಾಗಲೂ ಕಾಡುವುದು ಕೊಳಲು. ಅದಕ್ಕಿರುವ ಭವ್ಯತೆ ಹಾಗೂ ಭಾವ ತೀವ್ರತೆ ಯಾವುದಕ್ಕೂ ಇಲ್ಲವೆ೦ದೇ ತೋರುತ್ತದೆ. ಅದರ ನಾದವೇ ಅದ್ಭುತ. ಮನಸ್ಸನ್ನೇ ಸೆಳೆದುಕೊಳ್ಳಬಲ್ಲ ಶಕ್ತಿ ಸ೦ಗೀತಕ್ಕಿದೆ ಎ೦ಬುದು ನಿಜ. ಅದಕ್ಕಿ೦ತಲೂ ಕೊಳಲಿನಲ್ಲಿ ಮತ್ತೇನೋ ಮಾರ್ದವತೆ ಇದೆ ಎನಿಸುತ್ತದೆ. ನಾನು ಪ್ರತಿ ಬಾರಿ ಕೊಳಲು ಗಾನವನ್ನು ಕೇಳಿದಾಗ ಆರ್ದ್ರಗೊ೦ಡಿದ್ದೇನೆ. ಮನಸ್ಸು ತೇವಗೊ೦ಡಿದೆ ಎನಿಸುತ್ತದೆ.

ರಸ್ತೆಯ ಮೇಲೆ ಕೊಳಲು ಮಾರುತ್ತಾ ಬರುವ ಕುಶಲಕರ್ಮಿಗೆ ನಮಸ್ಕರಿಸಬೇಕು. ವಾಸ್ತವವಾಗಿ ಅವನೇ ಈ ಹುಚ್ಚು ಹಿಡಿಸಿದವನು. ಈತ ಬರೀ ಕೊಳಲು ಮಾರುವುದಿಲ್ಲ. ಅದಕ್ಕೆ ಪ್ರತಿಯಾಗಿ ಕೊರಳನ್ನು ಅವನ ಉಸಿರನ್ನು ಉಚಿತವಾಗಿ ಕೊಡುತ್ತಾನೆ. ಅವನ ನುಡಿಸುವಿಕೆಯಲ್ಲಿ ಹೊರಹೊಮ್ಮುವ ಪ್ರತಿ ನಾದದಲ್ಲೂ ಆರ್ದ್ರತೆ ಇದೆ.
krishna
ಅವನ ಹೆಸರು ಗೊತ್ತಿಲ್ಲ.

ಭದ್ರಾವತಿಯಲ್ಲಿ ನನ್ನ ದೊಡ್ಡಪ್ಪನ ಮನೆಯ ಮು೦ದೆ ವಾರಕ್ಕೊಮ್ಮೆ ಈ ಕುಶಲಕರ್ಮಿ ಬರುತ್ತಿದ್ದ. ಅವನಿಗೆ ವ್ಯಾಪಾರ ಆಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವನು ಎ೦ದಿಗೂ ತಪ್ಪಿಸುತ್ತಿರಲಿಲ್ಲ. ಬರುವಾಗ “ತನು ಡೋಲೇ ಮನು ಡೋಲೇ” ಯನ್ನೋ, “ಬೋಲೋರೆ ಪಪಿಹರಾ” ವನ್ನೋ ಅಥವಾ ಯಾವುದೋ ಅರ್ಥವಾಗದ ಮೀರಾ ಭಜನವನ್ನು ನುಡಿಸಿಕೊ೦ಡು ಬರುತ್ತಿದ್ದ. ನಮಗೆ ಮೀರಾ ಭಜನ್ಸ್ ಸಾಹಿತ್ಯವಾಗಲೀ ಅರ್ಥವಾಗಲೀ ಗೊತ್ತಿರಲಿಲ್ಲ. ಆದರೆ ಆ ನಾದ ಇಷ್ಟವಾಗುತ್ತಿತ್ತು. ಮನಸ್ಸೆಲ್ಲಾ ಅದೇ ತು೦ಬಿಕೊಳ್ಳುತ್ತಿತ್ತು.

“ಗಾಯಿಯೇ ಗಣಪತಿ, ಜಗವ೦ದನಾ” ಇ೦ಥಾ ಗೀತೆಗಳು ನನಗೆ ದೊರೆತಿದ್ದು ಆಗಲೇ. ನನ್ನ ಅಕ್ಕ ಗಾಯತ್ರಿ, ಸಾವಿತ್ರಿ ಇಬ್ಬರೂ ಈ ಗೀತೆಗಳನ್ನು ಗುನುಗುತ್ತಿದ್ದುದರಿ೦ದ ಅವನು ನುಡಿಸುವ ಗೀತೆಯೂ ಇದೇ ಎ೦ದು ತಿಳಿದಿತ್ತು. ಆದರೆ ಜೇಬು ತು೦ಬಾ ಕೊಳಲುಗಳನ್ನು ತು೦ಬಿಕೊ೦ಡು ಹತ್ತು ರೂಪಾಯಿಗೆ ಒ೦ದು ಎನ್ನುತ್ತಾ ಮಾರಿ ಬರುವವನ ಮು೦ದೆ ಚೌಕಾಶಿಗೆ ಏಳು ರೂಪಾಯಿಗೆ ಒ೦ದು ಕೊಳಲನ್ನು ಕೊ೦ಡು ಹಾಳು ಮಾಡಿದ ನೆನಪು ನನಗಿದೆ.

ಆತ ಯಾವುದೇ ಹೊಸ ಗೀತೆಯಿ೦ದ ಹಿಡಿದು ಹಳೆಯ ಗೀತೆಯ ಮಾಧುರ್ಯವನ್ನು ತು೦ಬಿ ಕೊಡಬಲ್ಲ. ಆತ ಹಿಡಿಸಿದ ಹುಚ್ಚು ಈಗ ದೊಡ್ಡ ಮಟ್ಟಕ್ಕೇರಿದೆ. ನಾನು ಹಿ೦ದೂಸ್ಥಾನಿ ಶೈಲಿಯ ಕೊಳಲು ನುಡಿಸುವಿಕೆ ಕಲಿಯಲು ಹೋಗಿ ವಿಫಲನಾದೆ. ಆದರೂ ಹುಚ್ಚು ಬಿಟ್ಟಿಲ್ಲ. ರವಿಪ್ರಸಾದ್ ಚೌರಾಸಿಯಾರಿ೦ದ ಹಿಡಿದು ಕೊಳಲು ನುಡಿಸುವ ಪ್ರತಿಯೊಬ್ಬನೂ ನನಗೆ ಇಷ್ಟವಾಗುತ್ತಾನೆ. ಇವರಲ್ಲಿ ನನಗೆ ನಾದವನ್ನು ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ.

ಒ೦ದು ಬಿದಿರ ಕೋಲಿನೊಳಗೆ ಉಸಿರು ತು೦ಬಿದರೆ ಹೊಮ್ಮುವಾಗ ರಾಗವಾಗಿ ಮಾರ್ಪಡುವುದೇ ಅದ್ಭುತ ಸೃಷ್ಟಿಗೆ ಸಮಾನ. ಸೃಜನಶೀಲತೆಯ ಪದಕ್ಕೆ ಅರ್ಥ ಸಿಗುವುದೇ ಇಲ್ಲಿ ಎ೦ದು ತೋರುತ್ತದೆ. ಎಷ್ಟೋ ಬಾರಿ ನನಗೆ ನಾನೇ ಸೋತದ್ದು ಈ ನಾದವನ್ನು ಆಲಿಸುವಾಗ. ಅದಕ್ಕೆ ಬೃ೦ದಾವನದ ಸುತ್ತ ಭಕ್ತ ಮೀರೆ ಕೊಳಲುಗಾನ ಕೇಳುತ್ತಾ ಕುಳಿತು ಬಿಟ್ಟಳು. ಜಗತ್ತೇ ಅವಳನ್ನು ನೋಡುತ್ತಿದ್ದರೂ ಅವಳಿಗೆ ಕೊಳಲ ಗಾನ, ಮುರಳಿ ಲೋಲ ಬಿಟ್ಟರೆ ಏನೂ ಕಾಣಲಿಲ್ಲ. ಹಾಗೆಯೇ ಗೋಪಿಯರೆಲ್ಲಾ ಕೊಳಲಿನ ಹಿ೦ದೆ, ಅದರ ನಾದದ ಹಿ೦ದೆ ನಡೆದದ್ದು ಎಲ್ಲಿಯವರೆಗೆ ಎ೦ದರೆ ಆತ್ಮತೃಪ್ತಿ ಸಿಕ್ಕುವವರೆಗೆ. ವಾಸ್ತವವಾಗಿ ಗೋಪಿಯರೆಲ್ಲಾ ಮನ ಸೋತಿದ್ದು ಕೃಷ್ಣನಿಗಲ್ಲ, ಅವನ ಮುರಳೀಗಾನಕ್ಕೆ!

ಮುರಳಿ ಕೃಷ್ಣನ ಶ್ರೇಷ್ಠತೆಯನ್ನು ಹೆಚ್ಚಿಸಿತು.

ಒ೦ದು ವೇಳೆ ತಾನು ಊದಿದ ಉಸಿರನ್ನು ವೇಣುನಾದವಾಗಿ ಹೊರಹೊಮ್ಮಿಸದಿದ್ದರೆ ಕೃಷ್ಣ ಏನು ಮಾಡುತ್ತಿದ್ದ?
ಚಿತ್ರಕೃಪೆ :http://indianartnews.ning.com/

May
29

ನೀನು ಬಿಟ್ಟು ಹೋದ
ನೆನಪಿಗೆ
ಎಂಥಾ ಶಕ್ತಿ ಹೇಳು
ನನ್ನ ಕಾಯುತ್ತಿದೆ
ಇಂದಿಗೂ
ಹಗಲೂ ಇರುಳು !
***
ಆ ದಾರಿಯಲಿ
ನೀನು
ಬರಬೇಡ
ನನಗೀಗ
ಆ ಹಾದಿ
ನೆನಪಿಲ್ಲ
***

ನೆನಪಿರದ
ಹಾದಿಯಲಿ
ಎಷ್ಟು ಬಾರಿ ಬಂದರೂ
ನೀನು
ಮರೆತು ಹೋಗುತಿ
***
ಬೆಳಕು ಮುಗಿವ ಮುನ್ನ
ನನ್ನೊಳಗೆ
ಬಂದು ಬಿಡು
ಹೊತ್ತಿಕೊಳ್ಳಲಿ ದೀಪ

ಆ ಮೂಲೆಯೊಳಗೆ
ನೀನಿರಲು
ಹೊರಗೇಕೆ ಬೇಕು
ಮತ್ತೆ
ಆ ಕಣ್ಣುಕುಕ್ಕುವ
ಬೆಳಕು
***
ಕತ್ತಲೆಯ ಕಂಡವರು
ಬೆಳಕನ ಹುಡುಕುವರು
ಕತ್ತಲೆಯಲಿ ಕರಗಿದವರು
ಬೆಳಕಾಗಿ ಬಂದರು

May
25

ನೀಲನೆಯ ಆಕಾಶ. ಅದಕ್ಕೆ ಹತ್ತಿರವಾಗುವಂತೆ ಹಾರಿ ಹೋಗುತ್ತಿದ್ದ ಹಕ್ಕಿ ದೂರದಲ್ಲಿ ಚುಕ್ಕಿಯಂತೆ ಕಾಣುತ್ತಿತ್ತು. ಹಾರುತ್ತಾ…ಹಾರುತ್ತಾ ಹೋದ ಹಕ್ಕಿಗೆ ಕೆಳಗೆ ಹಸಿರು ಕಂಡಿತು. ಜೀವನೋತ್ಸಾಹ ಉಕ್ಕಿ ಬಂತು. ಮೆಲ್ಲಗೆ ಕೆಳಗಿಳಿಯತೊಡಗಿತು ; ಪುಟ್ಟನೊಬ್ಬ ಅಂಗಳದಲ್ಲಿ ನಿಂತು ಹಾರಿಸಿದ ಗಾಳಿಪಟವನ್ನು ಅತ್ಯಂತ ನಾಜೂಕಿನಿಂದ ಕೆಳಗಿಳಿಸಿಕೊಳ್ಳುತ್ತಿದ್ದ ಹಾಗೆ. ಚೂರು ಆತುರ ಪಟ್ಟರೂ ಗಾಳಿಪಟ ಯಾವುದಾದರೂ ಮರಕ್ಕೋ, ಕಂಬಕ್ಕೋ ಸಿಕ್ಕು ಹಾಳಾಗಿ ಬಿಡಬಹುದೆಂಬ ಕಾಳಜಿ. ಒಟ್ಟೂ ಗಾಳಿಪಟದ ಜೀವ ಉಳಿಸುವ ತವಕ.
blue bird
ಹಾಗೆಯೇ ಈ ಹಕ್ಕಿಯೂ ಸಹ. ಮುಂದೆ ಹಾದಿ ತೋರುತ್ತಿರಲಿಲ್ಲ, ಹಾಗೆಯೇ ಹೆಜ್ಜೆಯೂ ಮೂಡುತ್ತಿರಲಿಲ್ಲ. ಹಾರಿ ಹಾರಿ ಬಂದು ಕೆಳಗಿಳಿದು ಹಸಿರ ಕಂಡು ಉತ್ಸಾಹವನ್ನು ತುಂಬಿಕೊಂಡಿತು. ಕ್ಷಣ ಕಾಲ ಕಣ್ಣುಮುಚ್ಚಿ ಆಯಾಸ ಕಳೆದುಕೊಳ್ಳುವ ಪ್ರಯತ್ನ ಅದರದ್ದು. ಹಾಗೇ ಸುಮ್ಮನೆ ಎನ್ನುವಂತೆ ಕಣ್ಣು ಮುಚ್ಚಿತು. ಒಳಗೆಲ್ಲಾ ಕತ್ತಲೆ ಎನಿಸಿದಾಗ, ಇದೇ ಸುಖ ಎನಿಸಿತು. ಒಂದೆರಡು ಕ್ಷಣ ಹೆಚ್ಚಿಗೆ ಇದ್ದರೆ ಏನೂ ನಷ್ಟವಿಲ್ಲ ಎಂದು ಇನ್ನೂ ಒಂದೆರಡು ಕ್ಷಣ ಬಿಟ್ಟು ಕಣ್ತೆರೆಯಿತು.

ಹಸಿರೆಲ್ಲಾ ಸಂಭ್ರಮದಿಂದ ಕುಣಿಯುತ್ತಿದೆ. ಹಸಿರಿನ ತುದಿಯಲ್ಲೆಲ್ಲಾ ಹತ್ತು ಹಲವು ಬಣ್ಣ. ಉದ್ಯಾನದ ಹೂವುಗಳೆಲ್ಲಾ ಒಂದೇ ದಿನ, ಒಂದೇ ಕ್ಷಣ ಪರಸ್ಪರ ಮಾತನಾಡಿಕೊಂಡ ಹಾಗೆ ಥಟ್ಟನೆ ಅರಳಿದಂತೆ. ಇಡೀ ಹಸಿರಿನ ಬಸಿರಲ್ಲಿ ಬಣ್ಣ ಬಣ್ಣದ ಹೂವುಗಳೆಲ್ಲಾ ಮೂಡಿ ಬಂದಿದ್ದವು. ವಿಚಿತ್ರ ಎನಿಸಿತು ಹಕ್ಕಿಗೆ. ಕೆಲ ಕ್ಷಣಗಳಲ್ಲೇ ಹೀಗೆ ಬದುಕು ಅರಳುತ್ತದೆಯೇ? ಎಂಬ ಪ್ರಶ್ನೆ ಅದರದ್ದು.

ಒಂದೊಂದೇ ಬಣ್ಣವನ್ನು ನುಂಗ ತೊಡಗಿತು ಹಕ್ಕಿ. ಬೆಳ್ಳನೆಯ ಹೂವು…ಬಿಳಿಯ ಬಣ್ಣ ಗಾಯಬ್. ಹಾಗೆಯೇ ಕೆಂಪು…ನೀಲಿ…ಹಳದಿ…ತಿಳಿ ನೀಲಿ…ಗೊರಟೆ ಹೂವಿನ ಕಡು ನೀಲಿ ಬಣ್ಣ…ಕಂದು…ಕಡುಗೆಂಪು…ಬಣ್ಣವೇ ಇಲ್ಲದಂತೆ ತೋರುವ ತಿಳಿಯಾದ ಮತ್ತೊಂದು ಬಣ್ಣ…ಎಲ್ಲಾ ಬಣ್ಣ ನುಂಗಿದ ಹಕ್ಕಿಯ ಬಣ್ಣ ಈಗ ಸಂಪೂರ್ಣ ಕಪ್ಪು.

ಹಕ್ಕಿ ಮೊದಲು ಬಿಳಿಯ ಬಣ್ಣ ನುಂಗಿದಾಗ ತನ್ನ ಬಣ್ಣ ಬಿಳಿಯಾಗುವುದನ್ನು ಕಂಡಿತ್ತು. ಎಂಥಾ ಮೋಹ ಬಣ್ಣದ ಮೇಲೆ ಅದಕ್ಕೆ . ಅದೊಂದೇ ಬಣ್ಣ ನುಂಗಿ ಸುಮ್ಮನಾಗಲಿಲ್ಲ.

ಈಗ ಮತ್ತೆ ಹಸಿರೆ ಕಣ್ಣಿಗೆ ಕಾಣುತ್ತಿದೆ. ಹೂವುಗಳೆಲ್ಲಾ ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿವೆ. ಅದರೆದುರು ಎಲ್ಲಾ ಬಣ್ಣ ನುಂಗಿದ ಹಕ್ಕಿ ಕುಳಿತಿದೆ. ಅಷ್ಟರಲ್ಲಿ ರಂಗು ರಂಗಿನ ಚಿಟ್ಟೆ ಮಧುವ ಅರಸಿಕೊಂಡು ಬಂತು. ಅದಕ್ಕೆ ತಲೆ ತಿರುಗುವ ಕ್ಷಣ. ಬರೀ ಹಸಿರೇ ಕಾಣುತ್ತಿದೆ, ಅದರ ತುದಿಯಲ್ಲಿ ಒಂದೂ ಹೂವು ಕಾಣುತ್ತಿಲ್ಲ. ಬಿಳಿಚಿಕೊಂಡವೆಲ್ಲಾ ಹೂವೇ…ಅಲ್ಲವೇ ? ಎಂಬ ಅನುಮಾನ.

ಹೀಗೇ ಹತ್ತಾರು ಹಸಿರಿನ ಮೇಲೆ ಲ್ಯಾಂಡ್ ಆಗಲು ಸ್ಥಳ ಹುಡುಕುವ ಹೆಲಿಕಾಪ್ಟರ್ ನಂತೆ ತಿರುಗಿದ ಚಿಟ್ಟೆ, ಹೂವೆಂದುಕೊಂಡ ಹೂವಿನ ಮೇಲೆ ಕುಳಿತಿತು. ಹಸಿರು ಮೆಲ್ಲಗೆ ತಲೆದೂಗುವಂತೆ ಮೈಯ ಅಲುಗಾಡಿಸಿತು. ಕೆಲವೇ ಕ್ಷಣ…ಬಣ್ಣಕ್ಕಾಗಿ ಹಪಹಪಿಸುತ್ತಿದ್ದ ಹಕ್ಕಿ ಆ ಚಿಟ್ಟೆಯನ್ನೂ ನುಂಗಿತು…ಆದರೂ ಬಣ್ಣ ಬದಲಾಗಲಿಲ್ಲ.
ಚಿತ್ರಕೃಪೆ : www.ukrsov.kiev.ua

May
15

ಈ ಲೇಖನದೊಂದಿಗೆ ಎವರೆಸ್ಟ್ ಪ್ರವಾಸದ ಮಾಲಿಕೆ ಮುಗಿಯಿತು. ಎವರೆಸ್ಟ್ ಹತ್ತಿ ಕನ್ನಡದ ಬಾವುಟ ಹಾರಿಸಿದ ಪಿ.ಎನ್. ಗಣೇಶ್ ಈಗ ಮತ್ತೊಮ್ಮೆ ಏಕಬಾರಿಗೆ ಎರಡು ಪರ್ವತ ಹತ್ತುವ ಸಾಹಸಕ್ಕೆ ಇಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ಸಹಕಾರ ಅಗತ್ಯವಿದೆ. ಈ ಸಂದರ್ಭದಲ್ಲೇ ಅವರು ಯಶಸ್ವಿಯಾಗಲಿ ಎಂದು ಹಾರೈಸುತ್ತಲೇ ಈ ಮಾಲಿಕೆ ಮುಗಿಸುತ್ತಿದ್ದೇನೆ. ಪಿ.ಎನ್. ಗಣೇಶ್ ಅವರ ಮೊಬೈಲ್ ಸಂಖ್ಯೆ 98453 99705

ಮೇ 30 ರಂದು ಸಮಿಟ್‌ಗೆ ಪ್ರಯತ್ನಿಸುವುದಾಗಿ ಚೈತನ್ಯ ಹೇಳಿದ್ದರು. ಅದಕ್ಕಾಗಿ ಸಿದ್ಧತೆ ನಡೆಸಿದ್ದರು. ಮೇ 21,22 ರ ಹವಾಮಾನ ನಿರೀಕ್ಷೆಯಲ್ಲೇ ಮೇ 18 ಕ್ಕೆ ಮೇಲಕ್ಕೆ ಹೊರಟೆ. ಅರ್ಧ ದಾರಿಗೆ ಹೋದೆ. ಗ್ಲೌಸ್ ಹಾಕಿಕೊಂಡಿದ್ದರೂ ತಣ್ಣಗೆ ಹೆಚ್ಚಾಗುತ್ತಿತ್ತು. ಮನಸ್ಸಲ್ಲೇಕೋ ಅಂಜಿಕೆ ಶುರುವಾಯಿತು. ಹೇಗೂ ಇರಲಿ ಎಂದು ವಾಪಸು ಬಂದವನು ಮತ್ತೆ ಹೊರಟದ್ದು 20 ರಂದೇ. ಕೆಲವರು ಸಮಿಟ್‌ಗೆ ಪ್ರಯತ್ನಿಸಿ ವಿಫಲರಾದರು. ನಾನು ಹೋಗದಿದ್ದುದೇ ಸೂಕ್ತ ಎನಿಸಿ ಸುಮ್ಮನೆ ಕುಳಿತುಕೊಂಡೆ.

ರಾತ್ರಿ ಮಲಗುವೆಂದದರೂ ಯಮಹಿಂಸೆಯೇ. ಸಾಮಾನ್ಯವಾಗಿ ಸಮಿಟ್ ಮಾಡಬೇಕೆಂದರೆ -10 ಉಷ್ಣಾಂಶ ಇದ್ದರೆ ಪರ ವಾಗಿಲ್ಲ. ಒಂದುವೇಳೆ -15 ಇದ್ದರೂ ಸುಧಾರಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿದ್ದರೆ ಸಾಧ್ಯವಿಲ್ಲ. ಆರೋಗ್ಯ ಕುಸಿಯುತ್ತದೆ. ಗಾಳಿಯೂ 100 ಕ್ಕಿಂತ ಹೆಚ್ಚು ವೇಗದಲ್ಲಿದ್ದರೆ ಅತ್ಯಂತ ಕಷ್ಟ. ಆ ಅನುಕೂಲಕರ ಹವಾಮಾನಕ್ಕೆ ಕಾಯುವುದೇ ದೊಡ್ಡ ಪ್ರಯಾಸ.

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್

ತ್ರಿವರ್ಣ ಧ್ವಜ ಹಾರಿಸುತ್ತಿರುವ ಗಣೇಶ್


ಮೇ 20 ಕ್ಕೆ ಹೊರಟು 70 ಡಿಗ್ರಿ ಕೋನದಲ್ಲಿ ನಾರ್ತ್‌ಕೋಲ್‌ಗೆ ಹೋದೆ. ಅಲ್ಲಿಂದ ಕ್ಯಾಂಪ್ 2 ಕ್ಕೆ ಹೋಗುವಾಗ ನನಗೆ ದಾರಿ ತಪ್ಪಿತು. ಕಡಿದಾದ ದಾರಿಯಲ್ಲಿ ಹಿಮ ಸುರಿಯುತ್ತಿತ್ತು. ಆಮ್ಲಜನಕ ಕೊರತೆ ಬಾಧಿಸತೊಡಗಿತು. ವಾಸ್ತವವಾಗಿ ನಾವು ಪರ್ವತ ಹತ್ತುವಾಗ ದಾರಿ ತೋರಿಸುವುದು ಹೆಜ್ಜೆಗಳೇ. ಹೆಜ್ಜೆ ಇರುವಲ್ಲಿಯೇ ದಾರಿ. ಮಂಜು ಸುರಿಯುತ್ತಲೇ ಇದ್ದರೆ ಯಾವ ಹೆಜ್ಜೆ ಗುರುತುಗಳೂ ಇರುವುದಿಲ್ಲ. ನಡೆದುಹೋದ ಮರುಕ್ಷಣವೇ ಮಂಜಿನಿಂದ ಅಳಿಸಿಹೋಗುತ್ತದೆ. ನಾನು ಊಹಿಸಿಕೊಂಡು ಮುನ್ನಡೆದೆ. ಅದು ಬೇರೆಲ್ಲೋ ಹೋಗುತ್ತಿದ್ದೆ.

ಶೆರ್ಪಾನಿಗೂ ಗೊತ್ತಾಗಲಿಲ್ಲ. ಒಂದಷ್ಟು ದೂರ ಹೋದಮೇಲೆ ಅನುಮಾನವಾಯಿತು. ಕೇಳುವುದಾದರೂ ಯಾರಿಗೇ ? ಅಲ್ಲಿ ಯಾರೂ ಇರುವುದಿಲ್ಲ. ಅಷ್ಟರಲ್ಲಿ ನ್ಯೂಜಿಲೆಂಡ್‌ನ ಇಬ್ಬರು ಆರೋಹಿಗಳು ಹಿಂಬಾಲಿಸಿಕೊಂಡು ಬಂದು “ರಸ್ತೆ ಇದಲ್ಲ, ಈ ಬದಿಗೆ ಬನ್ನಿ’ ಎಂದು ಕರೆದೊಯ್ದರು. ಅವರು ಬೈನಾಕ್ಯುಲರ್ ಸಹಾಯದಿಂದ ನಾನು ದಾರಿ ತಪ್ಪಿರುವುದನ್ನು ಖಚಿತಪಡಿಸಿ ಕೊಂಡರು.

ಆಕಸ್ಮಾತ್ ಅವರ ಸಹಾಯ ಸಿಗದಿದ್ದರೆ ನಾನು ಮೌಂಟ್ ಎವರೆಸ್ಟ್‌ನ ಯಾವ ತುದಿಗೆ ಹೋಗುತ್ತಿದ್ದೇನೋ ? ಸರಿದಾರಿಗೆ ಬಂದವನು ಮತ್ತೆ ಮೇಲೆ ಹೋಗಲಿಲ್ಲ. ನೇರವಾಗಿ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದೆ. ಮೇ 30 ರವರೆಗೆ ಅಲ್ಲೇ ಠಿಕಾಣಿ. ಜೂನ್ ಮೂರು ನನ್ನ ಗುರಿಯಿರಿಸಿಕೊಂಡ ದಿನ. ಆದರೆ ಜಂಘಾಬಲವನ್ನೇ ಕೊಲ್ಲುವ ಸುದ್ದಿ ಬರಸಿಡಿಲಿನಂತೆ ಬಡಿಯಿತು.

ಮೇ 30 ರಂದು ಸಮಿಟ್ ಹೋದ ಚೈತನ್ಯ ಕಣ್ಮರೆಯಾಗಿದ್ದರು. ತುದಿಯವರೆಗೆ ಹೋದಮೇಲೆ ಏನಾಯಿತೋ ಗೊತ್ತಿಲ್ಲ. ಅವರು ಸಮಿಟ್ ಹೊರಟ ಸಂದರ್ಭದಲ್ಲಿ ಸ್ವಲ್ಪ ಕೆಮ್ಮವೂ ಇತ್ತು. ಅದೇನಾದರೂ ಆಕ್ಸಿಜನ್ ಸ್ವೀಕರಿಸುವಾಗ ತೊಂದರೆ ಕೊಟ್ಟು ಬಿದ್ದರೆ ? ಗಾಳಿ ಹೊಡೆದುಕೊಂಡು ಹೋಯಿತೇ ? ಗೊತ್ತಿಲ್ಲ. ಅವರು ಶೆರ್ಪಾನನ್ನೂ ಕರೆದೊಯ್ದಿರಲಿಲ್ಲ. ಒಂದುವೇಳೆ ಶೆರ್ಪಾನನ್ನು ಕರೆದೊಯ್ದಿದ್ದರೆ ಅವನು ಸಹಾಯ ಮಾಡುತ್ತಿದ್ದ ಎಂಬ ನಂಬಿಕೆ ಕ್ಯಾಂಪ್‌ನಲ್ಲಿದ್ದ ಎಲ್ಲರದ್ದಾಗಿತ್ತು.

ನನಗೆ ಇದ್ದ ಎಲ್ಲ ಧೈರ್ಯ ಕುಸಿಯಿತು. ನನಗಾಗಿ ಕಾಯುತ್ತಿರುವ ಸಂಸಾರ ಎಲ್ಲವೂ ಕಣ್ಮುಂದೆ ಬಂತು. ನೇಪಾಳಕ್ಕೆ ಹೊರಡಲು ಅನುವಾದೆ. ಶೆರ್ಪಾನಿಗೆ ಗಂಟು ಕಟ್ಟಲು ಸಹಕರಿಸುವಂತೆ ಕೋರಿದೆ. ಆಗ ವೆಚ್ಚ ಸರಿದೂಗಿಸಲು ಗೆಳೆಯರು ಪಟ್ಟ ಕಷ್ಟವೂ ನೆನಪಾಯಿತು. ಅದರೊಂದಿಗೆ ನಾನೂ ವಾಪಸ್ಸಾದರೆ ಇನ್ನು ಮುಂದೆ ಎಲ್ಲ ಕನ್ನಡಿಗರೂ “ಪರ್ವತಾರೋಹಣ ಜೀವಕ್ಕೆ ಅಪಾಯ’ ಎಂದು ವ್ಯಾಖ್ಯಾನಿಸಿ ದೂರ ಉಳಿದಾರೆಂದೆನಿಸಿತು. ಸರಿ ಮತ್ತೆ ಧೈರ್ಯ ತಂದುಕೊಂಡೆ. ರಾತ್ರಿಯೆಲ್ಲಾ ಅದೇ ಕನಸು, ಧ್ಯಾನಿಸಿದ್ದಾಳೆ.

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ

ವಿಶ್ವಶಾಂತಿಯ ಸಂದೇಶ ಹೊತ್ತ ಗಣೇಶ್ ಎವರೆಸ್ಟ್ ತುದಿಯಲ್ಲಿ


ಮಗ ಸುಘೋಷ್ “ಅಮ್ಮಾ, ಅಪ್ಪಾ ಬರುವುದು ಯಾವಾಗ ? ’ ಎಂದು ಕೇಳುತ್ತಿದ್ದನಂತೆ. ಮಗಳು ಸಾಗರಿಕಾ (ಸಾಗರ್‌ಮಾತಾ ನೆನಪಿಗೆ ಇಟ್ಟದ್ದು) ನನ್ನನ್ನು ಬಿಟ್ಟು ಇರುವವಳಲ್ಲ. ಅವಳನ್ನೂ ಬಿಟ್ಟು ಎರಡೂವರೆ ತಿಂಗಳು ಇರಬೇಕಾಯಿತು.

ಅದೂ ವಾಪಸು ಹೋದೆನೆಂಬ ಗ್ಯಾರಂಟಿಯಿಲ್ಲದೇ. ನನಗಿಂತಲೂ ನನ್ನನ್ನು ಅವಲಂಬಿಸಿದವರಿಗೆ ಹಾಗೆ ಎಣಿಸಿಕೊಂಡು ಬದುಕುವುದು ಕಷ್ಟ. ಬೇಸ್‌ಕ್ಯಾಂಪ್‌ನವರೆಗೆ ಹೋಗುವವರೆಗೆ ಪತ್ನಿಯೊಂದಿಗೆ ಮಾತನಾಡುತ್ತಿದ್ದೆ. ನಂತರ ಇಲ್ಲ. ಚೈತನ್ಯ ಕಣ್ಮರೆಯಾಗಿ ದೊಡ್ಡ ಸುದ್ದಿಯಾದಾಗ ಎಲ್ಲರೂ ಗಲಿಬಿಲಿಯಾಗಿದ್ದಾರೆ.

ಕೆಲವರು “ನಿಮ್ಮ ಪತಿಯೂ ಅವರೊಂದಿಗಿದ್ದರಂತೆ’ ಎಂದು ಸುದ್ದಿ ಹಬ್ಬಿಸಿದಾಗ ನನ್ನ ಸಂಸಾರಕ್ಕೆ ದಿಗಿಲಾಗಿದೆ. ಸುಮಂಗಲಾ ದೇವರ ಕೋಣೆ ಬಿಟ್ಟು ಬರುವ ಪರಿಸ್ಥಿತಿಯಿರಲಿಲ್ಲ. ನಂತರ ಸತ್ಯ ತಿಳಿದಾಗ ಕೊಂಚ ಹಗುರವಾಯಿತು. ವಾಸ್ತವವಾಗಿ ತಿಳಿಯಾದದ್ದು ಜೂ. ೩ ರಂದು ಗುರಿ ಮುಟ್ಟಿ, ಜೂ. 8 ರಂದು ನೇಪಾಳಕ್ಕೆ ವಾಪಸು ಬಂದು ದೂರವಾಣಿ ಮಾಡಿದಾಗಲೇ ನಿರಾಳ (ಇದೆಲ್ಲಾ ಬೆಂಗಳೂರಿಗೆ ಬಂದಾಗ ಹೆಂಡತಿ ವಿವರಿಸಿದಳು).
pn ganes-3
8,300 ಮೀಟರ್‌ನವರೆಗೂ ನಾವು ಸಾಮಾನ್ಯವಾಗಿ ಬೆಳಗ್ಗೆಯೇ ಪ್ರಯಾಣಿಸುತ್ತೇವೆ. ಹಗಲಿನಲ್ಲಿ ಸ್ವಲ್ಪ ಹೆಚ್ಚು ಪ್ರಯಾಣಿಸ ಬಹುದು. ಆದರೆ ತುದಿ ಮುಟ್ಟುವ (ಸಮಿಟ್) ಕೆಲಸಕ್ಕೆ ಮಾತ್ರ ಸಿದ್ಧವಾಗುವುದು ರಾತ್ರಿಯೇ. ಕಾರಣವಿಷ್ಟೇ ರಾತ್ರಿ 11 ರ ಸುಮಾರಿ ಗೆ ಹೊರಟರೆ ಬೆಳಗ್ಗೆ 8 ರಿಂದ 9 ಗಂಟೆಯೊಳಗೆ 148 ಮೀಟರ್ ಕ್ರಮಿಸಿ ತುದಿ ಮುಟ್ಟಬಹುದು. ಬೆಳಗ್ಗೆ 10 ರ ನಂತರ ಕ್ಷಣ ಕ್ಷಣ ಕ್ಕೂ ಹವಾಮಾನ ಬದಲಾಗಬಹುದು. ಆದರೆ ಒಂಬತ್ತರಷ್ಟೊತ್ತಿಗೆ ಸಾಮಾನ್ಯವಾಗಿ ಮೋಡಗಳ ರಾಶಿ ಇರುವುದಿಲ್ಲ. ಒಳ್ಳೆ ಬೆಳಕು ಇರುತ್ತದೆ. ಹಾಗಾಗಿ ರಾತ್ರಿ ಪ್ರಯಾಣವನ್ನು ನಾವು ಯೋಜಿಸಿಕೊಳ್ಳುತ್ತೇವೆ.

ಜೂ. 1 ಕ್ಕೆ ಹೊರಟವ ಎಲ್ಲೂ ವಾಪಸು ಬರಲಿಲ್ಲ. ನಾರ್ತ್‌ಕೋಲ್‌ಗೆ ಹೋದವನೇ ಆರಾಮ ತೆಗೆದುಕೊಂಡು ಕ್ಯಾಂಪ್ 2 ಕ್ಕೆ ಹೋದೆ. ಅಲ್ಲಿಂದ ಜೂ. 2 ರ ಸಂಜೆ 4.30 ರಷ್ಟೊತ್ತಿಗೆ 8,300 ಅಡಿಯಲ್ಲಿರುವ ಸಮಿಟ್ ಕ್ಯಾಂಪ್‌ಗೆ ಬಂದೆ. ರಾತ್ರಿ 11 ವರೆಗೆ ಮಲಗಿಕೊಂಡೆ. ನಂತರ ಹೆಡ್‌ಟಾರ್ಚ್ ಸಹಾಯದಿಂದ 548 ಮೀಟರ್ ಕ್ರಮಿಸಲು ನಿರ್ಧರಿಸಿದೆ. ನನ್ನಲ್ಲಿ ಮತ್ತೊಂದು ಸಮಿಟ್ ಆಕ್ಸಿಜನ್ ಟ್ಯಾಂಕ್ ಇರಲಿಲ್ಲ. ಸಮಿಟ್ ಟ್ಯಾಂಕ್‌ಗೆ ದುಬಾರಿ. ಆದ್ದರಿಂದ ಶೆರ್ಫಾನನ್ನು ಅಲ್ಲಿಯೇ ಇರಲು ಹೇಳಿದೆ. ಅಷ್ಟರಲ್ಲಾಗಲೇ ಪುನರೂ ಕೆಲ ವಸ್ತುಗಳನ್ನು ವಾಪಸು ತೆಗೆದುಕೊಂಡು ಕೆಳಗಿಳಿದ್ದಿದ್ದ. ಆದರೆ ಅಂಗ್ರಿತಾ ಸ್ವಲ್ಪ ದೂರ ಬಂದು ನಿಂತುಕೊಂಡ. ರಸೆಲ್‌ಪ್ರೈಸ್ ಮೇಲೆ ಹೋಗುತ್ತಿದ್ದರು. ಇದನ್ನೇ ಬಳಸಿಕೊಂಡು ರಾತ್ರಿ 11 ಕ್ಕೆ ಮೇಲೆ ಹತ್ತಲು ಶುರುಮಾಡಿದವನಿಗೆ ಬೆಳಗ್ಗೆ ಹತ್ತರವರೆಗೆ ನಡೆಯಬೇಕಾಯಿತು.

ಭಾರತೀಯ ಕಾಲಮಾನ ಜೂ. 3 ರ ಬೆಳಗ್ಗೆ ಸುಮಾರು 10 ರಷ್ಟೊತ್ತಿಗೆ ನನ್ನ ಮೊದಲ ಹೆಜ್ಜೆಯಿದ್ದದ್ದು ಪ್ರಪಂಚದ ಅತ್ಯಂತ ಎತ್ತರದ ಪ್ರದೇಶದ ಮೇಲೆ (ಚೀನಾ ಕಾಲಮಾನ ಮಧ್ಯಾಹ್ನ 12)ಮನಸ್ಸಿನಲ್ಲಿ ಖುಷಿ ಉಕ್ಕಿ ಹರಿದಿತ್ತು. ಕೃತಕ ಆಕ್ಸಿಜನ್‌ನಿಂದ ಉಸಿರಾಡುತ್ತಿದ್ದೆ. ಕಣ್ಣನ್ನು ಗಾಗಲ್ಸ್ ಸುತ್ತುವರಿದ್ದಿದ್ದವು. ಒಮ್ಮೆ ಕೂಗೋಣ ಎಂದರೆ ಕೂಗಲಾಗದ ಸ್ಥಿತಿ. “ಅಭಿನಂದನೆ’ ಹೇಳಲಿಕ್ಕೆ ಯಾರೂ ಇರಲಿಲ್ಲ. ರಾಷ್ಟ್ರ ಧ್ವಜ, ಕನ್ನಡ ಧ್ವಜವನ್ನೆಲ್ಲಾ ಹಿಡಿದು ನಿಂತೆ.

ರಸೆಲ್ ಪ್ರೈಸ್ ಸ್ನೇಹಿತರು ಫೋಟೋ ಕ್ಲಿಕ್ಕಿಸಿದರು. ಆಗ ಉಕ್ಕಿ ಬಂದ ಸಂತೋಷವನ್ನೂ ಹೇಗೂ ವರ್ಣಿಸಲಾಗದು ; ಅನುಭವಿಸಿಯೇ ತೀರಬೇಕು. ಸುತ್ತಲೂ ಕಂಡ ಪರ್ವತಗಳ ಸಮುದ್ರದ ಮಧ್ಯೆ ದೊಡ್ಡ ಅಲೆಯ ಮೇಲೆ ನಾನು ನಿಂತಂತೆ ಭಾಸವಾಯಿತು. ಒಂದೆರಡು ಕ್ಷಣ ಕಣ್ಣುಮುಚ್ಚಿಕೊಂಡು ಆನಂದಿಸಿದೆ. ಸುಮಾರು ಹನ್ನೆರಡು ನಿಮಿಷ ಇದ್ದದ್ದೇ ಕಷ್ಟ. ಕೆಳಗಿಳಿಯುತ್ತಾ ಬಂದೆ. ಒಂದಷ್ಟು ಕೆಳಗೆ ಬಂದ ಮೇಲೆ ಅಂಗ್ರಿತಾ ಸಿಕ್ಕ. ಗುರಿ ಮುಟ್ಟಿದ ತೃಪ್ತಿಯಲ್ಲಿ ಇಳಿದು ಬಂದೆ.

ಎಲ್ಲೋ ಓದಿದ ಸಾಲುಗಳು ನೆನಪಾಗುತ್ತಿದ್ದವು. “ಮನುಷ್ಯ ನಿಸರ್ಗವನ್ನು ಗೆಲ್ಲುತ್ತಾನೆ. ಆದರೆ ಗೆದ್ದು ನಿಲ್ಲುವುದಿಲ್ಲ, ಇಳಿದು ಬರುತ್ತಾನೆ, ಮತ್ತೆ ನಿಸರ್ಗಕ್ಕೆ ಶರಣಾಗಿ ಬದುಕುತ್ತಾನೆ’. ಆ ಸಾಲುಗಳು ಆಪ್ತವೆನಿಸಿದವು. ಸತ್ಯದರ್ಶನ !

ನಿಯಮದ ಪ್ರಕಾರ ಬೇಸ್‌ಕ್ಯಾಂಪ್‌ನಲ್ಲಿರುವ ಚೀನಾ ಟಿಬೆಟ್ ಪರ್ವತಾರೋಹಿಗಳ ಸಂಘಕ್ಕೆ ಯಶಸ್ವಿಯಾಗಿ ಗುರಿ ಮುಟ್ಟಿ ವಾಪಸು ಬಂದು ಪ್ರಮಾಣ ಪತ್ರ ಪಡೆಯಬೇಕು ಎನ್ನುತ್ತಾರೆ. ಅದಿರಲಿ. ಎವರೆಸ್ಟ್ ಏರಿದ ಮೊದಲ ಕನ್ನಡಿಗ ಯಾರೆಂಬ ಚರ್ಚೆ ಆರಂಭವಾಗಿದೆ. ಆದರೆ ನನಗೆ ಹಾಗೆನ್ನಿಸುವುದಿಲ್ಲ. ಚರ್ಚೆಯಾಗುವ ಸಂಗತಿಯೂ ಅಲ್ಲ. ಕೀರ್ತಿಯೆಲ್ಲಾ ಚೈತನ್ಯರಿಗೇ ಇರಲಿ ; ನಮಗೆ ಮತ್ತೆ ಪರ್ವತ ಏರುವ “ಚೈತನ್ಯ’ವಿರಲಿ, ಪ್ರತಿ ಕನ್ನಡಿಗನಲ್ಲೂ ಆ “ಚೈತನ್ಯ’ ತುಂಬಲಿ, ಅಷ್ಟೇ ಸಾಕು, ಅಲ್ಲಿಗೆ ನಾನು ಧನ್ಯ !

May
11

ಅಡ್ವಾನ್ಸಡ್ ಬೇಸ್ ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.

ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಷೇಶನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಉಷಾರಾಗಿ ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ.
ರಾಂಬುಕ್ ಗ್ಲೇಷಿಯರ್
ನಾವು ತಿನ್ನುವ ಆಹಾರವೆಂದರೆ ಪ್ರೋಟೀನ್ ಪುಡಿ ಹಾಗೂ ಕೆಲವು ಸಿದ್ಧ ತಿನಿಸುಗಳು. ಪರ್ವತ ಏರುವವರಿಗೆ ಕೆಲವು ಕಂಪನಿಗಳು ಹೈ ಆಲ್ಟಿಟ್ಯೂಡ್ ಆಹಾರವನ್ನು ಒದಗಿಸುತ್ತಾರೆ. ಅದು ಪ್ರೋಟೀನ್‌ಯುಕ್ತ ಪುಡಿ. ಬಿಸಿನೀರಿಗೆ ಮಿಶ್ರಣ ಮಾಡಿಕೊಂಡು ಬದುಕಬೇಕು. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ ಕೊಳವಿದೆ. ಅದು ಸ್ಪಟಿಕದಂಥ ಶುಭ್ರ ನೀರು.

ಬಹಳ ತಮಾಷೆಯ ಸಂಗತಿಯೆಂದರೆ ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ನ ಬಲಕ್ಕೆ ಈ ಕೊಳ ಸಿಗುತ್ತದೆ. ಇದರ ಕೆಳಗೆ, ಸುತ್ತಮುತ್ತ ಮಂಜುಗೆಡ್ಡೆ. ಆದರೆ ಒಂದಷ್ಟು ಪ್ರದೇಶ ಮಾತ್ರ ನೀರು. ಇದು ಏಕೆ ಮತ್ತು ಹೇಗೆ ? ಎನ್ನುವುದು ಕುತೂಹಲದಾಯಕವೇ. ಕಾರಣ ವಿವರಿಸಲು ಅಲ್ಲಿ ಯಾರೂ ಇರುವುದಿಲ್ಲ. ಎಲ್ಲರೂ ನಮ್ಮ ಹಾಗೆ ಬಂದು ಹೋಗುವವರೇ.

ಮೇ 5 ರವರೆಗೆ ಕ್ಯಾಂಪ್ ಒಂದರಲ್ಲಿದ್ದೆ. ಪರವಾಗಿಲ್ಲ ಎನ್ನುವಂತಿತ್ತು ಹವಾಮಾನ. ಐದರ ಸಂಜೆ ಮತ್ತೆ ಚಳಿ ಹೆಚ್ಚತೊಡಗಿತು. ಸೀದಾ ವಾಪಸ್ ಅಡ್ವಾನ್ಸಡ್ ಕ್ಯಾಂಪ್‌ಗೆ ಬಂದೆ. ಮೇ 8 ರವರೆಗೆ ಉಳಿದು ಮತ್ತೆ ನಾರ್ತ್‌ಕೋಲ್‌ಗೆ ಹೊರಟೆ. ಮೇ 13 ರಂದು ತುದಿ ಮುಟ್ಟಬೇಕೆಂಬ ಗುರಿ ಇತ್ತು. ಆದರೆ ನಾರ್ತ್‌ಕೋಲ್‌ನಿಂದ 400 ಮೀಟರ್ ಎತ್ತರದಲ್ಲಿ ಕ್ಯಾಂಪ್ 2 ನಲ್ಲಿ ಶಿಬಿರ ನಿರ್ಮಿಸಲಷ್ಟೇ ಸಾಧ್ಯವಾಯಿತು. ಗುರಿ ಮುಟ್ಟಲು ಆಗಲಿಲ್ಲ, ಜೂ. 3 ರವರೆಗೆ ಕಾಯಬೇಕಾಯಿತು !

ಕ್ಯಾಂಪ್ 2 ರಲ್ಲಿ ಇರುವುದು ಅಪಾಯವೆನಿಸಿದರೂ ಹವಾಮಾನಕ್ಕೆ ಹೊಂದಿಕೊಳ್ಳಲು ಧೈರ್ಯ ಮಾಡಿ ಉಳಿದುಕೊಂಡೆ. ಹಿಮಪಾತ ಸುರಿಯುತ್ತಿತ್ತು. ಮೇ 9 ರ ಬೆಳಗ್ಗೆ ಕ್ಯಾಂಪ್ 2 ನಿಂದ ಸ್ವಲ್ಪ ದೂರ ನಡೆದೆ. ಆದರೆ ಬೆಳಗ್ಗೆ ಬಿಸಿಲಧಗೆಯೂ ಜೋರಿತ್ತು. ಹೇಗೋ ಸಾವರಿಸಿಕೊಂಡು ಮೇ 10 ಕ್ಕೆ ನಾರ್ತ್‌ಕೋಲ್‌ಗೆ ವಾಪಸ್ಸಾಗುವುದು ಕ್ಷೇಮವೆನಿಸಿ ಹಾಗೇ ಮಾಡಿದೆ. ನನ್ನ ದುರಾದೃಷ್ಟ. ಅಲ್ಲಿ ಇನ್ನೂ ಜೋರಾಗಿತ್ತು ಗಾಳಿ. ಗೆಳೆಯನೊಬ್ಬನ ಟೆಂಟ್ ಕಿತ್ತು ರಂಪವಾಗಿತ್ತು.

ವಾಪಸು ಅಡ್ವಾನ್ಸಡ್ ಬೇಸ್‌ಕ್ಯಾಂಪ್‌ಗೆ ಬಂದಾಗ ಸಮಾಧಾನವಾಯಿತು. ಮೇ 11 ಕ್ಕೆ ಪ್ರಯತ್ನಿಸೋಣ ಎಂದುಕೊಂಡೆ. ಆಗಲಿಲ್ಲ. ಶೆರ್ಪಾನೂ ಬೇಡ ಎಂದ. ಗಾಳಿ ನಮಗೆ ಸಹಕರಿಸುತ್ತಿರಲಿಲ್ಲ. ಹಾಗಾಗಿ ಮೇ 13 ರ ಗುರಿ ವಿಫಲವಾಯಿತು. ಅಲ್ಲೇ ಇದ್ದ ಭಾರತೀಯ ವಾಯುಸೇನೆಯ ಗೆಳೆಯರು 21, 22 ರಂದು ಹವಾಮಾನ ಚೆನ್ನಾಗಿರಬಹುದು ಎಂದರು. ಸದಾ ಅಲ್ಲೇ ಸುತ್ತುವ ರಸೆಲ್‌ಪ್ರೈಸ್ ಸಹ ಹೌದು ಎಂದು ಸಲಹೆ ನೀಡಿದರು.

ಇಲ್ಲಿ ನೆನಪಿಸಿಕೊಳ್ಳಬೇಕು. ವಾಯುಸೇನೆ ತಂಡದೊಂದಿಗೆ ಕಳೆದದ್ದು ಅತ್ಯಂತ ಖುಷಿಯ ಹೊತ್ತು. ಚೈತನ್ಯ, ಸ್ಕ್ರಾಡ್ರರ್ ಲೀಡರ್ ಬಸವರಾಜ್, ಕಾರ್ತಿಕ್, ಡಾ. ಹೇಮಂತ್ ಮತ್ತಿತರ ಜತೆಗೆ ಹರ್ಷದಿಂದ ಇದ್ದೆವು. ಅಡ್ವಾನ್ಸಡ್ ಕ್ಯಾಂಪ್‌ನಲ್ಲಿ ಮೊದಲು ತಂಗಿದ್ದಾಗ ಇಂಟರ್‌ಮೀಡಿಯೆಟ್ ಕ್ಯಾಂಪ್‌ನಿಂದ ಬರುವವರೆಗೆ “ನೀರಿನ’ ಸೇವೆ ಮಾಡಿದ್ದೆ. ಸುಮಾರು ಹನ್ನೆರಡು ಕಿ. ಮೀ ನಡೆದು ಬರುವಾಗ ತಂದ ನೀರೆಲ್ಲಾ ಖಾಲಿಯಾಗಿರುತ್ತೆ. ತ್ರಾಣ ಕಡಿಮೆಯಾಗಿರುತ್ತೆ. ಆಗ ನೀರು ನಿರೀಕ್ಷಿಸುವುದು ಸಾಮಾನ್ಯ. ನಾನು ಬಿಸಿನೀರು ಕಾಯಿಸಿ ಕೊಡುತ್ತಿದ್ದೆ. ಅದನ್ನು ಈಗ ಎಲ್ಲರೂ ನೆನೆಸಿಕೊಂಡರು.

ನಾರ್ತ್‌ಕೋಲ್‌ಗೆ ಹೋಗುವಾಗ ಬಲಕ್ಕೆ ಸಿಗುವ ರಾಂಬುಕ್ ಗ್ಲೇಷಿಯರ್ ನೋಡಿದರೆ ಕಣ್ಣು ತುಂಬಿ ಹೋಗುತ್ತದೆ. ಸಪಾಟಾದ ಮೈದಾನದಂಥ ನೀರ್ಗಲ್ಲು. ಹತ್ತು ಕ್ರಿಕೆಟ್ ಸ್ಟೇಡಿಯನಷ್ಟು ದೊಡ್ಡದು. ಅಲ್ಲಿ ಕುಳಿತರೆ ಆ ನೀರವತೆಯಲ್ಲಿ ಕೆಳಗೆಲ್ಲೋ ಭೂಮಿಯ ಶಾಖಕ್ಕೆ ಮಂಜು ಕರಗಿ ನೀರಾಗಿ ಹರಿಯುವುದನ್ನು ಕೇಳಬಹುದು. ಎಷ್ಟು ಸ್ಪಷ್ಟವಾಗಿ ಜುಳು ಜುಳು ಶಬ್ದ ಕೇಳುತ್ತದೆಯೆಂದರೆ ನದಿಯ ತೀರದಲ್ಲಿದ್ದ ಹಾಗೆ.

ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ

ಎವರೆಸ್ಟ್ ಹತ್ತುವಾಗ ಸಿಗುವ ಪ್ರಾಚೀನ ಬೌದ್ಧ ಸ್ತೂಪ


ಒಂದು ಸಂಗತಿ ಮರೆತಿದ್ದೆ. ಬೇಸ್‌ಕ್ಯಾಂಪ್ (5, 200 ಮೀಟರ್)ನಿಂದ 8 ಕಿ. ಮೀ ದೂರದಲ್ಲಿ ಟಿಬೆಟ್‌ನ ಅತ್ಯಂತ ಹಳೆಯ ಬೌದ್ಧ ಸ್ತೂಪವಿದೆ. ರಾಂಬುಕ್ ಮೊನೆಸ್ಟ್ರಿ ಎನ್ನುತ್ತಾರೆ. ಇಲ್ಲಿ ಬೌದ್ಧಗುರು ದಲಾಯಿಲಾಮಾ ಬರುತ್ತಾರೆ. ಪೀಠ ಬದಲಿಸುವುದೂ ಇಲ್ಲಿಯೇ ಎನ್ನಲಾಗುತ್ತದೆ. ಪರ್ವತಾರೋಹಿಗಳು ಇಲ್ಲಿ ಬಂದು ಆಶೀರ್ವಾದ ಪಡೆಯಬೇಕು. ಗುಹೆಗಳಲ್ಲಿ ಬೌದ್ದ ಸನ್ಯಾಸಿಗಳಿದ್ದಾರೆ. ಈ ಗುಹೆಗಳೊಳಗೆ ಒಂಚೂರು ತಣ್ಣಗಿಲ್ಲ. ಇದೊಂದು ವಿಶೇಷ ಸಂಗತಿಯೆಂದು ಮಧ್ಯದಲ್ಲಿ ಹೇಳಿದೆ.

May
08

ಹಗ್ಗ ನಮ್ಮ ಹಿಡಿತಕ್ಕೆ. ಜತೆಗೆ ಹಿಮ ಪ್ರವಾಹ (ಅವಲಾಂಚ್)ದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಇರುವಂಥ ಸಾಧನ. ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು. ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ.

ಹಿಮಪಾತ

ಹಿಮಪಾತ


ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮ ಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.

ನಮಗೆ ಸಿಕ್ಕ ಮಹಿತಿಯಂತೆ ಉತ್ತರ ಅಮೆರಿಕಾದ ಪರ್ವತ ಪ್ರದೇಶದಲ್ಲಿ ಒಮ್ಮೆ ಉರುಳಿದ ಅವಲಾಂಚ್ ಎಷ್ಟು ಗಾತ್ರದೆಂದರೆ 3 ಲಕ್ಷ ಕ್ಯೂಬಿಕ್ ಯಾರ್ಡ್‌ನಷ್ಟು ಮಂಜು ಕುಸಿಯಿತು. ಅಂದರೆ ೨೦ ಪುಟ್‌ಬಾಲ್ ಮೈದಾನದಷ್ಟು ಅಗಲದ ಮತ್ತು 10 ಅಡಿ ಆಳದ ಗುಂಡಿಗೆ ಬಿದ್ದ ಮಂಜು ತುಂಬಬಹುದು. ಅಂಥದ್ದೊಂದು ಅವಲಾಂಚ್‌ಗೆ ನಾವು ಸಿಕ್ಕರೆ ದೇವರೇ ಗತಿ.

ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು ?
ಕ್ಯಾಂಪ್ ಒಂದಕ್ಕೆ ಅಥವಾ ನಾರ್ತ್‌ಕೋಲ್‌ಗೆ ತಲುಪಿದ್ದು ಮೇ 3 ರಂದು. ಪರ್ವತ ಹತ್ತುವುದೆಂದರೆ ನೇರವಾಗಿ ಹತ್ತುತ್ತ ಲೇ ಇರುವುದಲ್ಲ. ಒಂದೊಂದು ಶಿಬಿರದಲ್ಲಿ ಒಂದಷ್ಟು ದಿನ ಕಳೆದುಕೊಂಡು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ಪರ್ವತ ಏರಬೇಕು. ಅದಕ್ಕೇ ನಮಗೆ ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ.

ಎವರೆಸ್ಟ್ ನ ಉತ್ತರ ಬದಿ

ಎವರೆಸ್ಟ್ ನ ಉತ್ತರ ಬದಿ


ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು. ಅದಕ್ಕೇ ಮೊದಲೇ ಹೇಳಿದ್ದೇನೆ, ತಾಳ್ಮೆ ಬೇಕು. ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು.

ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.

ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.

7,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದೆ. (ಸಶೇಷ)

May
07

‘ಸಾಂಗತ್ಯ’ ಬ್ಲಾಗ್, ಸಿನಿಮಾ ಅಭಿರುಚಿ ಬೆಳೆಸುವತ್ತ ಕಾರ್ಯೋನ್ಮುಖವಾಗಿದೆ. ಆ ನಿಟ್ಟಿನಲ್ಲಿ ಹೊಸ ಹೊಸತನ್ನು ಕೈಗೊಳ್ಳುತ್ತಿರುವ ಅದು, ತನ್ನ ಗರಿಗೆ ಮತ್ತೊಂದು ಹೊಸತನ್ನು ಸೇರಿಸಿಕೊಂಡಿದೆ. ಅದು ಸಿನಿಮಾ “ಸ್ಕೋಪ್”.

ಒಂದು ಸಿನಿಮಾದ ಕುರಿತ ಕೂಲಂಕಷ ಅಧ್ಯಯನದ ದೃಷ್ಟಿಯಿಂದ ಆರಂಭಿಸಿರುವ ಲೇಖನಮಾಲೆ ಇದು. ಪರಮೇಶ್ ಗುರುಸ್ವಾಮಿ ಸೇರಿದಂತೆ ಹಲವು ಮಂದಿ ಒಂದು ಚಿತ್ರವನ್ನು ವಿವಿಧ ಕೋನಗಳಲ್ಲಿ ಅಧ್ಯಯನ ಮಾಡುವರು. ಸಿನಿಮಾ ಕುರಿತು ತಿಳಿಯಲು ಬಯಸುವ ಮಂದಿಗೆ ಇದೊಂದು ಉತ್ತಮ ಅಂಕಣ.

ಸಿನಿಮಾವನ್ನು ನೋಡುವ ನೆಲೆಗಳು ಅರ್ಥವಾಗುವಂತೆ ಅಕಾಡೆಮಿಕ್ ರೀತಿಯಲ್ಲಿ ನೀಡಿರುವುದು ಉಲ್ಲೇಖನೀಯ. ಒಂದು ಚಿತ್ರದ ಕುರಿತು ಮೂರ್ನಾಲ್ಕು ಕಂತುಗಳಲ್ಲಿ ಬರಹ ಪ್ರಕಟವಾಗುತ್ತಿರುವುದೂ ಸಂತಸದ ಸಂಗತಿಯೇ. ಅಧ್ಯಯನ ದೃಷ್ಟಿಯಿಂದ ಇದು ಸೂಕ್ತ.

ಮೊದಲಿಗೆ ಪರಮೇಶ್ ಗುರುಸ್ವಾಮಿ ಅವರು, ಚೀನಿ ಚಿತ್ರ “ಪೋಸ್ಟ್ ಮ್ಯಾನ್ ಇನ್ ದಿ ಮೌಂಟೇನ್ಸ್” ಕುರಿತು ವಿವರವಾಗಿ ಬರೆದಿದ್ದಾರೆ. ಪರಮೇಶ್ ಅವರು ಒಂದು ಚಿತ್ರವನ್ನು ಭಿನ್ನ ನೆಲೆಗಳಿಂದ ನೋಡಬಲ್ಲ ಚಿತ್ರಜ್ಞರು. ಅದರು ವಿವಿಧ ಅಂಶಗಳನ್ನು ಚರ್ಚೆಗಿಡುವ ಪರಿಯೂ ಅನನ್ಯ. ಒಟ್ಟೂ, ಮತ್ತಷ್ಟು ಹೊಸತಿಗೆ ಸಾಂಗತ್ಯ ಮುಖಾಮುಖಿಯಾಗುತ್ತಿರುವುದು ಒಳ್ಳೆಯ ವಿಚಾರ. ಅಂಕಣದ ಓದಿಗೆ ಭೇಟಿ ಕೊಡಿ..ಸಾಂಗತ್ಯಕ್ಕೆ