Feeds:
Posts
Comments

ಈ ಹಿಂದಿನ ಪೋಸ್ಟ್ ನಲ್ಲಿ ಆಗಾಗ್ಗೆ ಲಲಿತಪ್ರಬಂಧಗಳನ್ನು ಪೋಸ್ಟ್ ಮಾಡುವುದಾಗಿ ತಿಳಿಸಿದ್ದೆ. ಅದಕ್ಕೂ ತಡವಾಯಿತು. ಇನ್ನು ಮುಂದೆ ನಿರಂತರತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಹೊಸ ವರ್ಷದ ಪ್ರತಿಜ್ಞೆ

ಬಸ್ಸಿಗೂ ನನಗೂ ಸುಮಾರು ವರ್ಷಗಳ ಸಂಬಂಧ. ಸುಮಾರು ವರ್ಷಗಳೆಂದರೆ ಅದಕ್ಕೂ ಅಖಚಿತ ಲೆಕ್ಕವಿದೆ. ಸರಕಾರಿ ಬಸ್ಸನ್ನು ಅವಲಂಬಿಸಿ; ಅನುಭವಿಸಿ 20 ವರ್ಷಗಳು ಕಳೆದಿರಬಹುದು. ಬಸ್ಸಿಗೂ ನನಗೂ ಅನ್ಯೋನ್ಯತೆ ಬೆಳೆದದ್ದು ಅನಿವಾರ್ಯತೆಯಿಂದ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಬಸ್ಸನ್ನೇರಿಯೇ ಹೋಗಬೇಕಿತ್ತು. ನಡೆಯಲು ಸಾಧ್ಯವಿರಲಿಲ್ಲ ಎಂದಲ್ಲ, ಮನಸ್ಸಿರಲಿಲ್ಲ. ನಮಗೆ ಆಗಲೇ ನಾಗರಿಕತೆಯ ಝಲಕ್ ಅರ್ಥವಾಗಿತ್ತು. ಸಂಶೋಧನೆಗಳು ಮಿತಿ ಮೀರಿ ನಡೆದು, ನಾಗರಿಕನ ಬದುಕನ್ನು ಹೆಚ್ಚು ಸುಲಲಿತ ಮಾಡುತ್ತಿರುವಾಗ ನಾನೇಕೆ ಅನುಭವಿಸದೇ ಸುಮ್ಮನಿರಬೇಕೆಂಬ ವಿಚಾರವೂ ಇದಕ್ಕೆ ಕಾರಣ.

ನನ್ನ ಅಜ್ಜ, ಅಪ್ಪ ಹತ್ತು ಹನ್ನೆರಡು ಕಿ.ಮೀ. ದೂರದ ಶಾಲೆಗೆ ಗುಡ್ಡ ದಾಟಿ ಹೋಗಬೇಕಿದ್ದು ನಡೆದುಕೊಂಡೇ. ಅವರೆಲ್ಲಾ ಕಲಿತದ್ದು ಹಾಗೆಯೇ. ಕಷ್ಟಪಟ್ಟು, ದಾರಿದೀಪದ ಕೆಳಗೆ, ವಾರಾನ್ನ, ತಿಂಗಳಾನ್ನವೋ ಮಾಡಿಕೊಂಡು. ಅಷ್ಟೇ ಏಕೆ? ಹರಕು ಚಡ್ಡಿ, ಷರಟು ಹಾಕಿಕೊಂಡು. ಷರಾಯಿ ತೊಟ್ಟುಕೊಂಡದ್ದೇ ಇಲ್ಲವೆನ್ನುತ್ತಾರೆ. ಹಾಗೆಂದು ನೋಡಿರಲಿಲ್ಲ ಎಂದಲ್ಲ. ಊರ ಪಟೇಲರು, ಅವರ ಮಗ ತೊಟ್ಟದ್ದನ್ನು ಬಹು ದೂರದಿಂದಲೇ ನೋಡಿದವರು. ಆದರೆ ಅಂದಿನಿಂದ ಇಂದಿಗೆ ನಮ್ಮ ಬದುಕನ್ನು ನಾವೇ ಹೆಚ್ಚು ಸರಳೀಕರಿಸಿಕೊಂಡಿದ್ದೇವೆ ಎನ್ನುವುದಕ್ಕಿಂತಲೂ ಹೆಚ್ಚು ‘ಸಾಧ್ಯ’ವಾಗಿಸಿಕೊಂಡಿದ್ದೇವೆ.

ಬಹುಶಃ ನನಗೆ ಈ ಬಸ್ಸು ಕಲಿಸಿದಷ್ಟು ಜೀವನ ಪಾಠ, ಸಮಾಜದೊಂದಿಗಿನ ಸ್ಪಂದನ ಸ್ವಭಾವ ಯಾವ ಶಾಲೆ, ಮನೆ, ಗುರುಪೀಠಗಳೂ ಕಲಿಸಿಲ್ಲ. ಮಗುವಿನೊಂದಿಗೆ ಬಂದ ತಾಯಿಗೆ ಸೀಟು ಬಿಟ್ಟು ಕೊಡುವ ಮಾನವ ವರ್ತನೆಯಿಂದ ಹಿಡಿದು, ಫುಟ್‌ಬೋರ್ಡ್‌ನಲ್ಲಿ ನಿಂತು ಸಿಗರೇಟು ಸೇದುವ ಮಂದಿಗೆ ‘ಸ್ವಲ್ಪ ಆರಿಸ್ತೀರಾ?’ ಎಂದು ಹೇಳುವವರೆಗೆ, ಜೋರು ಮಾಡುವ ಕಂಡಕ್ಟರ್‌ಗೆ ಪ್ರತಿ ಜೋರು ಮಾಡುವುದಕ್ಕೆ, ರಶ್ ಇದ್ದಾಗ ಕೈಗಳನ್ನು ಜೇಬಿಗೆ ಕಾವಲಿಗೆ ನೇಮಿಸುವುದಕ್ಕೆ, ಜತೆಗೆ ಪೈಪೋಟಿಯಲ್ಲಿ ಜಯಿಸುವುದನ್ನೂ ಕಲಿಸಿದೆ.
ಕಿಕ್ಕಿರಿದ ಜನಜಂಗುಳಿಯ ನಡುವೆ ಬಸ್ಸಲ್ಲಿ ಸೀಟು ಹಿಡಿಯಲು ನಡೆಯುವ ಪೈಪೋಟಿ ಯಾವುದಕ್ಕೆ ಕಮ್ಮಿ? ಪುಸ್ತಕ, ಕರವಸ್ತ್ರ, ಮ್ಯಾಗಝಿನ್ ಹೀಗೆ ಏನೇನೋ ಎಸೆದು ಸೀಟು ಕಾದಿರಿಸುವುದು. ಒಮ್ಮೊಮ್ಮೆ ಏನೂ ಸಿಗದಾಗ ಉದ್ದ ನೋಟ್ ಪುಸ್ತಕದ ಹಾಳೆ ಹರಿದು ಉದ್ದಕ್ಕೆ ಹಾಸಿ ಬಿಡುವುದೂ ನಮ್ಮ ಜಾಣ್ಮೆ. ಮುಂದೆ ನಿಂತ ಹುಡುಗಿಯ ಮೈ ಅಪ್ಪಿಕೊಂಡ ಉಡುಪು ಸೋಕಿದರೂ ಏನೋ ಒಂದು ಸುಖವಿದೆ ಎಂದು ತಿಳಿದದ್ದು, ನಿದಿಗೆ ಹುಡುಗಿ ಲೀಲೂ ಮೇಲೆ ಮನಸ್ಸಾಗಿದ್ದು ಬಸ್ಸಲ್ಲೇ. ಡ್ರೈವರ್ ಪಕ್ಕದ ಮೀಸಲು ಸೀಟಿನಲ್ಲಿ ಕುಳಿತಿರುವ ಲೀಲೂಗೂ, ಹಿಂದಿನ ಬಾಗಿಲ ಆರಂಭದ ಸೀಟು ಹಿಡಿದು ಕುಳಿತುಕೊಳ್ಳುವ ನನಗೂ ನಡುವ ಒಂದು ಸಮಾನಂತರ ನೇರ ರೇಖೆ. ‘ಕಾಮನಬಿಲ್ಲು’ ಚಿತ್ರದ ‘ಕಣ್ಣು ಕಣ್ಣು ಕಲೆತಾಗ’ ಹಾಡಿನ ಅರ್ಥ ಹೇಳಿಕೊಟ್ಟಿದ್ದು ಇದೇ ರೇಖೆ. ಇದೇ ಬಸ್ಸು. Continue Reading »

ಮತ್ತೊಂದು ಅಂಶವನ್ನು ಸ್ಪಷ್ಟಪಡಿಸುವುದಾದರೆ ಸರಕಾರಕ್ಕೂ ನೈತಿಕತೆಯಿಲ್ಲ. ಅದು ಕಾಂಗ್ರೆಸ್ ಆಗಲೀ, ಜೆಡಿಎಸ್ ಆಗಲೀ, ಬಿಜೆಪಿ ಆಗಲೀ, ಯಾವುದೇ ಪಕ್ಷದ ಸರಕಾರವು ನಕ್ಸಲ್ ಚಳವಳಿಯನ್ನು ಬೆಂಬಲಿಸದು. ವಾಸ್ತವ ಹೀಗಿರುವಾಗ ಬಿಜೆಪಿ ಸರಕಾರವಂತೂ ನೇಮಿಸಲೇ ಬಾರದಿತ್ತು. ಆದರೂ ಒಬ್ಬ ನಕ್ಸಲ್ ಸಹಾನುಭೂತಿಯವರನ್ನು ರಂಗಾಯಣಕ್ಕೆ ನೇಮಿಸುವ ಮೂಲಕ ಸರಕಾರವೂ ನಕ್ಸಲ್ ಚಳವಳಿಯನ್ನು ನೈತಿಕವಾಗಿ ಬೆಂಬಲಿಸಿದಂತಾಗಿದೆ.

ಹಾಗಾದರೆ ಯಾರು ಬಂಡವಾಳಶಾಹಿಗಳು ? -ಈ ಪ್ರಶ್ನೆಯೇ ಸದಾ ನನ್ನನ್ನು ಕಾಡುತ್ತಿರುವಂಥದ್ದು. ಮಂಗಳವಾರ ರಾಜ್ಯ ಸರಕಾರ ಮೈಸೂರಿನ ರಂಗಾಯಣಕ್ಕೆ ನಾಟಕಕಾರ ಲಿಂಗದೇವರು ಹಳೆಮನೆಯವರನ್ನು ನೇಮಕ ಮಾಡಲು ನಿರ್ಧರಿಸಿದ ಮೇಲೆ ಹಾಗೂ ಅದನ್ನು ಅವರು ಒಪ್ಪಿಕೊಂಡ ಮೇಲೆ ಮತ್ತೆ ಅದೇ ಪ್ರಶ್ನೆ ಕಾಡುತ್ತಿದೆ.

ಸರಕಾರದ ನೇಮಕವನ್ನು ಪ್ರಶ್ನಿಸುವ ಉದ್ದೇಶವಲ್ಲ, ಆದರೆ ಅದರ ಹಿಂದಿನ ನಿರುದ್ದೇಶದ ಆಷಾಢಭೂತಿತನವನ್ನು ಪ್ರಶ್ನಿಸುವಂಥದ್ದು. ಸದಾ ತನ್ನ ವಿರೋಧಿಗಳನ್ನು ತನ್ನ ಹಂಗಿನ ಅರಮನೆಯಲ್ಲಿ ಬಂಧಿಸಲು ಹವಣಿಸುತ್ತಿರುವ ಸರಕಾರದೊಂದಿಗೆ ರಾಜಿಗಿಳಿಯುವವರ ಬಗ್ಗೆ ನನ್ನ ಪ್ರಶ್ನೆ. ಇಲ್ಲಿ ಹಳೆಮನೆಯವರೂ ನೆಪ ಮಾತ್ರ. ಆದರೆ ರಾಜಕಾರಣ-ಆಡಳಿತ ಪಕ್ಷಕ್ಕೆ ಹತ್ತಿರವಿದ್ದು, ಜನರೆದುರು ದೂರವಿದ್ದಂತೆ ನಟಿಸುವ ಆಷಾಢಭೂತಿಗಳು ತಾವೇ ಒದಗಿಸಿಕೊಳ್ಳುವ ಅವಕಾಶಗಳಿಗೆ ‘ಪ್ರತಿಭೆ’, ‘ಅರ್ಹತೆ’ಯ ಹಣೆಪಟ್ಟಿ ಕಟ್ಟುವ ಅವಕಾಶವಾದಿಗಳು ಬಹಳ ಮಂದಿ ಇದ್ದಾರೆ. ಇಂಥ ‘ಗಿರಗಟ್ಲಿ‘ಗಳು (ಗಾಳಿಗೆ ಬಂದ ಕಡೆ ತಿರುಗುವವರು) ಪ್ರತಿ ಸರಕಾರದ ಸಂದರ್ಭದಲ್ಲೂ ಇರುತ್ತಾರೆ. ಸರಕಾರಕ್ಕೂ, ತಮ್ಮನ್ನು ಟೀಕಿಸುವವರಿಂದಲೇ ಶಹಭಾಷ್ ಗಿರಿ ಪಡೆಯಬೇಕೆಂಬ ಚಟ. ಅದನ್ನು ನಗದಾ (ಎನ್‌ಕ್ಯಾಶ್)ಗಿಸಿಕೊಳ್ಳುವ ಮಂದಿಗೆ ಅದು ಕೊಳ್ಳೆ ಹೊಡೆಯುವ ಅವಕಾಶ.

ಬಂಡವಾಳಶಾಹಿಗೆ ಲಾಭಕೋರತನ ಮುಖ್ಯವೇ ಹೊರತು ಮತ್ತೇನೂ ಅಲ್ಲ. ಸಿದ್ಧಾಂತವಿಲ್ಲ, ಪಕ್ಷವಿಲ್ಲ. ಎಲ್ಲರಿಗೂ ಶತ್ರು, ಎಲ್ಲರಿಗೂ ಮಿತ್ರ. ಗಾಳಿಗೆ ತಕ್ಕಂತೆ ತೂರಿಕೊಳ್ಳುವ ಜಾಯಮಾನ. ಯಾವುದಾದರೂ ಮೂಲದಿಂದ ಎಲ್ಲ ಅವಕಾಶವೂ ತನಗೇ ಸಿಗಲೆಂದು ಹಪಹಪಿಸುವ ಮತ್ತು ದಕ್ಕಿಸಿಕೊಳ್ಳಲೆತ್ನಿಸುವ ಏಕಮೇವ ನಿಷ್ಠೆ ಅವನದ್ದು. ಇಂಥವನ ಚಹರೆ ಈ ನೇಮಕದಲ್ಲಿ ಸ್ಟಷ್ಟ. Continue Reading »

ಇಂತದೊಂದು ಪ್ರಕಟಣೆ ಹಳೆಯದ್ದು ಅಂದುಕೊಳ್ಳಬೇಡಿ. ನನ್ನ ಬ್ಲಾಗ್ ಗೆ ಲೇಖನ ಹಾಕದೇ ಬಹಳಷ್ಟು ದಿನಗಳಾಗಿವೆ. ಏನೇನೋ ಹಾಕಲು ಇಷ್ಟವಿಲ್ಲ. ಅದಕ್ಕಾಗಿಯೇ ಒಂದು ನಿರ್ಧಾರ ಮಾಡಿದ್ದೇನೆ.

ನನ್ನ ಇಷ್ಟದ ಪ್ರಕಾರ ಲಲಿತಪ್ರಬಂಧ. ಒಂದಿಷ್ಟು ಪ್ರಬಂಧಗಳು ಬರೆದದ್ದು ಇವೆ. ಅವುಗಳನ್ನು ಒಂದಿಷ್ಟು ಫೈನ್ ಟ್ಯೂನ್ ಮಾಡಬೇಕೆಂದು ಅಂದುಕೊಂಡೇ ವರ್ಷವಾಗಿದೆ. ಹೊಸ ಪ್ರಬಂಧಗಳನ್ನೂ ಬರೆದಿರಲಿಲ್ಲ. ಇನ್ನು ಮುಂದೆ ಪ್ರಬಂಧಗಳ ಕೃಷಿಯತ್ತ ಗಮನಹರಿಸೋಣ ಎಂದೆನಿಸಿದೆ.

ವಾರಕ್ಕೊಂದು ಪ್ರಬಂಧ, ಲಹರಿಗಳನ್ನು ಇಲ್ಲಿ ಬರೆಯಲಿದ್ದೇನೆ. ಬ್ರಹ್ಮಚಾರಿಗಳ ಪುಟಗಳು ಧಾರಾವಾಹಿ ನಿಂತಂತಾಗಿದೆ. ಅದಕ್ಕೆ ನನ್ನೊಂದಿಗಿನ ಬ್ರಹ್ಮಚಾರಿಗಳು ಕೆಲವು ಪಾಯಿಂಟ್ಸ್ ಕೊಡಬೇಕು. ಅವರೂ ಬ್ಯುಸಿ. ಆದರೆ ಅದನ್ನೂ ಶುರು ಮಾಡಲಿದ್ದೇನೆ.

ಪ್ರತಿ ಗುರುವಾರ ನನ್ನ ಬ್ಲಾಗಿನಲ್ಲಿ ಇನ್ನು ಮುಂದೆ ಪ್ರಬಂಧ, ಲಹರಿ ಇಂಥ ಲೇಖನಗಳನ್ನು ಕಾಣಬಹುದು. ಬೇರೆ ಏನನ್ನೂ ಇಲ್ಲಿ ಪ್ರಕಟಿಸುವುದಿಲ್ಲ. ಕೆಲವೊಂದು ಹಳೆಯ ಬೇರೆ ಲೇಖಕರ ಪ್ರಬಂಧಗಳೂ ಇಲ್ಲಿ ಲಭ್ಯವಾಗಬಹುದು. ದಯವಿಟ್ಟು ಭೇಟಿ ಕೊಡಿ, ಪ್ರೋತ್ಸಾಹಿಸಿ.

ಇದು ನಮ್ಮ ಹೊಸ ಪ್ರಯತ್ನ. ಅದುವೇಪತ್ರಿಕೋದ್ಯಮದ ಶಿಕ್ಷಣ ಕುರಿತಾದ ಬ್ಲಾಗ್.

ನಾವೇ ಪತ್ರಿಕೋದ್ಯಮದ ಗೆಳೆಯರು (ನಾನು ಮತ್ತು ವಿನಾಯಕ) ಕೂಡಿಕೊಂಡು ಆರಂಭಿಸಿರುವ ಗ್ರೂಪ್ ಬ್ಲಾಗ್. ಇಲ್ಲಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದ್ಯತೆ.
ಜತೆಗೆ ಒಂದಿಷ್ಟು ಅಂಕಣಗಳಿರುತ್ತವೆ ಪತ್ರಕರ್ತರದ್ದು, ವಿದ್ಯಾರ್ಥಿಗಳದ್ದೂ ಸಹ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇಲ್ಲಿ ಚರ್ಚಿಸಬೇಕೆಂಬುದು ನಮ್ಮ ಆಶಯವೂ ಸಹ.
ಈ ಸಮೂಹ ಬ್ಲಾಗಿನ ಪ್ರಮುಖ ಉದ್ದೇಶವೆಂದರೆ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಒಂದು ಪ್ರಾಯೋಗಿಕ ಜ್ಞಾನ ಕಲ್ಪಿಸುವ ನೆಲೆಯಾಗಬೇಕೆಂಬುದಷ್ಟೇ. ಹಾಗಾಗಿ ವಿದ್ಯಾರ್ಥಿಗಳ ಬರಹಗಳಿಗೆ ಸದಾ ಸ್ವಾಗತ.
ನಾವು ಒಂದಿಷ್ಟು ಗೆಳೆಯರ ಗುಂಪಿದು. ವಿದ್ಯಾರ್ಥಿಗಳ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಲಾಗುವುದು. ಆದ ಕಾರಣ ಸಂಬಂಧಪಟ್ಟ ಬರಹಗಾರರಿಗೆ ತಮ್ಮ ಬರಹಗಾರಿಕೆಯನ್ನು ನುರಿತಗೊಳಿಸಲು ಅವಕಾಶವಾಗಲಿದೆ.

ಏನೇನು ?
ಈ ಸಮೂಹ ಬ್ಲಾಗ್ ನಲ್ಲಿ ಎಲ್ಲವನ್ನೂ ಪ್ರಕಟಿಸಲಾಗುವುದು. ನಿಮ್ಮ ಶಾಲೆಯ ಕಾರ‍್ಯಕ್ರಮಗಳ ಸಂಕ್ಷಿಪ್ತ ವರದಿ, ಅಗ್ರ ಲೇಖನಗಳು, ಸಂದರ್ಶನಗಳು, ನುಡಿಚಿತ್ರಗಳು, ಸುದ್ದಿ ವಿಶ್ಲೇಷಣೆಗಳು, ಟೀಕೆ ಟಿಪ್ಪಣಿಗಳು…ಹೀಗೆ ಒಂದು ಪತ್ರಿಕೆ ಏನೆಲ್ಲಾ ಪ್ರಕಟಿಸಬಹುದೋ ಅದೆಲ್ಲವನ್ನೂ ಈ ಬ್ಲಾಗ್ ನಲ್ಲಿಯೂ ಪ್ರಕಟಿಸಬಹುದು.

ಛಾಯಾಚಿತ್ರ
ವಿದ್ಯಾರ್ಥಿಗಳಿಗೆ, ಪತ್ರಕರ್ತರಿಗೆಂದೇ ಗ್ಯಾಲರಿಗಳಿವೆ. ಅದರಲ್ಲಿ ತಾವು ತೆಗೆದ ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟರೆ ಪ್ರಕಟಿಸಲಾಗುವುದು. ವಾರಕ್ಕೊಮ್ಮೆ ಗ್ಯಾಲರಿಗಳು ಬದಲಾಗಲಿವೆ. ನೀವು ಕಳುಹಿಸಿದ ಚಿತ್ರ ವಾರಕ್ಕೊಮ್ಮೆ ಬದಲಾಗುತ್ತದೆ.

ಭಾಷೆ
ಭಾಷೆಯ ಸಮಸ್ಯೆ ಇದಕ್ಕಿಲ್ಲ. ಆರಂಭದಲ್ಲಿ ಇಂಗ್ಲಿಷ್, ಕನ್ನಡ ಲೇಖನಗಳನ್ನು ಪ್ರಕಟಿಸಲಾಗುವುದು. ನಂತರ ಇದರ ಬಳಕೆ ಮತ್ತು ಉಪಯೋಗವನ್ನು ಆಧರಿಸಿ ಇಂಗ್ಲಿಷ್ ಭಾಷೆಗೆ ಪ್ರತ್ಯೇಕ ಸಮೂಹ ಬ್ಲಾಗ್ ರೂಪಿಸಲು ನಿರ್ಧರಿಸಲಾಗುವುದು.

ಸಂವಾದ, ಚರ್ಚೆ
ಈ ವೇದಿಕೆ ಬರಿದೇ ಸುದ್ದಿಗಲ್ಲ, ಸಂವಾದ, ಚರ್ಚೆಗೂ ಸಹ ಮೀಸಲು. ಪತ್ರಿಕೋದ್ಯಮ, ಪ್ರಚಲಿತ ವಿದ್ಯಮಾನಗಳ ಬಗೆಗಿನ ಚರ್ಚೆ, ಪತ್ರಿಕೋದ್ಯಮ ಶಿಕ್ಷಣ, ಪ್ರಾಯೋಗಿಕ ಪತ್ರಿಕೋದ್ಯಮದ ಕುರಿತಾದ ಸಂವಾದ ಎಲ್ಲವೂ ಇಲ್ಲಿ ನಡೆಯುತ್ತದೆ. ಅದರಲ್ಲಿ ವಿದ್ಯಾರ್ಥಿ ಸಮುದಾಯ ಭಾಗವಹಿಸಬೇಕೆಂಬುದು ನಮ್ಮ ಕಾಳಜಿ.

ಬ್ರೇಕಿಂಗ್ ನ್ಯೂಸ್
ನಮ್ಮಲ್ಲೂ ಬ್ರೇಕಿಂಗ್ ನ್ಯೂಸ್ ಇದೆ. ನಿಮ್ಮ ಊರಿನ ಬ್ರೇಕಿಂಗ್ ನ್ಯೂಸ್ ತಿಳಿದ ಕೂಡಲೇ ನಮ್ಮಲ್ಲಿಗೆ ರವಾನಿಸಿದರೆ ಅದನ್ನೂ ಪ್ರಕಟಿಸಲಾಗುವುದು. ಇದಕ್ಕಾಗಿ ಟ್ವಿಟರ್ ಅನ್ನೂ ಬಳಸಲಾಗುವುದು.

ಪುಟವಿನ್ಯಾಸ
ಪತ್ರಿಕೆಯ ತಾಂತ್ರಿಕ ಸಂಗತಿಗಳ ಬಗ್ಗೆಯೂ ಗಮನಹರಿಸುವ ನಾವು, ಪುಟ ವಿನ್ಯಾಸದ ಬಗ್ಗೆಯೂ ಟಿಪ್ಸ್, ವಿಶೇಷ ಪುಟವಿನ್ಯಾಸಗಳ ಮಾದರಿ ಪ್ರಕಟಿಸಲಾಗುವುದು. ಹೀಗೆ ವಿದ್ಯಾರ್ಥಿಗಳು ತಾವು ರೂಪಿಸಿದ ಪುಟವಿನ್ಯಾಸಗಳನ್ನು ಕಳುಹಿಸಿದರೆ ಅದನ್ನೂ ಪ್ರಕಟಿಸಲಾಗುವುದು.

ಸಂಪಾದನೆ
ಇದು ಒಂದು ಬಗೆಯಲ್ಲಿ ಪ್ರಾಯೋಗಿಕ ತರಗತಿಗಳಂತಾಗಬೇಕೆಂಬುದು ನಮ್ಮ ಆಶಯ. ಹಾಗಾಗಿ ಇಲ್ಲಿ ಲೇಖನಗಳು ಅತ್ಯುತ್ತಮ ರೀತಿಯಲ್ಲಿ ಸಂಪಾದನೆ (ಎಡಿಟಿಂಗ್)ಗೊಳಗಾಗುತ್ತವೆ, ಆದರೆ ಸಂಭಾವನೆ ಸಿಗದು.

ಪ್ರಶ್ನಾಕೋಠಿ
ನುರಿತ ಪತ್ರಕರ್ತರೇ ಈ ಬ್ಲಾಗ್ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳ ಹಲವು ಸಂಶಯಗಳನ್ನು ಪ್ರಾಯೋಗಿಕ ನೆಲೆಯಲ್ಲಿ ನಿವಾರಿಸುವುದೂ ನಮ್ಮ ಉದ್ದೇಶವಾಗಿದೆ. ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಪ್ರಶ್ನಾಕೋಠಿ ಎಂಬ ಅಂಕಣದಲ್ಲಿ ನಿಮ್ಮ ಅನುಮಾನಗಳನ್ನು ಕೇಳಬಹುದು. ನುರಿತರು ಅದಕ್ಕೆ ಉತ್ತರಿಸುತ್ತಾರೆ.

ನಿಷಿಧ್ಧ
ವೈಯಕ್ತಿಕ ಟೀಕೆ, ನಿರ್ದಿಷ್ಟ ಪತ್ರಿಕಾಮನೆಗಳ ಬಗೆಗಿನ ಅನಗತ್ಯ ಸುದ್ದಿ-ಗಾಸಿಪ್ ಗಳಿಗೆಲ್ಲಾ ಇಲ್ಲಿ ನಿಷಿದ್ಧ. ಯಾವುದೇ ಕಾರಣಕ್ಕೂ ಇಲ್ಲಿ ಅಂಥವುಗಳಿಗೆ ಅವಕಾಶವಿಲ್ಲ. ಒಂದು ಆರೋಗ್ಯಕರ ಸಂವಾದಕ್ಕಷ್ಟೇ ಈ ವೇದಿಕೆ, ನೆನಪಿರಲಿ. ನಿಮ್ಮ ಲೇಖನಗಳನ್ನು fivewoneh2009@ gmail.com ಗೆ ಕಳಿಸಿ. ಒಮ್ಮೆ ಭೇಟಿ ಕೊಡಿ www.5wonly1h.blogspot.com

ಬಹಳ ದಿನಗಳಾಯ್ತು ಬ್ಲಾಗಿನ ಕಡೆ ಮುಖ ಹಾಕಿರಲಿಲ್ಲ. ಬದಲಾಗುವ ಸನ್ನಿವೇಶದಲ್ಲಿ ಹೊಸದೊಂದು ರೀತಿಯಲ್ಲಿ ಏನಾದರೂ ಕೈಗೊಳ್ಳಬೇಕೆಂದು ಯೋಚಿಸುತ್ತಿದ್ದೆ. ಆ ದಿಕ್ಕಿನಲ್ಲಿ ಕಾರ್ಯ ಮಗ್ನನಾಗಿದ್ದೆ. ಬ್ಲಾಗ್ ಹೊರತಾದ ಒಂದೆರಡು ಅಸೈನ್ ಮೆಂಟಗಳಿದ್ದವು. ಅದರಲ್ಲಿ ತೊಡಗಿಕೊಂಡಿದ್ದೆ. ಅದೂ ಮುಕ್ಕಾಲುವಾಸಿ ಮುಗಿದಿದೆ.

ಬ್ಲಾಗ್ ಅನ್ನು ಒಂದು ಸದ್ದುದ್ದೇಶಕ್ಕೂ ಈಡೇರಬೇಕು ಎಂದು ವಾದಿಸುತ್ತಾ ಬಂದವನಲ್ಲಿ ನಾನೂ ಒಬ್ಬ. ಈ ಹಿನ್ನೆಲೆಯಲ್ಲಿ ಹೊಸ ಹೆಜ್ಜೆಗೆ ಅಡಿಯಿಡುತ್ತಿದ್ದೇನೆ.

ಇದು ನನ್ನ ಹಲವು ದಿನಗಳ ಕನಸೂ ಸಹ. ನನ್ನ ಕ್ಷೇತ್ರ ಪತ್ರಿಕೋದ್ಯಮ. ಈ ಕ್ಷೇತ್ರದತ್ತ ಒಲವಿಟ್ಟು ಬರುವವರ ಸಂಖ್ಯೆಯೂ ದೊಡ್ಡ ಪಾಲಿದೆ. ಇವತ್ತು ಪತ್ರಿಕೋದ್ಯಮ ತರಗತಿಗಳಲ್ಲಿ ಪ್ರಾಯೋಗಿಕ ನೆಲೆಯ ಜ್ಞಾನ ಸಿಗುತ್ತಿರುವುದು ತೀರಾ ಕಡಿಮೆ. ಇದರೊಂದಿಗೆ ಪತ್ರಿಕೆಗಳಲ್ಲೂ ಹೊಸಬರಿಗೆ ಬರೆಯಲು ಅವಕಾಶ ಸಿಗುತ್ತಿರುವುದೂ ಅಪರೂಪವೇ. ಈ ಆರೋಪ ಇಂದಿನದಲ್ಲ ; ಬಹಳ ಹಿಂದಿನದು.

ಅನುಭವವಿಲ್ಲದೇ ಕೆಲಸ ಸಿಗದು, ಕೆಲಸ ಸಿಗದೇ ಅನುಭವ ದೊರಕದು ಎಂಬ ಮಾತೂ ಸಹ ಬಹಳ ಹಿಂದಿನದು. ಹೋಟೆಲ್ ವೊಂದರಲ್ಲಿ ಸಪ್ಲೆಯರ್ ಕೆಲಸ ಪಡೆಯಲು ಹೋದವನಿಗೆ ಮಾಲೀಕ ಕೇಳಿದ ಮೊದಲ ಪ್ರಶ್ನೆ…”ಎಲ್ಲಾದ್ರೂ ಕೆಲಸ ಮಾಡಿದ್ಯಾ, ಅನುಭವವಿದೆಯಾ?’, ಅದಕ್ಕೆ ಆತ “ಇಲ್ಲ, ಇದೇ ಮೊದಲು’ ಎಂದ. ಮತ್ತೆ, ಸಪ್ಲೆಯರ್ ಕೆಲಸ ಕೇಳ್ತಿದ್ಯಾ, ಅದರ ಬಗ್ಗೆ ಗೊತ್ತಿದೆಯಾ ಎಂದು ಪ್ರಶ್ನೆ ಹಾಕಿದ. ಅದಕ್ಕೆ ಕೆಲಸ ಬಯಸಿದವ, “ಮಾಡ್ತೀನಿ ಎನ್ನೋ ವಿಶ್ವಾಸ. ನೋಡಿ ಕಲಿತುಕೊಳ್ತೇನೆ” ಎಂದು ಹೇಳಿದ.

ಇದು ಸಪ್ಲೆಯರ್ ನ ಕಥೆ. ಇಲ್ಲಿ ಮೂರು ಮಂದಿ ತರಹದ ಮಾಲೀಕರಿರುತ್ತಾರೆ. ಒಂದು ವರ್ಗವೆಂದರೆ…”ಸರಿ, ನೋಡೋಣ. ಒಂದು ವಾರ ಕೆಲಸ ನೋಡ್ತೀನಿ, ಆಮೇಲೆ ಸಂಬಳ ಫಿಕ್ಸ್. ಕೆಲಸ ಬರದೇ ಇದ್ರೆ ಕಳಿಸ್ತೀನಿ’ ಅಂತಾರೆ. ಎರಡನೇ ವರ್ಗದವರು, “ಅನುಭವ ಇಲ್ಲದೇ ಇದ್ರೆ ನಿನ್ನಂಥವನು ತೆಗೆದುಕೊಂಡು ನಾನೇನು ಮಾಡೋದು ? ಬೇರೆ ಹೋಟೆಲ್ ನಲ್ಲಿ ಹುಡುಕು, ನಮ್ಮಲ್ಲಿಲ್ಲ” ಎಂದು ಹೇಳಿ ಬಿಡೋರು. ಅಂದರೆ ಬೇರೆಹೋಟೆಲ್ ನವನಿಗೆ ಆ ಕಷ್ಟ ವರ್ಗವಾದರೆ ಸಾಕು.

ಕೊನೆ ವರ್ಗದವರು, “ನೋಡಯ್ಯ, ಸಪ್ಲೆಯರ್ ಕೆಲಸ ಕಷ್ಟ. ಮೊದಲೇ ಏನೂ ಗೊತ್ತಿಲ್ಲ ಅಂತೀದ್ದೀಯಾ, ಸ್ವಲ್ಪ ಓದಿದೀನಿ ಅಂತ ಬೇರೆ ಪ್ರವರ ನಿಂದು. ಒಂದು ಕೆಲಸ ಮಾಡು, ಒಂದೆರಡು ತಿಂಗಳು ಕ್ಲೀನಿಂಗೋ, ಸ್ಟಾಲೋ, ತಿಂಡಿ ಅಸಿಸ್ಟೆಂಟೋ ಕೆಲಸ ಮಾಡು. ಸಪ್ಲೆಯರ್ ಕೆಲಸ ತಿಳಿದುಕೊ, ನಂತರ ಕೆಲಸ ನೀಡೋಣ’ ಎಂದು ಹೇಳಿ ಕೆಲಸ ಕೊಡ್ತಾನೆ. ಮೊದಲ, ಮೂರನೇ ವರ್ಗದವರು ಪರವಾಗಿಲ್ಲ, ಹಾಗೆಂದು ಎರಡನೇ ವರ್ಗದವರನ್ನೂ ದೂರುವಂತಿಲ್ಲ.

ಇಂದು ಇದು ಬರಿಯ ಹೋಟೆಲ್ ನವನ ಕಥೆಯಲ್ಲ. ಎಲ್ಲ ಕ್ಷೇತ್ರಗಳದ್ದು…ನಮ್ಮ ಪತ್ರಿಕೋದ್ಯಮದ್ದೂ ಸಹ. ಸುದ್ದಿಮನೆಗಳಲ್ಲಿರುವ ಮಂದಿ ವಿದ್ಯಾರ್ಥಿ ಸಮುದಾಯವನ್ನು ಒಳಗೊಳ್ಳುವ ಕೆಲಸವೇನಾದರೂ ಮಾಡಬೇಕು ಎಂಬುದು ನನ್ನ ಪ್ರತಿಪಾದನೆಯೂ ಸಹ. ಅವರಿಗೆ ಒಂದಿಷ್ಟು ತರಗತಿಗಳಲ್ಲಿ ಸಿಗದ ಜ್ಞಾನವನ್ನು ಕೊಡಲು ಸಾಧ್ಯವೇ ಎಂಬುದೂ ನನ್ನ ಆಲೋಚನೆ.

ಇದರೊಂದಿಗೇ ಹೊಸ ತಲೆಮಾರಿನ ಹುಡುಗರ ಆಲೋಚನಾ ಪರಿಯನ್ನು ಅರ್ಥೈಸಿಕೊಳ್ಳುತ್ತಲೇ, ನನಗೆ ವಯಸ್ಸಾಗದಂತೆ ನೋಡಿಕೊಳ್ಳೋದು ಎಚ್ಚರಿಕೆಯೂ ಸಹ. ಹೀಗಾಗಿಯೇ ಒಂದಿಷ್ಟು ಹೊತ್ತು ಇದಕ್ಕೆ ಯೋಜಿಸಲು ಹೊರಟಿದ್ದೇನೆ. ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು, ಪತ್ರಕರ್ತ ಸಮುದಾಯವನ್ನು ಮುಂದಿಟ್ಟುಕೊಂಡು ನನ್ನ ಗೆಳೆಯರು ಬ್ಲಾಗ್ ಶುರು ಮಾಡುತ್ತಿದ್ದಾರೆ. ಅದಕ್ಕೆ ನನ್ನದೂ ಕೊಡುಗೆ ಕೊಡುವ ಉದ್ದೇಶ.

ನ. 1 ರಿಂದ ಹೊಸ ಬ್ಲಾಗ್ ಶುರು. ಹೆಸರು www.5wonly1h.blogspot.com . ಒಮ್ಮೆ ಭೇಟಿಕೊಡಿ.

ಎಲ್ಲರೂ ಬದಲಾಗುತ್ತಿದ್ದಾರೆ. ಜಗತ್ತೂ ಸಹ. ಏನೇನೋ ಕಾರಣ ನೀಡಿ ಜಗತ್ತಿನಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಎಲ್ಲದಕ್ಕೂ ಸ್ಪಷ್ಟ ಕಾರಣಗಳಿಲ್ಲ. ನಮಗೆ ಸ್ಪಷ್ಟ ಕಾರಣಗಳಿವೆ. ಸದ್ಯವೇ ಬದಲಾಗುತ್ತಿದ್ದೇವೆ. ಈ ಬದಲಾವಣೆ ನನ್ನ ಎರಡೂ ಬ್ಲಾಗುಗಳಲ್ಲಿ ಶೀಘ್ರವೇ ಕಾಣಲಿವೆ.

ಜಂಬೂ ಸವಾರಿ ಮೆರವಣಿಗೆ ಮುಂದೆ ಹೋಗಲಿ…ಹಿಂದೆ ಬದಲಾವಣೆಯೊಂದಿಗೆ ಬರುತ್ತೇವೆ…!

ಪರಿವರ್ತನೆ ಜಗದ ನಿಯಮ…!

ಹೀಗೆ ಎಲ್ಲದಕ್ಕೂ ಪುಟ್ಟ ಪುಟ್ಟ ಇತಿಹಾಸ ಹೊಂದಿರುವ ಸಂಸತ್ತು ಒಂದು ನೆಲೆಯಲ್ಲಿ ಬರಿಯ ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಪರಮೋಚ್ಛ ಕಾರ್ಯ ಸಾಧನೆಯ ನೆಲವಾಗಿಯಷ್ಟೆ ಅಲ್ಲ, ನಮ್ಮ ಸಂಸ್ಕೃತಿ, ನಮ್ಮ ಮಾದರಿಗಳ ಷೋಕೇಸ್ ಸಹಿತ ಹೌದು. ಸಂಸತ್ತಿನ ಪ್ರಾಕಾರದಲ್ಲಿ ಅಥವಾ ಆವರಣದ ಸುತ್ತ ಮುತ್ತಲೆಲ್ಲಾ ನಾವು ಮಾದರಿ ಎಂದುಕೊಂಡವರೆಲ್ಲಾ ತಣ್ಣಗೆ ವಿರಾಜಮಾನವಾಗಿದ್ದಾರೆ. ಒಂದರ್ಥದಲ್ಲಿ ಇದು ಬಯಲು ಮ್ಯೂಸಿಯಂ.

ಸಂಸತ್ತಿನ ಐದನೇ ಗೇಟ್‌ನ ಎದುರು ಚಂದ್ರಗುಪ್ತ ಮೌರ್ಯನ ಪುತ್ಥಳಿಯಿದೆ. 0.74 ಮೀಟರ್ ಉದ್ದದ ಕಂಚಿನ ಪುತ್ಥಳಿಯನ್ನು ರಚಿಸಿದವರು ಹಿದಾ ಸೆಲ್ಗಮಾನ್. ಕ್ರಿ.ಪೂ 321 ರಿಂದ 296 ರವರೆಗೆ ಆಡಳಿತ ನಡೆಸಿದ ಈತ ಮೌರ್ಯ ವಂಶದ ಸ್ಥಾಪಕ. ಹೀಗೆ ಕಣ್ಣರಳಿಸುತ್ತಾ ಸೆಂಟ್ರಲ್ ಹಾಲ್‌ಗೆ ಪ್ರವೇಶಿಸುವ ಒಂದನೇ ಗೇಟಿನ ಬಳಿ ಬಂದರೆ ಮಹಾತ್ಮಾಗಾಂಧಿಯ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರ ಅಮೃತಶಿಲೆಯ ಪುತ್ಥಳಿ ನಿಮ್ಮನ್ನು ಸ್ವಾಗತಿಸುತ್ತದೆ. ಜಿ. ಕೆ. ಮಹಾತ್ರೆ ರೂಪಿಸಿದ ಪುತ್ಥಳಿ 1966 ರಲ್ಲಿ ಸ್ಥಾಪನೆಯಾದದ್ದು. ದೇಶದ ದೊಡ್ಡ ಅಧ್ಯಾತ್ಮ ಗುರು ಅರವಿಂದ್ ಘೋಷ್ ಸಹ ಇರುವುದು ಇಲ್ಲೇ ಹತ್ತಿರದಲ್ಲಿ. ಅದೂ ಅಮೃತಶಿಲೆಯದ್ದು. ಲೋಕಸಭೆ ಸ್ಪೀಕರ್ ಆಗಿದ್ದ ಕರ್ನಾಟಕದ ಕೆ.ಎಸ್. ಹೆಗ್ಡೆ ಇದನ್ನು ಅನಾವರಣಗೊಳಿಸಿದ್ದು 1970ರಲ್ಲಿ. ಹದಿನಾರು ಅಡಿಯ ಕುಳಿತ ಗಾಂಧಿಯ ಪ್ರತಿಮೆ ಕಾಣಲು ಗೇಟ್ ನಂ. 1 ಬಳಿ ಬರಬೇಕು. ರಾಮ್ ಸುತಾರ್ ರಚಿಸಿದ ಕಂಚಿನ ಪ್ರತಿಮೆಯನ್ನು ರಾಷ್ಟ್ರಪತಿ ಡಾ. ಶಂಕರದಯಾಳ್ ಶರ್ಮ ಅನಾವರಣಗೊಳಿಸಿದ್ದು 1993 ರ ಅಕ್ಟೋಬರ್ 2 ರಂದು.
ಪಂಡಿತ್ ಮೋತಿಲಾಲ್ ನೆಹರೂ ಇಲ್ಲಿ ನೆಲೆಯಾಗಿದ್ದು 1963 ರಲ್ಲಿ. ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್, 3.75 ಮೀಟರ್‌ನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಡಿ. ಪಿ. ರಾಯ್‌ಚೌಧರಿ ಮೂಡಿಸಿದ ಪ್ರತಿಮೆ ಸಂಸತ್ ಮಾರ್ಗದ ಕಡೆಯಿಂದ ಪ್ರವೇಶಿಸುವಲ್ಲಿ ಇದೆ. ಹಾಗೆಯೇ ಒಂದನೇ ಗೇಟ್ ನ ಬಳಿ ರಾಮ್ ಸುತಾರ್ ರಚನೆಯ 16 ಅಡಿಯ ಆಳೆತ್ತರದ ಪಂಡಿತ್ ಜವಾಹರಲಾಲ್ ನೆಹರೂ ಅವರ ಕಂಚಿನ ಪ್ರತಿಮೆ 1995 ರ ಗಣರಾಜ್ಯೋತ್ಸವ ದಿನ ಅನಾವರಣಗೊಂಡಿತು. ಈ ಗಳಿಗೆಗೆ ಸಾಕ್ಷಿಯಾಗಿದ್ದು ದಕ್ಷಿಣ ಆಫ್ರಿಕಾದ ಹೋರಾಟಗಾರ ನೆಲ್ಸನ್ ಮಂಡೇಲಾ. ಇದೊಂದು ವಿಶೇಷ.

ಲೋಕಸಭೆ ಆವರಣದಲ್ಲಿರುವ ಪ್ರಧಾನಮಂತ್ರಿ ಕಚೇರಿ ಬಳಿ ಬಂದರೆ, ನಿಮ್ಮನ್ನು ಮಾತನಾಡಿಸುವವರು ನೇತಾಜಿ ಸುಭಾಷ್ ಚಂದ್ರ ಬೋಸ್. ಕಾರ್ತಿಕ್ ಚಂದ್ರಪೌಲ್ ರಚಿಸಿದ ಕಂಚಿನ ಪ್ರತಿಮೆ 1997 ರಲ್ಲಿ ನೆಲೆಗೊಂಡಿತು. ಹೀಗೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ 366ಮೀಟರ್‌ನದ್ದು. ಬಿ.ವಿ. ವಾಗ್ ರೂಪಿಸಿದ ಈ ಪ್ರತಿಮೆ ಲೋಕಸಭೆಗೆ ಹೋಗುವ ದಾರಿಯಲ್ಲೇ ಸಿಗುತತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ 1967 ರಲ್ಲೇ ಅನಾವರಣಗೊಳಿಸಿದರು. ಕಂಕುಳಲ್ಲಿ ಸಂವಿಧಾನ ಹಿಡಿದು ಭವಿಷ್ಯದತ್ತ ತೋರ‍್ಬೆರಳು ತೋರಿಸುತ್ತಿರುವ ಅಂಬೇಡ್ಕರ್, ದಾರ್ಶನಿಕನಾಗಿ ತೋರುತ್ತಾರೆ. ಲೋಕಸಭೆಗೆ ಹೊರ ಆವರಣಕ್ಕೆ ಬರುವಲ್ಲಿ ಜಗಜೀವನರಾಂರ 9 ಅಡಿಯ ಕಂಚಿನ ಪ್ರತಿಮೆ ಅನಾವರಣಗೊಂಡಿದೆ.
ಸ್ವಾತಂತ್ರ ಹೋರಾಟಗಾರರಾದ ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರ 16 ಅಡಿಯ ಕಂಚಿನ ಪ್ರತಿಮೆ ಗೇಟ್ ನಂ. 1 ರಲ್ಲಿ, ಲೋಕಸಭೆ ಹೊರ ಪಡಸಾಲೆಯ ಬಳಿ 9 ಅಡಿಯ ಪಂಡಿತ್ ಗೋವಿಂದ್ ವಲ್ಲಭ್ ಪಂತ್ ರ ಪ್ರತಿಮೆ, ಪಂಡಿತ್ ರವಿಶಂಕರ್ ಶುಕ್ಲಾ, ವೈ.ಬಿ. ಚವಾಣ್, ಕುಮಾರಸ್ವಾಮಿ ಕಾಮರಾಜ್‌ರ ಪ್ರತಿಮೆ, ಹತ್ತಿರವೇ ಇರುವ ಗೇಟ್ ನಂ. 5 ರ ಮೂಲಕ ಒಳ ಪ್ರವೇಶಿಸುವಲ್ಲಿ ೧೬ ಅಡಿಯ ಇಂದಿರಾಗಾಂಧಿಯ ಕಂಚಿನ ಪ್ರತಿಮೆ ಅನಾವರಣಗೊಂಡಿವೆ. ಹಾಗೆಯೇ ಪ್ರೊ. ಎನ್.ಜಿ. ರಂಗ ಸಹ ಗೇಟ್ ನಂ. 4 ರ ಮೂಲಕ ಲೋಕಸಭೆ ಪಡಸಾಲೆಗೆ ಬರುವಲ್ಲಿ ರಾರಾಜಿಸುತ್ತಿದ್ದಾರೆ.

ಇದು ಪ್ರತಿಮೆ-ಪುತ್ಥಳಿಗಳ ಕಥೆ. ಅದರಂತೆಯೇ ರಾಜ್ಯಸಭೆಯ ಒಳಗೆ ಮತ್ತು ಪಡಸಾಲೆಯಲ್ಲಿ ಡಾ.ಎ ಸ್. ರಾಧಾಕೃಷ್ಣನ್, ಡಾ. ಜಾಕಿರ್ ಹುಸೇನ್, ಎಂ. ಹಿದಾಯಿತುಲ್ಲಾ, ವಿ. ವಿ. ಗಿರಿ, ಬಿ. ಡಿ. ಜತ್ತಿ, ಜಿ. ಎಸ್. ಪಾಠಕ್, ಆರ್. ವೆಂಕರಾಮನ್, ಡಾ. ಶಂಕರದಯಾಳ್ ಶರ್ಮರ ತೂಗುಪಟ ವಿರಾಜಿಸಿದ್ದರೆ, ಲೋಕಸಭೆ ಮತ್ತು ಪಡಸಾಲೆಯಲ್ಲಿ ವಿಠ್ಠಲ್‌ಬಾಯಿ ಜಿ. ಪಟೇಲ್, ಫೆಡ್ರ್ವಿಕ್ ವ್ಹೈಟ್, ಮೊಹಮ್ಮದ್ ಯಾಕುಬ್, ಸರ್. ಇಬ್ರಾಹಿಂ ರಹೀಂತುಲ್ಲಾ, ಆರ್. ಷಣ್ಮುಖಂ ಚೆಟ್ಟಿ, ಸರ್. ಅಬ್ದುಲ್ ರಹೀಂ, ಜಿ. ವಿ. ಮಾವಳಂಕರ್,

ನಮ್ಮನ್ನು ಕಾಯುತ್ತಿದ್ದಾರೆ, ನಮ್ಮ ಪ್ರತಿ ಚಟುವಟಿಕೆಯ ಮೇಲೂ ಆತ್ಮಸಾಕ್ಷಿಯಂತೆ !

ಸಂಸದೀಯ ಜ್ಞಾನಪೀಠದ ಪಥ ತಿಳಿದ ಮೇಲೆ ಸ್ವಲ್ಪ ಸಂಸತ್ತಿನೊಳಗಿನ ಪದ್ಧತಿ ಕುರಿತು ಕಣ್ಣು ಹಾಯಿಸುವಂತದ್ದಿದೆ. ಇಡೀ ಜಗತ್ತು ತಂತ್ರಜ್ಞಾನದೊಂದಿಗೆ ಬೆಸೆದುಕೊಳ್ಳುತ್ತಿರುವಾಗ ಸಂಸತ್ತೂ ಸುಮ್ಮನಿರಲಿಲ್ಲ. ಅದರೊಳಗಿನ ವ್ಯವಸ್ಥೆಯೆಲ್ಲಾ ತಾಂತ್ರಿಕ ರೂಪ ಪಡೆದುಕೊಂಡಿತು. ಇದರ ಮಹತ್ವದ ಘಟ್ಟವೆಂದರೆ ಸಂಸತ್ತಿನ ಕಲಾಪಗಳೆಲ್ಲಾ ಸಾರ್ವಜನಿಕವಾಗಿ ಪ್ರಸಾರವಾಗತೊಡಗಿದ್ದು.

1989 ರವರೆಗೆ ಸಂಸತ್ತಿನಲ್ಲಿ ನಡೆವ ಕಲಾಪಗಳನ್ನು ನೋಡುವ ಭಾಗ್ಯ ಇರಲಿಲ್ಲ. ಆ ಕಲಾಪಗಳ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿದ್ದನ್ನು ಓದಿದರೆ ಮುಗಿದಂತೆ. ನಮ್ಮ ಸಂಸದರು ಅಲ್ಲಿ ಎಷ್ಟು ಹೊತ್ತು ಮಾತನಾಡಿದರು ? ಏನೆಲ್ಲಾ ಮಾತನಾಡಿದರು? ಯಾವುದೂ ತಿಳಿಯುತ್ತಿರಲಿಲ್ಲ. ಪತ್ರಿಕೆಗಳಲ್ಲಿ ಬಂದಷ್ಟೇ ವರದಿ. ದೂರದರ್ಶನದ ವಾರ್ತೆಯಲ್ಲಿ ಬರುವ ಕೆಲವು ತುಣುಕುಗಳಷ್ಟೇ.

ಇಂಥ ಸಂದರ್ಭದಲ್ಲಿ ಸಂಸತ್ತಿನ ಕಲಾಪ ಸಾರ್ವಜನಿಕಗೊಳಿಸಬೇಕೆಂಬ ಪ್ರಯತ್ನ ಶುರುವಾಗಿದ್ದು 1989 ರಲ್ಲಿ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಕಲಾಪಗಳು ಪಾರದರ್ಶಕವಾಗಿರಲಿ ಎಂಬ ಸದಾಶಯವೂ ಇದರ ಬೆನ್ನಿಗಿತ್ತು. 1989 ರ 20 ರಂದು ಎರಡೂ ಸಭೆಗಳ (ಲೋಕಸಭೆ-ರಾಜ್ಯಸಭೆ)ನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣವನ್ನು ನೇರ ಪ್ರಸಾರ ಮಾಡಲಾಯಿತು. ನಂತರ ಈ ಪರಂಪರೆ ಮುಂದುವರಿಯಿತು.

1992 ರಲ್ಲಿ ಹಲವು ಉದ್ದೇಶಗಳಿಂದ ಶ್ರವ್ಯ-ದೃಶ್ಯ ಘಟಕವನ್ನು ಆರಂಭಿಸಲಾಯಿತು. ಎಲ್ಲವನ್ನೂ ಧ್ವನಿಮುದ್ರಿಸಿದ, ಚಿತ್ರೀಕರಿಸಿದ ಧ್ವನಿಸುರುಳಿಗಳನ್ನು ಸಂಗ್ರಹಿಸಿಡುವ, ಸದಸ್ಯರು ಕೇಳಿದ್ದನ್ನು ಒದಗಿಸುವ ಕೆಲಸ ಈ ಘಟಕಕ್ಕೆ ನೀಡಲಾಯಿತು. ಜತೆಗೆ ಕಲಾಪಗಳ ಪ್ರಸಾರಕ್ಕೆ ಸಂಬಂಧಿಸಿ 1994 ರಲ್ಲಿ ಸಂಸತ್ ಭವನದಲ್ಲಿ ಲೋ ಪವರ್ ಟ್ರಾನ್ಸ್‌ಮಿಟರ್‌ ಗಳನ್ನು ಅಳವಡಿಸಲಾಯಿತು. ಇದರಿಂದ ಸುತ್ತಲಿನ 10-25 ಕಿ. ಮೀ ವರೆಗೆ ನೇರ ಪ್ರಸಾರ ಸಾಧ್ಯವಾಯಿತು. ಇದೇ ಸಂದರ್ಭದಲ್ಲಿ ರಾಜ್ಯಸಭೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದ ಕ್ರಮೇಣ 1994 ರ ಡಿಸೆಂಬರ್ 7 ರ ನಂತರ ದೇಶಾದ್ಯಂತ ದೂರದರ್ಶನ ವಾಹಿನಿಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪಗಳನ್ನು ನೇರ ಪ್ರಸಾರ ಮಾಡಲಾಯಿತು. ಈ ವಾರ ಲೋಕಸಭೆಯ ಕಲಾಪ ಪ್ರಸಾರವಾದರೆ, ಮುಂದಿನ ವಾರ ರಾಜ್ಯಸಭೆಗೆ ಕಲಾಪಕ್ಕೆ ಮೀಸಲು.

2003 ರಲ್ಲಿ ಡಿಡಿ ನ್ಯೂಸ್ ವಾಹಿನಿ ಆರಂಭವಾದ ಮೇಲೆ, ಎರಡೂ ಸಭೆಗಳ ಪ್ರಶ್ನೋತ್ತರ ಕಲಾಪವನ್ನು ಏಕಕಾಲಕ್ಕೆ ಪ್ರಸಾರ ಮಾಡುವ ಮೂಲಕ ಇತಿಹಾಸ ಬರೆಯಲಾಯಿತು. ಆಕಾಶವಾಣಿ ಮತ್ತು ದೂರದರ್ಶನದ ನಡುವಿನ ಸಮನ್ವಯತೆಯಿಂದ ಕಲಾಪದ ಪ್ರಮುಖಾಂಶ ಜನರಿಗೆ ತಲುಪಲು ಸಾಧ್ಯವಾಯಿತು. ದೂರದರ್ಶನದಲ್ಲಿ ಲೋಕಸಭೆಯ ಕಲಾಪ ಪ್ರಸಾರವಾಗುವ ವಾರ, ಆಕಾಶವಾಣಿ ರಾಜ್ಯಸಭೆಯತ್ತ ದೃಷ್ಟಿ ನೆಟ್ಟಿರುತ್ತದೆ. ಹಾಗೆಯೇ ನಂತರದ ವಾರ ಅದರ ವಿರುದ್ಧ.

2004 ಡಿಸೆಂಬರ್ 14 ಕ್ಕೆ ಪ್ರಜಾಪ್ರಭುತ್ವಕ್ಕೂ ಐತಿಹಾಸಿಕ ದಿನ ಹಾಗೂ ಸಂಸತ್ತಿನ ಆಧುನಿಕ ವ್ಯವಸ್ಥೆಗೂ ಮಹತ್ವದ ದಿನ. ಪ್ರಸಾರ ಭಾರತಿ ಮತ್ತು ಲೋಕಸಭೆ ಪ್ರಯತ್ನದ ಫಲವಾಗಿ ಅಂದು ಎರಡು ಪ್ರತ್ಯೇಕ ವಾಹಿನಿ ಕ್ರಮವಾಗಿ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಪ್ರಸಾರ ಮಾಡಲೆಂದೇ ಹುಟ್ಟಿಕೊಂಡವು.

ರಾಜ್ಯಸಭೆಯ ಸಭಾಪತಿ ಉಪ ರಾಷ್ಟ್ರಪತಿಯವರು ರಾಜ್ಯಸಭೆ ವಾಹಿನಿಗೆ ಚಾಲನೆ ಕೊಟ್ಟರೆ, ಲೋಕಸಭೆಯ ಸ್ಪೀಕರ್ ಲೋಕಸಭೆಯ ವಾಹಿನಿಗೆ ಹಸಿರು ನಿಶಾನೆ ತೋರಿದರು. ಇಂಥದೊಂದು ಕಾರ‍್ಯಕ್ರಮಕ್ಕೆ ಮತ್ತೆ ಸಂಸತ್ತಿನ ಸೆಂಟ್ರಲ್ ಹಾಲ್ ಸಾಕ್ಷಿಯಾಯಿತು. ಹೀಗೆ ಅತ್ಯಾಧುನಿಕಗೊಂಡ ಸಂಸತ್ತಿನಲ್ಲಿ ನಡೆಯುವ ಕಲಾಪಗಳನ್ನೆಲ್ಲಾ ಚಿತ್ರೀಕರಿಸಲು ಸ್ವಯಂಚಾಲಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಂಟೂ ಕ್ಯಾಮೆರಾಗಳನ್ನು ಪ್ರೊಡಕ್ಷನ್ ಘಟಕದಲ್ಲಿರುವ ವ್ಯವಸ್ಥೆ ನಿಯಂತ್ರಿಸುತ್ತದೆ. ಅಲ್ಲಿಗೆ ನಮ್ಮ ಸಂಸದರು, ಚುನಾಯಿತ ಪ್ರತಿನಿಧಿಗಳಿಗೆ ಮಾತನಾಡಲು, ಧ್ವನಿ ಎತ್ತಲು ಎಷ್ಟೊಂದು ವ್ಯವಸ್ಥೆ ಮಾಡಿದ್ದೇವೆ. ಆದರೂ ದನಿ ಎತ್ತಲು ಮೀನಾ ಮೇಷ ಎಣಿಸಿದರೆ ಹೇಗೆ ?

ಈ ವಿಷಯ ಕೇಳಿ ಕೊಂಚ ಖುಷಿಪಡಬಹುದು. ನಮ್ಮ ಸಂಸದರು ಓದುವುದಿಲ್ಲ, ಅಧ್ಯಯನಶೀಲರಲ್ಲ…ಎನ್ನುವ ಕೂಗಿರುವ ಸಂದರ್ಭದಲ್ಲಿ ಚಿಕ್ಕ ನೀರಿನ ಬುಗ್ಗೆ ಮರಳುಗಾಡಿನಲ್ಲಿ ತೋರಿದಂತೆ ಅನಿಸುತ್ತಿದೆ. ಸಂಸತ್ತಿನ ಗ್ರಂಥಾಲಯದ ಮಾಹಿತಿ ಪ್ರಕಾರ ಮಾಹಿತಿ ಕೋರಿ ಸಲ್ಲಿಸುವ ಮನವಿಗಳು ಹೆಚ್ಚಿವೆಯಂತೆ.

ನಮ್ಮ ಸಂಸದರು ಕೈ ಉದ್ದ ಮಾಡಿದರೆ ಮಾಹಿತಿ ಎಂಬುದು ರಾಶಿ ಬಂದು ಬೀಳುತ್ತದೆ. ಅಂಥ ವ್ಯವಸ್ಥೆ ಇರುವುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ತಾವು ಮಾತನಾಡುವ ಕುರಿತ ವಿಷಯವನ್ನು ಅವರೇನೂ ಅಗೆದು ಸಂಶೋಧಿಸಬೇಕಾಗಿಲ್ಲ. ಸಂಸದೀಯ ಜ್ಞಾನಪೀಠ (ಗ್ರಂಥಾಲಯ) ದ ಅಧಿಕಾರಿಗಳಿಗೆ ಹೇಳಿದರೆ, ಅವರಂದುಕೊಂಡ ದಿನ ಆ ಮಾಹಿತಿ ಲಭ್ಯ.

ಈ ಮಧ್ಯೆ ನಿಮಗೆಲ್ಲಾ ಖುಷಿ ನೀಡುವ ಸಂಗತಿಯಿದೆ. ನಮ್ಮ ಸಂಸದರು ಓದುತ್ತಾರೆ, ಪ್ರಶ್ನೆ ಕೇಳುತ್ತಾರೆ, ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಅಂದರೆ ಅಂಥವರ ಸಂಖ್ಯೆ ಅಧಿವೇಶನದಿಂದ ಅಧಿವೇಶನಕ್ಕೆ ಹೆಚ್ಚುತ್ತಿದೆ. ಸಂಸದೀಯ ಜ್ಞಾನಪೀಠವೇ ಒದಗಿಸಿರುವ ಮಾಹಿತಿ ಪ್ರಕಾರ ಪರಾಮರ್ಶನ ಸೇವೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರಂತೆ.

ಪ್ರತಿ ಹತ್ತುವರ್ಷಗಳ ಲೆಕ್ಕಾಚಾರ ತೆಗೆದುಕೊಂಡು ನಡೆಸಿರುವ ಸಮೀಕ್ಷೆ ಪ್ರಕಾರ ಗ್ರಂಥಾಲಯಕ್ಕೆ 1950 ರಲ್ಲಿ 150 ಮಂದಿಯ ಮನವಿ ಸಲ್ಲಿಕೆಯಾಗಿತ್ತು. ಆ ಸಂಖ್ಯೆ ಕ್ರಮೇಣವಗಿ 1960 ರಲ್ಲಿ 425, 1970 ರಲ್ಲಿ 700 ಕ್ಕೆ ಏರಿತು. ಅತ್ಯಂತ ಅಚ್ಚರಿಯ ಅಂಶವೆಂದರೆ 1970 ರಿಂದ 1980 ಕ್ಕೆ ಈ ಸೇವೆ ಬಳಸಿಕೊಳ್ಳುವವವರ ಸಂಖ್ಯೆ ಅಥವಾ ಮನವಿ 3, 627 ಕ್ಕೆ ಮುಟ್ಟಿತು. 1990 ರಲ್ಲಿ 5, 167 ಅನ್ನು ತಲುಪಿದರೆ, 2000 ದಲ್ಲಿ 6, 508 ಮನವಿಗಳು ಸಲ್ಲಿಕೆಯಾಗಿದ್ದವು. ಆದರೆ 2000-2009 ರ ಲೆಕ್ಕ ಇನ್ನೂ ಹಾಕಿಲ್ಲವಂತೆ. ಆದರೆ 2000-2005 ರವರೆಗೆ ಅಂದರೆ ಐದು ವರ್ಷಗಳಲ್ಲೇ 8,570 ಮನವಿಗಳಿಗೆ ಮಾಹಿತಿ ಒದಗಿಸಲಾಗಿದೆ.

ಹಾಗಾದರೆ, ನಮ್ಮವರು ಪ್ರಶ್ನೆ ಕೇಳುತ್ತಾರೆಂದಾಯಿತು. ಹಿಂದಿನವರೇ ಅಧ್ಯಯನಶೀಲರೆಂದು ತಿಳಿದಿದ್ದೆವು, ಈಗಿನವರು ಅವರಿಗಿಂತ ಹೆಚ್ಚಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ ವಸ್ತು ಸ್ಥಿತಿ ಹಾಗಲ್ಲ. ಆಗಿನವರು ಅವರೇ ಅಧ್ಯಯನ ಮಾಡುತ್ತಿದ್ದರು. ‘ಹೋಂವರ್ಕ್’ ಮಾಡಿ, ಮಾಹಿತಿ ಕಲೆ ಹಾಕುತ್ತಿದ್ದರು. ಈಗಿನವರು ಅಧಿಕಾರಿಗಳಿಗೆ ಚೀಟಿ ಕೊಟ್ಟು ಬಿಡುತ್ತಾರೆ.

ಈ ಸೇವೆ ಬಗ್ಗೆ ಉಲ್ಲೇಖಿಸುವುದು ಸೂಕ್ತ. ಪ್ರಮುಖ ವಿಷಯಗಳಿಗೆ ಕುರಿತಂತೆ ಪೀಠಿಕೆ ಬರೆಯುವುದು, ಮಾಹಿತಿ ಕ್ರೋಡೀಕರಣ, ವಿಷಯ ಹಿನ್ನೆಲೆಯ ಸಂರಚನೆ ಇವೆಲ್ಲವನ್ನೂ ಈ ಸೇವೆ ಒಳಗೊಂಡಿದೆ. ಒಂದೇ ಒಂದು ಸಮಸ್ಯೆಯೆಂದರೆ ನಮ್ಮವರಿಗೆ ಇಂಗ್ಲಿಷ್ ಅಥವಾ ಹಿಂದಿ ಬರಬೇಕು. ಆ ಭಾಷೆ ಗೊತ್ತಿದ್ದವರಿಗಷ್ಟೇ ಈ ಸೇವೆ ಉಪಯೋಗವಾದೀತು. 11 ನೇ ಲೋಕಸಭೆಯಿಂದ ಹಿಡಿದು ನಿತ್ಯ ಸಲ್ಲಿಸಿದ ಸರಾಸರಿ ಮನವಿ ಲಭ್ಯ.

ಹಾಗಾದರೆ ಸಹಜ ಕುತೂಹಲದ ಪ್ರಶ್ನೆಯೊಂದಿದೆ. ಅದೆಂದರೆ, ಯಾವ ವಿಷಯ ಸಂಬಂಧಿ ಪ್ರಶ್ನೆಗಳು ಹೆಚ್ಚಿರಬಹುದು. 11,12 ಹಾಗೂ 13 ನೇ ಲೋಕಸಭೆ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ ಶೇ. 44 ರಷ್ಟು ಮಂದಿ ಆರ್ಥಿಕ ವಿಷಯ ಸಂಬಂಧಿ ಪ್ರಶ್ನೆ ಕೇಳಿದ್ದರೆ, 43 ರಷ್ಟು ಮಂದಿ ರಾಜಕೀಯ ಮತ್ತು ಸಂಸದೀಯ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದಾರೆ. ಉಳಿದದ್ದು ವಿಜ್ಞಾನ, ತಂತ್ರಜ್ಞಾನ, ರಕ್ಷಣಾ ವಿಷಯಗಳಿಗೂ ಮನವಿ ಸಲ್ಲಿಸಿದ್ದಾರೆ.

ಈಗ ಈ ಸೇವೆ ಇನ್ನಷ್ಟು ಸೂಕ್ಷ್ಮವಾಗಿದೆ. ನಮ್ಮ ಸಂಸದರ ಅಗತ್ಯವನ್ನು ಪೂರೈಸಲು ವಿಶೇಷ ಮಾಹಿತಿ ಕೇಂದ್ರಗಳನ್ನು (ಡೆಸ್ಕ್) ತೆರೆಯಲಾಗಿದೆ. ಅದರಂತೆ ಕಾನೂನು, ಸಂವಿಧಾನ, ಸಾಮಾಜಿಕ ಹಾಗೂ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಐದು ಡೆಸ್ಕ್ ಗಳಿದ್ದರೆ, ಆರ್ಥಿಕ, ಹಣಕಾಸು, ಮೂಲಭೂv ಸೌಲಭ್ಯಕ್ಕೆ ಕುರಿತಂತೆ ನಾಲ್ಕು ಪ್ರತ್ಯೇಕ ಡೆಸ್ಕ್‌ಗಳಿವೆ. ಪ್ರತಿಯೊಂದಕ್ಕೂ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರಲ್ಲಿ ಮನವಿ ಸಲ್ಲಿಸಿದರೆ ಸಾಕು. ಸಕಾಲದಲ್ಲಿ ಮನವಿ ಅವರನ್ನು ಬಂದು ತಲುಪುತ್ತದೆ.

ಸಂಸದರು, ಇಂಥ ದಿನದೊಳಗೆ ಮಾಹಿತಿ ಬೇಕು ಎಂದು ಹೇಳಿದರೆ ಸಾಕು, ಕೆಲಸ ಮುಗಿದಂತೆ. ಹೀಗಿದ್ದರೂ ಶೇ. 56 ರಷ್ಟು ಮಂದಿ ಒಂದರ್ಥದಲ್ಲಿ ಫಾಸ್ಟ್‌ಪುಡ್ ಹೋಟೆಲ್‌ಗೆ ಹೋದಂಗೆ ಅಂತಲೇ ಈ ಸೇವೆಯನ್ನು ಪರಿಗಣಿಸಿದ್ದಾರೆ. ಕಾರಣ, ಕಳೆದ ಮೂರು ಲೋಕಸಭೆಗಳಲ್ಲಿ ಶೇ. 56 ರಷ್ಟು ಮಂದಿ ‘ನಮಗೆ ಇಂದೇ ಮಾಹಿತಿ ಬೇಕು’ ಎಂದು ಅರ್ಜಿ ಸಲ್ಲಿಸಿದವರೇ.

ಇವಿಷ್ಟು ಲೈಬ್ರರಿಯ ಮಾಹಿತಿ. ಸಂಸತ್ ಆವರಣದಲ್ಲೇ ಇತ್ತೀಚೆಗೆ ಆರಂಭವಾಗಿರುವ ಪಾರ್ಲಿಮೆಂಟರಿ ಮ್ಯೂಸಿಯಂ ಅತ್ಯಂತ ಹೊಸದು. ಅದರಲ್ಲೇನಿದೆ ಗೊತ್ತೇ ? ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾದರಿ ರೂಪ !

Older Posts »