ಈ ಹಿಂದಿನ ಪೋಸ್ಟ್ ನಲ್ಲಿ ಆಗಾಗ್ಗೆ ಲಲಿತಪ್ರಬಂಧಗಳನ್ನು ಪೋಸ್ಟ್ ಮಾಡುವುದಾಗಿ ತಿಳಿಸಿದ್ದೆ. ಅದಕ್ಕೂ ತಡವಾಯಿತು. ಇನ್ನು ಮುಂದೆ ನಿರಂತರತೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಹೊಸ ವರ್ಷದ ಪ್ರತಿಜ್ಞೆ
ಬಸ್ಸಿಗೂ ನನಗೂ ಸುಮಾರು ವರ್ಷಗಳ ಸಂಬಂಧ. ಸುಮಾರು ವರ್ಷಗಳೆಂದರೆ ಅದಕ್ಕೂ ಅಖಚಿತ ಲೆಕ್ಕವಿದೆ. ಸರಕಾರಿ ಬಸ್ಸನ್ನು ಅವಲಂಬಿಸಿ; ಅನುಭವಿಸಿ 20 ವರ್ಷಗಳು ಕಳೆದಿರಬಹುದು. ಬಸ್ಸಿಗೂ ನನಗೂ ಅನ್ಯೋನ್ಯತೆ ಬೆಳೆದದ್ದು ಅನಿವಾರ್ಯತೆಯಿಂದ, ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಬಸ್ಸನ್ನೇರಿಯೇ ಹೋಗಬೇಕಿತ್ತು. ನಡೆಯಲು ಸಾಧ್ಯವಿರಲಿಲ್ಲ ಎಂದಲ್ಲ, ಮನಸ್ಸಿರಲಿಲ್ಲ. ನಮಗೆ ಆಗಲೇ ನಾಗರಿಕತೆಯ ಝಲಕ್ ಅರ್ಥವಾಗಿತ್ತು. ಸಂಶೋಧನೆಗಳು ಮಿತಿ ಮೀರಿ ನಡೆದು, ನಾಗರಿಕನ ಬದುಕನ್ನು ಹೆಚ್ಚು ಸುಲಲಿತ ಮಾಡುತ್ತಿರುವಾಗ ನಾನೇಕೆ ಅನುಭವಿಸದೇ ಸುಮ್ಮನಿರಬೇಕೆಂಬ ವಿಚಾರವೂ ಇದಕ್ಕೆ ಕಾರಣ.
ನನ್ನ ಅಜ್ಜ, ಅಪ್ಪ ಹತ್ತು ಹನ್ನೆರಡು ಕಿ.ಮೀ. ದೂರದ ಶಾಲೆಗೆ ಗುಡ್ಡ ದಾಟಿ ಹೋಗಬೇಕಿದ್ದು ನಡೆದುಕೊಂಡೇ. ಅವರೆಲ್ಲಾ ಕಲಿತದ್ದು ಹಾಗೆಯೇ. ಕಷ್ಟಪಟ್ಟು, ದಾರಿದೀಪದ ಕೆಳಗೆ, ವಾರಾನ್ನ, ತಿಂಗಳಾನ್ನವೋ ಮಾಡಿಕೊಂಡು. ಅಷ್ಟೇ ಏಕೆ? ಹರಕು ಚಡ್ಡಿ, ಷರಟು ಹಾಕಿಕೊಂಡು. ಷರಾಯಿ ತೊಟ್ಟುಕೊಂಡದ್ದೇ ಇಲ್ಲವೆನ್ನುತ್ತಾರೆ. ಹಾಗೆಂದು ನೋಡಿರಲಿಲ್ಲ ಎಂದಲ್ಲ. ಊರ ಪಟೇಲರು, ಅವರ ಮಗ ತೊಟ್ಟದ್ದನ್ನು ಬಹು ದೂರದಿಂದಲೇ ನೋಡಿದವರು. ಆದರೆ ಅಂದಿನಿಂದ ಇಂದಿಗೆ ನಮ್ಮ ಬದುಕನ್ನು ನಾವೇ ಹೆಚ್ಚು ಸರಳೀಕರಿಸಿಕೊಂಡಿದ್ದೇವೆ ಎನ್ನುವುದಕ್ಕಿಂತಲೂ ಹೆಚ್ಚು ‘ಸಾಧ್ಯ’ವಾಗಿಸಿಕೊಂಡಿದ್ದೇವೆ.
ಬಹುಶಃ ನನಗೆ ಈ ಬಸ್ಸು ಕಲಿಸಿದಷ್ಟು ಜೀವನ ಪಾಠ, ಸಮಾಜದೊಂದಿಗಿನ ಸ್ಪಂದನ ಸ್ವಭಾವ ಯಾವ ಶಾಲೆ, ಮನೆ, ಗುರುಪೀಠಗಳೂ ಕಲಿಸಿಲ್ಲ. ಮಗುವಿನೊಂದಿಗೆ ಬಂದ ತಾಯಿಗೆ ಸೀಟು ಬಿಟ್ಟು ಕೊಡುವ ಮಾನವ ವರ್ತನೆಯಿಂದ ಹಿಡಿದು, ಫುಟ್ಬೋರ್ಡ್ನಲ್ಲಿ ನಿಂತು ಸಿಗರೇಟು ಸೇದುವ ಮಂದಿಗೆ ‘ಸ್ವಲ್ಪ ಆರಿಸ್ತೀರಾ?’ ಎಂದು ಹೇಳುವವರೆಗೆ, ಜೋರು ಮಾಡುವ ಕಂಡಕ್ಟರ್ಗೆ ಪ್ರತಿ ಜೋರು ಮಾಡುವುದಕ್ಕೆ, ರಶ್ ಇದ್ದಾಗ ಕೈಗಳನ್ನು ಜೇಬಿಗೆ ಕಾವಲಿಗೆ ನೇಮಿಸುವುದಕ್ಕೆ, ಜತೆಗೆ ಪೈಪೋಟಿಯಲ್ಲಿ ಜಯಿಸುವುದನ್ನೂ ಕಲಿಸಿದೆ.
ಕಿಕ್ಕಿರಿದ ಜನಜಂಗುಳಿಯ ನಡುವೆ ಬಸ್ಸಲ್ಲಿ ಸೀಟು ಹಿಡಿಯಲು ನಡೆಯುವ ಪೈಪೋಟಿ ಯಾವುದಕ್ಕೆ ಕಮ್ಮಿ? ಪುಸ್ತಕ, ಕರವಸ್ತ್ರ, ಮ್ಯಾಗಝಿನ್ ಹೀಗೆ ಏನೇನೋ ಎಸೆದು ಸೀಟು ಕಾದಿರಿಸುವುದು. ಒಮ್ಮೊಮ್ಮೆ ಏನೂ ಸಿಗದಾಗ ಉದ್ದ ನೋಟ್ ಪುಸ್ತಕದ ಹಾಳೆ ಹರಿದು ಉದ್ದಕ್ಕೆ ಹಾಸಿ ಬಿಡುವುದೂ ನಮ್ಮ ಜಾಣ್ಮೆ. ಮುಂದೆ ನಿಂತ ಹುಡುಗಿಯ ಮೈ ಅಪ್ಪಿಕೊಂಡ ಉಡುಪು ಸೋಕಿದರೂ ಏನೋ ಒಂದು ಸುಖವಿದೆ ಎಂದು ತಿಳಿದದ್ದು, ನಿದಿಗೆ ಹುಡುಗಿ ಲೀಲೂ ಮೇಲೆ ಮನಸ್ಸಾಗಿದ್ದು ಬಸ್ಸಲ್ಲೇ. ಡ್ರೈವರ್ ಪಕ್ಕದ ಮೀಸಲು ಸೀಟಿನಲ್ಲಿ ಕುಳಿತಿರುವ ಲೀಲೂಗೂ, ಹಿಂದಿನ ಬಾಗಿಲ ಆರಂಭದ ಸೀಟು ಹಿಡಿದು ಕುಳಿತುಕೊಳ್ಳುವ ನನಗೂ ನಡುವ ಒಂದು ಸಮಾನಂತರ ನೇರ ರೇಖೆ. ‘ಕಾಮನಬಿಲ್ಲು’ ಚಿತ್ರದ ‘ಕಣ್ಣು ಕಣ್ಣು ಕಲೆತಾಗ’ ಹಾಡಿನ ಅರ್ಥ ಹೇಳಿಕೊಟ್ಟಿದ್ದು ಇದೇ ರೇಖೆ. ಇದೇ ಬಸ್ಸು. Continue Reading »

