ಪುಟ್ಟ ಕಥೆ

ಇದು ನನ್ನ ಮತ್ತೊಂದು ಪುಟ್ಟ ಕಥೆ

ಒಂದು ಚೆಂದದ ಗೊಂಬೆಯನ್ನು ತಂದಿದ್ದ. ಬಹಳ ಚೆನ್ನಾಗಿತ್ತು, ನೋಡಿ ನೋಡಿ ಮೈ ಮರೆತ. ಯಾಕೋ ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳಬೇಕೆನಿಸಿತು. ಕನ್ನಡಿ ಎದುರಿಗೆ ನಿಂತ. ಗೊಂಬೆಗಿಂತ ತಾನೇ ಕುರೂಪ ಎನಿಸಿತು. ಸಿಟ್ಟು ಬಂತು. ಗೊಂಬೆಯ ಒಂದೊಂದೇ ಅವಯವಗಳನ್ನು ಬಿಡಿಸುತ್ತಾ ಹೊರಟ. ಸ್ವಲ್ಪ ಶ್ರಮವೆನಿಸಿತು. ಆದರೂ ಕೊನೆಗೆ ಅವನೇ ಗೆದ್ದ. ಎಲ್ಲವೂ ಈಗ ಕಣ್ಣೆದುರು ಬಿದ್ದಿದೆ. ಈಗ ಮತ್ತೆ ಕನ್ನಡಿ ಎದುರು ನಿಂತ. ಈಗ ಯಾಕೋ ಮತ್ತಷ್ಟು ಕುರೂಪ ಎನಿಸತೊಡಗಿತು. ಬೇಸರದಿಂದ ಅವನ್ನೆಲ್ಲಾ ಜೋಡಿಸತೊಡಗಿದ್ದಾನೆ. ಮುಖದ ಮೇಲೆ ಮೆಲ್ಲಗೆ ಕಾಂತಿಯ ಪರಿಮಳ ಅರಳುತ್ತಿದೆ. ನಮ್ಮ ನಿಮ್ಮ ಸುತ್ತಲೆಲ್ಲಾ ಹರಡಿಕೊಳ್ಳಲಿಕ್ಕೆ ಒಂದಷ್ಟು ಹೊತ್ತು ತಗುಲಬಹುದು…ಗೊಂಬೆಗೆ ಮತ್ತೆ ಜೀವ ಬರಬಹುದು…!

ಚಿತ್ರ : ನನ್ನದೇ

ಚಲನಚಿತ್ರ ಅಕಾಡೆಮಿಗೆ ಹೊಸಬರು ಬೇಕಾಗಿದ್ದಾರೆ

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಹೊಸ ಮುಖ ಬೇಕಾಗಿದೆ. ಮೂರು ವರ್ಷಗಳ ಹಿಂದೆ ರಾಜ್ಯದಲ್ಲಿ ಗುಪ್ತಗಾಮಿನಿಯಂತೆ ಇದ್ದ ಸಿನಿಮಾ ಚಳವಳಿಗೆ ಒಂದು ವೇಗ ಕೊಡಲು ರಾಜ್ಯ ಸರಕಾರ ಅಕಾಡೆಮಿಯನ್ನು ರಚಿಸಿತು. ಮೊದಲ ಅವಧಿಗೆ ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು ಇದರ ಚುಕ್ಕಾಣಿ ಹಿಡಿದರು. ಈಗ ಅವರ ಅವಧಿ ಮುಗಿದಿದೆ.

ಅಕಾಡೆಮಿಯ ಮೊದಲ ಅವಧಿಯ ಸಾಧನೆಯನ್ನು ತುಲನೆ ಮಾಡಿದರೆ ಬಹಳಷ್ಟು ನಿರೀಕ್ಷೆ ಈಡೇರದಿದ್ದರೂ, ನಿರಾಶೆ ಮೂಡದು. ಸಾಮಾನ್ಯವಾಗಿ ಒಂದು ಸಂಸ್ಥೆಯ ಮೊದಲ ಒಂದೆರಡು ವರ್ಷ ಕಂಡ ಕನಸಿಗೆ ಮೂರ್ತ ರೂಪ ನೀಡುವ ಪ್ರಯತ್ನವಷ್ಟೇ ನಡೆಯುತ್ತದೆ. ಬಹಳ ನೇರವಾಗಿ ಹೇಳುವುದಾದರೆ, ಕನಸಿಗೆ ಕಾಲು, ಕೈ, ಮೂಗು-ಬಾಯಿ ಮೂಡಿಸುವ ಹೊಣೆ. ಎಷ್ಟೋ ಬಾರಿ ಹೀಗೂ ಆಗುವುದುಂಟು. ಮೂರ್ತ ರೂಪ ಕೊಡುವ ಹೊಣೆ ಹೊತ್ತ ಮಂದಿ ಕಾಲು, ಕೈ-ಮೂಗು-ಬಾಯಿ ಎಲ್ಲವನ್ನೂ ಕೊಟ್ಟು ಹೃದಯವನ್ನು ಕೊಡುವುದನ್ನೇ ಮರೆಯುವ ಅಪಾಯವಿದ್ದೇ ಇರುತ್ತದೆ. ಅಂಥ ಅವಘಡ ಈ ಅಕಾಡೆಮಿಯ ಸಂದರ್ಭದಲ್ಲಿ ಘಟಿಸಿಲ್ಲ. ಬೆಳೆಯಬೇಕಾದ ಅಂಗಗಳು ಕ್ರಮಬದ್ಧವಾಗಿ ಬೆಳೆಯದಿರಬಹುದು, ಹೃದಯವನ್ನು ಕೊಡಲು ಮರೆತಿಲ್ಲವೆಂಬುದೇ ಸದ್ಯದ ಸಮಾಧಾನ.
ಅಕಾಡೆಮಿ ಸಿನಿಮಾ ಚಳವಳಿಯನ್ನು ಪ್ರೋತ್ಸಾಹಿಸಲು, ರಾಜ್ಯಾದ್ಯಂತ ಬೆಳ್ಳಿಸಾಕ್ಷಿ-ಬೆಳ್ಳಿ ಮಂಡಲದಂಥ ಕಲ್ಪನೆಗಳ ಮೂಲಕ ಫಿಲ್ಮ್ ಸೊಸೈಟಿಗಳನ್ನು ಸೃಷ್ಟಿಸಲು ಪ್ರಯತ್ನಿಸಿತು. ಈ ಪ್ರಯತ್ನದಲ್ಲಿ ಶೇ. ೭೦ ರಷ್ಟು ಯಶಸ್ವಿಯಾಗಿದೆ. ಕೆಲವೆಡೆ ಬೆಳ್ಳಿ ಸಾಕ್ಷಿ-ಬೆಳ್ಳಿಮಂಡಲಗಳು ಬಹಳ ಸಕ್ರಿಯವಾಗಿದ್ದರೆ, ಕೆಲವೆಡೆ ಇನ್ನೂ ಎದ್ದೇ ಇಲ್ಲ. ಇದು ಬಿತ್ತಿದ ಎಲ್ಲವೂ ಮೊಳಕೆಯೊಡೆಯುವುದಿಲ್ಲವೆಂಬ ಮಾತಿಗೆ ನಿದರ್ಶನ. ಉಳಿದಂತೆ ನಮ್ಮ ಹಿಂದಣವನ್ನು ನೆನಪಿಸಿಕೊಳ್ಳಲು ‘ಬೆಳ್ಳಿಹೆಜ್ಜೆ’ ಎಂಬ ಕಾರ್‍ಯಕ್ರಮ ನಡೆಸಿತು. ಕನ್ನಡದ ಹಿರಿಯ ನಟ-ನಟಿ, ನಿರ್ದೇಶಕರೂ ಸೇರಿದಂತೆ ಸಿನಿ ಜಗತ್ತಿನ ಮಹನೀಯರನ್ನು ಕರೆದು ಕುಳ್ಳಿರಿಸಿ, ಅವರ ಅನುಭವವನ್ನು ಕೇಳುವಂಥ ಕಾರ್‍ಯಕ್ರಮ. ಇದು ಕೊಂಚ ಜನಪ್ರಿಯತೆ ತಂದುಕೊಟ್ಟಿದೆ. ಉಳಿದಂತೆ ನಡೆಯುವ ಮಾರ್ಗದ ನಕ್ಷೆಯನ್ನು ರೂಪಿಸಿಕೊಂಡಿದ್ದು ದೊಡ್ಡದು, ಮುಟ್ಟಿದ್ದು ಕಡಿಮೆ. Continue reading

ಮತ್ತಷ್ಟು ಸಾಲುಗಳು


ಒಂದು
ಬಿಂದುವಿನಿಂದ
ಬದುಕು ಆರಂಭ
ಮತ್ತೊಂದು ಬಿಂದಿನಲ್ಲಿ
ವಿಲೀನ
ನಿಂತ ಭಂಗಿಯಲ್ಲೇ
ಹಾದಿ ಸವೆಸಬೇಕು
ಹೊಸ ಹಾದಿ
ಹುಡುಕಲು ಹೋಗಿ
ಕಳೆದುಹೋಗುವುದಕ್ಕಿಂತ
* * *
ಕತ್ತಲೆಯೇ
ಚೆಂದ
ಒಳಹೊಕ್ಕರೆ
ಯಾರೂ ಸಿಗುವುದಿಲ್ಲ
ಒಂಟಿ ಒಂಟೆಯ
ಬದುಕು
ಬೆಳಕಿಗೆ ಬಂದರೆ
ಜಾತ್ರೆಯೇ ಇದ್ದೀತು
ಅದಕ್ಕೇ
ನಾನೂ ಒಳಹೊಕ್ಕಿದ್ದೇನೆ
ಹೊರಬರಲು ಮನಸ್ಸಿಲ್ಲ
* * *
ನಿಂತ ಕ್ಷಣದ
ಎದುರು
ಭವಿಷ್ಯದ ಕ್ಷಣ
ಕೇಳಿತು
ಯಾರ ಬದುಕು ಕ್ಷಣಿಕ?
ನಿಂತ ಕ್ಷಣ ಹೇಳಿತು
ನನ್ನದು ಹಾಗಲ್ಲ
ಇರುವಷ್ಟೂ ಕಾಲ ನನ್ನದು
ಭವಿಷ್ಯವೆಂಬುದು ತಣ್ಣಗೆ
ಉತ್ತರಿಸಿತು
ನನ್ನ ಕ್ಷಣ ಬಂದ
ಮೇಲೆ ನೀನು
ಇದ್ದೂ ಸತ್ತಂತೆ

ಹಾಗೇ ಸುಮ್ಮನೆ


ಹೀಗೆ ಕಂಸನಂತೆ ಕನಸುಗಳನ್ನು ಕೊಲ್ಲುತ್ತಲೇ ಇದ್ದ ಆತ…
ಅವನ ದೃಷ್ಟಿಯಲ್ಲಿ ಅದು ಸ್ವರಕ್ಷಣೆ
ಎಲ್ಲಿಯವರೆಗೆ ಕೊಲ್ಲುತ್ತಿದ್ದ ಕನಸಿನ ಟಿಸಿಲೊಡೆದು ಮತ್ತೊಂದು
ಕನಸು ಜಿಗಿದೇ ಬಿಟ್ಟಿತು…
ಅದು ಹಾರಿ ಹೋದದ್ದಷ್ಟೇ ಈತನಿಗೆ ಕಂಡಿದ್ದು
ಚಿಗಿತಿದ್ದೂ ಕಾಣಲಿಲ್ಲ, ಬೆಳೆದಿದ್ದೂ ಸಹ…
ಕಾಲ ಅದನ್ನು ಕಾಪಾಡುತ್ತಿದೆ…
ಕನಸಿನೊಳಗಣ ಕಣ್ಣು ಒಡೆದು
ಹೊರಗಿನದೆಲ್ಲಾ ಸಿರಿ-ಐಸಿರಿ….
***
ಕನಸಿಗೊಂದು
ಇಟ್ಟ ಹೆಸರು
ಮರೆತು ಹೋಗಿದೆ
ಅಯ್ಯೋ
ಕನಸೂ ಮಾಸಿ ಹೋಗಿದೆ
***
ಹೀಗೇ ಕಣ್ತೆರೆದು
ಕುಳಿತಿದ್ದೆ
ಕಣ್ಣು ತೆರೆದಂತೆಯೇ ಇತ್ತು
ಬೆಳಕೊಂದು ಒಳಗೆ
ಹೊತ್ತಿಕೊಂಡಂತೆ
ಅನಿಸಿತು
ಕಣ್ಮುಚ್ಚಿದೆ
ಒಳಗೇ ಒಂದು
ಬಗೆಯ ಅನಂದ
ನಾನೇ ಬೆಳಕಾಗುವಂತೆ
***
ಪ್ರೀತಿ
ತನ್ನ ಪ್ರಿಯಕರನನ್ನು
ಕಂಡು
ಕೇಳಿತು
“ನಿಜವಾಗಲೂ ಹೇಳು
ನೀನು ನನ್ನನ್ನು
ಪ್ರೀತಿಸುತ್ತೀಯಾ?”
ಅದಕ್ಕೆ
ಪ್ರಿಯಕರ ಹೇಳಿದ
“ನೀನೂ ನಿಜವಾಗಲೂ
ಹೇಳು !”

ಪುಟ್ಟ ಪುಟ್ಟ ಕಥೆ


ಚೆಂದದ ಗೊಂಬೆಗೆ ಹೆಸರಿಡಲು ಊರೆಲ್ಲಾ ಹುಡುಕಿದರು. ಎಲ್ಲೂ ಚೆಂದದ ಹೆಸರು ಸಿಗಲಿಲ್ಲ. ಸಿಕ್ಕ ಹೆಸರುಗಳೆಲ್ಲಾ ಎಲ್ಲೋ ಕೇಳಿದಂತಿದ್ದವು. ಇನ್ನು ಸಿಕ್ಕ ಕೆಲವು ಹೆಸರುಗಳೂ ಪಂಚಾಂಗ, ನಕ್ಷತ್ರ ಏನೇನೋ ಕಾರಣಗಳಿಂದ ಇಡಲು ಯಾಕೋ ಇಷ್ಟವಾಗುತ್ತಿರಲಿಲ್ಲ. ಬೆಳಗ್ಗೆ ಅಂಗಳದಲ್ಲಿ ಮಗು ಚಾಪೆಯಲ್ಲಿ ಹರಡಿಕೊಂಡಿದ್ದಾಗ ರಸ್ತೆಯಲ್ಲಿ ಹೋಗುತ್ತಿದ್ದ ಹುಚ್ಚಿಯೊಬ್ಬಳು ಮಗುವನ್ನು ಕಂಡು “ಬಚ್ಚಿ” ಎಂದು ಕರೆದಳು. ಕೋಣೆಯಲ್ಲಿ ಕಚೇರಿಗೆ ತೆರಳಲು ಸಿದ್ಧಗೊಳ್ಳುತ್ತಿದ್ದ ಗಂಡ, ತನ್ನ ಹೆಂಡತಿಗೆ ಕೂಗಿ ಹೇಳಿದ…”ಅದೇ ಹೆಸರಿಟ್ಟು ಬಿಡು…!’

ನನ್ನ ಮತ್ತಷ್ಟು ಚಿತ್ರಗಳನ್ನು ಕಾಣಲು ಫೋಟೋ ಬ್ಲಾಗ್ ಗೆ ಹೋಗಿ.

ನನ್ನ ಚಿತ್ರಗಳ ಬ್ಲಾಗ್

ಹೌದು, ಬಹಳ ದಿನಗಳ ಕನಸು. ಫೋಟೋಗ್ರಫಿ ನನ್ನ ಆಸಕ್ತಿಯ ಕ್ಷೇತ್ರ. ಈಗ ತಾನೇ ಕಲಿಯಲು ಶುರು ಮಾಡಿದ್ದೇನೆ. ಹೀಗೆ ಸಿಕ್ಕ ಚಿತ್ರಗಳನ್ನು ಕ್ಲಿಕ್ಕಿಸಿ, ಒಂದೆಡೆಗೆ ರಾಶಿ ಹಾಕಬೇಕೆಂದೆನಿಸಿತ್ತು.ಅದೇ ಪ್ರಯತ್ನ ಸಾಗಿದೆ. ಮೊನ್ನೆ ತಾನೇ ಮುಗಿದ ಕುದ್ರೋಳಿ ದಸರಾದ ಒಂದಿಷ್ಟು ಫೋಟೋಗಳನ್ನು ಹಾಕಿದ್ದೇನೆ. ಈ ಚಿತ್ರಗಳಿಗಾಗಿ ಚಿತ್ರಸಾಲು ಬ್ಲಾಗ್ ಮಾಡಿದ್ದೇನೆ. ಅಲ್ಲಿಗೆ ಹೋಗಿ ನೋಡಿ, ಅಭಿಪ್ರಾಯಿಸಿ.

ಮತ್ತಷ್ಟು ಸಾಲುಗಳು

ತೇಲಿಬರುತ್ತಿದ್ದ
ಅಲೆಯೊಂದು
ನಿಲ್ಲಲು
ಯತ್ನಿಸಿತು
ಹಿಂದಿನವ
ಬಿಡಲೇ ಇಲ್ಲ
**
ಕೆಂಪುಲಾಬಿಗಿಂತ
ಆಚೀಚಿನ
ಎಳೆ ಅರೆ ಹಸಿರಿನ
ಎಲೆಗಳೇ
ಚೆಂದೆನಿಸುತ್ತಿವೆ
**
ಮೌನಕ್ಕೆ
ಹೆಸರಿಡಬೇಕಿಲ್ಲ
ಹೇಗಿದ್ರೂ
ಅದನ್ನು
ಕರೆಯುವುದೇ
ಇಲ್ಲವಲ್ಲ
**
ಮಾತನಾಡದಿದ್ದವರ
ಬಳಿ
ಮೌನದ
ಬಗ್ಗೆಯೂ
ಹೇಳಿದರೂ
ಸಿಟ್ಟು
**

ಭ್ರಷ್ಟಾಚಾರ ವಿರುದ್ಧ ಭಾರತ- ಬನ್ನಿ, ಕೈ ಜೋಡಿಸೋಣ

ನಿಜಕ್ಕೂ ಭ್ರಷ್ಟಾಚಾರದ ವಿರುದ್ಧ ಸಿಡಿದೇಳುವ ಕಾಲವಿದು.

ಅಣ್ಣಾ ಹಜಾರೆಯವರು ಜನಲೋಕಪಾಲ್ ಕಾಯಿದೆಗೆ ಒತ್ತಾಯಿಸಿ, ಭ್ರಷ್ಟಾಚಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದರೆ ಕೇಂದ್ರ ಸರಕಾರದವರು ಬಂಧಿಸುತ್ತದೆ. ಇದು ಎಂತಹ ಹೇಯವಾದುದು ಎಂದರೆ, ಪ್ರತಿಭಟಿಸಲೂ ಸ್ವಾತಂತ್ರ್ಯವಿಲ್ಲವೆಂದಾದರೆ 65 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಯೂ ಏನು ಪ್ರಯೋಜನ ?

ಇಂದಿನಿಂದ ಆರಂಭವಾದ (ಆ.16) ಸತ್ಯಾಗ್ರಹವನ್ನು ಪ್ರಾರಂಭದಲ್ಲೇ ಹತ್ತಿಕ್ಕಲು ಪ್ರಯತ್ನಿಸಿದ ಕೇಂದ್ರ ಸರಕಾರ ಅಣ್ಣಾ ಹಜಾರೆ ಮತ್ತು ಬೆಂಬಲಿಗರನ್ನು ಬಂಧಿಸಿದ್ದಾರೆ. ಕಾರಣವನ್ನೇ ನೀಡದೇ ಬಂಧಿಸುವುದು ಎಷ್ಟೊಂದು ಅಸಾಂವಿಧಾನಿಕವೆಂಬುದು ನಮ್ಮ ಅತ್ಯಂತ ಪರಿಣಿತ ಹಾಗೂ ವಿದ್ಯಾವಂತ ಪ್ರಧಾನಿಯವರಿಗೆ ಹೇಳಿಕೊಡಬೇಕಾದ ಕಾಲ ಬಂದಿರುವುದು ನಿಜಕ್ಕೂ ದುರಂತ. ಇದರೊಂದಿಗೆ ದಿನವೂ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಮತ್ತೊಬ್ಬ ಸಚಿವ ಕಪಿಲ್ ಸಿಬಲ್ ಸಹ ಬಹಳ ವಿದ್ಯಾವಂತರು.

ಈ ಸರಕಾರದಲ್ಲಿ ಎಲ್ಲರೂ ಬುದ್ಧಿವಂತರೇ. ಹಾಗಾಗಿಯೇ ದೊಡ್ಡ ಸಮಸ್ಯೆಯಾಗಿರುವುದು. ವೃಥಾ ಅಣ್ಣಾ ಹಜಾರೆಯವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಅದಾಗದ ಕಾರಣ,ಈಗ ಬಂಧಿಸಿದ್ದಾರೆ. ಜತೆಗೆ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಮಾತನಾಡಿದ ಮಾನ್ಯ ಪ್ರಧಾನಿಗಳು, ಉಪವಾಸ ಎಲ್ಲದಕ್ಕೂ ಮದ್ದಲ್ಲ ಎಂದು ಯಾರಿಗೂ ಗೊತ್ತಿಲ್ಲದಂತಹ ಹೇಳಿಕೆ ಕೊಟ್ಟಿದ್ದಾರೆ. ವಿಚಿತ್ರ. ಆದರೆ, ಇದೇ ಉಪವಾಸ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿತ್ತೆಂಬುದನ್ನು ಮರೆತಿರುವುದು ನಿಜಕ್ಕೂ ವಿಷಾದನೀಯ. ಹಾಗಾದರೆ, ಮಹಾತ್ಮಾ ಗಾಂಧಿಯವರ ಉಪವಾಸ ಸತ್ಯಾಗ್ರಹವೆಂಬ ಮಂತ್ರ ಪೊಳ್ಳೇ ? ನಮ್ಮ ಪ್ರಧಾನಿಯವರು ಅದನ್ನೇ ಈ ರೀತಿ ಹೇಳುತ್ತಿದ್ದಾರೆಯೇ ಅರ್ಥವಾಗುತ್ತಿಲ್ಲ.

ನಾವೆಲ್ಲಾ ಈಗ ಒಗ್ಗೂಡಬೇಕಿದೆ. ಈ ಚಳವಳಿಯಲ್ಲಿ ನಮ್ಮ ನಮ್ಮ ಪಾತ್ರಗಳನ್ನು ನಿರ್ವಹಿಸಬೇಕು. ಎಲ್ಲ ಕ್ಷೇತ್ರದ ಜನರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಎಲ್ಲರೂ ರಸ್ತೆಗಿಳಿಯಬೇಕು. ಅದಾಗದಿದ್ದರೆ ನಾವು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದೇವೆಯೋ ಅಲ್ಲಲ್ಲೇ ಪ್ರತಿಭಟನೆಗೆ ನಮ್ಮದೇ ರೂಪದಲ್ಲಿ ಬೆಂಬಲಿಸಬೇಕು. ಅದನ್ನು ನಾನು ಮಾಡುತ್ತಿರುವೆ, ನೀವೂ ಮಾಡಿ. ಕೈ ಜೋಡಿಸಿ, ಭ್ರಷ್ಟಾಚಾರಕ್ಕೆ ಮದ್ದು ಕಂಡು ಹಿಡಿಯದಿದ್ದರೆ ಹೊಸ ತಲೆಮಾರಿನ ಶಾಪಕ್ಕೆ ಗುರಿಯಾಗಬೇಕಾದೀತು.

ಹೊಸ ಲೋಕಾಯುಕ್ತರಿಗೆ ನಮ್ಮ ಬೆಂಬಲವಿರಲಿ

ರಾಜಕಾರಣಿಗಳನ್ನು ಹತಾಶ ಸ್ಥಿತಿಗೆ ತಲುಪಿಸಿ ಖೆಡ್ಡಾಕ್ಕೆ ಬೀಳಿಸಬೇಕು. ಲೋಕಾಯುಕ್ತರು ಖೆಡ್ಡಾವನ್ನು ತೋಡಬಹುದು, ಆದರೆ “ಆನೆ”ಯನ್ನು ಓಡಿಸಿಕೊಂಡು ಬಂದು ಗುಂಡಿಗೆ ಬೀಳಿಸಲು ನಾವೇ ಅಂದರೆ ಜನರೇ ಸಿದ್ಧರಾಗಬೇಕು.

ಹೊಸ ಲೋಕಾಯುಕ್ತರು ಬಂದಿದ್ದಾರೆ…ಮೊದಲಿಗೇ “ನಾನು ಬಿಜೆಪಿ ಲೋಕಾಯುಕ್ತ ಅಲ್ಲ, ಕರ್ನಾಟಕದ ಲೋಕಾಯುಕ್ತ” ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಲೆಕ್ಕಾಚಾರದಲ್ಲಿ ಅಂತಹದೊಂದು ಉನ್ನತ ಹುದ್ದೆಯಲ್ಲಿರುವವರಿಗೆ ಹೀಗೆ “ಸ್ಪಷ್ಟೀಕರಣ” ಕೊಡುವಂತಹ ಪರಿಸ್ಥಿತಿ ಬರಬಾರದು. ಆದರೆ ಏನೂ ಮಾಡುವಂತಿಲ್ಲ, ಸನ್ನಿವೇಶ ಮತ್ತು ಸಂದರ್ಭಗಳು ಆ ಪರಿಸ್ಥಿತಿಯನ್ನೂ ಸೃಷ್ಟಿಸುತ್ತವೆ.

ಮಾನ್ಯ ಶಿವರಾಜ್ ಪಾಟೀಲರಿಗೂ ಆದದ್ದು ಅದೇ. ಯಡಿಯೂರಪ್ಪನವರು ಹಿಂದಿನ ಲೋಕಾಯುಕ್ತರಿಂದ ತೀರಾ ಇಕ್ಕಟ್ಟಿನಲ್ಲಿ ಸಿಲುಕಿದ್ದರು. ಗಣಿ ವರದಿಯನ್ನು ಸೋರಿಕೆ ಮಾಡಿ, ತಾಂತ್ರಿಕ ನೆಲೆಯಿಂದ ತಪ್ಪಿಸಿಕೊಳ್ಳಬಹುದೆಂದು ಯಡಿಯೂರಪ್ಪನವರು ಅಂದುಕೊಂಡಿದ್ದರು. ಅದಕ್ಕೆ ತಮ್ಮದೆ ಸಮುದಾಯದ ಒಬ್ಬ ಉತ್ತರಾಧಿಕಾರಿಯನ್ನು ಲೋಕಾಯುಕ್ತಕ್ಕೆ ಸೇರಿಸಿದರೆ, ನಮ್ಮನ್ನು ಕಾಯಬಹುದೆಂಬುದು ರಾಜಕೀಯ ಲೆಕ್ಕಾಚಾರವಾಗಿತ್ತು. ಈ ಮಾತಿನ ಅರ್ಥ ಶಿವರಾಜ ಪಾಟೀಲರಿಗೆ ಅರ್ಹತೆ ಇರಲಿಲ್ಲವೆಂದಲ್ಲ, ಅವರಿಗೆ ಅರ್ಹತೆ ಇದ್ದೇ ಇದೆ. ಹತ್ತು ಹಲವು ಆಯೋಗಗಳಲ್ಲೂ ಚೆನ್ನಾಗಿ ಕೆಲಸ ಮಾಡಿದವರು. ಸುಭಾಷಿತದ ಒಂದು ಮಾತು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.

ಗೌರವ, ಕೊಡುವ ವ್ಯಕ್ತಿ ಮತ್ತು ಅವನ ಸ್ಥಾನದಿಂದ ನಿರ್ಧಾರವಾಗುತ್ತದೆ. ಈ ಮಾತು ಇಲ್ಲಿ ಎಷ್ಟು ಸೂಕ್ತವೆಂದರೆ, ಹಲವು ಹಗರಣಗಳ ಆರೋಪ ಹೊತ್ತ ಸರಕಾರದ ಪ್ರಮುಖ ಪ್ರತಿನಿಧಿ ಇಂತಹದೊಂದು ಹುದ್ದೆ ಕೊಟ್ಟದ್ದು ಮತ್ತು ಆ ಸಂದರ್ಭ ಶಿವರಾಜಪಾಟೀಲರಿಗೆ ಸ್ಪಷ್ಟೀಕರಣ ಕೊಡುವಂತಹ ಪರಿಸ್ಥಿತಿ ನಿರ್ಮಿಸಿತು. ಈ ಸ್ಪಷ್ಟೀಕರಣದ ನಂತರವೂ ಜನ ಕೊಂಚ ಅನುಮಾನದಿಂದಲೇ ಇರುತ್ತಾರೆ. ಪ್ರಸ್ತುತ ಜನ ಒಂದುಕಡೆ, ಶಿವರಾಜ ಪಾಟೀಲರು ಒಂದು ಕಡೆ ಇದ್ದಾರೆ. ಪಾಟೀಲರ ಪ್ರತಿ ನಡೆಯೂ ಭ್ರಷ್ಟಾಚಾರ ವಿರುದ್ಧದ ಸಮರವನ್ನು ಒಂದು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವುದಕ್ಕೆ ಪೂರಕವಾಗಿರಬೇಕು. ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುವತ್ತ ನಡೆಯಬೇಕು. ಆಗ ಜನ ನಿಧಾನವಾಗಿ ಅವರ ಕಡೆಯೆ ವಾಲತೊಡಗುತ್ತಾರೆ.ಅವಧಿ ಮುಗಿಸುವಷ್ಟೊತ್ತಿಗೆ ಜನ ಅವರ ಹಿಂದೆ ನಿಲ್ಲುತ್ತಾರೆ. ಆಗ ಭ್ರಷ್ಟಾಚಾರದ ವಿರುದ್ಧದ ಸಮರಕ್ಕೆ ಪಾಟೀಲರು ನಾಯಕರಂತಾಗುತ್ತಾರೆ. ಇದನ್ನು ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ. Continue reading

ಲೋಕಾಯುಕ್ತರಿಗೆ ಧನ್ಯವಾದಗಳು

ಪ್ರಜಾತಂತ್ರ ಪ್ರೀತಿಸುವ ಪ್ರತಿಯೊಬ್ಬರೂ ಲೋಕಾಯುಕ್ತರಾಗಿ ಮೊನ್ನೆಯಷ್ಟೇ ನಿವೃತ್ತರಾದ ಎನ್. ಸಂತೋಷ್ ಹೆಗ್ಡೆಯವರಿಗೆ ಧನ್ಯವಾದ ಹೇಳಬೇಕು. ಯಾಕೆಂದರೆ, ಕಾನೂನಿಗೆ ಇರಬಹುದಾದ ಸಾಧ್ಯತೆಯನ್ನು ತೋರಿಸುತ್ತಲೇ, ಕಾನೂನನ್ನು ನಮ್ಮನ್ನಾಳುವ ಮಂದಿ ಹೇಗೆ ದುರುಪಯೋಗ ಪಡಿಸಿಕೊಳ್ಳಬಲ್ಲರು ಹಾಗೂ ಊನಗೊಳಿಸಬಲ್ಲರೆಂಬುದನ್ನು ತೋರಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಪರ್ವ ಮುಗಿದಿದೆ. ಐದು ವರ್ಷಗಳ ಹಿಂದೆ ಹುದ್ದೆಗೇರಿದಾಗ ಸದ್ದು ಮಾಡಿರಲಿಲ್ಲ. ತಣ್ಣಗೆ ಬಂದು ಕುಳಿತಿದ್ದರು. ಆದರೆ, ಅವಧಿ ಪೂರೈಸಿ ಹೊರಡುವಾಗ ಬಹಳಷ್ಟು ಮಂದಿಯ ಬುಡಕ್ಕೆ ಬಿಸಿನೀರು ಸುರಿದು ಹೊರಟಿದ್ದಾರೆ. ಅದರಲ್ಲೂ ನಮ್ಮನ್ನಾಳುವ ಮಂದಿಗೆ ಪಾಠ ಕಲಿಸಿದ್ದಕ್ಕೆ ನಾವೆಲ್ಲರೂ ಧನ್ಯವಾದಗಳನ್ನು ಹೇಳಲೇಬೇಕು.
ಇಂದು ಹೆಗ್ಡೆ ರಾಜಕಾರಣಿಗಳ ಕಣ್ಣಿನಲ್ಲಿ ತೀರಾ ಟೀಕೆಗೊಳಗಾದವರು. ಆದರೆ, ಪ್ರಜಾತಂತ್ರವನ್ನು ಪ್ರೀತಿಸುವ ಪ್ರತಿಯೊಬ್ಬರೂ ಅವರಿಗೆ ‘ಹ್ಯಾಟ್ಸಾಫ್’ ಹೇಳಬೇಕು. ಅಣ್ಣಾ ಹಜಾರೆಯಂತಹವರು ನಮ್ಮೊಳಗೆ ಹೊಸ ಕನಸನ್ನು ಸೃಷ್ಟಿಸಿದವರು. ಹೊಸ ತಲೆಮಾರು ಭ್ರಷ್ಟಾಚಾರದಿಂದ ಬೇಸತ್ತು ದೇಶವೇ ಸಾಯುತ್ತದೆಂದುಕೊಂಡಾಗ ಅಣ್ಣಾ ಹಜಾರೆ ‘ಹಾಗೆ ಭಯಪಡಬೇಕಿಲ್ಲ. ಕೈ ಜೋಡಿಸಬೇಕಷ್ಟೇ’ ಎಂದರು. ಹಾಗಾಗಿ ಜನ್ ಲೋಕಪಾಲ್ ಮಸೂದೆ ಸಂಬಂಧ ದೇಶಾದ್ಯಂತ ಅಣ್ಣಾರ ಹೋರಾಟಕ್ಕೆ ಸಾಥ್ ದೊರೆತದ್ದು ಹೆಚ್ಚಾಗಿ ಯುವ ತಲೆಮಾರುಗಳಿಂದ.

ಈ ದಿಸೆಯಲ್ಲೇ ನಮ್ಮ ರಾಜಕಾರಣಿ, ಅಧಿಕಾರಿಗಳಿಗೂ ಒಂದಿಷ್ಟು ಭಯ ಮೂಡಬೇಕಿತ್ತು. ‘ನಾವು ಏನು ಮಾಡಿದರೂ ಸೈ’ ಎಂದುಕೊಂಡವರಿಗೆ ಸಣ್ಣದೊಂದು ಬರೆ ಕೊಟ್ಟು ‘ಬಿಸಿ’ ಅನುಭವ ಕೊಡಬೇಕಿತ್ತು. ಅದನ್ನು ಸಂತೋಷ್ ಹೆಗ್ಡೆಯವರು ಚೆನ್ನಾಗಿಯೇ ಮಾಡಿದ್ದಾರೆ. ಕೊಟ್ಟ ಬರೆ ಹೇಗಿದೆಯೆಂದರೆ, ಬೇರೆಯವರೂ ತಮ್ಮ ತಮ್ಮ ತೊಡೆಗಳನ್ನು ಮುಟ್ಟಿನೋಡಿಕೊಳ್ಳುತ್ತಿರಬೇಕು.

ಎನ್. ವೆಂಕಟಾಚಲ ಇದೇ ಹುದ್ದೆಯಲ್ಲಿದ್ದಾಗ ಬರೀ ಪ್ರಚಾರಕ್ಕೆ ದಾಳಿ ಮಾಡುತ್ತಿದ್ದರೆಂದು ಒಂದಿಷ್ಟು ಮಂದಿ ಆರೋಪಿಸಿದ್ದರು. ಇದ್ದರೂ ಇರಬಹುದು. ಆದರೆ ವೆಂಕಟಾಚಲ ಅವರು ಬರುವ ಮೊದಲು ‘ಲೋಕಾಯುಕ್ತ’ ವೆಂಬುದೊಂದಿದೆ ಎಂದೇ ಗೊತ್ತಿರಲಿಲ್ಲ. ಕೊನೇಪಕ್ಷ ‘ಲೋಕಾಯುಕ್ತಕ್ಕೆ ನೀವು ದೂರು ಕೊಡಬಹುದು’ ಎಂದು ಹೇಳಿದವರೇ ವೆಂಕಟಾಚಲರು. ಆ ದಾಳಿ ಸಂದರ್ಭದಲ್ಲೆಲ್ಲಾ ಮಾಧ್ಯಮಗಳೆದರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗ ಜನ ನಿಜಕ್ಕೂ ಸಮಾಧಾನ ಪಟ್ಟುಕೊಂಡಿದ್ದರು. ಅದಕ್ಕಿಂತ ಮೊದಲು ಏನೇ ಮಾಡಿದರೂ ಈ ಅಧಿಕಾರಿಗಳಿಗೆ ಲಂಚ ಕೊಟ್ಟೇ ಬದುಕಬೇಕೆಂದಿದ್ದ ಜನ, ನಿಧಾನವಾಗಿ ಬುದ್ಧಿವಂತರಾದರು. ‘ನನ್ನ ಕೈಲಾದುದ್ದನ್ನು ಕೊಡಬಲ್ಲೆ. ಅದಕ್ಕಿಂತ ಹೆಚ್ಚಿನದಾದರೆ ಲೋಕಾಯುಕ್ತಕ್ಕೆ ದೂರು ಕೊಡುವುದೊಂದೇ ಬಾಕಿ’ ಎಂಬ ಲೆಕ್ಕಾಚಾರಕ್ಕೆ ಇಳಿದರು. ಅದರ ಪರಿಣಾಮ ಬೇಕಾದಷ್ಟಿದೆ. Continue reading